ಕೋಟ ಠಾಣಾಧಿಕಾರಿ ನಿತ್ಯಾನಂದ ಗೌಡರ ಕರ್ತವ್ಯಕ್ಕೆ ಅಡ್ಡಿ – ನಾಲ್ವರ ಬಂಧನ

Spread the love

ಕೋಟ ಠಾಣಾಧಿಕಾರಿ ನಿತ್ಯಾನಂದ ಗೌಡರ ಕರ್ತವ್ಯಕ್ಕೆ ಅಡ್ಡಿ – ನಾಲ್ವರ ಬಂಧನ

ಉಡುಪಿ: ರಾತ್ರಿ ರೌಂಡ್ಸ್ ಕರ್ತವ್ಯ ನಿರ್ವಹಿಸುತ್ತಿದ್ದ ಕೋಟ ಠಾಣಾಧಿಕಾರಿ ನಿತ್ಯಾನಂದ ಗೌಡ ಅವರಿಗೆ ಅಡ್ಡಿಪಡಿಸಿದ್ದಲ್ಲದೆ ಅವಾಚ್ಯವಾಗಿ ನಿಂದಿಸಿ ಹಲ್ಲೆಗೆ ಯತ್ನಿಸಿದ ಆರೋಪದ ಮೇಲೆ ನಾಲ್ವರನ್ನು ಬ್ರಹ್ಮಾವರ ಪೊಲೀಸರು ಮಂಗಳವಾರ ತಡರಾತ್ರಿ ಬಂಧಿಸಿದ್ದಾರೆ.

ಬಂಧಿತರನ್ನು ಗುರುಪ್ರಸಾದ್, ದಿಲೀಪ್, ಸುನೀಲ್, ಕಿರಣ್ ಎಂದು ಗುರುತಿಸಲಾಗಿದೆ.

ಅಕ್ಟೋಬರ್ 23 ರಂದು ತಡರಾತ್ರಿ ಇಲಾಖಾ ವಾಹನದಲ್ಲಿ ಚಾಲಕನೊಂದಿಗೆ ರೌಡ್ಸ್ ಕರ್ತವ್ಯದಲಿದ್ದ ಕೋಟ ಪಿಎಸ್ಐ ನಿತ್ಯಾನಂದ ಗೌಡ ಅವರು 1:00 ಗಂಟೆ ಸುಮಾರಿಗೆ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಶಿರೂರು ಮೂರುಕೈ ಜಂಕ್ಷನ್ ಬಳಿ ಬಂದಾಗ ಜಂಕ್ಷನಿನ ಬಲ ಭಾಗದ ಅಂಗಡಿಯ ಎದುರು ಕತ್ತಲೆಯಲ್ಲಿ ಮೂರು ಜನ ಯುವಕರು ಅನುಮಾನಸ್ಪದವಾಗಿ ನಿಂತಿದ್ದು ಹಾಗೂ ಜಂಕ್ಷನ್ನ ಎಡ ಭಾಗದಲ್ಲಿ 2 ಬೈಕ್ ಹಾಗೂ ಕಾರು ನಿಂತಿದ್ದನ್ನು ಗಮನಿಸಿ ಮೂವರ ಬಳಿ ಹೋಗಿ ವಿಚಾರಣೆ ಸಲುವಾಗಿ ಕರೆದಿದ್ದು ಅವರು ಓಡಿ ಹೋಗಲು ಪ್ರಯತ್ನಿಸಿದ್ದಾರೆ. ಆಗ ಇವರು ಹಾಗು ಜೀಪು ಚಾಲಕ ಸೇರಿಕೊಂಡು ಅಲ್ಲಿಯೇ ಅವರ ಹೆಸರು ವಿಳಾಸ ಹಾಗೂ ಯಾಕೆ ಈ ಹೊತ್ತಲ್ಲಿ ಬಂದಿರುತ್ತೀರಿ ಎಂದು ಕೇಳಿದ್ದಕ್ಕೆ ಆ ಮೂವರು ಸರಿಯಾಗಿ ಉತ್ತರಿಸದೇ ಹೆಸರುಗಳು ಸಹ ಹೇಳಿರುವುದಿಲ್ಲ. ನಂತರ ನಿತ್ಯಾನಂದ ಗೌಡ ಪಿಡಿ ರವರು ಆ ಮೂವರು ಯುವಕರ ಬಗ್ಗೆ ತಿಳಿದುಕೊಳ್ಳುವ ಉದ್ದೇಶದಿಂದ ಆ ಮೂವರನ್ನು ಒಟ್ಟಿಗೆ ನಿಲ್ಲಿಸಿ ಫೋಟೊ ತೆಗೆದುಕೊಂಡು ಅವರ ಮೂವರ ಬಳಿ ಇದ್ದ ಮೊಬೈಲನ್ನು ವಶಕ್ಕೆ ಪಡೆದು ಬೆಳಿಗ್ಗೆ ಅವರನ್ನು ಕೋಟಾ ಠಾಣೆಗೆ ವಿಚಾರಣೆಗೆ ಬರುವಂತೆ ತಿಳಿಸಿರುತ್ತಾರೆ.

ನಂತರ ಅಲ್ಲಿಯೇ ಪಕ್ಕದಲ್ಲಿದ್ದ ಶುಭಲಕ್ಷ್ಮೀ ಬಾರ್ ಅಂಡ್ ರೆಸ್ಟೋರೆಂಟ್ನ ಎದುರು ಬಾಗಿಲು ಮುಚ್ಚಿದ್ದು ಹಿಂಬದಿ ನೋಡಿದಲ್ಲಿ ಬಾರ್ನ ಒಳಗೆ ಹಿಂಬದಿಯಲ್ಲಿ 10ರಿಂದ 12 ಯುವಕರು ಮದ್ಯಪಾನ ಮಾಡುತ್ತಿದ್ದು ನಿತ್ಯಾನಂದ ಗೌಡ ಪಿಡಿ ರವರನ್ನು ನೋಡಿ ಲೈಟ್ಅನ್ನು ಆಫ್ಮಾಡಿರುತ್ತಾರೆ. ಆ ಸಮಯ ನಿತ್ಯಾನಂದ ಗೌಡ ಪಿಡಿ ರವರು ಮೂರು ಮೊಬೈಲ್ಗಳೊಂದಿಗೆ ಜೀಪಿನಲ್ಲಿ ಸದ್ರಿ ವೃತ್ತವನ್ನು ದಾಟಿ ಬರುತ್ತಿರುವ ಸಮಯ ಆರೋಪಿ ಗುರು ಏರು ದನಿಯಲ್ಲಿ ಕೆಟ್ಟ ಭಾಷೆಯಲ್ಲಿ ಬೈದಿದ್ದಲ್ಲದೆ ಬೆದರಿಕೆ ಹಾಕಿರುವುದು ಅಲ್ಲದೇ ಆತನೊಂದಿಂಗೆ ಬಂದ ಇತರ 8 ರಿಂದ 10 ಮಂದಿ ಯುವಕರು ಗುಂಪು ಕಟ್ಟಿ ಕೊಂಡು ನಿತ್ಯಾನಂದ ಗೌಡ ಪಿಡಿ ರವರು ಜೀಪಿನಲ್ಲಿ ಮುಂದೆ ಹೋಗಲು ಅಡ್ಡಗಟ್ಟಿ ಅವರುಗಳು ಸಹ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹಲ್ಲೆ ಮಾಡಲು ಪ್ರಯತ್ನಿಸಿರುವುದಾಗಿದೆ. ಅಲ್ಲದೇ ಆ ಎಲ್ಲ ಯುವಕರು ಮದ್ಯಪಾನ ಮಾಡಿ ಮದ್ಯ ರಾತ್ರಿಯಲ್ಲಿ ಕರ್ತವ್ಯಕ್ಕೆ ಅಡ್ಡ ಪಡಿಸಿದ್ದು ನಂತರ ಅಲ್ಲಿಂದ ಕೆಎ-20-ಎಮ್ಬಿ-4445 ನೇ ಕಾರಿನಲ್ಲಿ ಹಾಗೂ ಕೆಎ-20-ಇಎಸ್ನೇ ಮೋಟಾರ್ಸೈಕಲ್ಲಿನಲ್ಲಿ ಹೋಗಿರುತ್ತಾರೆ.

ಘಟನೆ ನಡೆದ ಸ್ಥಳವು ಬ್ರಹ್ಮಾವರ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಹಿನ್ನೆಲೆ ನಿತ್ಯಾನಂದ ಗೌಡ ಅವರು ಬ್ರಹ್ಮಾವರ ಪಿಎಸ್ಐ ರಾಘವೇಂದ್ರ ಅವರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕಾಗಮಿಸಿದ ಅವರು ಆರೋಪಿಗಳನ್ನು ಪತ್ತೆಮಾಡಿ ನಾಲ್ವರನ್ನು ಬಂಧಿಸಿದ್ದಾರೆ. ಇತರ ಆರೋಪಿಗಳ ಬಂಧನಕ್ಕೆ ಬಲೆಬೀಸಲಾಗಿದೆ.

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love