ಮಂಗಳೂರು ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಅಬ್ದುಲ್ ರಹಿಮಾನ್ ಕುತ್ತೆತ್ತೂರು ಆಯ್ಕೆ

Spread the love

ಮಂಗಳೂರು ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಅಬ್ದುಲ್ ರಹಿಮಾನ್ ಕುತ್ತೆತ್ತೂರು ಆಯ್ಕೆ

ಜನವರಿ 4ರಂದು ಮಂಗಳೂರು ತಾಲೂಕಿನ ಗುರುಪುರ ಕೈಕಂಬದ ಮೇಘಾ ಪ್ಲಾಝಾ ಸಭಾಂಗಣದಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ಹಮ್ಮಿಕೊಂಡಿರುವ ಮಂಗಳೂರು ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಹಿರಿಯ ಸಾಹಿತಿ, ಕವಿ ಅಬ್ದುಲ್ ರಹಿಮಾನ್ ಕುತ್ತೆತ್ತೂರು ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಅಕಾಡಮಿಯ ಸರ್ವ ಸದಸ್ಯರ ಸಭೆ ಮತ್ತು ಸಮ್ಮೇಳನ ಸ್ವಾಗತ ಸಮಿತಿ ಸಭೆಯಲ್ಲಿ ಸರ್ವಾನುಮತದ ಈ ಆಯ್ಕೆ ನಡೆದಿದೆ ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಉಮರ್ ಯು.ಹೆಚ್. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಬ್ದುಲ್ ರಹಿಮಾನ್ ಕುತ್ತೆತ್ತೂರು ಅವರ, ಮಹಾಕವಿ ಸರ್ವಜ್ಞನ ವಚನಗಳ ಭಾಷಾಂತರವನ್ನೊಳಗೊಂಡ ʼಜೀಯಸೆಲೆʼ ಬ್ಯಾರಿ ಕವನ ಸಂಕಲನ, ʼಬ್ಯಾರಿ ಪಂಚತಂತ್ರʼ (ಕನ್ನಡದಿಂದ ಬ್ಯಾರಿಗೆ ಅನುವಾದಿಸಿದ ಪಂಚತಂತ್ರ ಕತೆಗಳ ಅನುವಾದ ಗೃಂಥ) ಮತ್ತು ʼಸಾಧನೆಡೊ ಸರದಾರ ಅಭಿವೃದ್ಧಿರೊ ಕಿನಾವುಗಾರ ಸರ್. ಎಂ. ವಿಶ್ವೇಶ್ವರಯ್ಯʼ ಕೃತಿಗಳನ್ನು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಪ್ರಕಟಿಸಿದೆ.

ಕಾದಂಬರಿಗಾರ ನಿಯಾಝ್ ಪಡೀಲ್ರವರ ʼಯತೀಮ್ʼ ಕನ್ನಡ ಕಾದಂಬರಿಯನ್ನುಇವರು ಬ್ಯಾರಿಗೆ ಅನುವಾದಿಸಿದ್ದು ಇತ್ತೀಚೆಗೆ ಬಿಡುಗಡೆಗೊಂಡಿದೆ. ರಾಷ್ಟ್ರೀಯ ಸಂತ ಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಅಪೇಕ್ಷೆಯಂತೆ ಸಂತ ಕವಿ ಕನಕದಾಸರ ಮುಂಡಿಗೆ ಮತ್ತು ಕೀರ್ತನೆಗಳನ್ನು ಕನ್ನಡದಿಂದ ಬ್ಯಾರಿಗೆ ಇವರು ಅನುವಾದಿಸಿದ್ದು, ಪ್ರಕಟಣೆಯ ಹಂತದಲ್ಲಿದೆ.

ಸಂಶೋಧಕ, ಸಾಹಿತಿ ಪ್ರೊ.ಬಿ.ಯಂ. ಇಚ್ಚಂಗೋಡು ಅವರ ʼಬ್ಯಾರಿ ದ್ರಾವಿಡ ಭಾಷೆಯೇ?ʼ ಎಂಬ ಸಂಶೋಧನಾ ಗ್ರಂಥವನ್ನು ಕನ್ನಡದಿಂದ ಬ್ಯಾರಿಗೆ ಅನುವಾದಿಸಿರುವ ಇವರ ಬ್ಯಾರಿ ಅಂಕಣಗಳು ʼಬ್ಯಾರಿ ವಾರ್ತೆʼ ಮಾಸಿಕದಲ್ಲಿ ನಿರಂತರ ಪ್ರಕಟವಾಗುತ್ತಿದೆ.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಹೊರತಂದ ʼಬ್ಯಾರಿ-ಕನ್ನಡ-ಇಂಗ್ಲೀಷ್ ನಿಘಂಟಿನ ಸಹಸಂಪಾದಕರಾಗಿ,ʼಬ್ಯಾರಿ-ಇಂಗ್ಲೀಷ್-ಕನ್ನಡ-ಹಿಂದಿ ಪದಕೋಶದ ಬ್ಯಾರಿ ಪದಗಳ ಸಂಗ್ರಾಹಕರಲ್ಲಿ ಓರ್ವರಾಗಿ, ಬ್ಯಾರಿ ವ್ಯಾಕರಣ ಗ್ರಂಥದ ಇಬ್ಬರು ಸಂಪಾದಕರಲ್ಲಿ ಓರ್ವರಾಗಿ, ಬೆಂಗಳೂರಿನ ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಹೊರತಂದ ʼಬ್ಯಾರಿ-ಕನ್ನಡ ಗಾದೆ-ನುಡಿಗಟ್ಟು-ಒಗಟುಗಳ ಕೋಶʼದ ಸಂಪಾದಕರಲ್ಲಿ ಓರ್ವರಾಗಿ ಕೆಲಸ ನಿರ್ವಹಿಸಿದ್ದಾರೆ.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ʼಬ್ಯಾರಿ ಅಧ್ಯಯನ ಪೀಠʼದ ಸದಸ್ಯರಾಗಿ ಸೇವೆ ಸಲ್ಲಿಸಿರುವ ಇವರ ಬ್ಯಾರಿ ಸಾಹಿತ್ಯ ಕ್ಷೇತ್ರದ ಸೇವೆಗೆ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ 2019ನೇ ಸಾಲಿನ ಗೌರವ ಪ್ರಶಸ್ತಿ ಲಭಿಸಿದೆ.

ʼಲೋಕಾನುಗ್ರಹಿ ಹಜ್ರತ್ ಮುಹಮ್ಮದ್ ಪೈಗಂಬರ್ʼ ಮತ್ತು ‘ಬಕ್ರೀದ್’ ಇವರ ಪ್ರಕಟಿತ ಕನ್ನಡ ಕೃತಿಗಳು. ಇವರ ಕನ್ನಡ, ಬ್ಯಾರಿ ಮತ್ತು ತುಳು ಭಾಷೆಯ ಲೇಖನ, ಕವನ, ವಿಮರ್ಶೆ ಬರಹ, ಮತ್ತು ಕಥೆಗಳು ನಾಡಿನ ಪ್ರಮುಖ ದೈನಿಕ, ಪಾಕ್ಷಿಕ, ಮಾಸಿಕ ಪತ್ರಿಕೆ ಹಾಗೂ ಸಂಸ್ಮರಣ ಸಂಚಿಕೆಗಳಲ್ಲಿ ಪ್ರಕಟವಾಗಿವೆ. ಮಂಗಳೂರು ಆಕಾಶವಾಣಿಯಲ್ಲಿ ಸುಮಾರು ಇನ್ನೂರಕ್ಕೂ ಮಿಕ್ಕಿದ ಇವರ ಚಿಂತನಗಳು ಪ್ರಸಾರವಾಗಿವೆ. ಇವರ ಬ್ಯಾರಿ ಭಾಷೆಯ ಅನೇಕ ಕಾರ್ಯಕ್ರಮಗಳು ಮಂಗಳೂರಿನ ʼರೇಡಿಯೊ ಸಾರಂಗ್’ ಸಮುದಾಯ ಬಾನುಲಿಯಲ್ಲಿ ಪ್ರಸಾರವಾಗಿವೆ.


Spread the love
Subscribe
Notify of

0 Comments
Inline Feedbacks
View all comments