ಕಾಸರಗೋಡು ಚಿನ್ನಾ ಅರುವತ್ತರ ತಾರಾಲೋಕ ಚಲನಚಿತ್ರೋತ್ಸವಕ್ಕೆ ಚಾಲನೆ

Spread the love

ಕಾಸರಗೋಡು ಚಿನ್ನಾ ಅರುವತ್ತರ ತಾರಾಲೋಕ ಚಲನಚಿತ್ರೋತ್ಸವಕ್ಕೆ ಚಾಲನೆ

ಮಂಗಳೂರು: ಪ್ರಸಿದ್ಧ ರಂಗಕರ್ಮಿ, ನಿರ್ದೇಶಕ, ಗಡಿನಾಡ ಪ್ರತಿಭೆ ಕಾಸರಗೋಡು ಚಿನ್ನಾರವರ ಅರುವತ್ತರ ಸಂಭ್ರಮದ ತಾರಾಲೋಕ ಕಾರ್ಯಕ್ರಮದ ಪ್ರಯುಕ್ತ ಆಯೋಜಿಸಲಾದ ಮೂರು ದಿನಗಳ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಲಾಯಿತು. ಖ್ಯಾತ ಚಿತ್ರನಟ ಸುಂದರ್‍ರಾಜ್‍ರವರು ದೀಪ ಬೆಳಗಿಸಿ ಚಲನಚಿತ್ರೋತ್ಸವವನ್ನು ವಿದ್ಯುಕ್ತವಾಗಿ ಉದ್ಘಾಟಿಸಿದರು.

ಕಾಸರಗೋಡು ಚಿನ್ನಾ ಅಪರಂಜಿ ಚಿನ್ನ. ಚಿನ್ನಾರವರಲ್ಲಿ ಬಹುಗುಣಗಳು ಮೇಳೈಸಿದೆ. ತಾನೊಬ್ಬ ಬೆಳೆಯುವುದು ಮಾತ್ರವಲ್ಲದೇ ಮತ್ತೊಬ್ಬರನ್ನು ಬೆಳೆಸುವ ಗುಣವೂ ಅವರಲ್ಲಿದೆ. ಹಾಸ್ಯ ಪವೃತ್ತಿ, ದೈವ ಭಕ್ತಿ, ಸಾಹಿತ್ಯ, ರಂಗಭೂಮಿ, ಸಂಘಟನಾ ಚಾತುರ್ಯ, ಹೀಗೇ ಚಿನ್ನಾರವರಲ್ಲಿ ಕಲಿಯುವುದು ಬಹಳಷ್ಟಿದೆ. ಸರಳ ರೀತಿಯಲ್ಲಿ ಅರುವತ್ತರ ಸಂಭ್ರಮವನ್ನು ಆಚರಿಸುವ ಏಕೈಕ ವ್ಯಕ್ತಿ ಎಂದು ಸುಂದರ್ ರಾಜ್ ಕಾರ್ಯಕ್ರಮವನ್ನು ಉದ್ಘಾಟಿಸುತ್ತಾ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಲಕುಮಿ ತಂಡದ ಕಿಶೋರ್ ಡಿ ಶೆಟ್ಟಿಯವರು ಕಾಸರಗೋಡು ಚಿನ್ನಾರವರು ಕನ್ನಡ ಮತ್ತು ತುಳು ಚಿತ್ರರಂಗದಲ್ಲಿ ಅಪೂರ್ವ ಸಾಧನೆ ಮಾಡಿದವರು. ಅಂತಹವರೊಂದಿಗೆ ಕೆಲಸ ಮಾಡುವುದೆಂದರೆ ಡಿಗ್ರಿ ಪಡೆದಂತೆ ಎಂದು ಚಿನ್ನಾರವರನ್ನು ಶ್ಲಾಘಿಸಿದರು.

ಸಂಗೀತ ನಿರ್ದೇಶಕ ವಿ. ಮನೋಹರ್, ಚಿತ್ರ ನಿರ್ಮಾಪಕ , ಪ್ರಕಾಶ್ ಪಾಂಡೇಶ್ವರ್, ಶ್ರೀಧರ್, ರಿಚಾರ್ಡ್ ಕ್ಯಾಸ್ಟಲಿನೊ, ಡಾ. ನಾ. ದಾಮೋದರ ಶೆಟ್ಟಿ, ರಾಜೇಶ್ ಬ್ರಹ್ಮಾವರ, ಜಗನ್ನಾಥ ಶೆಟ್ಟಿ ಬಾಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಚಿನ್ನಾಭಿನಂದನ ಸಮಿತಿಯ ಯತೀಶ್ ಬೈಕಂಪಾಡಿ ಸ್ವಾಗತಿಸಿ, ವಿಜಯಲಕ್ಷ್ಮೀ ನಾಯಕ್ ನಿರ್ವಹಿಸಿದರು.


Spread the love