ಗೊಂದಲ ಬೇಡ, ಅಂಗಡಿಗಳು ತೆರದಿರುತ್ತವೆ,; ಹೋಮ್ ಡೆಲಿವರಿ ಹೊಸ ಸೇರ್ಪಡೆ ಅಷ್ಟೆ – ಎಎಸ್ಪಿ ಹರಿರಾಮ್ ಶಂಕರ್

Spread the love

ಗೊಂದಲ ಬೇಡ, ಅಂಗಡಿಗಳು ತೆರದಿರಿರುತ್ತವೆ,; ಹೋಮ್ ಡೆಲಿವರಿ ಹೊಸ ಸೇರ್ಪಡೆ ಅಷ್ಟೆ – ಎಎಸ್ಪಿ ಹರಿರಾಮ್ ಶಂಕರ್

ಹೋಮ್ ಡೆಲಿವರಿಯನ್ನು ಅಗತ್ಯವಿರುವವರು ಬಳಸಿಕೊಳ್ಳಬಹುದು, ಎಲ್ಲರೂ ಬಳಸಿಕೊಳ್ಳಬೇಕಂತಿಲ್ಲ: ಕೋವಿಡ್-19 ಟಾಸ್ಕ್ಫೋರ್ಸ್ ಕುರಿತ ಗೊಂದಲಗಳಿಗೆ ಕುಂದಾಪುರ ಎ ಎಸ್ ಪಿ ಹರಿರಾಮ್ ಶಂಕರ್ ಸ್ಪಷ್ಟನೆ

ಕುಂದಾಪುರ: ಲಾಕ್ಡೌನ್ ಅವಧಿಯಲ್ಲಿ ಜನರ ಓಡಾಟ ಕಡಿಮೆಗೊಳಿಸಲು ಕುಂದಾಪುರ ಉಪವಿಭಾಗ ವ್ಯಾಪ್ತಿಯಲ್ಲಿ ಹೊರಡಿಸಿರುವ ಕೋವಿಡ್ ಟಾಸ್ಕ್ಫೋರ್ಸ್ ನೂತನ ಅಧಿಸೂಚನೆಯಿಂದ ಸಾರ್ವಜನಿಕರು ಗೊಂದಲಕ್ಕೊಳಗಾದ ಬೆನ್ನಲ್ಲೇ ಕುಂದಾಪುರ ಉಪವಿಭಾಗದ ಎಎಸ್ಪಿ ಹರಿರಾಮ್ ಶಂಕರ್ ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ಸೋಮವಾರ ತಮ್ಮ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೋವಿಡ್ ಟಾಸ್ಕ್ಫೋರ್ಸ್ ಕುರಿತು ಸಾರ್ವಜನಿಕರು ಯಾವುದೇ ರೀತಿಯಲ್ಲಿ ಗೊಂದಲಕ್ಕೊಳಗಾಗುವುದು ಬೇಡ. ಈಗಿರುವ ವಿಧಾನಕ್ಕೆ ಇದೊಂದು ಹೊಸ ಸೇರ್ಪಡೆ ಅಷ್ಟೆ. ಅಗತ್ಯವಿರುವವರು ಇದನ್ನು ಬಳಸಿಕೊಳ್ಳಬಹುದು. ಅಗತ್ಯವಿಲ್ಲದವರು ನೇರವಾಗಿ ನಿಗದಿತ ಸಮಯದೊಳಗೆ ಅಂಗಡಿಗಳಿಗೆ ಹೋಗಿ ದಿನಸಿಯನ್ನು ಖರೀದಿಸಬಹುದು. ಎಂದಿನಂತೆ ದಿನಸಿ ಅಂಗಡಿಗಳು ಬೆಳಿಗ್ಗೆ 7ರಿಂದ11 ಗಂಟೆಯ ತನಕ ತೆರೆದಿರುತ್ತದೆ. ಈ ಸಮಯದಲ್ಲಿ ವಾಹನಗಳು ಹಾಗೂ ಜನರ ಓಡಾಟಗಳನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಈ ಹೊಸ ಯೋಜನೆಯನ್ನು ಕೈಗೊತ್ತಿಕೊಂಡಿದ್ದೇವೆ ಎಂದರು. ಜಿಲ್ಲಾ ಪಂಚಾಯತ್ ಸಿಎಒ ಪ್ರೀತಿ ಗೆಹ್ಲೋಟ್, ಸಹಾಯಕ ಆಯುಕ್ತ ರಾಜು, ನಾನು ಜೊತೆಗೂಡಿ ಚರ್ಚೆ ನಡೆಸಿ ಈ ತೀರ್ಮಾನಕ್ಕೆ ಮುಂದಾಗಿದ್ದೇವೆ. ಉಪವಿಭಾಗದ 64 ಪಿಡಿಓಗಳು, ಇಬ್ಬರು ತಾ.ಪಂ ಇಓ ಟಾಸ್ಕ್ಫೋರ್ಸ್ ತಂಡದ ನಿರ್ವಹಣೆಯಲ್ಲಿ ತೊಡಗಿಕೊಂಡಿದ್ದಾರೆ ಎಂದರು.

ಹೋಮ್ ಡೆಲಿವರಿಯ ಹೊಸ ಅಧಿಸೂಚನೆಯಿಂದಾಗಿ ಅಂಗವಿಕಲರಿಗೆ ಹಾಗೂ ಮನೆಯಲ್ಲೇ ಒಂಟಿಯಾಗಿ ವಾಸಿಸುತ್ತಿರುವ ವೃದ್ದರು ಸೇರಿದಂತೆ ಅಂಗಡಿಗಳಿಗೆ ಹೋಗಲು ಅನಾನುಕೂಲ ಇದ್ದವರಿಗೆ ತುಂಬಾ ಅನುಕೂಲವಾಗಲಿದೆ. ಸೋಮವಾರದಿಂದಲೇ ಎಲ್ಲಾ ಚೆಕ್ಪೋಸ್ಟ್ಗಳಲ್ಲೂ ಪೊಲೀಸ್ ಸಿಬ್ಬಂದಿಗಳು ವಾಹನ ಸವಾರರಿಗೆ ಅರಿವು ಮೂಡಿಸುತ್ತಿದ್ದಾರೆ. ಹೊಸ ಮಾರ್ಗಸೂಚಿಯ ಬಗ್ಗೆ ಜನರಿಗೆ ತಿಳಿ ಹೇಳಲಾಗುತ್ತಿದೆ. ಅಗತ್ಯವಿರುವವರು ಇದನ್ನು ಬಳಸಿಕೊಳ್ಳಬಹುದು. ಮುಂದೆ ವಿಪತ್ತುಗಳು ಸಂಭವಿಸಿದಾಗ ಈಗ ಮಾಡಿರುವಂತಹ ಟಾಸ್ಕ್ಫೋರ್ಸ್ ತಂಡವನ್ನೇ ಬಳಸಿಕೊಳ್ಳಬಹುದು ಎಂದು ಎಎಸ್ಪಿ ಹರಿರಾಮ್ ಶಂಕರ್ ಹೇಳಿದರು.

ರಾಜಕೀಯ ಪಕ್ಷಗಳ ಸ್ಥಳೀಯ ಮುಖಂಡರನ್ನು ಸ್ವಯಂ ಸೇವಕರಾಗಿ ನೇಮಕ ಮಾಡಲಾಗಿದೆ ಎನ್ನುವ ಆರೋಪಗಳಿಗೆ ಉತ್ತರಿಸಿದ ಅವರು, ಈ ಬಗ್ಗೆ ನನಗೂ ದೂರು ಬಂದಿದೆ. ಯಾವುದೇ ಯೋಜನೆಗಳು ಕಾರ್ಯರೂಪಗೊಳಿಸುವಾಗ ಸಮಸ್ಯೆ ಎದುರಾಗುವುದು ಸಾಮನ್ಯ. ಪ್ರತೀ ಗ್ರಾಮದ ವಾರ್ಡ್ಗಳಲ್ಲಿ ಇಬ್ಬರು ಸ್ವಯಂಸೇವಕರನ್ನು ಆಯಾ ಗ್ರಾ.ಪಂ ಪಿಡಿಓಗಳೇ ನೇಮಕ ಮಾಡಿದ್ದಾರೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಒಂದುವೇಳೆ ಇಂತಹ ಘಟನೆಗಳು ನಡೆದರೆ ಜಿ.ಪಂ ಸಿಇಓ, ಎಸಿ ಜೊತೆಗೂಡಿ ಚರ್ಚೆ ನಡೆಸಿ ಮುಂದಿನ ನಿರ್ಧಾರಗಳನ್ನು ಕೈಗೊಳ್ಳುತ್ತೇವೆ ಎಂದ ಅವರು, ಸ್ವಯಂಸೇವಕರ ತಂಡವನ್ನು ಆಯಾ ಗ್ರಾ.ಪಂ ಪಿಡಿಓಗಳೇ ನಿರ್ವಹಣೆ ಮಾಡುತ್ತಾರೆ. 7ರಿಂದ 11 ಗಂಟೆಯೊಳಗೆ ಈ ತಂಡ ವಾರಕ್ಕೆ ಬೇಕಾಗುವಂತಹ ದಿನಸಿಗಳನ್ನು ಖರೀದಿಸಿ ಆ ಬಳಿಕ ಮನೆ ಮನೆ ತಲುಪಿಸುವ ಕಾರ್ಯ ಮಾಡಲಿದೆ ಎಂದರು.


Spread the love