ಅತ್ಯಾಚಾರ ಖಂಡಿಸಿ ಎನ್.ಎಸ್.ಯು.ಐ, ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ವತಿಯಿಂದ ಪ್ರತಿಭಟನೆ

Spread the love

ಅತ್ಯಾಚಾರ ಖಂಡಿಸಿ ಎನ್.ಎಸ್.ಯು.ಐ, ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ವತಿಯಿಂದ ಪ್ರತಿಭಟನೆ

ಮಂಗಳೂರು: ಪಶುವೈದ್ಯೆ ಡಾ|| ಪ್ರಿಯಾಂಕ ರೆಡ್ಡಿಯವರ ಮೇಲೆ ನಡೆದ ಅತ್ಯಾಚಾರ ಮತ್ತು ಜೀವಂತವಾಗಿ ದಹಿಸಿದ ಹಾಗೂ ನಿನ್ನೆ ಗುಲ್ಬರ್ಗಾದಲ್ಲಿ ನಡೆದ 8 ವರ್ಷದ ಬಾಲಕಿಯ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಮಾಡಿದ ಆರೋಪಿಗಳಿಗೆ ಗಲ್ಲು ಶಿಕ್ಷೆಯನ್ನು ಆಗ್ರಹಿಸಿ ದ.ಕ ಜಿಲ್ಲಾ ವಿದ್ಯಾರ್ಥಿ ಕಾಂಗ್ರೆಸ್ ಮತ್ತು ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ವತಿಯಿಂದ ಬಲ್ಮಠ ಕಲೆಕ್ಟರ್ ಗೇಟ್ ಸರ್ಕಲ್ನಿಂದ ಆರಂಭಗೊಂಡ ಕಾಲ್ನಡಿಗೆ ಜಾಥಾವು ಸಂತ ಸೆಬಾಸ್ಟಿಯನ್ ಚರ್ಚ್ ಮುಂಭಾಗದವರೆಗೆ ನಡೆಯಿತು. ಪ್ರತಿಭಟನೆಯಲ್ಲಿ ಆರೋಪಿಗಳ ಪ್ರತಿಕೃತಿ ದಹಿಸಿ ಮಾನವ ಸರಪಳಿಯ ಮೂಲಕ ಆಕ್ರೋಶವನ್ನು ವ್ಯಕ್ತಪಡಿಸಿದರು.

ಪ್ರತಿಭಟನಾ ಸಭೆಗೆ ಆಗಮಿಸಿದ ದ.ಕ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಮಾತನಾಡಿ, ಇಂತಹ ಘಟನೆಗಳು ಮರುಕಳಿಸದಂತೆ ತ್ವರಿತವಾಗಿ ಆರೋಪಿಗಳಿಗೆ ಶಿಕ್ಷೆಯಾಗುವಂತೆ ಸರಕಾರವು ಕಾನೂನು ಮಸೂದೆಯನ್ನು ರೂಪಿಸಬೇಕು. ವಿದ್ಯಾರ್ಥಿ ಸಂಘದ ಜೊತೆ ಸೇರಿ ನ್ಯಾಯಕ್ಕಾಗಿ ನಮ್ಮ ಹೋರಾಟ ನಿರಂತರವಾಗಿರುತ್ತೆಂದು ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು.

ವಿದ್ಯಾರ್ಥಿ ಕಾಂಗ್ರೆಸ್ ಜಿಲ್ಲಾ ಉಸ್ತುವಾರಿಗಳಾದ ಸುರೇಶ್ ಶೆಟ್ಟಿ, ಶುಭೋದಯ ಆಳ್ವ ಹಾಗೂ ಎನ್.ಎಸ್.ಯು.ಐ ರಾಜ್ಯ ಕಾರ್ಯದರ್ಶಿಯಾದ ಫಾರೂಕ್ ಬಾಯಬೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಸಭೆಯಲ್ಲಿ ಯುವ ನಾಯಕರುಗಳಾದ ರೂಪೇಶ್ ರೈ, ಗಿರೀಶ್ ಆಳ್ವ, ಆಶೀತ್ ಪಿರೇರಾ, ಸೌನಕ್ ರೈ, ರಾಹುಲ್ ಸುವರ್ಣ, ಅಬ್ದುಲ್ಲಾ ಬಿನ್ನು, ಶಾಂತಲಾ ಗಟ್ಟಿ, ರಮಾನಂದ ಪೂಜಾರಿ, ಅನ್ಸಾರುದ್ಧೀನ್ ಸಾಲ್ಮಾರ, ಅಂಕುಶ್ ಶೆಟ್ಟಿ, ಶೇಕ್ ಅಪ್ಸಾನ್, ಶೆಲ್ಟನ್ ರೊಜಾರಿಯೋ, ಆಯಿಷಾ, ರಾಚಲ್ ನೊರೊನ್ಹಾ, ಪವನ್, ಸಮರ್ಥ್ ಭಟ್, ಶ್ರೇಯಸ್ ಭಟ್ ಉಪಸ್ಥಿತರಿದ್ದರು.

ಕಾರ್ಯಕ್ರಮ ಸಂಯೋಜಕರಾದ ಜಿಲ್ಲಾ ಎನ್.ಎಸ್.ಯು.ಐ ಪ್ರಧಾನ ಕಾರ್ಯದರ್ಶಿ ಸವಾದ್ ಸುಳ್ಯ ಸ್ವಾಗತಿಸಿ, ವಂದಿಸಿದರು. ಮನ್ಸೂರ್ ಕುದ್ರೋಳಿ ಕಾರ್ಯಕ್ರಮ ನಿರೂಪಣೆಗೈದರು.


Spread the love