ಕುಡಿಯುವ ನೀರು ಸಮಸ್ಯೆ ಎದುರಿಸಲು ತುರ್ತು ಸಭೆಗಳನ್ನು ನಡೆಸಿ – ಯು.ಟಿ.ಖಾದರ್

Spread the love

ಮಂಗಳೂರು: ಉಳ್ಳಾಲ ವಿಧಾನಸಭಾ ಕ್ಷೇತ್ರದ ಗ್ರಾಮ ಪಂಚಾತ್‍ಗಳಲ್ಲಿ  ಕುಡಿಯುವ ನೀರಿನ ಬಗ್ಗೆ ಎರಡು ದಿನದಲ್ಲಿ ಸಭೆ ನಡೆಸಿ ಸಾಧಕ ಬಾದಕಗಳ ಬಗ್ಗೆ ವರದಿಯನ್ನು ತಯಾರಿಸಿ ತಾಲ್ಲೂಕು ಪಂಚಾಯತ್ ಕಚೇರಿಗೆ ಸಲ್ಲಿಸುವಂತೆ ಉಳ್ಳಾಲ ವಿಧಾನಸಭಾ ಕ್ಷೇತ್ರದ ಶಾಸಕರು ಆರೋಗ್ಯ ಸಚಿವರು ಆದ ಯು.ಟಿ.ಖಾದರ್ ಅವರು ಕ್ಷೇತ್ರದ ಎಲ್ಲಾ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಅವರು ಇಂದು ಮಂಗಳೂರು ತಾಲ್ಲೂಕು ಪಂಚಾಯತ್ ಕಛೇರಿಯಲ್ಲಿ ನಡೆದ ಉಳ್ಳಾಲ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ನೂತನ ತಾಲೂಕು ಪಂಚಾಯತ್ ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಕ್ಷೇತ್ರದ ಗ್ರಾಮ ಪಂಚಾಯತ್‍ಗಳಲ್ಲಿ ಬೇಸಿಗೆಯಲ್ಲಿ ತಲೆದೋರಬಹುದಾದ ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ಸಭೆಯಲ್ಲಿ ಚರ್ಚಿಸಿದರು.

ಗ್ರಾಮ ಪಂಚಾಯತ್‍ಗಳಲ್ಲಿರುವ ನೀರಿನ ಮೂಲಗಳು ಅಂದರೆ ಕೊಳವೆ ಬಾವಿ, ತೆರದ ಬಾವಿ, ಇತರೆ ಜಲ ಮೂಲಗಳಲ್ಲಿ ಲಭ್ಯತೆ ಇರುವ ನೀರಿನ ಪ್ರಮಾಣ, ಹೊಸ ಕೊಳವೆ ಬಾವಿಗಳಿಗೆ ಪಂಪ್ ಅಳವಡಿಸುವುದು, ವಿದ್ಯುತ್ ಸಂಪರ್ಕ ಕಲ್ಪಿಸುವುದು ಮುಂತಾದ ವಿಷಯಗಳ ಕುರಿತು ವಾರ್ಡ ಮಟ್ಟದಲ್ಲಿ ಸಭೆಗಳನ್ನು ಇನ್ನೆರಡು ದಿನದಲ್ಲಿ ಇಂಜಿನಿಯರ್‍ಗಳೊಂದಿಗೆ ನಡೆಸಲು ಸೂಚಿಸಿದರು.

ಕುಡಿಯುವ ನೀರಿನ ಸಮಸ್ಯೆಗಳ ಪರಿಹಾರಕ್ಕೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಕುಂಟು ನೆಪಗಳನ್ನು ಹೇಳದೆ ತಮ್ಮಲ್ಲಿ ಲಭ್ಯವಿರುವ ಅನುದಾನದಲ್ಲಿ ಕ್ರಮ ಕೈಗೊಂಡು ಸಾರ್ವಜನಿಕರಿಗೆ ನಿರಂತರ ಕುಡಿಯುವ ನೀರು ಒದಗಿಸುವಂತೆ ಸಚಿವರು ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ಬೇಸಿಗೆ ತೀವ್ರತೆ ಜೊತೆಗೆ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ಬಗ್ಗೆಯೂ ಗ್ರಾಮ ಪಂಚಾಯತ್‍ಗಳು ಗಮನ ಹರಿಸಬೇಕಿದ್ದು, ಕುಡಿಯುವ ನೀರಿನ ಪೈಪ್‍ಗಳನ್ನು ದುರಸ್ಥಿಗೊಳಿಸಿ ಚರಂಡಿ ನೀರು ಕಲುಷಿತ ನೀರು ಪೈಪ್‍ಗಳ ಮೂಲಕ  ಸೇರದಂತೆ ಎಚ್ಚರವಹಿಸಬೇಕೆಂದು ಈ  ದಿಸೆಯಲ್ಲಿ ಎಲ್ಲಾ ಗ್ರಾಮ ಪಂಚಾತ್‍ಗಳು ತಮ್ಮ ವ್ಯಾಪ್ತಿಯ ವೈದ್ಯಾಧಿಕಾರಿಗಳೊಂದಿಗೆ ತುರ್ತು ಸಭೆಗಳನ್ನು ಆಯೋಜಿಸುವ ಮೂಲಕ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದ ಸಚಿವರು ಈ ಸಭೆಗಳಲ್ಲಿ ಸಂಬಂಧಿಸಿದ  ವೈದ್ಯಾದಿಕಾರಿಗಳೇ ಖುದ್ದು ಹಾಜರಿರುವಂತೆ ಸೂಚಿಸಿದ್ದು, ವೈದ್ಯಾದಿಕಾರಿಗಳ ಪರವಾಗಿ ಇತರೆ ಸಿಬ್ಬಂದಿಗಳು ಸಭೆಯಲ್ಲಿ ಭಾಗವಹಿಸಿದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ತಮ್ಮ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮತದಾರರ ಗುರ್ತಿನ ಚೀಟಿ ಗೊಂದಲ ನಿವಾರಣೆಗೆ ಮಾರ್ಚ್ 14 ರಂದು ಬೆ.10 ಕ್ಕೆ ಮಂಗಳೂರು ತಾಲ್ಲೂಕು ಪಂಚಾಯತ್ ಕಛೇರಿಯಲ್ಲಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಭೆ ನಡೆಸುವುದಾಗಿ ತಿಳಿಸಿದರು.

ಸಭೆಯಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್, ತಹಶೀಲ್ದಾರ್ ಶಿವಶಂಕರಪ್ಪ ಮುಂತಾದವರು ಭಾಗವಹಿಸಿದ್ದರು.


Spread the love