ಉಡುಪಿ: ಅತಿಥಿ ಉಪನ್ಯಾಸಕರ ಪ್ರತಿಭಟನೆ; ತರಗತಿ ನಡೆಯದೆ ವಿದ್ಯಾರ್ಥಿಗಳು ಅತಂತ್ರ

Spread the love

ಉಡುಪಿ: ಅತಿಥಿ ಉಪನ್ಯಾಸಕರು ತಮ್ಮ ಬೇಡಿಕೆ ಈಡೇರಿಕೆಗಾಗಿ ರಾಜ್ಯದಾದ್ಯಂತ ಮುಷ್ಕರದಲ್ಲಿ ತೊಡಗಿದ್ದು ಇದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದ್ದು ಕೂಡಲೇ ಸರಕಾರ ಸಮಸ್ಯೆಗೆ ಪರಿಹಾರ ಒದಗಿಸುವಂತೆ ಎಂದು ಉಡುಪಿ ಜಿಲ್ಲಾ ಸರ್ವ ಕಾಲೇಜು ವಿದ್ಯಾರ್ಥಿ ಸಂಘ ಆಗ್ರಹಿಸಿದೆ.

all-college-student-10-02-2016

ಈ ಕುರಿತು ಜಂಟಿ ಮಾಧ್ಯಮ ಹೇಳಿಕೆ ನೀಡಿರುವ ಜಿಲ್ಲಾಧ್ಯಕ್ಷ ಭವಂತ್ ಪೂಜಾರಿ, ಕಾರ್ಯಧ್ಯಕ್ಷ ಮನೀಶ್ ವಿ ಶೆಟ್ಟಿ ಹಾಗೂ ಕಾರ್ಯದರ್ಶಿ ಧನುಷ್ ಜತ್ತನ್ ಅವರು ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿರುವ ಸುಮಾರು 14500 ಅತಿಥಿ ಉಪನ್ಯಾಸಕರು ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಜನವರಿ 12 ರಿಂದ ತರಗತಿ ಬಹಿಷ್ಕರಿಸಿ ರಾಜ್ಯದಾದ್ಯಂತ ಮುಷ್ಕರದಲ್ಲಿ ತೊಡಗಿದ್ದಾರೆ.
ಜನವರಿ 12 ರಿಂದ ಉಪನ್ಯಾಸಕರು ಮುಷ್ಕರದಲ್ಲಿ ತೊಡಗಿದ್ದರೂ ಸಹ ಈವರೆಗೆ ಸಂಬಂಧಪಟ್ಟ ಅಧಿಕಾರಿಗಳಾಗಲಿ, ರಾಜ್ಯದ ಉನ್ನತ ಶಿಕ್ಷಣ ಸಚಿವರಾಗಲಿ ಅಥವಾ ಸರಕಾರವಾಗಲಿ ಮಧ್ಯ ಪ್ರವೇಶಿಸಿ ಅತಿಥಿ ಉಪನ್ಯಾಸಕರ ಸಮಸ್ಯೆಯನ್ನು ಬಗೆಹರಿಸದೆ ಬೇಜವ್ಬಾರಿತನದಿಂದ ವರ್ತಿಸುತ್ತಿದ್ದಾರೆ. ಕಳೆದ ನಾಲ್ಕು ತಿಂಗಳಿನಿಂದ ಅತಿಥಿ ಉಪನ್ಯಾಸಕರ ಸಂಬಳವನ್ನು ತಡೆ ಹಿಡಿದಿರುವುದರಿಂದ ಉಪನ್ಯಾಸಕರು ತರಗತಿಗಳಿಗೆ ತೆರಳುತ್ತಿಲ್ಲ. ಇದರಿಂದಾಗಿ ಯಾವುದೇ ಸರಕಾರಿ ಕಾಲೇಜುಗಳಲ್ಲಿ ತರಗತಿಗಳು ನಡೆಯುತ್ತಿಲ್ಲ. ಸರಿಯಾದ ಸಮಯದಲ್ಲಿ ತರಗತಿ ನಡೆಯದಿರುವುದರಿಂದ ವಿದ್ಯಾರ್ಥಿಗಳು ಪರೀಕ್ಷೆಯ ಸಮಯದಲ್ಲಿ ಸಮಸ್ಯೆಗಳನ್ನು ಎದುರಿಸುವ ಪರಿಸ್ಥಿತಿ ಬಂದೊದಗಿದೆ. ಸರಕಾರ ಮತ್ತು ಉಪನ್ಯಾಸಕರ ಗೊಂದಲದಿಂದ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ ಸ್ಥಿತಿಗೆ ತಲುಪುವಂತಾಗಿದೆ. ಆದ್ದರಿಂದ ವಿದ್ಯಾರ್ಥಿಗಳ ಸಮಸ್ಯೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ಕೂಡಲೇ ಸೂಕ್ತ ಪರಿಹಾರ ಕ್ರಮವನ್ನು ಕೈಗೊಳ್ಳಬೇಕು ಇಲ್ಲದವಾದಲ್ಲಿ ಮುಂದಿನ ದಿನಗಳಲ್ಲಿ ಉಡುಪಿ ಜಿಲ್ಲಾ ಸರ್ವ ಕಾಲೇಜು ವಿದ್ಯಾರ್ಥಿ ಸಂಘ ಉಗ್ರವಾದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಿದೆ ಎಂದು ಎಚ್ಚರಿಸಿದ್ದಾರೆ.


Spread the love