ಐಟಿ ಧಾಳಿಗೆ ಒಳಗಾದ ಸಚಿವ ಡಿಕೆಶಿ ಮತ್ತು ಜಾರಕಿಹೊಳಿ ರಾಜೀನಾಮೆಗೆ ಮಟ್ಟಾರ್ ಆಗ್ರಹ

Spread the love

ಐಟಿ ಧಾಳಿಗೆ ಒಳಗಾದ ಸಚಿವ ಡಿಕೆಶಿ ಮತ್ತು ಜಾರಕಿಹೊಳಿ ರಾಜೀನಾಮೆಗೆ ಮಟ್ಟಾರ್ ಆಗ್ರಹ

ಉಡುಪಿ: ರಾಜ್ಯದ ಇಂಧನ ಸಚಿವ ಡಿಕೆಶಿ ಅವರ ಮನೆಗೆ ದಾಳಿ ನಡೆದ ಸಂದರ್ಭದಲ್ಲಿ ರಾಜ್ಯದ ಜನತೆ ಬೆಕ್ಕಸ ಬೆರಗಾಗುವಂತ್ತೆ ಅನದಿಕೃತ ಅಪಾರ ಸಂಪತ್ತನ್ನು ಕಂಡು ಹಿಡಿಯಲಾಗಿದೆ ಇದಕ್ಕೆ ಯಾವುದೇ ರೀತಿಯ ಉತ್ತರ ಕೊಡುವ ಸ್ಥಿತಿಯಲ್ಲಿ ಡಿಕೆಶಿ ಯಾಗಲೀ ರಾಜ್ಯ ಕಾಂಗ್ರೆಸ್ ಆಗಲಿ ಇಲ್ಲ ಅವರನ್ನು ಹಾಗೂ ಇನ್ನೋರ್ವ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಕೂಡಲೇ ಸಂಪುಟದಿಂದ ವಜಾಗೊಳಿಸುವಂತೆ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರ್ ರತ್ನಾಕರ್ ಹೆಗ್ಡೆ ಆಗ್ರಹಿಸಿದ್ದಾರೆ.

ಈ ಕುರಿತು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಪ್ರತಿಯೊಬ್ಬ ಮಂತ್ರಿಯು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ, ರಾಜ್ಯದ ಬೊಕ್ಕಸ ಭ್ರಷ್ಟಾಚಾರದಿಂದ ಖಾಲಿಯಾಗುತ್ತಿದೆ. ಈ ಹಿಂದೆ ಕೋಟ್ಯಾಂತರ ರೂಪಾಯಿಯ ವಾಚ್ ಕಟ್ಟುವ ಮುಖಾಂತರ ಮುಖ್ಯಮಂತ್ರಿಗಳೇ ವಿವಾದಾಸ್ಪದ ವ್ಯಕ್ತಿಗಳಾಗಿದ್ದರೆ ಮುಂದೆ ಸಚಿವ ರಮೇಶ್ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳ್‍ಕರ್ ಇಂತಹದೇ ಪ್ರಕರಣದಲ್ಲಿ ಸಿಲುಕುವಂತಾಗಿದೆ. ಸಚಿವ ಅಂಜನೇಯವರು ತನ್ನದೇ ಮನೆಯಲ್ಲಿ ದುಡ್ಡು ತೆಗೆದುಕೊಳ್ಳುವ ಮುಖಾಂತರ ಮಾಧ್ಯಮದಲ್ಲಿ ಪ್ರಚಾರಕ್ಕೆ ಬಂದಿರುತ್ತಾರೆ. ಈ ಎಲ್ಲಾ ನಾಯಕರುಗಳ ದುಡ್ಡಿನ ಮೂಲದ ಬಗ್ಗೆ ಕಾಂಗ್ರೆಸ್ ಉತ್ತರಿಸಬೇಕಾಗಿದೆ. ರಾಜ್ಯದ ಜನರನ್ನು ಮತ್ತು ಬೊಕ್ಕಸವನ್ನು ಕೊಳ್ಳೆ ಹೊಡೆದುದ್ದರಿಂದ ಇವತ್ತು ರಾಜ್ಯದ ಕಾಂಗ್ರೆಸ್ ನಾಯಕರು ಅಪಾರ ಸಂಪತ್ತನ್ನು ರಾಶಿ ಹಾಕಿದ್ದಾರೆ.

ಕಳೆದ ಹಲವಾರು ವರ್ಷಗಳಿಂದ ಕೊಲ್ಲೂರು ದೇವಸ್ಥಾನದಿಂದ ಕೊಡಮಾಡುತ್ತಿದ್ದ ಮಧ್ಯಾಹ್ನದ ಮಕ್ಕಳ ಅನ್ನದಾಸೋಹಕ್ಕೆ ನೀಡುತ್ತಿದ್ದ ಅನುದಾನವನ್ನು ಏಕಾಏಕಿ ನಿಲ್ಲಿಸಿದ ರಾಜ್ಯ ಕಾಂಗ್ರೆಸ್ ಸರಕಾರದ ಕ್ರಮ ಖಂಡನೀಯ. ಈ ಕ್ರಮವು ರಾಜಕೀಯ ಪ್ರೇರಿತವಾದುದೆಂದು ಮಾಜಿ ಕೇಂದ್ರ ಸಚಿವ ಬಿ. ಜನಾರ್ಧನ ಪೂಜಾರಿಯವರು ಹೇಳಿದ್ದಾರೆ. ಕಲ್ಲಡ್ಕ ಶಾಲೆಯಲ್ಲಿ ಕೋಮು ಪ್ರಚೋದನೆಯಂತಹ ಶಿಕ್ಷಣನೀಡಲಾಗುತ್ತಿದೆ ಎಂದು ಸಚಿವ ರಮಾನಾಥ್ ರೈ ನೀಡಿದ ಹೇಳಿಕೆ ಹಾಸ್ಯಸ್ಪದ. ಕಾಮಲೆ ಕಣ್ಣಿನಿಂದ ಮನ ಬಂದಂತೆ ಮಾತನಾಡುವುದು ಬಿಟ್ಟು ಆ ವಿದ್ಯಾಸಂಸ್ಥೆಗೆ ಭೇಟಿ ನೀಡಿ ಅಲ್ಲಿನ ಶಿಕ್ಷಣ ವ್ಯವಸ್ಥೆ, ಶಿಸ್ತಿನ ವಾತಾವರಣವನ್ನು ತಿಳಿದುಕೊಳ್ಳಲಿ ಎಂದರು.

ಮಂಗಳೂರಿನ ರಸ್ತೆ ಒಂದಕ್ಕೆ ಹಿರಿಯ ಬ್ಯಾಂಕರ್ ಆಗಿ ಜಾತ್ಯಾತೀತ ಆಧಾರದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉದ್ಯೋಗ ಕ್ರಾಂತಿಯನ್ನೇ ಮಾಡಿ, ಅನೇಕರ ಬದುಕಿಗೊಂದು ನೆಲೆಯನ್ನು ತೋರಿಸಿದ ಮುಲ್ಕಿ ಸುಂದರ್ ರಾಮ ಶೆಟ್ಟಿಯವರ ಹೆಸರನ್ನು ರಸ್ತೆಗೆ ಇಡುವುದರಿಂದ ಸಮಾಜ ಅವರಿಗೆ ಗೌರವವನ್ನು ನೀಡಿದಂತಾಗುತ್ತದೆ. ಇದಕ್ಕೆ ರಾಜಕೀಯ ಸಲ್ಲದು ಎಂದು ಅವರು ಹೇಳಿದರು.

ಮೂಡಬಿದ್ರೆಯ ವಿದ್ಯಾರ್ಥಿನಿ ಕಾವ್ಯಳ ಸಾವಿನಲ್ಲಿ ರಾಜಕೀಯ ಸಲ್ಲದು, ಸರಕಾರ ಪೂರ್ಣ ಸಹಕಾರ ನೀಡಿದರೂ ಕೂಡಾ ಉದ್ದೇಶ ಪೂರ್ವಕವಾಗಿ ಈ ಪ್ರಕರಣ ಭೇದಿಸುವಲ್ಲಿ ಪೆÇಲಿಸ್ ಇಲಾಖೆ ಮೀನಾ ಮೇಷ ಎಣಿಸುತ್ತಿದೆ. ನಿಷ್ಪಕ್ಷಪಾತ ತನಿಖೆ ನಡೆಯಬೇಕು ಇಲ್ಲದಿದ್ದಲ್ಲಿ ಸಂಸ್ಥೆಯ ಹೆಸರು ಹಾಳಾಗುತ್ತದೆ. ಒಂದು ಸಂಸ್ಥೆಯ ಹೆಸರ£್ನ ಈ ರೀತಿಯಾಗಿ ಹಾಳು ಮಾಡುವುದು ಸರಿಯಲ್ಲ.

ಮೀನುಗಾರ ಮುಖಂಡರೊಂದಿಗೆ ನಾವು ದಿಲ್ಲಿಗೆ ಹೋಗಿದ್ದು ಕೃಷಿ ಸಚಿವರಾದ ರಾಧ ಮೋಹನ್‍ದಾಸ್ ಮತ್ತು ಕೇಂದ್ರ ಹೆದ್ದಾರಿ ಮತ್ತು ಬಂದರು ಸಚಿವ ನಿತಿನ್ ಗಡ್ಕರಿಯವರನ್ನು ಭೇಟಿ ಮಾಡಿ ನೆನೆಗುದಿಗೆ ಬಿದ್ದಿರುವ ಅನೇಕ ಯೋಜನೆಗಳ ಬಗ್ಗೆ ಅವರ ಗಮನ ಸೆಳೆಯಲಾಗಿದೆ. ಹೆಜಮಾಡಿ ಬಂದರಿನ ಅಭಿವೃದ್ಧಿ ಬಗ್ಗೆ ಕೇಂದ್ರದ 50% ಅಂದರೆ ರೂ. 140 ಕೋಟಿಯಲ್ಲಿ ಕೇಂದ್ರದ ಪಾಲು ಎಪ್ಪತ್ತು ಕೋಟಿ ರೂಪಾಯಿಗಳನ್ನು ಸ್ಥಳದಲ್ಲಿಯೇ ಮಂಜೂರು ಮಾಡಿದ್ದಾರೆ. 140 ಕೋಟಿಯ ಈ ಕೆಲಸಕ್ಕೆ ರಾಜ್ಯ ಸರಕಾರ ಮುಂದಡಿ ಇಡಬೇಕಾಗಿದೆ. ಯೋಜನೆ ಆದಷ್ಟು ಬೇಗ ಕಾರ್ಯರೂಪಗೊಳ್ಳುವುದಾಗಿ ಆಶಿಸಲಾಗಿದೆ.

ಮೀನುಗಾರರು ಬಳಸುವ ಸಲಕರಣೆಗಳಾದ ಬಲೆ, ಮಂಜುಗಡ್ಡೆ ಇತ್ಯಾದಿಗಳ ಮೇಲೆ ಜಿ.ಎಸ್.ಟಿ ಯು 12% ಇದ್ದು ಅದನ್ನು 5%ಕ್ಕೆ ಇಳಿಸುವಂತೆ ಅಥವಾ ಸಂಪೂರ್ಣ ತೆರಿಗೆ ವಿನಾಯಿತಿ ನೀಡುವಂತೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿಯವರನ್ನು ರಾಜ್ಯಾಧ್ಯಕ್ಷರಾದ ಬಿ.ಎಸ್.ಯಡಿಯೂರಪ್ಪನವರು ಮೀನುಗಾರರ ಪರವಾಗಿ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ನಿಯೋಗದಲ್ಲಿ ಜಿಲ್ಲಾಧ್ಯಕ್ಷರು, ಮಾಜಿ ಶಾಸಕರಾದ ಲಾಲಾಜಿ ಮೆಂಡನ್, ಮೀನುಗಾರಿಕ ಫೆಡರೇಶನ್‍ನ ಅಧ್ಯಕ್ಷ ಯಶ್‍ಪಾಲ್ ಸುವರ್ಣ ಮತ್ತಿತರ ಮೀನುಗಾರಿಕ ಮುಖಂಡರು ಭಾಗವಹಿಸಿದ್ದರು.

ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಳಿ ತಪ್ಪಿದಾಗ ಆಡಳಿತ ವೈಫಲ್ಯಗಳನ್ನು ಮರೆಮಾಚಲು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಹುಸಿ ಬಾಂಬುಗಳನ್ನು ಸಿಡಿಸುವ ಪ್ರಯತ್ನ ಮಾಡುತ್ತಿದ್ದು ಶರತ್ ಮಡಿವಾಳ ಮತ್ತು ಇತರ ಕಾರಣಗಳಿಗಾಗಿ ದಕ್ಷಿಣ ಕನ್ನಡ  ಜಿಲ್ಲೆ ಹೊತ್ತಿ ಉರಿಯುವ ಸಮಯದಲ್ಲಿ ಕರ್ನಾಟಕಕ್ಕೆ ಪ್ರತ್ಯೇಕ ಧ್ವಜ, ವೀರಶೈವ ಲಿಂಗಾಯಿತ ಎಂದು ಪ್ರತ್ಯೇಕ ಧರ್ಮದ ವಿಚಾರ ತೆಗೆದು  ವಿಷಾಯಾಂತರ ಮಾಡಲು ಪ್ರಯತ್ನಿಸುತ್ತಿದ್ದು, ಅಖಂಡ ಭಾರತಕ್ಕೆ ಒಂದೇ ಧ್ವಜ ಎನ್ನುವ ಒಕ್ಕೂಟ ಸಿದ್ಧಾಂತಕ್ಕೆ ವಿರುದ್ಧವಾಗಿ ರಾಜ್ಯಕ್ಕೆ ಪ್ರತ್ಯೇಕ ಧ್ವಜದ ಬಗ್ಗೆ ಸಿದ್ಧರಾಮಯ್ಯನವರು ಮಾತನಾಡುತ್ತಿರುವುದು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ. ದೇಶದ ಬಗ್ಗೆ ಅಭಿಮಾನ ತೋರಬೇಕಾದ ಮುಖ್ಯಮಂತ್ರಿಗಳು, ಅಪಮಾನ ಮಾಡುತ್ತಿದ್ದಾರೆ. ಹಿಂದೂ ಧರ್ಮದ ಅವಿಭಾಜ್ಯ ಅಂಗವಾಗಿರುವ ಲಿಂಗಾಯಿತರನ್ನು ಲಿಂಗಾಯಿತರು ವೀರಶೈವರು ಎಂದು ಹಿಂದೂ ಧರ್ಮವನ್ನು ಒಡೆದು ಆಳುವ ನೀತಿಯನ್ನು ಸರಕಾರ ಅನುಸರಿಸುತ್ತಿರುವುದು ಅತ್ಯಂತ ಖೇದಕರ ಎಂದರು.

ಜಿಲ್ಲೆಯ ಮರಳಿನ ಸಮಸ್ಯೆ  ತೀವ್ರಗೊಂಡಿದ್ದು, ಕಳೆದ ನಾಲ್ಕು ವರ್ಷಗಳಿಂದ ಈ ಬಗ್ಗೆ ಹೋರಾಟ ನಡೆಸಿದರೂ ಪ್ರಯೋಜನವಾಗಿಲ್ಲ. ಇದೀಗ ಮರಳನ್ನು ಗೊತ್ತು ಮಾಡಿದ ಜಾಗದಲ್ಲಿ ತೆಗೆಯುವ ಬಗ್ಗೆ ಜಿಲ್ಲಾಡಳಿತ ನಿರ್ಧಾರ ತೆಗೆದುಕೊಂಡಿದೆ. ಆದರೆ ವ್ಯವಸ್ಥಿತವಾಗಿ ಕಾಂಗ್ರೆಸಿಗರಿಗಲ್ಲದೆ ಬೇರೆಯವರಿಗೆ ಪರವಾನಿಗೆ ನೀಡಬಾರದೆಂದು ಅನಾವಶ್ಯಕ, ಅನಗತ್ಯ ದಾಖಲೆಗಳನ್ನು ಕೇಳುತ್ತಿದ್ದಾರೆ. ಕಾಂಗ್ರೆಸಿಗರಿಗೆ ಮರಳುಗಾರಿಕೆ ಒಂದು ವ್ಯವಹಾರವಾಗಿದೆ.

 ಉಡುಪಿ ಜಿಲ್ಲೆಯೊಂದರಲ್ಲಿ ಸುಮಾರು ಆರು ಸಾವಿರ ಪಡಿತರ ಚೀಟಿಗಳನ್ನು ಬೇರೆ ಬೇರೆ ಕಾರಣಗಳಿಗಾಗಿ ಅಮಾನತುಗೊಳಿಸಲಾಗಿದೆ ಇದರಿಂದಾಗಿ ಬಡ ಜನತೆ ಗಣೇಶೋತ್ಸವ ಮತ್ತು ಇತರ ಹಬ್ಬಗಳಿಗೆ ಪಡಿತರ ಸಕ್ಕರೆ, ಅಕ್ಕಿ, ಗೋದಿ ಸಿಗದೆ ತತ್ತರಿಸುವಂತಾಗಿದೆ.

ಉಡುಪಿ ನಗರಸಭೆಯು ಸ್ವಚ್ಛತೆ ಇಲ್ಲದೆ ಅನೇಕ ಕಡೆಗಳಲ್ಲಿ ನಾರುವಂತಾಗಿದೆ, ರಸ್ತೆಗಳು ಸಂಚಾರಕ್ಕೆ ಯೋಗ್ಯವಾಗಿಲ್ಲ, ಯಾವುದೇ ರಸ್ತೆ ರಿಪೇರಿ ಕೆಲಸಗಳು ನಡೆಯುತ್ತಿಲ್ಲ. ಇತ್ತ ನಗರಸಭೆಯಲ್ಲಿ ಅನಾವಶ್ಯಕ ಚರ್ಚೆ ನಡೆಯುತ್ತಿದೆಯೇ ವಿನಹ ಅಭಿವೃದ್ಧಿಗೆ ಪೂರಕವಾಗಿ ಕೆಲಸಗಳು ನಡೆಯುತ್ತಿಲ್ಲ.

ವೈದ್ಯಕೀಯ ಸೇವೆ ಸಾಮಾನ್ಯ ಜನರ ಕೈಗೆಟಕುವಂತೆ ಮಾಡುವ ಉದ್ದೇಶದಿಂದ ಹೃದಯ ಶಸ್ತ್ರಚಿಕಿತ್ಸೆಗೆ ಬಳಕೆಯಾಗುವ  ಸ್ಟಂಟ್‍ಗಳ ದರವನ್ನು ಗಣನೀಯವಾಗಿ ಕಡಿತಗೊಳಿಸುವಂತೆ ಆದೇಶ ಹೊರಡಿಸಿದ್ದ ಕೇಂದ್ರ ಸರಕಾರ ಈಗ ಮತ್ತೊಂದು ಜನಸ್ನೇಹಿ ಹೆಜ್ಜೆ ಇಟ್ಟಿದೆ. ಮಂಡಿಚಿಪ್ಪು ಶಸ್ತ್ರಚಿಕಿತ್ಸೆ ವೇಳೆ ಅಳವಡಿಸಲಾಗುವ ಪರಿಕರಗಳ ದರವನ್ನು ಶೆ.60 ರವರೆಗೂ ಇಳಿಕೆ ಮಆದುವಂತೆ ಸರಕಾರ ಬುಧವಾರ ಆದೇಶ ಹೊರಡಿಸಿದೆ. ಗುರುವಾರದಿಂದ ನಡೇಯುವ ಎಲ್ಲ ಮಂಡಿಚಿಪ್ಪು ಶಸ್ತ್ರಚಿಕಿತ್ಸೆಗೆ ಪರಿಷ್ಕೃತ ದರ ಅನ್ವಯವಾಗಲಿದೆ. ರೂ.1.40 ಇದ್ದದ್ದು ರೂ. 54 ಸಾವಿರಕ್ಕೆ ಇಳಿಸಲಾಗಿದೆ. ದೇಶಾದ್ಯಂತ ಜನರಿಕ್ ಔಷಧಿ ಮಳಿಗೆಗಳನ್ನು ತೆರೆದು ಜನರ ಜೀವ ಉಳಿಸುವ ಕೆಲಸ ಮಾಡಲಾಗಿದೆ.

ಕೇಂದ್ರ ಸರಕಾರದ ಅನುದಾನದಿಂದ ನಿರ್ಮಾಣವಾದ ಉಡುಪಿ ನಗರಸಭೆ ನಿರ್ವಹಿಸುತ್ತಿರುವ ಉಡುಪಿ ಮೀನು ಮಾರುಕಟ್ಟೆಯಲ್ಲಿ ಸುಚಿತ್ವದ ಕೊರತೆ ಮತ್ತು ನೀರಿನ ಅಭಾವ ಕಂಡು ಬರುತ್ತದೆ. ಉಡೂಪಿ ನಗರಸಭೆಯು ಮೀನು ಮಾರುಕಟ್ಟೆಯ ಮೂಲಭೂತ ಸೌಕರ್ಯಗಳ ಬಗ್ಗೆ ಗಮನ ಹರಿಸದಿರುವುದು ಅತ್ಯಂತ ಶೋಚನಿಯ, ನಗರಸಭೆ ಇದರ ಬಗ್ಗೆ ಗಮನ ಹರಿಸಬೇಕಾಗಿ ಅಗ್ರಹಿಸಿದರು.


Spread the love