ಉಡುಪಿ: ಪರ್ಯಾಯ ಬಂದೋಬಸ್ತಿಗೆ ಜಿಲ್ಲಾ ಪೋಲಿಸ್ ಸರ್ವಸನ್ನದ್ದ ; ಪೋಲಿಸ್ ವರಿಷ್ಠಾಧಿಕಾರಿ ಕೆ. ಅಣ್ಣಾಮಲೈ

Spread the love

ಉಡುಪಿ: ಜನವರಿ 17 ಮತ್ತು 18 ರಂದು ಉಡುಪಿ ಶ್ರೀ ಕೃಷ್ಣಮಠದಲ್ಲಿ ನಡೆಯಲಿರುವ ಶ್ರೀ ಪೇಜಾವರ ಮಠದ ಪರ್ಯಾಯ ಉತ್ಸವ ಪ್ರಯುಕ್ತ ಹಲವಾರು ಗಣ್ಯವ್ಯಕ್ತಿಗಳು ಮತ್ತು ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾದಿಗಳು ಉಡುಪಿಗೆ ಭೇಟಿ ನೀಡಲಿದ್ದು, ಜಿಲ್ಲಾ ಪೋಲಿಸ್ ಇಲಾಖೆ ವ್ಯಾಪಕ ಬಂದೋಬಸ್ತನ್ನು ಮಾಡಿದೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ. ಅಣ್ಣಾಮಲೈ ಅವರು ಹೇಳಿದ್ದಾರೆ.

security_arrengment_paryaya 13-01-2016 16-11-01

ಪರ್ಯಾಯ ಬಂದೋಬಸ್ತಿನ ಕುರಿತು ಮಾಧ್ಯಮದವರಿಗೆ ಬುಧವಾರ ಮಾಹಿತಿ ನೀಡಿದ ಅಣ್ಣಾಮಲೈ ಅವರು, ಬಂದೋಬಸ್ತ್ ಕರ್ತವ್ಯಕ್ಕೆ ಉಡುಪಿಯನ್ನೊಳಗೊಂಡು ಇತರ ಐದು ಜಿಲ್ಲೆಗಳಿಂದ ಒಟ್ಟು , 2 ಎಸ್.ಪಿ,  5  ಡಿ.ವೈಎಸ್ಪಿ, 16 ಸಿ.ಪಿ.ಐ, 2 ಆರ್.ಪಿ.ಐ, 45 ಪಿಎಸ್ಐ, 110 ಎಎಸ್ಐ, 780   ಹೆಚ್.ಸಿ /ಪಿ.ಸಿ, 96 ಮಹಿಳಾ ಪೊಲೀಸ್ ಸಿಬ್ಬಂದಿ, 284 ಹೊಮ್ ಗಾರ್ಡ ಮತ್ತು 6 ಕೆ.ಎಸ್ಆರ್.ಪಿ 6 ಡಿ.ಎ.ಆರ್ ತುಕುಡಿಗಳನ್ನು ನಿಯೋಜಿಸಲಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ವಾಹನ ತಪಾಸಣೆ ನಡೆಸುವ ಸಲುವಾಗಿ ಒಟ್ಟು 6 ಕಡೆ  ದಿನದ 24 ಗಂಟೆಗಳು ಕಾರ್ಯ ನಿರ್ವಹಿಸುವಂತೆ ಚೆಕ್ ಪೋಸ್ಟಗಳನ್ನು ತೆರೆದು ವಾಹನಗಳ ತಪಾಸಣೆ ನಡೆಸಲಾಗುವುದು.

ಬಂದೋಬಸ್ತು ಕರ್ತವ್ಯ ಹಾಗೂ ಭಕ್ತಾದಿಗಳ ಮಾಹಿತಿ ಮತ್ತು ನೆರವಿಗಾಗಿ ರಥಬೀದಿಯಲ್ಲಿ ಒಂದು ಪೊಲೀಸ್ ಹೊರ ಠಾಣೆಯನ್ನು ತೆರೆಯಲಾಗಿದೆ. ಜಿಲ್ಲಾ ನಿಯಂತ್ರಣ ಕೊಠಡಿ: ದೂರವಾಣಿ ಸಂಖ್ಯೆ:100, 0820-2526444, ಉಡುಪಿ ನಗರ ಠಾಣೆ ದೂರವಾಣಿ ಸಂಖ್ಯೆ:0820-2520444.

ಉತ್ಸವದ ಅಂಗವಾಗಿ ಜೋಡುಕಟ್ಟೆಯಿಂದ 10ಕ್ಕೂ ಹೆಚ್ಚಿನ ಟ್ಯಾಬ್ಲೋಗಳು, 74ಕ್ಕೂ ಹೆಚ್ಚಿನ ವಿವಿಧ ಕಲಾ ತಂಡಗಳು, ಅಷ್ಠಮಠದ ಯತಿಗಳ ಮಂಟಪಗಳು, ಅದರೊಂದಿಗೆ ಲಕ್ಷಾಂತರ ಸಾರ್ವಜನಿಕರು ಮೆರವಣಿಗೆಯಲ್ಲಿ ಭಾಗವಹಿಸುವುದಲ್ಲದೇ, ವೀಕ್ಷಣೆಗೂ ಕೂಡ ಲಕ್ಷಾಂತರ ಸಾರ್ವಜನಿಕರು ಬೇರೆ ಬೇರೆ ಜಿಲ್ಲೆ ರಾಜ್ಯಗಳಿಂದ ಪರ್ಯಾಯ  ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಆ ಸಮಯ ಸರಗಳ್ಳರು, ಜೇಬುಗಳ್ಳರು ಮತ್ತು ಕಿಡಿಗೇಡಿಗಳ ಮೇಲೆ ನಿಗಾ ಇಡುವುದಲ್ಲದೇ ಕಾನೂನು ಸುವ್ಯವಸ್ಥೆ ಮತ್ತು ಸಂಚಾರ ವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಹಾಗೂ ಪರ್ಯಾಯೋತ್ಸವವು ಸುಗಮವಾಗಿ ನೆರವೇರಲು ವ್ಯವಸ್ಥೆ ಮಾಡಲಾಗಿದೆ ಎಂದರು.

ಪರ್ಯಾಯದ ಅಂಗವಾಗಿ ತಾತ್ಕಾಲಿಕ ಪಾರ್ಕಿಂಗ್ ಬದಲಿ ವ್ಯವಸ್ಥೆ ಬಗ್ಗೆ ನಗರದ ಒಳಗಿನ ಮತ್ತು ನಗರದ ಹೊರ ವಲಯಗಳಲ್ಲಿ ಒಟ್ಟು 22 ಪಾರ್ಕಿಂಗ್  ಸ್ಥಳಗಳನ್ನು ನಿಗದಿಗೊಳಿಸಲಾಗಿದೆ. ಅವುಗಳೆಂದರೆ

ದ್ಚಿಚಕ್ರ ವಾಹನ ಮತ್ತು ಕಾರು ಪಾರ್ಕಿಂಗ್ ಹಾಗೂ ಬಸ್ಸು ಲಾರಿ ಪಾರ್ಕಿಂಗ್ ಸ್ಥಳಗಳು:

  • ಕ್ರಿಶ್ಚಿಯನ್ ಹೈಸ್ಕೂಲ್ ಆವರಣ –  ಅಲೆವೂರು ,ಕೊರಂಗ್ರಪಾಡಿ ಕಡೆಯಿಂದ ಬರುವ ಎಲ್ಲಾ ಮಾದರಿಯ ವಾಹನಗಳು
  • ಬೀಡಿನಗುಡ್ಡೆ ಮೈದಾನ – ಕುಕ್ಕಿಕಟ್ಟೆ, ಮೂಡುಬೆಳ್ಳೆ ಕಡೆಯಿಂದ ಬರುವ ಎಲ್ಲಾ ಮಾದರಿಯ ವಾಹನಗಳು
  • ಬೀಡಿನಗುಡ್ಡೆ ಬಯಲು ರಂಗ ಮಂದಿರ – ಕುಕ್ಕಿಕಟ್ಟೆ, ಮೂಡುಬೆಳ್ಳೆ ಕಡೆಯಿಂದ ಬರುವ ಎಲ್ಲಾ ಮಾದರಿಯ ವಾಹನಗಳು
  • ಭುಜಂಗ ಪಾರ್ಕ ಪಕ್ಕದ ರಸ್ತೆ – ಅಂಬಲಪಾಡಿ, ಬ್ರಹ್ಮಗಿರಿ, ಕಡೆಯಿಂದ ಬರುವ ಎಲ್ಲಾ ಮಾದರಿಯ ವಾಹನಗಳು
  • ಕಿತ್ತೂರು ಚೆನ್ನಮ್ಮ ಕ್ರಾಸ್ ರಸ್ತೆ ಅಜ್ಜರಕಾಡು    – ಅಂಬಲಪಾಡಿ ಅಜ್ಜರಕಾಡು ಸಿಂಡಿಕೇಟ್ ಟವರ್ ಕಡೆಯಿಂದ ಬರುವ ಮಾದರಿಯ ವಾಹನಗಳು
  • ಯು.ಬಿ.ಎಮ್.ಸಿ ಹಿರಿಯ ಪ್ರಾಥಮಿಕ ಶಾಲೆ – ಕೊರಂಗ್ರಪಾಡಿ, ಚಿಟ್ಪಾಡಿ, ಬೈಲೂರು,ಕಡೆಯಿಂದ ಬರುವ ಲಘು ವಾಹನಗಳು
  • ಕ್ರಿಶ್ಚಿಯನ್ ಪದವಿ ಪೂರ್ವ ಕಾಲೇಜ್ ಉಡುಪಿ – ಚಿಟ್ಪಾಡಿ-ಕೊರಂಗ್ರಪಾಡಿ ಬೈಲೂರು ಎಲ್ಲಾ ಮಾದರಿಯ ಲಘು  ವಾಹನಗಳು
  • ಸೆಂಟ್ ಸಿಸಿಲಿ ಪದವಿ ಪೂರ್ವ ಕಾಲೇಜ್ ಉಡುಪಿ – ಅಂಬಲಪಾಡಿ ಕಡೆಯಿಂದ ಬರುವ ಎಲ್ಲಾ ಮಾದರಿಯ ಲಘು ವಾಹನಗಳು
  • ಜಿಟಿಎಸ್ ಶಾಲೆ ಮೈದಾನ – ಅಂಬಲಪಾಡಿ, ಬ್ರಹ್ಮಗಿರಿ, ಕಡೆಯಿಂದ ಬರುವ ಎಲ್ಲಾ ಲಘು ವಾಹನಗಳು
  • ವಿವೇಕಾನಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಜ್ಜರಕಾಡು – ಕಿನ್ನಿಮುಲ್ಕಿ ಸ್ವಾಗತಗೋಪುರ ಕನ್ನರಪಾಡಿ ಮಾರ್ಗವಾಗಿ ಬರುವ ಎಲ್ಲಾ ಲಘು ವಾಹನಗಳು
  • ಸರಕಾರಿ ಪ್ರೌಡ ಸಂಯುಕ್ತ ಪ್ರೌಡಶಾಲೆ ಅಜ್ಜರಕಾಡು ಮೈದಾನ    – ಕಿನ್ನಿಮುಲ್ಕಿ ಸ್ವಾಗತಗೋಪುರ ಕನ್ನರಪಾಡಿ ಮಾರ್ಗವಾಗಿ ಬರುವ ಎಲ್ಲಾ ಲಘು ವಾಹನಗಳು
  • ಆದಿ ಉಡುಪಿ ಹೈಯರ್ ಪ್ರೈಮರಿ ಶಾಲೆ – ಮಲ್ಪೆ ಕಡೆಯಿಂದ ಬರುವ ಎಲ್ಲಾ ಲಘು ಮಾದರಿಯ
  • ನಾರ್ಥ ಶಾಲೆ ಆವರಣ    – ಸಂಸ್ಕೃತ ಜಂಕ್ಷನ್ ಹಾಗೂ ಸಾಯಿರಾಮ್ ಜಂಕ್ಷನ್ ನಿಂದ ಬರುವ ವಾಹನಗಳು
  • ಒಳಕಾಡು ಶಾಲೆ ಆವರಣ – ಚಿಟ್ಪಾಡಿ ಬೀಡಿನಗುಡ್ಡೆ ಕಡೆಯಿಂದ ಬರುವಂತಹ ವಾಹನಗಳು
  • ಸರ್ಕಾರಿ ಪದವಿ ಪೂರ್ವ ಕಾಲೇಜ್(ಬೋರ್ಡ ಹೈಸ್ಕೂಲ್) – ಕರಾವಳಿ ಜಂಕ್ಷನ್, ಬನ್ನಂಜೆ ಸಿಟಿ ನಿಲ್ದಾಣದಿಂದ ಬರುವಂತಹ ಲಘು ವಾಹನಗಳಿಗೆ
  • ಅನಂತೇಶ್ವರ ಆಂಗ್ಲ ಮಾದ್ಯಮ ಶಾಲೆ ಆವರಣ – ವಿ.ಐ.ಪಿ ವಾಹನಗಳು
  • ರಾಯಲ್ ಸೋಡಾ ಪಾರ್ಕಿಂಗ್ (ಕಲ್ಸಂಕ ಬಳಿ) – ವಿ.ಐ.ಪಿ ವಾಹನಗಳು
  • ಎಂ.ಜಿ.ಎಂ ಮೈದಾನ – ಕಾರ್ಕಳ ಮಾರ್ಗವಾಗಿ ಬರುವ ಬಸ್ಸು ಮತ್ತು ಲಾರಿ ಮಾದರಿಯ ವಾಹನಗಳು
  • ಸಿಟಿ ಡೆವಲಪರ್ಸ್ ಆವರಣ ಕಲ್ಸಂಕ – ಕರಾವಳಿ ಜಂಕ್ಷನ್, ಬನ್ನಂಜೆ ಸಿಟಿ ನಿಲ್ದಾಣದಿಂದ ಬರುವಂತಹ ಲಘು ವಾಹನಗಳಿಗೆ.
  • ಶಾರದಾ ರೆಶಿಡೆನ್ಶಿಯಲ್ ಶಾಲಾ ಮೈದಾನ ಕಡಿಯಾಳಿ – ಮಣಿಪಾಲ ಕಾರ್ಕಳ ಮಾರ್ಗವಾಗಿ ಬರುವ ಲಘು ಮಾದರಿಯ ವಾಹನಗಳು
  • ಸತ್ಯಂ ಶಿವಂ ಸುಂದರಂ ಮೈದಾನ ಬ್ರಹ್ಮಗಿರಿ – ಮಲ್ಪೆ ಕಡೆಯಿಂದ ಬರುವ ಲಘು ಮಾದರಿಯ ವಾಹನಗಳು
  • ಸಿಎಸ್ಐ ಬಾಯ್ಸ್ ಬೋರ್ಡಿಂಗ್ ಹೋಮ್ ಆವರಣ – ಕೊರಂಗ್ರಪಾಡಿ, ಚಿಟ್ಪಾಡಿ, ಬೈಲೂರು, ಕಡೆಯಿಂದ ಬರುವ ಲಘು ವಾಹನಗಳು

ಪರ್ಯಾಯ ಉತ್ಸವ ಸಮಯ ಸುಗಮ ಸಂಚಾರಕ್ಕಾಗಿ ಪ್ರತ್ಯೇಕ ಸಂಚಾರ ಮಾರ್ಗಗಳನ್ನು ನಿಗದಿಪಡಿಸಿದ್ದು ಹಾಗೂ ರಥ ಬೀದಿಯನ್ನು ವಾಹನ ಮುಕ್ತಗೊಳಿಸಲು ಕ್ರಮಕೈಗೊಳ್ಳಲಾಗಿದ್ದು ಜನವರಿ ಬೆಳಿಗ್ಗೆ 09:00  ಗಂಟೆಯಿಂದ 18 ರ ಬೆಳಿಗ್ಗೆ 09:00 ಗಂಟೆಯವರೆಗೆ ಉಡುಪಿ ನಗರಕ್ಕೆ ಬರುವ ಹಾಗೂ ನಗರದಿಂದ  ಹೊರ ಹೋಗುವ ವಾಹನಗಳಿಗೆ ಸಂಚಾರದ ವ್ಯವಸ್ಥೆಯಲ್ಲಿ ತಾತ್ಕಾಲಿಕ ಬದಲಾವಣೆ ಮಾಡಿದ್ದು ಈ ಕೆಳಗಿನಂತಿರುತ್ತದೆ.

  1. ಮಂಗಳೂರು-ಬಲಾಯಿಪಾದೆ-ಅಂಬಲಪಾಡಿ ಕಡೆಯಿಂದ ಉಡುಪಿ ನಗರಕ್ಕೆ ಬರುವ ಎಲ್ಲಾ ವಾಹನಗಳು ಅಂಬಲಪಾಡಿ ಮುಖೇನ ರಾ.ಹೆ. 66 ಕರಾವಳಿ ಜಂಕ್ಷನ್ ತಲುಪಿ ಬನ್ನಂಜೆ ಮೂಲಕ ಉಡುಪಿ ನಗರ ಪ್ರವೇಶಿಸುವುದು.
  2. ಉಡುಪಿ ನಗರದ ಸರ್ವಿಸ್ ಹಾಗೂ ಸಿಟಿ ನಿಲ್ದಾಣದಿಂದ ಹೊರಹೋಗುವ ಎಲ್ಲಾ ವಾಹನಗಳು ಬನ್ನಂಜೆ ಮಾರ್ಗವಾಗಿ ಕರಾವಳಿ ಜಂಕ್ಷನ್ ನಿಂದ ಮಂಗಳೂರು ಮಲ್ಪೆ ಮತ್ತು ಕುಂದಾಪುರ ಕಡೆಗೆ ಸಂಚರಿಸುವುದು.
  3. ಉಡುಪಿ ನಗರದಿಂದ ಕಾರ್ಕಳಕ್ಕೆ ಹೋಗಿ ಬರುವಂತಹ ಬಸ್ ಗಳು ಮಣಿಪಾಲದಲ್ಲಿಯೇ ಪ್ರಯಾಣಿಕರನ್ನು ಹತ್ತಿಸುವುದು ಮತ್ತು ಇಳಿಸುವುದು. ಈ ದಿನಗಳಂದು ಯಾವುದೇ ಕಾರಣಕ್ಕೆ ಉಡುಪಿ ನಗರ ಪ್ರವೇಶವನ್ನು ನಿಷೇಧಿಸಿದೆ.
  4. ಮಲ್ಪೆ- ಸಂತೆಕಟ್ಟೆ-ಕುಂದಾಪುರ ಕಡೆಯಿಂದ ಉಡುಪಿ ನಗರ ಪ್ರವೇಶಿಸುವ ವಾಹನಗಳು ಕರಾವಳಿ ಜಂಕ್ಷನ್ ತಲುಪಿ ಸಿಟಿ ಮತ್ತು ಸರ್ವಿಸ್ ಬಸ್ ನಿಲ್ದಾಣ ಪ್ರವೇಶಿಸುವುದು.
  5. ಮಂಗಳೂರಿನಿಂದ ಮುಂಬಾಯಿಗೆ ಹೋಗುವ ಎಲ್ಲಾ ಬಸ್ ಗಳು ಬಲಾಯಿಪಾದೆ-ಅಂಬಲಪಾಡಿ-ಕರಾವಳಿ ಜಂಕ್ಷನ್ನಲ್ಲಿಯೇ ಪ್ರಯಾಣಿಕರನ್ನು ಹತ್ತಿಸಿಕೊಂಡು ನೇರವಾಗಿ ಮುಂಬಾಯಿ ಕಡೆಗೆ ತೆರಳುವುದು.

ಉಡುಪಿ ನಗರದಲ್ಲಿ ವಾಹನ ಸಂಚಾರ ಮತ್ತು ಪಾರ್ಕಿಂಗ್ ನಿಷೇಧಿಸಿರುವ ಸ್ಥಳಗಳು

ಜನವರಿ 17ರ ಬೆಳಿಗ್ಗೆ 09:00 ಗಂಟೆಯಿಂದ ಜನವರಿ 18 ರ ಬೆಳಿಗ್ಗೆ 09:00 ಗಂಟೆಯವರೆಗೆ ಉಡುಪಿ ನಗರದ ಸ್ವಾಗತ ಗೋಪುರ, ಕಿನ್ನಿಮುಲ್ಕಿ, ಗೋವಿಂದ ಕಲ್ಯಾಣ ಮಂಟಪ, ಜೋಡುಕಟ್ಟೆ, ಲಯನ್ಸ್ ಸರ್ಕಲ್, ಕೋರ್ಟ್ ರಸ್ತೆ, ಸಿಂಡಿಕೇಟ್ ಟವರ್, ಡಯಾನ ಜಂಕ್ಷನ್, ಮಿತ್ರ ಆಸ್ಪತ್ರೆ ಮತ್ತು ಜಂಕ್ಷನ್, ಐಡಿಯಲ್ ಜಂಕ್ಷನ್, ತೆಂಕುಪೇಟೆ, ಕೆ.ಎಂ. ರಸ್ತೆ, ಹನುಮಾನ್ ಸರ್ಕಲ್, ಸಂಸ್ಕೃತ ಕಾಲೇಜು, ಕನಕದಾಸ ರಸ್ತೆ, ಬಡಗುಪೇಟೆ ರಸ್ತೆ, ಚಿತ್ತರಂಜನ್ ಸರ್ಕಲ್, ಎಲ್.ವಿ.ಟಿ. ತೆಂಕುಪೇಟೆ ದೇವಸ್ಥಾನ ರಸ್ತೆ, ಹರಿಶ್ಚಂದ್ರ ಮಾರ್ಗದಿಂದ ವಿದ್ಯೋದಯ ಶಾಲೆವರೆಗೆ, ಕಲ್ಸಂಕದಿಂದ ರಾಜಾಂಗಣ ಪಾರ್ಕಿಂಗ್  ಸ್ಥಳದ ವರೆಗೆ, ಕಟ್ಟೆ ಆಚಾರ್ಯ ಮಾರ್ಗ, ಮತ್ತು ರಥಬೀದಿಗಳನ್ನು ಯಾವುದೇ ವಾಹನ ಪ್ರವೇಶ ಮತ್ತು ಪಾರ್ಕಿಂಗ್ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಜನವರಿ 6  ರಿಂದ ಪಾವತಿ ಪಾರ್ಕಿಂಗ್ ನಡೆಯುತ್ತಿದ್ದ ಬೊಬ್ಬರ್ಯಕಟ್ಟೆ ವುಡ್ ಲ್ಯಾಂಡ್ ಹೋಟೆಲ್ ನಿಂದ ಪೇಜಾವರ ಮಠದ ಹಿಂಭಾಗದವರೆಗೆ ವಾಹನ ಪಾರ್ಕಿಂಗ್ ಅನ್ನು ಜನವರಿ 31 ರವರೆಗೆ ನಿಷೇಧಿಸಿದೆ.

ಉಡುಪಿ ಪರ್ಯಾಯದ ಅಂಗವಾಗಿ ಜನವರಿ 16 ರಂದು ಮಧ್ಯರಾತ್ರಿಯಿಂದ ಜನವರಿ 18ರ ಮಧ್ಯರಾತ್ರಿವರೆಗೆ ಉಡುಪಿ ನಗರ ಸಭಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಿ ಮಾನ್ಯ ಜಿಲ್ಲಾಧಿಕಾರಿಗಳು, ಉಡುಪಿ ಜಿಲ್ಲೆ ರವರು ಅದೇಶ ಹೊರಡಿಸಿರುತ್ತಾರೆ.

ಪಾರ್ಕಿಂಗ್ ಸ್ಥಳಗಳಿಂದ ವಯೋವೃದ್ಧರಿಗೆ ಮತ್ತು ಅಂಗವಿಕಲರು ದೇವಸ್ಥಾನ ಮತ್ತು ಕಾರ್ಯಕ್ರಮದ ಸ್ಥಳಕ್ಕೆ ಬರುವರೇ ಪ್ರತ್ಯೇಕ ವಾಹನದ ವ್ಯವಸ್ಥೆ ಮಾಡಲಾಗಿದ್ದು ಇದರ ಉಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬಹುದಾಗಿದೆ.

ಶ್ರೀ ಕೃಷ್ಣಾ ಮಠದ ಪರ್ಯಾಯ 2016ರ ಕಾರ್ಯಕ್ರಮವನ್ನು ಸುಗಮವಾಗಿ ನಡೆಯಲು ಅನುಕೂಲವಾಗುವಂತೆ ಸಾರ್ವಜನಿಕರು, ಸ್ವಸಹಾಯ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರುಗಳು, ಸೇವಾ ಸಹಕಾರಿ ಸಂಘಗಳ ಪದಾಧಿಕಾರಿಗಳು ಮತ್ತು ಸದಸ್ಯರುಗಳು ಸರ್ಕಾರಿ ಮತ್ತು ಅರೆಸರ್ಕಾರಿ ನೌಕರರು ಪೊಲೀಸರೊಂದಿಗೆ ಸಹಕರಿಸುವಂತೆ ವಿನಂತಿಸಿದರು.


Spread the love