ಯಡಿಯೂರಪ್ಪನವರ ಕುಟುಂಬದ ಹಿಡಿತದಲ್ಲಿರುವ ಬಿಜೆಪಿಯನ್ನು ಮುಕ್ತಗೊಳಿಸಬೇಕು:  ಈಶ್ವರಪ್ಪ

Spread the love

ಯಡಿಯೂರಪ್ಪನವರ ಕುಟುಂಬದ ಹಿಡಿತದಲ್ಲಿರುವ ಬಿಜೆಪಿಯನ್ನು ಮುಕ್ತಗೊಳಿಸಬೇಕು:  ಈಶ್ವರಪ್ಪ

ಕುಂದಾಪುರ: ಯಡಿಯೂರಪ್ಪನವರ ಕುಟುಂಬದ ಹಿಡಿತದಲ್ಲಿರುವ ಬಿಜೆಪಿಯನ್ನು ಮುಕ್ತಗೊಳಿಸಬೇಕು ಎಂಬುದು ನನ್ನ ಉದ್ದೇಶವೇ ಹೊರತು ನನ್ನದು ಬಿಜೆಪಿಯ ವಿರುದ್ದ ಹೋರಾಟವಲ್ಲ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ಮುಖಂಡ ಕೆಎಸ್ ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.

ಭಾನುವಾರ ಉಪ್ಪುಂದದಲ್ಲಿ ಕಾರ್ಯಕರ್ತರ ಸಮಾವೇಶಕ್ಕೆ ಆಗಮಿಸಿದ ವೇಳೆಯಲ್ಲಿ ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಮಾನತಾಡಿದರು.

ನನ್ನ ಹೋರಾಟದಲ್ಲಿ ನ್ಯಾಯವಿದೆ. ಹೀಗಾಗಿ ಬಿಜೆಪಿ ಕಾರ್ಯಕರ್ತರು ನನ್ನ ಬೆಂಬಲಕ್ಕೆ ನಿಂತಿದ್ದಾರೆ. ಕಾರ್ಯಕರ್ತರು ಮಾತ್ರವಲ್ಲದೇ ಬಿಜೆಪಿ ಮುಖಂಡರಾದ ಪ್ರತಾಪ್ ಸಿಂಹ, ಸಿ.ಟಿ ರವಿ, ಯತ್ನಾಳ್ ನನಗೆ ಫೋನ್ ಮಾಡಿ ಬೆಂಬಲ ಸೂಚಿಸಿದ್ದಾರೆ ಎಂದರು.

ಬಿಜೆಪಿಗೆ ಹಿಂದುಳಿದ ವರ್ಗಗಳ ಯುವಕರನ್ನು ಸಂಘಟಿಸುವುದಕ್ಕಾಗಿ ರಾಯಣ್ಣ ಬ್ರಿಗೇಡ್ ಸ್ಥಾಪಿಸಿ ದೊಡ್ಡ ಮಟ್ಟದಲ್ಲಿ ಕೂಡಲಸಂಗಮದಲ್ಲಿ ಸಮಾವೇಶ ಮಾಡಿದ್ದೆವು. ಇದನ್ನು ಸಹಿಸದ ಯಡಿಯೂರಪ್ಪ ಅಮಿತ್ ಶಾ ಅವರಿಗೆ ದೂರು ನೀಡಿದ್ದಲ್ಲದೇ ಕೇಂದ್ರದ ಆರ್ಎಸ್ಎಸ್ ಮುಖಂಡರು, ಬಿಜೆಪಿ ನಾಯಕರಿಗೂ ದೂರು ಕೊಟ್ಟರು. ಹಿರಿಯ ನಾಯಕರ ಸೂಚನೆಯಂತೆ ಬ್ರಿಗೇಡ್ ಕಾರ್ಯಕ್ರಮಗಳನ್ನು ನಿಲ್ಲಿಸಿದೆ. ನಾನು ಅಂದು ತೆಗೆದುಕೊಂಡ ಈ ನಿರ್ಧಾರ ತಪ್ಪು ಎಂದು ನನಗೆ ಈಗ ಅನಿಸುತ್ತಿದೆ ಎಂದರು.

ಪ್ರಧಾನಿ ಮೋದಿ ಅವರಿಗೆ ನನ್ನ ಕೆಲಸದ ಬಗ್ಗೆ ಅರಿವಿದೆ. ಮೋದಿಯವರ ಕುಟುಂಬ ರಾಜಕಾರಣವನ್ನು ಕ್ಲೀನ್ ಮಾಡುವ ಕೆಲಸಕ್ಕೆ ಮುಂದಾಗಿದ್ದೇನೆ. ನನ್ನ ಮನವೊಲಿಸುವ ಮತ್ತು ನನ್ನ ಹೋರಾಟಕ್ಕೆ ಅಡ್ಡಿ ಬರಬೇಡಿ ಎಂದು ಮೋದಿಜಿಯವರಿಗೆ ನಾನು ಮನವರಿಕೆ ಮಾಡುತ್ತೇನೆ. ಯಡಿಯೂರಪ್ಪ ಮತ್ತು ಕಾಂಗ್ರೆಸ್ನ ಹೊಂದಾಣಿಕೆ ರಾಜಕಾರಣ ಲೋಕಸಭೆಯಲ್ಲೂ ಮುಂದುವರೆದಿದೆ. ರಾಘವೇಂದ್ರ ವಿರುದ್ದ ಕಾಂಗ್ರೆಸ್ ವೀಕ್ ಮತ್ತು ಡಮ್ಮಿ ಕ್ಯಾಂಡಿಡೇಟ್ ಹಾಕಿದೆ. ಶಿವಮೊಗ್ಗದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ನೇರ ಸ್ಫರ್ಧೆ ಇಲ್ಲ. ಇಲ್ಲಿರುವುದು ನನಗೂ ಮತ್ತು ಯಡಿಯೂರಪ್ಪನ ಮಗನಿಗೆ ಸ್ಪರ್ಧೆ ಎಂದರು.

ನಾನು ಯಾರಿಗೂ ಹೆದರಲ್ಲ. ನನ್ನ ಹೆಸರು ಹೇಳಿದರೆ ಬೇರೆಯವರಿಗೆ ಬಿಪಿ ಶುಗರ್ ಬರುತ್ತದೆ. ರಾಷ್ಟ್ರವಾದಿ ಮುಸಲ್ಮಾನರ ಮತವನ್ನು ನಾನು ನಿರೀಕ್ಷೆ ಮಾಡುತ್ತೇನೆ. ಒಂದು ಲಕ್ಷ ಬಹುಮತಗಳ ಅಂತರದಲ್ಲಿ ನಾನು ಗೆಲ್ಲುತ್ತೇನೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

ಪ್ರಮಾಣ ಮಾಡುವಂತೆ ಸವಾಲೆಸೆದ ಬಿವೈ ರಾಘವೇಂದ್ರಗೆ ಎದುರೇಟು:
ಚುನಾವಣೆ ನಿಲ್ಲುವ ಯೋಚನೆ ಮಾಡಿದಾಗ ಎಲ್ಲಾ ಮಠ ಮಂದಿರಗಳಿಗೆ ಹೋಗಿ ಸ್ವಾಮಿಗಳ ಆಶೀರ್ವಾದ ಪಡೆದುಕೊಂಡು ಬಂದಿದ್ದೇನೆ. ವೀರಶೈವ ಸಮಾಜದ ಹೆಣ್ಣು ಮಕ್ಕಳು ಬೆಂಬಲ ಕೊಡುತ್ತೇವೆ ಎಂದರು. ಇದು ಬಿವೈ ರಾಘವೇಂದ್ರ ಅವರಿಗೆ ಸಮಾಧಾನ ಆಗಿಲ್ಲ. ಹಾಗಾಗಿ ಮಠಾಧೀಶರಿಗೆ ವೀರಶೈವ ಹೆಣ್ಣು ಮಕ್ಕಳಿಗೆ ನೋವಾಗುವ ಮಾತನಾಡಿದ್ದಾರೆ. ನೊಂದು ಅನೇಕ ಹೆಣ್ಣು ಮಕ್ಕಳು ಕಣ್ಣೀರು ಹಾಕಿದ್ದಾರೆ. ಆದರೂ ಅವರು ಯಾವ ಮಠಾಧೀಶರಿಗೂ ನೋವಾಗಿಲ್ಲ, ಯಾವ ಹೆಣ್ಣು ಮಕ್ಕಳು ಕಣ್ಣೀರು ಹಾಕಿಲ್ಲ. ಚಂದ್ರಗುತ್ತಿಗೆ ಬಂದು ಪ್ರಮಾಣ ಮಾಡಲಿ ಎನ್ನುತ್ತಾರೆ. ಗಂಟೆ ಹೊಡೆಯುವುದು, ಪ್ರಮಾಣದಲ್ಲಿ ನನಗೆ ನಂಬಿಕೆ ಇಲ್ಲ. ಆದರೆ ನಾನು ಒಪ್ಪಿಕೊಳ್ಳಲಿಲ್ಲ ಅಂದರೆ ಸುಳ್ಳು ಹೇಳಿದ ಹಾಗೆ ಆಗುತ್ತದೆ. ಚಂದ್ರಗುತ್ತಿ ಯಾಕೆ ಅಯೋಧ್ಯೆಗೆ ಹೋಗೋಣ. ಗಂಟೆ ಹೊಡೆಯಬೇಕೋ, ಪ್ರಮಾಣ ಮಾಡಬೇಕೋ ಮಾಡೋಣ. ಅದರ ಜೊತೆಗೆ ಅವರ ಅಪ್ಪನೂ ಪ್ರಮಾಣ ಮಾಡಲಿ. ಕಾಂತೇಶನಿಗೆ ಟಿಕೆಟ್ ಕೊಡಿಸುತ್ತೇನೆ ಅವನನ್ನು ಓಡಾಡಿ ಗೆಲ್ಲಿಸುತ್ತೇನೆ ಎಂದು ಹೇಳಿದ್ದಾರೋ ಇಲ್ಲವೋ ಪ್ರಮಾಣ ಮಾಡಲಿ ಎಂದು ಯಡಿಯೂರಪ್ಪಗೆ ಈಶ್ವರಪ್ಪ ಸವಾಲು ಹಾಕಿದರು.


Spread the love