ಕೃಷಿ ವಿಜ್ಞಾನ ಕೇಂದ್ರದಲ್ಲಿ ಪೌಷ್ಠಿಕ ಕೈತೋಟ ತರಬೇತಿ ಕಾರ್ಯಕ್ರಮ 

Spread the love

ಕೃಷಿ ವಿಜ್ಞಾನ ಕೇಂದ್ರದಲ್ಲಿ ಪೌಷ್ಠಿಕ ಕೈತೋಟ ತರಬೇತಿ ಕಾರ್ಯಕ್ರಮ 

ಮಂಗಳೂರು :ಭಾರತೀಯ ಕೃಷಿ ಅನುಸಂಧಾನ ಪರಿಷತ್‍ನ ಅಂಗ ಸಂಸ್ಥೆಯಾದ ಕೃಷಿ ವಿಜ್ಞಾನ ಕೇಂದ್ರ, ದಕ್ಷಿಣ ಕನ್ನಡ. ಮಂಗಳೂರು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಮಂಗಳೂರು ಇವರ ಸಹಭಾಗಿತ್ವದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಅಂಗನವಾಡಿ ಕಾರ್ಯಕರ್ತೆಯರಿಗೆ ಪೌಷ್ಠಿಕ ಕೈತೋಟ ತರಬೇತಿ ಕಾರ್ಯಕ್ರಮವನ್ನು ಮಾರ್ಚ್ 8 ರಂದು ಹಮ್ಮಿಕೊಳ್ಳಲಾಗಿತ್ತು.

ಪ್ರಗತಿಪರ ರೈತ ಮಹಿಳೆ ಬೆಳ್ತಂಗಡಿ ಸುಕನ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಲಿಂಗ ಸಮಾನತೆ ಜಗತ್ತನ್ನು ರೂಪಿಸುವಲ್ಲಿ ಪ್ರತಿಯೊಬ್ಬರ ಪಾತ್ರವಿದೆ ಹಾಗೂ ಮಹಿಳಾ ಸಾಧಕರನ್ನು ನೆನೆದು ಸಮಾನತೆಯನ್ನು ಸಾರುವ ದಿನವಿದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಟಿ.ಜೆ.ರಮೇಶ್ ಮಾತನಾಡಿ, ಪ್ರತಿಯೊಬ್ಬರ ಬದುಕಿನಲ್ಲಿ ಮಹಿಳೆಯರ ಪಾತ್ರ ಮಹತ್ವವಾದದ್ದು ಒಬ್ಬ ಮಗಳಾಗಿ, ಮಡದಿಯಾಗಿ, ತಾಯಿಯಾಗಿ, ಹೊರಗಡೆ ದುಡಿಯುವ ಮಹಿಳೆಯಾಗಿ ಹೀಗೆ ಮಹಿಳೆ ಹತ್ತು ಹಲವು ಪಾತ್ರಗಳನ್ನು ಒಟ್ಟಿಗೆ ಮಾಡುತ್ತಾಳೆ. ಮಹಿಳೆಯರಿಗೆ ಗೌರವದ ಸ್ಥಾನಮಾನ ನೀಡಬೇಕೆಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಉತ್ತಮ ಸಮಾಜ ಕಟ್ಟಲು ಮಹಿಳೆಯರ ಪಾತ್ರ ತುಂಬಾ ಮಹತ್ವವಾದ್ದದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಮೇಲ್ವಿಚಾರಕಿ ಶಾರದಾ ಕೆ. ಅಭಿಪ್ರಾಯ ವ್ಯಕ್ತಪಡಿಸಿದರು.

ಕೈತೋಟದ ನಿರ್ಮಾಣ ಒಂದು ಕಲೆ, ಇದೊಂದು ಉತ್ತಮ ಹವ್ಯಾಸವೂ ಹೌದು ಇದನ್ನು ಅತ್ಯಂತ ಕಡಿಮೆ ವೆಚ್ಚ ಹಾಗೂ ಶ್ರಮದಿಂದ ಮಾಡಿದರೆ ಹೆಚ್ಚು ಪ್ರತಿಫಲ ಕೊಡುತ್ತದೆ. ಕೈತೋಟ ಮಾಡಲು ಉಪಯೋಗಿಸುವ ಕಾಲ ಮತ್ತು ಶ್ರಮದಾನ ನಮಗೆ ಉತ್ತಮ ಆರೋಗ್ಯ ನೀಡುವುದಲ್ಲದೆ ಅಲ್ಪ ಸ್ವಲ್ಪ ಆದಾಯವನ್ನು ನೀಡಬಲ್ಲದು. ದೈನಂದಿನ ಕಾರ್ಯ ಚಟುವಟಿಕೆಗಳನ್ನು ನಿರ್ವಹಿಸಲು ಒಬ್ಬ ಮನುಷ್ಯ ದಿನಕ್ಕೆ 300 ಗ್ರಾಂ. ತರಕಾರಿಯನ್ನು 90 ಗ್ರಾಂ. ಹಣ್ಣುಗಳನ್ನು ಸೇವಿಸಬೇಕು. ಆದರೆ ಬೆಳೆಯುತ್ತಿರುವ ಜನಸಂಖ್ಯೆಯಿಂದಾಗಿ ಇವುಗಳ ಲಭ್ಯತೆ ತೀರ ಕಡಿಮೆಯಾಗಿದೆ.

ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆ ದುಬಾರಿಯಾಗಿದ್ದು, ತಾಜಾತನದಿಂದ ಕೂಡಿರುವುದಿಲ್ಲ. ಆದುದರಿಂದ ಕಡಿಮೆ ಖರ್ಚಿನಲ್ಲಿ ಸ್ವಲ್ಪ ಸ್ಥಳಾವಕಾಶದಲ್ಲಿ ಉತ್ಕøಷ್ಠ ಮತ್ತು ಅಧಿಕ ಪೌಷ್ಠಿಕತೆಯ ತರಕಾರಿಗಳ ಉತ್ಪಾದನೆ ಬಹಳ ಮಹತ್ವವೆನಿಸಿಕೊಂಡಿದೆ. ಕೈತೋಟದಲ್ಲಿಯ ಕಾಯಕ ವಿಶ್ರಾಂತಿ ಸಮಯವನ್ನು ಸದುಪಯೋಗಿಸಿಕೊಂಡು ಸಾರ್ಥಕತೆಯ ಜೀವನ ನಡೆಸಲು ಸಹಾಯಕವಾಗಲಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಡಾ. ರಶ್ಮಿ ಆರ್. ಕೈತೋಟದ ಪ್ರಾಮುಖ್ಯತೆಯನ್ನು ಕಾರ್ಯಕರ್ತೆಯರಿಗೆ ತಿಳಿಸಿಕೊಟ್ಟರು.

ಕಾರ್ಯಕ್ರಮವನ್ನು ಕೃಷಿ ವಿಜ್ಞಾನ ಕೇಂದ್ರದ ಮೀನುಗಾರಿಕೆ ವಿಜ್ಞಾನಿ ಡಾ. ಎನ್. ಚೇತನ್‍ರವರು ಸ್ವಾಗತಿಸಿ, ಡಾ. ಕೇದಾರನಾಥ್ ವಂದಿಸಿದರು. ಕಾರ್ಯಕ್ರಮದಲ್ಲಿ 42 ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಮತ್ತು ಸ್ತ್ರೀ ಸಂಘದ ಮಹಿಳೆಯರು ಕೃಷಿ ವಿಜ್ಞಾನ ಕೇಂದ್ರದ ಡಾ. ಮಲ್ಲಿಕಾರ್ಜುನ ಹಾಗೂ ಇತರೆ ಸಿಬ್ಬಂದಿಗಳು ಉಪಸ್ಥಿತರಿದ್ದರು.


Spread the love