ಒರ್ವ ಜೀವಮಾನ ಸಾಧಕ ಸೇರಿ ಐವರಿಗೆ ಸಮುದಾಯೋತ್ಸವ-2020 ಪ್ರಶಸ್ತಿಗೆ ಆಯ್ಕೆ

Spread the love

ಒರ್ವ ಜೀವಮಾನ ಸಾಧಕ ಸೇರಿ ಐವರಿಗೆ ಸಮುದಾಯೋತ್ಸವ-2020 ಪ್ರಶಸ್ತಿಗೆ ಆಯ್ಕೆ

ಉಡುಪಿ: ಕೆಥೊಲಿಕ್ ಉಡುಪಿ ಪ್ರದೇಶ್ ಇದರ ವತಿಯಿಂದ ಉಡುಪಿ ಧರ್ಮಪ್ರಾಂತ್ಯದ ಇತಿಹಾಸದಲ್ಲಿ ಪ್ರಥಮ ಬಾರಿಗೆ 2020 ಜನವರಿ 19ರಂದು ಕಲ್ಯಾಣಪುರದ ಮೌಂಟ್ ರೋಜರಿ ಚರ್ಚಿನ ಮೈದಾನದಲ್ಲಿ ಆಯೋಜಿಸಿರುವ ಉಡುಪಿ ಧರ್ಮಪ್ರಾಂತ್ಯ ಮಟ್ಟದ ಚಾರಿತ್ರಿಕ ಸಮ್ಮೇಳನ ಸಮುದಾಯೋತ್ಸವ-2020 ಇದರಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದ ನಾಲ್ವರು ಸಾಧಕರು ಮತ್ತು ಓರ್ವರಿಗೆ ಜೀವಮಾನ ಸಾಧನೆ ಪ್ರಶಸ್ತಿಗಳಿಗಾಗಿ ಆಯ್ಕೆ ಮಾಡಲಾಗಿದೆ.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದ ಪತ್ರಕರ್ತ ಜಾನ್ ಡಿಸೋಜಾ, ಕುಂದಾಪುರ (ಸಮೂಹ ಮಾಧ್ಯಮ), ಪ್ರಗತಿಪರ ಕೃಷಿಕ ಜೂಲಿಯನ್ ದಾಂತಿ (ಭತ್ತದ ಕೃಷಿ), ಸಮಾಜ ಸೇವಕ ರೋಶನ್ ಡಿಸೋಜಾ ಬೆಳ್ಮಣ್ (ಸಮಾಜಸೇವೆ), ನಾಟಿ ವೈದ್ಯ ಜೆರೋಮ್ ಫ್ರಾನ್ಸಿಸ್ ಅಂದ್ರಾದೆ ಕಲ್ಮಾಡಿ (ಮನೆ ಮದ್ದು) ವಿಭಾಗಗಳಲ್ಲಿ ಆಯ್ಕೆ ಮಾಡಲಾಗಿದೆ. ಸಹಕಾರಿ ಧುರೀಣ ಜಾನ್ ಡಿಸಿಲ್ವಾ ಇವರಿಗೆ ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಪ್ರಶಸ್ತಿಗಳ ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿ ನಡೆದಿದ್ದು ಕೆಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ನಿಕಟಪೂರ್ವ ಅಧ್ಯಕ್ಷ ವಲೇರಿಯನ್ ಫೆರ್ನಾಂಡಿಸ್ ಇವರ ಸಂಚಾಲಕತ್ವದಲ್ಲಿ 6 ಮಂದಿ ಸದಸ್ಯರ ಆಯ್ಕೆ ಸಮಿತಿಯ ಮೂಲಕ ಆಯ್ಕೆ ನಡೆದಿದ್ದು ಧರ್ಮಪ್ರಾಂತ್ಯದ ಎಲ್ಲಾ 52 ಚರ್ಚುಗಳಿಂದ ಬಂದ ಅರ್ಜಿಗಳನ್ನು ಪರಿಶೀಲಿಸಿ ಪ್ರಶಸ್ತಿಗಳ ಆಯ್ಕೆ ಪ್ರಕ್ರಿಯೆ ನಡೆದಿರುತ್ತದೆ. ಪ್ರಶಸ್ತಿ ವಿಜೇತರಿಗೆ ಜನವರಿ 19ರಂದು ಮಧ್ಯಾಹ್ನ 2.30 ಗಂಟೆಗೆ ನಡೆಯುವ ಸಮುದಾಯೋತ್ಸವ-2020 ಇದರ ಸಮಾರೋಪ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು.

ಇದೇ ಸಂದರ್ಭದಲ್ಲಿ ಉಡುಪಿ ಮೂಲದವರಾಗಿದ್ದು, ಕಳೆದ 2 ವರ್ಷಗಳಿಂದ ಹೊರ ದೇಶ, ರಾಜ್ಯಗಳಲ್ಲಿ ಸಾಧನೆ ಮಾಡಿದವರಿಗೆ, ಸಹಕಾರಿ ಸಂಘ ಹಾಗೂ ಎ.ಪಿ.ಎಮ್.ಸಿ ಗಳಲ್ಲಿ ನಿರ್ದೇಶಕರಾಗಿದ್ದವರಿಗೆ, ಗಜೆಟೆಡ್ ಮತ್ತು ಅದಕ್ಕಿಂತ ಉನ್ನತ ಹಂತದ ಅಧಿಕಾರಿಗಳಿಗೆ ಹಾಗೂ ವಿವಿಧ ಸಂಘಟನೆಗಳಲ್ಲಿ ಸೇವೆ ಸಲ್ಲಿಸುವ ಕ್ರೈಸ್ತ ನಾಯಕರಿಗೆ ಸನ್ಮಾನಿಸಲಾಗುವುದು.

ಸಮಾವೇಶದ ಉದ್ಘಾಟನೆ ಬೆಳಿಗ್ಗೆ 9.30 ಕ್ಕೆ ಜರುಗಲಿದ್ದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಉತ್ತರಾಖಂಡ್ ಮಾಜಿ ರಾಜ್ಯಪಾಲೆ ಮಾರ್ಗರೆಟ್ ಆಳ್ವಾ ಭಾಗವಹಿಸಲಿದ್ದು, ಕ್ರೈಸ್ತ ಸಮುದಾಯದ ಪ್ರಸ್ತುತ ಪರಿಸ್ಥಿತಿ ಮತ್ತು ಭವಿಷ್ಯದ ದೃಷ್ಟಿಕೋನ ವಿಚಾರದಲ್ಲಿ ಮಾಜಿ ಶಾಸಕ ಹಾಗೂ ನಿವೃತ್ತ ಕೆ ಎಸ್ ಅಧಿಕಾರಿ ಜೆ ಆರ್ ಲೋಬೊ ಪ್ರಧಾನ ಭಾಷಣ ಮಾಡಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಉತ್ತರಾಖಂಡದ ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವ, ಉಡುಪಿ ಧರ್ಮಾಧ್ಯಕ್ಷ ರೆ|ಡಾ|ಜೆರಾಲ್ಡ್ ಐಸಾಕ್ ಲೋಬೊ, ಬೆಂಗಳೂರು ಮಹಾ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಅ|ವಂ|ಡಾ|ಪೀಟರ್ ಮಚಾದೊ, ಮಂಗಳೂರಿನ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಪೀಟರ್ ಪಾವ್ಲ್ ಸಲ್ಡಾನಾ, ನಿವೃತ ಕೆ ಎ ಎಸ್ ಅಧಿಕಾರಿ ಅ್ಯಂಟನಿ ಮೆಂಡೊನ್ಸಾ, ಹಿರಿಯ ಪತ್ರಕರ್ತ ಗೇಬ್ರಿಯಲ್ ವಾಜ್, ಮಹಾರಾಷ್ಟ್ರದ ಹಿರಿಯ ರಾಜಕೀಯ ನಾಯಕಿ ಜಾನೆಟ್ ಡಿಸೋಜ, ವಿಧಾನಪರಿಷತ್ ಸದಸ್ಯ ಐವಾನ್ ಡಿಸೋಜಾ, ಕ್ರೈಸ್ತ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಜೊಯ್ಲಸ್ ಡಿಸೋಜಾ, ಮುಂಬೈ ಮಾಡೆಲ್ ಕೋ-ಅಪರೇಟಿವ್ ಅಧ್ಯಕ್ಷ ಅಲ್ಬರ್ಟ್ ಡಿಸೋಜಾ, ಎಮ್ ಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ಸೇರಿದಂತೆ ಹಲವಾರು ಧಾರ್ಮಿಕ, ಸಾಮಾಜಿಕ, ರಾಜಕೀಯ ನಾಯಕರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ .

ಪ್ರಶಸ್ತಿ ಪುರಸ್ಕೃತರ ಪರಿಚಯ
ಜಾನ್ ಡಿಸೋಜಾ ಕುಂದಾಪುರ (ಸಮೂಹ ಮಾಧ್ಯಮ): ಉಡುಪಿ ಜಿಲ್ಲೆಯ ಕುಂದಾಪುರ ಕೋಣಿಯ ನಿವಾಸಿ ಜಾನ್ ಡಿಸೋಜಾ, ವಿಜಯ ಕರ್ನಾಟಕ ದಿನಪತ್ರಿಕೆಯ ಕುಂದಾಪುರ ತಾಲೂಕು ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದು, ಕಳೆದ 19 ವರ್ಷಗಳಲ್ಲಿ ವಿಜಯಕರ್ನಾಟಕ, ಜೈ ಕೊಂಕಣಿ ಮತ್ತು ಕುಂದಪ್ರಭ ಪತ್ರಿಕೆಗಳಲ್ಲಿ ವರದಿ ಲೇಖನಗಳನ್ನು ಬರೆಯುವುದರ ಮೂಲಕ ಸಾಮಾಜಿಕ ಜಾಗೃತಿಗೆ ಕಾರಣರಾಗಿದ್ದಾರೆ. ಇವರ ಸೇವೆಗೆ 2011 ರಲ್ಲಿ ಕರ್ನಾಟಕ ಪತ್ರಕರ್ತರ ಸಂಘದಿಂದ ರಾಜೇಶ್ ಶಿಬಾಜೆ ಪ್ರಶಸ್ತಿ, 2016ರಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಮತ್ತು 2017ರಲ್ಲಿ ರಾಜ್ಯ ಪತ್ರಕರ್ತರ ಸಂಘದ ಸಾಂಘಿಕ ಪುರಸ್ಕಾರ ಲಭಿಸಿದೆ.

ಜೂಲಿಯನ್ ದಾಂತಿ ಉದ್ಯಾವರ (ಭತ್ತ ಕೃಷಿ): ಸುಮಾರು 100 ವರ್ಷಗಳ ಇತಿಹಾಸ ಹೊಂದಿರುವ ಕೃಷಿಕ ಕುಟುಂಬದಲ್ಲಿ ಜನಿಸಿದ ಜೂಲಿಯನ್ ದಾಂತಿ ಅವರು ಕಳೆದ 40 ವರ್ಷಗಳಿಂದ ತನ್ನ 3 ಎಕ್ರೆ ಜಾಗದಲ್ಲಿ ತೆಂಗು, ಅಡಿಕೆ, ಕಾಳು ಮೆಣಸು ಕೃಷಿ ಮಾಡುವುದರೊಂದಿಗೆ 4 ಎಕ್ರೆ ಜಾಗದಲ್ಲಿ ಭತ್ತ ಕೃಷಿಯನ್ನು ಮಾಡಿಕೊಂಡು ಬರುತ್ತಿದ್ದಾರೆ. ಗದ್ದೆಯನ್ನು ಊಳಲು ಇಂದಿಗೂ ಕೋಣಗಳನ್ನು ಉಪಯೋಗಿಸುತ್ತಿದ್ದು, ಕೇವಲ ಸಾವಯವ ಗೊಬ್ಬರವನ್ನು ಮಾತ್ರ ಕೃಷಿಗೆ ಉಪಯೋಗಿಸುತ್ತಿದ್ದಾರೆ. ಇವರ ಕೃಷಿ ಸಾಧನೆಗೆ ಉಡುಪಿ ತಾಲೂಕು ಮಟ್ಟದ ರೈತ ಸಾಧಕ ಪುರಸ್ಕಾರ ಲಭಿಸಿದೆ.

ರೋಶನ್ ಡಿಸೋಜಾ ಬೆಳ್ಮಣ್ (ಸಮಾಜ ಸೇವೆ): ಸಂಗೀತ, ಗಾಯನ, ನಟನೆ, ಕಾರ್ಯನಿರೂಪಣೆ ಮತ್ತು ಸಮಾಜ ಸೇವೆ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲಿ ಸಾಧನೆ ತೋರುತ್ತಿರುವ ರೋಶನ್ ಡಿಸೋಜಾ ಬೆಳ್ಮಣ್ ಇವರು 2017ರಲ್ಲಿ ಹ್ಯೂಮೆನಿಟಿ ಎಂಬ ಟ್ರಸ್ಟ್ ಆರಂಭಿಸಿ ಕೇಲವೇ ಸಮಯದಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳ ಸುಮಾರು 400 ಕ್ಕಿಂತಲೂ ಅಧಿಕ ಅಶಕ್ತ ಕುಟುಂಬಗಳಿಗೆ 3 ಕೋಟಿಗೂ ಅಧಿಕ ಮೊತ್ತದ ಆರ್ಥಿಕ ಸಹಾಯವನ್ನು ನೀಡಿರುತ್ತಾರೆ. ತನ್ನ ಹ್ಯೂಮೆನಿಟಿ ಟ್ರಸ್ಟಿನ ಮೂಲಕ ಜಾತಿ ಮತ ಭೇದ ಲೆಕ್ಕಿಸದೆ ಮನೆ ಇಲ್ಲದವರಿಗೆ ಮನೆ, ಬಡ ರೋಗಿಗಳಿಗೆ ಚಿಕಿತ್ಸೆಗೆ ನೆರವು, ಬಡ ಮಕ್ಕಳಿಗೆ ಶೈಕ್ಷಣಿಕ ನೆರವು, ಪರಿಸರ ರಕ್ಷಣೆ, ಏಡ್ಸ್ ರೋಗಿಗಳಿಗೆ ನೆರವು ಮತ್ತು ಮಂಗಳಮುಖಿಯರಿಗೆ ನೆರವನ್ನು ನೀಡುತ್ತಿದ್ದಾರೆ.

ಜೆರೊಮ್ ಫ್ರಾನ್ಸಿಸ್ ಅಂದ್ರಾದೆ ಕಲ್ಮಾಡಿ (ಮನೆ ಮದ್ದು): ಕಲ್ಮಾಡಿಯ ಜೆರೋಮ್ ಫ್ರಾನ್ಸಿಸ್ ಅಂದ್ರಾಎ ಪ್ರಗತಿ ಪರ ಕೃಷಿಕ ಹಾಗೂ ಹಳದಿ ಕಾಮಾಲೆ ರೋಗಕ್ಕೆ ಮದ್ದು ನೀಡುವ ಕಾಯಕವನ್ನು ಮಾಡುತ್ತಿದ್ದಾರೆ. ತನ್ನ 25 ನೇ ವರ್ಷದಿಂದ ಈ ವೃತ್ತಿಯನ್ನು ಮಾಡಿಕೊಂಡು ಬಂದಿದ್ದು ಈ ವರೆಗೆ ಹಲವಾರು ಮಂದಿ ಇವರಿಂದ ಸಹಾಯ ಪಡೆದಿರುತ್ತಾರೆ.

ಜಾನ್ ಡಿಸಿಲ್ವಾ (ಜೀವಮಾನ ಸಾಧನೆ ಪ್ರಶಸ್ತಿ): ಕಾರ್ಕಳ ತಾಲೂಶಕಿನ ಸಾಣೂರು ನಿವಾಸಿಯಾಗಿರುವ ಜೋನ್ ಡಿಸಿಲ್ವಾ ತಮ್ಮ ಶಿಕ್ಷಣದ ಬಳಿಕ ಮುಂಬೈ ನಗರವನ್ನು ತನ್ನ ಕಾರ್ಯಕ್ಷೇತ್ರವನ್ನಾಗಿಸಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಿಶೇಷ ಸೇವೆಯನ್ನು ನೀಡಿದ್ದಾರೆ. ಇವರ ನೇತೃತ್ವದಲ್ಲಿ ಹಲವಾರು ಬ್ಯಾಂಕಿಂಗ್ ಸಂಸ್ಥೆಗಳ ಉಗಮಕ್ಕೆ ಕಾರಣವಾಗಿದ್ದು ಕ್ರಿಶ್ಚಿಯನ್ ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀ ಇದರ ಸಹಸ್ಥಾಪಕ ಮತ್ತು ಸಹ ಸಂಚಾಲಕರೂ ಕೂಡ ಆಗಿ ಸೇವೆ ನೀಡಿರುತ್ತಾರೆ. ಈಗಾಗಲೇ ಅವರ ಸೇವೆಗೆ ಹಲವಾರು ಪ್ರಶಸ್ತಿಗಳು ಬಂದಿದ್ದು ಉಡುಪಿ ಧರ್ಮಪ್ರಾಂತ್ಯದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ನಿಟ್ಟಿನಲ್ಲಿ ಪ್ರತಿವರ್ಷ ತಮ್ಮ ಜಾನ್ ಡಿಸಿಲ್ವಾ ಫೌಂಡೇಶನ್ ಮೂಲಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಕೆಥೊಲಿಕ್ ಸಭಾದ ನೇತೃತ್ವದಲ್ಲಿ ನಡೆಸಿಕೊಂಡು ಬಂದಿರುತ್ತಾರೆ.


Spread the love