ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆಯ ಸುವರ್ಣ ಮಹೋತ್ಸವ ವರ್ಷಾಚರಣೆ ಉದ್ಘಾಟನೆ

Spread the love

ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆಯ ಸುವರ್ಣ ಮಹೋತ್ಸವ ವರ್ಷಾಚರಣೆ ಉದ್ಘಾಟನೆ
ಕುಂದಾಪುರ:ಕ್ರೈಸ್ತ ಶಿಕ್ಷಣ ಸಂಸ್ಥೆಗಳು ಶಿಸ್ತುಬದ್ದ ಶಿಕ್ಷಣವನ್ನು ನೀಡುವುದರ ಜತೆಗೆ ಶಿಕ್ಷಕರು ಸೇವಾ ಮನೋಭಾವದಿಂದ ಕರ್ತವ್ಯ ನಿರ್ವಹಿಸುತ್ತಾರೆ. ಇದರಿಂದಾಗಿ ಸಂಸ್ಥೆಯಲ್ಲಿ ವಿದ್ಯಾರ್ಜನೆ ಮಾಡಿದ ಸಾವಿರಾರು ಮಂದಿ ಬದುಕಿನಲ್ಲಿ ಸಾಧನೆ ಮಾಡಿದ್ದಾರೆ. ಇದು ಸೈಂಟ್ ಮೇರಿಸ್ ಪ್ರೌಢಶಾಲೆ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವುದರಿಂದ ಈ ಸಂಸ್ಥೆಯ ಮೇಲಿನ ಗೌರವ ವಿಶ್ವಾಸ ಇನಷ್ಟು ಹೆಚ್ಚಿದೆ ಎಂದು ಉಡುಪಿ ಕೆಥೋಲಿಕ್ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ಅ.ವಂ.ಫಾ.ಲೋರೆನ್ಸ್ ಡಿ ಸೋಜಾ ಹೇಳಿದರು.

ಅವರು ಶುಕ್ರವಾರ ಕುಂದಾಪುರದ ಪ್ರತಿಷ್ಠಿತ ವಿದ್ಯಾಸಂಸ್ಥೆ ಸೈಂಟ್ ಮೇರಿಸ್ ಪ್ರೌಢಶಾಲೆಯ ಸುವರ್ಣ ಮಹೋತ್ಸವವನ್ನು ಉದ್ಘಾಟಿಸಿ, ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮಕ್ಕೆ ಶುಭಶಂಸನೆಗೈದ ಕುಂದಾಪುರ ಸೈಂಟ್ ಮೇರಿಸ್ ವಿದ್ಯಾಸಂಸ್ಥೆಯ ಸಂಚಾಲಕ ಅತೀ.ವಂ.ಫಾ.ಅನಿಲ್ ಡಿ ಸೋಜಾ ಮಾತನಾಡಿ, ವಿದ್ಯಾರ್ಥಿ ಪೋಷಕರು, ವಿದ್ಯಾಭಿಮಾನಿಗಳ ಸಹಕಾರದಿಂದ ವಿದ್ಯಾಸಂಸ್ಥೆ 50 ವರ್ಷಗಳನ್ನು ಪೊರೈಸಿ ಮುನ್ನಡೆಯುತ್ತಿದೆ. 50ರ ಸಂಭ್ರಮ ಇಡೀ ವರ್ಷ ನಡೆಯಲಿದೆ. ಎಲ್ಲರೂ ಸಹಕರಿಸಬೇಕು ಎಂದರು.

ಕುಂದಾಪುರ ಪುರಸಭೆಯ ಅಧ್ಯಕ್ಷೆ ವಸಂತಿ ಸಾರಂಗ ಸುವರ್ಣ ಮಹೋತ್ಸವದ ವರ್ಷಾಚರಣೆಯ ಫಲಕವನ್ನು ಅನಾವರಣಗೊಳಿಸಿದರು. ಉಪಾಧ್ಯಕ್ಷ ರಾಜೇಶ್ ಕಾವೇರಿ,ಕುಂದಾಪುರದ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಸೀತಾರಾಮಶೆಟ್ಟಿ, ಜೆಸಿಐ ಕುಂದಾಪುರ ಘಟಕಾಧ್ಯಕ್ಷೆ ಗೀತಾಂಜಲಿ ಆರ್.ನಾಯಕ್, ಉಡುಪಿ ಜಿಲ್ಲಾ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಸಂಘದ ಅಧ್ಯಕ್ಷ ದಿನಕರ್ ಆರ್.ಶೆಟ್ಟಿ ಶುಭ ಹಾರೈಸಿದರು. ಕುಂದಾಪುರ ಸೈಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಡೋರತಿ ಸುವಾರಿಸ್, ಕುಂದಾಪುರ ಸೈಂಟ್ ಮೇರಿಸ್ ಪದವಿ ಪೂರ್ವ ಕಾಲೇಜಿನ ವೈಸ್ ಪ್ರಿನ್ಸಿಪಾಲ್ ಮಂಜುಳಾ ನಾಯಕ್, ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿಯಿನಿ ಜೋಯ್ಸ್‍ಲಿನ್, ಹೋಲಿ ರೋಜರಿ ಕಿಂಡರ್ ಗಾರ್ಟಿನ್‍ನ ಮುಖ್ಯ ಶಿಕ್ಷಕಿ ಶೈಲಾ ಡಿ ಅಲ್ಮೇಡಾ, ಹೋಲಿರೋಜರಿ ಚರ್ಚ್‍ನ ಸಹಾಯಕ ಧರ್ಮಗುರು ಫಾ.ಜೆರಾಲ್ಡ್ ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಕೋಟ ಗೀತಾನಂದ ಫೌಂಡೇಶ್ ಕೊಡಮಾಡಿದ ಉಚಿತ ನೋಟ್ಸ್ ಪುಸ್ತಕ,ಸಸಿ ವಿತರಣೆ,ಎಸ್ ಎಸ್‍ಎಲ್‍ಸಿಲ್‍ಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ಹಸ್ತಾಂತರ ನಡೆಯಿತು.ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಲೂವಿಸ್ ಜೆ.ಫೆರ್ನಾಂಡಿಸ್ ಸ್ವಾಗತಿಸಿದರು.ಶಿಕ್ಷಕ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.ಸಿಸ್ಟರ್ ಚೇತನಾ ವಂದಿಸಿದರು.


Spread the love