ಎರಡು ವರ್ಷದಿಂದ ಸಹೋದರ ಆದಿತ್ಯ ರಾವ್ ಸಂಪರ್ಕದಲ್ಲಿಲ್ಲ: ಅಕ್ಷತ್ ರಾವ್

Spread the love

ಎರಡು ವರ್ಷದಿಂದ ಸಹೋದರ ಆದಿತ್ಯ ರಾವ್ ಸಂಪರ್ಕದಲ್ಲಿಲ್ಲ: ಅಕ್ಷತ್ ರಾವ್

ಮಂಗಳೂರು: ತಮ್ಮ ಸಹೋದರ ಆದಿತ್ಯ ರಾವ್, ಕಳೆದ 2 ವರ್ಷಗಳಿಂದ ಕುಟುಂಬದ ಸಂಪರ್ಕದಲ್ಲಿ ಇಲ್ಲ ಎಂದು ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಇರಿಸಿದ್ದ ಆರೋಪಿ ಆದಿತ್ಯ ರಾವ್ ಸಹೋದರ ಅಕ್ಷತ್ ರಾವ್ ತಿಳಿಸಿದ್ದಾರೆ.

ಆದಿತ್ಯ ರಾವ್ ಪೊಲೀಸರಿಗೆ ಶರಣಾದ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ತಂದೆಗೆ ಇಬ್ಬರು ಗಂಡು ಮಕ್ಕಳು. ಆದಿತ್ಯ ಎಂಬಿಎ, ಬಿಇ ಪದವಿಧರನಾಗಿದ್ದಾನೆ. ಕಳೆದ 2 ವರ್ಷಗಳಿಂದ ನಮ್ಮ ಕುಟುಂಬ ಆತನಿಂದ ಸಂಪರ್ಕ ಕಳೆದುಕೊಂಡಿದ್ದು, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಹಾಕುವುದಾಗಿ ಹುಸಿ ಕರೆ ಮಾಡಿದ್ದಾಗಲೇ ಆತನಿಗೆ ಬುದ್ಧಿವಾದ ಹೇಳಿದ್ದೆವು. ನಮ್ಮ ತಂದೆ ಹಲವು ಆತನನ್ನು ಸರಿಪಡಿಸಲು ಪ್ರಯತ್ನಿಸಿದ್ದಾರೆ. ಆದರೆ, ಆತ ಸರಿಯಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಅವನ ಈ ಕೃತ್ಯಕ್ಕೆ ನಾವು ಹೊಣೆಗಾರರಲ್ಲ. ಅಲ್ಲದೇ, ಈ ಕುರಿತು ತಿಳಿದುಕೊಳ್ಳುವ ಯಾವುದೇ ಆಸಕ್ತಿಯೂ ನಮಗಿಲ್ಲ. ಹುಸಿ ಬಾಂಬ್ ಕರೆಗೆ ಸಂಬಂಧಿಸಿದಂತೆ ಆತ ಜೈಲಿಗೆ ಸೇರಿದ್ದ, ಜಾಮೀನು ಕೊಡಿಸುವ ಯಾವುದೇ ಪ್ರಯತ್ನ ನಾವು ಮಾಡಿಲ್ಲ. ಕೊನೆಯದಾಗಿ ನಮ್ಮ ತಾಯಿ ತೀರಿಹೋದಾಗ ವಿಷಯ ತಿಳಿಸಲು ಕರೆ ಮಾಡಿದ್ದು ಅಷ್ಟೇ. ನಮ್ಮ ತಂದೆ ಆತ ಮನೆಗೆ ಬರುವುದು ಬೇಡವೆಂದು ಹೇಳಿದ್ದರು. ಅಂದಿನಿಂದ ಆತ ಮನೆಗೆ ಬಂದಿಲ್ಲ ಎಂದು ತಿಳಿಸಿದರು.


Spread the love