ಆಯುರ್ವೇದದಿಂದ ಉತ್ತಮ ಆರೋಗ್ಯ: ಮೇಯರ್ ಸುಧೀರ್ ಶೆಟ್ಟಿ

Spread the love

ಆಯುರ್ವೇದದಿಂದ ಉತ್ತಮ ಆರೋಗ್ಯ: ಮೇಯರ್ ಸುಧೀರ್ ಶೆಟ್ಟಿ

ಮಂಗಳೂರು: ಪುರಾತನ ಕಾಲದಲ್ಲಿ ಪ್ರತಿಯೊಂದು ಕಾಯಿಲೆಗೆ ಆಯುರ್ವೇದ ಔಷಧಿಯೇ ಮುಖ್ಯವಾಗಿತ್ತು ಪಂಡಿತರು ಕಷಾಯ,ಎಣ್ಣೆ, ಲೇಪನಗಳ ಮೂಲಕ ಔಷಧಗಳನ್ನು ನೀಡುತ್ತಿದ್ದರು. ಭಾರತದಲ್ಲಿ ಆಯುರ್ವೇದ ಕ್ಕೆ ತನ್ನದೇ ಆದ ಮಹತ್ವವಿದೆ ಎಂದು ಮಹಾನಗರ ಪಾಲಿಕೆ ಮಹಾಪೌರರಾದ ಸುಧೀರ್ ಶೆಟ್ಟಿ ಹೇಳಿದರು.

ಅವರು ಶುಕ್ರವಾರ ನಗರದ ವೆನ್ ಲಾಕ್ ಆಯುಷ್ ಆಸ್ಪತ್ರೆಯಲ್ಲಿ ನಡೆದ 8ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ಆಯುರ್ವೇದವನ್ನು ಉಳಿಸುವ ಉದ್ದೇಶದಿಂದ ಸ್ಮಾರ್ಟ್ ಸಿಟಿಯಲ್ಲಿ 5 ಕೋಟಿ ರೂ. ಅನುದಾನವನ್ನು ನೀಡಲಾಗಿದ್ದು ಆಯುಷ್ ಆಸ್ಪತ್ರೆಯು ವ್ಯವಸ್ಥೆತವಾದ ಸುಸಜ್ಜಿತ ಮಲ್ಟಿ ಸ್ಪೆಷಲಿಟಿ ಆಸ್ಪತ್ರೆಯಾಗಿದೆ. ಇಲ್ಲಿಗೆ 16 ಜಿಲ್ಲೆಗಳಿಂದ ಜನರು ಚಿಕಿತ್ಸೆಗಾಗಿ ಆಗಮಿಸುತ್ತಿದ್ದಾರೆ. ಆಯುರ್ವೇದ ದಿಂದಾಗುವ ಉಪಯೋಗವನ್ನು ತಿಳಿದಾಗ ಉತ್ತಮ ಆರೋಗ್ಯಪೂರ್ಣ ಜೀವನ ನಡೆಸಲು ಸಾಧ್ಯ ಎಂದು ತಿಳಿಸಿದರು.

ನಾವು ಆಧುನಿಕತೆಗೆ ಮಾರುಹೋಗಿ ಒತ್ತಡದ ಜೀವನದಲ್ಲಿ ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದೇವೆ. ಇದನ್ನು ಗುಣಪಡಿಸಲು ಅಲೋಪತಿಯಂತಹ ಔಷಧಿಗಳ ಮೊರೆ ಹೋಗುತ್ತೇವೆ. ಆದರೆ ಆಯುರ್ವೇದವು ಪ್ರಕೃತಿಯ ಸೃಷ್ಟಿ, ಇದರ ಬಳಕೆಯಿಂದ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ. ವಿದೇಶಿಗರು ಕೂಡ ಆಯುರ್ವೇದ ಪದ್ಧತಿ ಬಳಸುತ್ತಿರುವುದನ್ನು ಕಾಣಬಹುದಾಗಿದೆ ಎಂದು ಹೇಳಿದರು.

ದೇಹ ರೋಗಗ್ರಸ್ತವಾಗಿರುವಾಗ ಏನನ್ನು ಮಾಡಲು ಸಾಧ್ಯವಾಗುವುದಿಲ್ಲ ಹಾಗಾಗಿ ನಾವು ಮನಸ್ಸು ಮತ್ತು ದೇಹವನ್ನು ಆರೋಗ್ಯವಾಗಿ ಕಾಪಾಡಿಕೊಳ್ಳಬೇಕು. ಆರ್ಯುವೇದಕ್ಕೆ ಈಗ ಬಂಗಾರದ ಸುವರ್ಣ ಯುಗ, ಆಯುರ್ವೇದವು ಜನ ಮಾನಸದಲ್ಲಿ ನೆಲೆ ನಿಂತಿದೆ. ನಮ್ಮ ದೇಶವನ್ನು ಉನ್ನತ ಮಟ್ಟಕ್ಕೆ ಏರಿಸುವಲ್ಲಿ ಆಯುರ್ವೇದದ ಕೊಡುಗೆ ಅಪಾರವಾಗಿದೆ ಎಂದು ಆಶಾ ಫೌಂಡೇಶನ್ ಮತ್ತು ಆಯುಷ್ ಸಂಸ್ಥಾಪಕರಾದ ಡಾ.ಆಶಾ ಜ್ಯೋತಿ ರೈ ಹೇಳಿದರು.

ಕಲ್ಲಿಕೋಟಿ ಆಯುರ್ವೇದ ಕ್ಯಾನ್ಸರ್ ತಜ್ಞರಾದ ಡಾ. ಜನ್ನತುಲ್ ಫಿರ್ದೋಸ್ ಅವರು ಕ್ಯಾನ್ಸರ್ ರೋಗಕ್ಕೆ ಆಯುರ್ವೇದ ಚಿಕಿತ್ಸೆಯ ಬಗ್ಗೆ ಉಪನ್ಯಾಸವನ್ನು ನೀಡಿದರು.ಕಾರ್ಯಕ್ರಮದಲ್ಲಿ ಡಾ. ಜಾಯಿದ್ ವೇದಿಕೆಯಲ್ಲಿದ್ದರು. ಜಿಲ್ಲಾ ಆಯುಷ್ ಅಧಿಕಾರಿ ಡಾ. ಮುಹಮ್ಮದ್ ಇಕ್ಬಾಲ್ ಸ್ವಾಗತಿಸಿದರು.


Spread the love