ಕೊರೋನಾ ಕಷ್ಟದಿಂದ ವಿಜಯಿಯಾಗಲು ಈಸ್ಟರ್ ಆಚರಣೆ ಹೊಸ ಭರವಸೆಯನ್ನು ಮೂಡಿಸಲಿ – ಬಿಷಪ್ ಜೆರಾಲ್ಡ್ ಲೋಬೊ

Spread the love

ಕೊರೋನಾ ಕಷ್ಟದಿಂದ ವಿಜಯಿಯಾಗಲು ಈಸ್ಟರ್ ಆಚರಣೆ ಹೊಸ ಭರವಸೆಯನ್ನು ಮೂಡಿಸಲಿ – ಬಿಷಪ್ ಜೆರಾಲ್ಡ್ ಲೋಬೊ

ಇಡೀ ಮಾನವಕುಲ ಕೊರೋನಾ ಮಹಾಮಾರಿಯ ಸೋಂಕಿನ ಭೀತಿಯಿಂದ ನಲುಗಿರುವಾಗ ಬಂದಿರುವ ಈ ವರ್ಷದ ಈಸ್ಟರ್ ಹಬ್ಬ ಅಂಧಕಾರದ ಕಾರ್ಮೋಡಗಳ ಅಂಚಿನಲ್ಲಿ ಕಾಣಿಸುವ ಬೆಳ್ಳಿಯ ರೇಖೆಯಂತಿದೆ. ಕಷ್ಟ, ನೋವು, ರೋಗ, ಯಾತನೆಗಳು ಶಾಶ್ವತವಲ್ಲ. ಅವುಗಳಿಗೆ ಅಂತ್ಯವಿದೆ. ದೇವರು ನಮನ್ನು ಸೋಲಲು ಸೃಷ್ಟಿಸಿಲ್ಲ, ಬದಲಾಗಿ ಕಷ್ಟಗಳ ಮೇಲೆ ವಿಜಯಶಾಲಿಗಳಾಗಲು ಸೃಷ್ಟಿಸಿದ್ದಾರೆ. ಆದ್ದರಿಂದ ಈ ಕಠಿಣ ಪರಿಸ್ಥಿತಿಯಲ್ಲಿ ಸಜ್ಜನ ಯೋಬನ ಮಾತುಗಳು ನಮಗೆ ಪ್ರೇರಣೆಯಾಗಲಿ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ ಡಾ ಜೆರಾಲ್ಡ್ ಐಸಾಕ್ ಲೋಬೊ ತಮ್ಮ ಈಸ್ಟರ್ ಸಂದೇಶದಲ್ಲಿ ತಿಳಿಸಿದ್ದಾರೆ.

ಪ್ರಾರ್ಥನೆ, ಉಪವಾಸ, ದಾನಧರ್ಮಗಳನ್ನೊಳಗೊಂಡ ನಲ್ವತ್ತು ದಿನಗಳ ತಪಸ್ಸು ಕಾಲದ ವೃತವು ಕಳೆದು ಯೇಸು ಕ್ರಿಸ್ತರ ಪುನರುತ್ಥಾನದ ಈಸ್ಟರ್ ಹಬ್ಬ ಮತ್ತೊಮ್ಮೆ ಬಂದಿದೆ. ಎರಡು ಸಾವಿರ ವರ್ಷಗಳ ಹಿಂದೆ ಯೇಸುಕ್ರಿಸ್ತರು ಅನುಭವಿಸಿದ ಕಷ್ಟ, ಯಾತನೆ, ಶಿಲುಬೆಯ ಮರಣ ಹಾಗೂ ಇವೆಲ್ಲದರ ಶಿಖರವಾದ ಪುನರುತ್ಥಾನವನ್ನು ಭಕ್ತಿಯಿಂದ ಸ್ಮರಿಸಿ, ಆ ಚಾರಿತ್ರಿಕ ಘಟನೆಗಳನ್ನು ಪುನರ್ಜೀವಿಸಿ, ದೈನಂದಿನ ಜೀವನದಲ್ಲಿ ವಿಶ್ವಾಸವರ್ಧನೆಯನ್ನು ಮಾಡುವ ಸಂಭ್ರಮವಿದು.

ಈಜಿಪ್ತಿನ ದಾಸ್ಯತ್ವದಲ್ಲಿ ಬಳಲುತ್ತಿದ್ದ ತನ್ನ ಜನರನ್ನು ದೇವರು ಬಿಡಿಸಿ ಅವರನ್ನು ಹೊಸ ನಾಡಿಗೆ ಹಾಗೂ ಹೊಸ ಬದುಕಿನೆಡೆಗೆ ಕರೆದೊಯ್ದ ಚಾರಿತ್ರಿಕ ನೆನಪಿನ ಆಚರಣೆಯೂ ಈ ಹಬ್ಬದೊಂದಿಗೆ ಸೇರಿಕೊಂಡಿದೆ. ಹೀಗಾಗಿ ಈಸ್ಟರ್ ಯೇಸುಕ್ರಿಸ್ತರು ಮರಣದ ಮೇಲೆ ವಿಜಯವನ್ನು ಸಾರಿದ ಅವರ ದೈವತ್ವದ ಪ್ರತಿಪಾದನೆ ಮಾತ್ರವಲ್ಲದೆ, ಹೊಸ ಜೀವನ, ಹೊಸ ಸೃಷ್ಟಿ ಹಾಗೂ ಹೊಸ ಅನ್ವೇಷಣೆಯಿಂದ `ಮರಣವೇ ಜೀವನದ ಅಂತಿಮ ಅಲ್ಲ’ ಎಂಬುದನ್ನೂ ಸಾರುತ್ತದೆ.

ಇಡೀ ಮಾನವಕುಲ ಕೊರೋನಾ ಮಹಾಮಾರಿಯ ಸೋಂಕಿನ ಭೀತಿಯಿಂದ ನಲುಗಿರುವಾಗ ಬಂದಿರುವ ಈ ವರ್ಷದ ಈಸ್ಟರ್ ಹಬ್ಬ ಅಂಧಕಾರದ ಕಾರ್ಮೋಡಗಳ ಅಂಚಿನಲ್ಲಿ ಕಾಣಿಸುವ ಬೆಳ್ಳಿಯ ರೇಖೆಯಂತಿದೆ. ಕಷ್ಟ, ನೋವು, ರೋಗ, ಯಾತನೆಗಳು ಶಾಶ್ವತವಲ್ಲ. ಅವುಗಳಿಗೆ ಅಂತ್ಯವಿದೆ. ದೇವರು ನಮನ್ನು ಸೋಲಲು ಸೃಷ್ಟಿಸಿಲ್ಲ, ಬದಲಾಗಿ ಕಷ್ಟಗಳ ಮೇಲೆ ವಿಜಯಶಾಲಿಗಳಾಗಲು ಸೃಷ್ಟಿಸಿದ್ದಾರೆ. ಆದ್ದರಿಂದ ಈ ಕಠಿಣ ಪರಿಸ್ಥಿತಿಯಲ್ಲಿ ಸಜ್ಜನ ಯೋಬನ ಮಾತುಗಳು ನಮಗೆ ಪ್ರೇರಣೆಯಾಗಲಿ: “ದೇವರಿಂದ ನಾವು ಸುಖಪಡೆಯಬಹುದು, ದುಃಖವನ್ನು ಮಾತ್ರ ಪಡೆಯಬಾರದೋ?”

ಈ ಈಸ್ಟರ್ ಹಬ್ಬದಂದು, ಈ ಸೋಂಕಿನ ವಿರುದ್ಧ ಹೋರಾಡುತ್ತಿರುವ ಎಲ್ಲ ವಿಜ್ಞಾನಿಗಳು, ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂಧಿಗಳಿಗಾಗಿ; ಜನತೆಯ ಅಸುರಕ್ಷತೆಯನ್ನು ದೂರಗೊಳಿಸಿ ವಿಶ್ವಾಸ ತುಂಬುತ್ತಿರುವ ಎಲ್ಲಾ ಅಧಿಕಾರಿಗಳಿಗಾಗಿ; ಹಸಿದು ಕಂಗೆಟ್ಟ ನಿರಾಶ್ರಿತ ಜನತೆ ಹಾಗೂ ಅಶಕ್ತರಿಗಾಗಿ ತಮ್ಮ ಜೀವವನ್ನೇ ಪಣಕ್ಕಿಟ್ಟು ಸಹಾಯ ಮಾಡುತ್ತಿರುವ ಎಲ್ಲಾ ಸುಮನಸ್ಸಿನ ಜನರಿಗಾಗಿ ಹಾಗೂ ಇವುಗಳನ್ನೆಲ್ಲ ಸೂಕ್ತ ರೀತಿಯಲ್ಲಿ ನಿರ್ವಹಿಸುತ್ತಿರುವ ಜನ ಪ್ರತಿನಿಧಿಗಳಿಗಾಗಿ ನಮ್ಮ ವಿಶೇಷ ಪ್ರಾರ್ಥನೆಗಳು ಸಲ್ಲಲಿ. ಮರಣದ ಮೇಲೆ ಜಯಶಾಲಿಯಾದ ಪ್ರಭು ಯೇಸುಕ್ರಿಸ್ತರು ಎಲ್ಲರ ಮನೆ ಮನಗಳಲ್ಲಿ ನವಜೀವನದ ಭರವಸೆಯನ್ನು ಮೂಡಿಸಲಿ. ಸಕಲರಿಗೂ ಈಸ್ಟರ್ ಹಬ್ಬದ ಹಾರ್ದಿಕ ಶುಭಾಷಯಗಳು.


Spread the love