ಕಾಪು : ಶಂಕರಪುರ ಮೂಡಬೆಟ್ಟು ಮನೆಗಳ್ಳತನದ ಆರೋಪಿಯ ಬಂಧನ

Spread the love

ಕಾಪು : ಶಂಕರಪುರ ಮೂಡಬೆಟ್ಟು ಮನೆಗಳ್ಳತನದ ಆರೋಪಿಯ ಬಂಧನ

ಉಡುಪಿ : ಶಂಕರಪುರ ಮೂಡಬೆಟ್ಟು ಗ್ರಾಮ ವ್ಯಾಪ್ತಿಯಲ್ಲಿ ಮನೆಯೊಂದರ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಕಾಪು ಪೊಲೀಸರು ಆರೋಪಿಯನ್ನು ಬಂಧಿಸಿ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ವ್ಯಕ್ತಿಯನ್ನು ಕಾಪು ಪೊಲಿಪು ನಿವಾಸಿ ನಿಶಾಂತ್ ಎಸ್.ಕುಮಾರ್ 19  ಎಂದು ಗುರುತಿಸಲಾಗಿದೆ.

ಸಪ್ಟೆಂಬರ್ 11 ರಂದು ಸಂಜೆ 07:30 ಗಂಟೆಗೆ ಶಂಕರಪುರ ಮೂಡಬೆಟ್ಟು ನಿವಾಸಿ ಶಂಕರ ಎಂಬವರು ಮನೆಯ ಕಪಾಟನ್ನು ತೆರೆದು ನೋಡಿದಾಗ ಒಳಗಡೆ ಇಟ್ಟಿದ್ದ ಸುಮಾರು 145.575 ಗ್ರಾಂ ತೂಕದ ಚಿನ್ನಾಭರಣಗಳು ಕಾಣೆಯಾಗಿದ್ದು, ಸುಮಾರು 2 ತಿಂಗಳಿನಿಂದ ಮನೆಯಲ್ಲಿ ತಾಯಿಯನ್ನು ಬಿಟ್ಟು ಉಳಿದ ಎಲ್ಲರೂ ಕೆಲಸಕ್ಕೆ ಹೋದ ಸಮಯದಲ್ಲಿ ಯಾರೋ ಕಳ್ಳರು ಚಿನ್ನಾಭರಣವನ್ನು ಕಪಾಟಿನಿಂದ ಕೀ ಉಪಯೋಗಿಸಿ ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಚಿನ್ನಾಭರಣದ ಅಂದಾಜು ಮೌಲ್ಯ 4,80,000/- ರೂಪಾಯಿ ಆಗಬಹುದು ಎಂಬಿತ್ಯಾದಿ ನೀಡಿದ ದೂರಿನಂತೆ ಕಾಪು ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿ ತನಿಖೆಯಲ್ಲಿತ್ತು.

ಪ್ರಕರಣದ ತನಿಖೆಯನ್ನು ಪ್ರಾರಂಭಿಸಿದ ಕಾಪು ಪೊಲೀಸರು ಸಪ್ಟೆಂಬರ್ 18ರಂದು ಬೆಳಗ್ಗೆ 08:00 ಗಂಟೆಗೆ ಕಾಪು ಬಸ್‌ನಿಲ್ದಾಣದ ಬಳಿ ಸಂಶಯಾಸ್ಪದ ವ್ಯಕ್ತಿಯು ಇದ್ದ ಬಗ್ಗೆ ಮಾಹಿತಿ ದೊರೆತಂತೆ ಆತನನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಲಾಗಿ ಆತನು ತನ್ನ ಹೆಸರು ನಿಶಾಂತ್ ಎಸ್.ಕುಮಾರ್  ಪೊಲಿಪು, ಕಾಪು ಎಂಬುದಾಗಿ ತಿಳಿಸಿದ್ದು, ಆತನನ್ನು ಪ್ರಕರಣಕ್ಕೆ ಸಂಬಂಧಿಸಿ ಕೂಲಂಕುಷವಾಗಿ ವಿಚಾರಿಸಲಾಗಿ ಆತನು ಕಳವು ಮಾಡಿದ ಚಿನ್ನಾಭರಣಗಳಲ್ಲಿ ಕೆಲವು ಚಿನ್ನಾಭರಣಗಳನ್ನು ಬಂಗಾರದ ಮಳಿಗೆಗಳಲ್ಲಿ ಬದಲಿಸಿ ಬೇರೆ ಆಭರಣಗಳನ್ನು ಪಡೆದಿದ್ದು, ಅವುಗಳನ್ನು ಸಹಕಾರಿ ಬ್ಯಾಂಕ್‌ನಲ್ಲಿ ಅಡವು ಇಟ್ಟಿರುವುದಾಗಿ ಹಾಗೂ ಉಳಿದ ಚಿನ್ನಾಭರಣಗಳು ತನ್ನಲ್ಲಿಯೇ ಇದ್ದು, ಈ ದಿನ ಅವುಗಳನ್ನು ಉಡುಪಿ ಕಡೆ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿರುತ್ತಾನೆ.

ಆತನ ವಶದಲ್ಲಿದ್ದ ಹಾಗೂ ಸಹಕಾರಿ ಬ್ಯಾಂಕ್‌ನಲ್ಲಿ ಅಡವು ಇರಿಸಿದ್ದ 1) ಚಿನ್ನದ ಗಜಲಕ್ಷ್ಮಿಯ ಚಿತ್ರದ ಪೆಂಡೆಂಟ್ ಇರುವ ನೆಕ್ಲೇಸ್ ಸರ -1, ಅಂದಾಜು ಮೌಲ್ಯ ರೂ. 52,300, 2) ಚಿನ್ನದ ರಾಣಿ ಎಲಿಜಬೆತ್‌ನ ಪೆಂಡೆಂಟ್ ಇರುವ ರೋಪ್‌ಚೈನ್-1 ಅಂದಾಜು ಮೌಲ್ಯ ರೂ. 38,000/-, 3) ಚಿನ್ನದ ಹವಳ ಕೂರಿಸಿದ ಅಗಲದ ಬಳೆ -1 ಅಂದಾಜು ಮೌಲ್ಯ ರೂಪಾಯಿ 29,700/-, 4) ಚಿನ್ನದ ನವರತ್ನ ಉಂಗುರ -1 ಅಂದಾಜು ಮೌಲ್ಯ ರೂಪಾಯಿ 19,000/-, 5) ಚಿನ್ನದ ಕೆಂಪು ಕಲ್ಲು ಇರುವ ಬೆಂಡೋಲೆ -1 ಜೊತೆ ಅಂದಾಜು ಮೌಲ್ಯ ರೂಪಾಯಿ 8,200/-, 6) ಚಿನ್ನದ ಅಮೇರಿಕನ್ ಡೈಮಂಡ್‌ನ ಬೆಂಡೋಲೆ -1 ಜೊತೆ ಅಂದಾಜು ಮೌಲ್ಯ ರೂಪಾಯಿ 7,000/-, 7) ಪದಕ ಇರುವ ಮುತ್ತಿನ ಸರ – 1 ಅಂದಾಜು ಮೌಲ್ಯ ರೂಪಾಯಿ 25,000/-, 8) ಚಿನ್ನದ ಸಿಂಗಲ್ ಬೆಂಡೋಲೆ -1 ಅಂದಾಜು ಮೌಲ್ಯ ರೂಪಾಯಿ 6,200/-, 9) ಚಿನ್ನದ ಪೆಂಡೆಂಟ್ ಇರುವ ಚೈನ್ ಅಂದಾಜು ಮೌಲ್ಯ ರೂಪಾಯಿ 24,970/-, 10) ಚಿನ್ನದ ಪವಿತ್ರ ಉಂಗುರ -1 ಅಂದಾಜು ಮೌಲ್ಯ ರೂಪಾಯಿ 8,398/-, 11) ಚಿನ್ನದ ಉಂಗುರ -1 ಅಂದಾಜು ಮೌಲ್ಯ ರೂಪಾಯಿ 3,822/-ನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿತನಿಂದ ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ಸುಮಾರು 2,50,000/- ಆಗಿರುತ್ತದೆ.

ಆರೋಪಿತನು ಪಿರ್ಯಾದಿದಾರರಿಗೆ ದೂರದ ಸಂಬಂಧಿಕನಾಗಿದ್ದು, ಆಗಾಗ ಸಂಬಂಧ ನೆಪದಲ್ಲಿ ಪಿರ್ಯಾದುದಾರರ ಮನೆಗೆ ಬಂದು ಹೋಗಿ ಮನೆಯವರೆಲ್ಲರ ಸಲುಗೆ ಬೆಳೆಸಿಕೊಂಡು ಅದನ್ನೇ ಅವಕಾಶ ಮಾಡಿಕೊಂಡು ಕೃತ್ಯವೆಸಗಿರುವುದಾಗಿ ತನಿಖೆಯಿಂದ ತಿಳಿದುಬಂದಿರುತ್ತದೆ. ಆರೋಪಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಅಕ್ಟೋಬರ್ 3 ರವರೆಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿರುತ್ತದೆ.

ಈ ಕಾರ್ಯಾಚರಣೆಯನ್ನು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ನಿಶಾ ಜೇಮ್ಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರಚಂದ್ರ, ಕೆ. ಕೃಷ್ಣಕಾಂತ್, ಸಹಾಯಕ ಪೊಲೀಸ್ ಅಧೀಕ್ಷಕರು ಕಾರ್ಕಳ ಉಪವಿಭಾಗರವರ ಮಾರ್ಗದರ್ಶನದಂತೆ ನಡೆಸಿದ್ದು, ಮಹೇಶ್ ಪ್ರಸಾದ್, ಸಿಪಿಐ ಕಾಪು ಇವರ ನೇತೃತ್ವದ ತಂಡದಲ್ಲಿ ಜಯ ಕೆ., ಪಿ.ಎಸ್.ಐ. (ಅಪರಾಧ), ಶ್ರೀ ರಾಜಶೇಖರ ಪಿ.ಎಸ್.ಐ. (ಕಾನೂನು ಮತ್ತು ಸುವ್ಯವಸ್ಥೆ), ಪ್ರೊಬೇಷನರಿ ಪಿ.ಸ್.ಐ.ರವರಾದ ಉದಯರವಿ, ಎ.ಎಸ್.ಐ. ಪ್ರದೀಪ್, ರಾಜೇಂದ್ರ ಮಣಿಯಾಣಿ ಹಾಗೂ ಸಿಬ್ಬಂದಿಯವರಾದ ಅಮೃತೇಶ್, ಮಹಾಬಲ, ರವಿಕುಮಾರ್, ಆನಂದ, ಸಂದೇಶ್ ಹಾಗೂ ನಾಗೇಶ್ ಭಾಗವಹಿಸಿರುತ್ತಾರೆ.


Spread the love