ಗೋಸಂರಕ್ಷಣೆಗೆ ಸ್ಫೂರ್ತಿ ಸಿಕ್ಕಿದರೆ ಗೋಸ್ವರ್ಗ ಸಾರ್ಥಕ; ರಾಘವೇಶ್ವರಭಾರತೀಸ್ವಾಮೀಜಿ

Spread the love

ಗೋಸಂರಕ್ಷಣೆಗೆ ಸ್ಫೂರ್ತಿ ಸಿಕ್ಕಿದರೆ ಗೋಸ್ವರ್ಗ ಸಾರ್ಥಕ; ರಾಘವೇಶ್ವರಭಾರತೀಸ್ವಾಮೀಜಿ

ಮಂಗಳೂರು: ಗೋಸ್ವರ್ಗವನ್ನು ವೀಕ್ಷಿಸಿದ ಪ್ರತಿಯೊಬ್ಬರಿಗೂ ಗೋಸಂರಕ್ಷಣೆಗೆ ಸ್ಫೂರ್ತಿ ದೊರಕಬೇಕು ಎನ್ನುವುದೇ ಗೋಸ್ವರ್ಗದ ಆಶಯ. ಪ್ರಥಮ ಗೋಸ್ವರ್ಗವನ್ನು ಎಲ್ಲರೂ ಸೇರಿ ಕಟ್ಟೋಣ. ಗೋಸ್ವರ್ಗ ನಮ್ಮ ಸ್ವಂತ ಹಕ್ಕಲ್ಲ; ಇದು ಇಡೀ ಸಮಾಜಕ್ಕೆ ಸೇರಿದ್ದು. ಗೋಸ್ವರ್ಗಕ್ಕೆ ಎಲ್ಲರ ಸೇವೆ ಸಲ್ಲಬೇಕು ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀಸ್ವಾಮೀಜಿ ಆಶಿಸಿದರು.

ಗೋವು ನಮ್ಮ ತಾಯಿ; ಆದರೆ ನಮ್ಮ ತಾಯಿ ಮಾತ್ರವಲ್ಲ; ನಿಮ್ಮೆಲ್ಲರ ತಾಯಿ ಕೂಡಾ. ಪ್ರತಿಯೊಬ್ಬರಿಗೂ ತಾಯಿಯ ಸೇವೆಗೆ ಅವಕಾಶ ನೀಡಬೇಕು ಎನ್ನುವ ಸಲುವಾಗಿ ಪ್ರತಿಯೊಬ್ಬರಿಗೂ ಸೇವೆಯ ಅವಕಾಶ ಕಲ್ಪಿಸಲಾಗಿದೆ. ಈ ಬಾರಿಯ ಗೋಸ್ವರ್ಗ ಚಾತುರ್ಮಾಸ್ಯಕ್ಕೆ ಆಗಮಿಸಿದ ಪ್ರತಿಯೊಬ್ಬರೂ ಒಂದೊಂದು ಗಿಡ ನೆಟ್ಟು ಗೋಸ್ವರ್ಗಕ್ಕೆ ವಿಶೇಷ ಮೆರುಗು ನೀಡಲಿದ್ದಾರೆ ಎಂದು ಬಣ್ಣಿಸಿದರು.

ಜನ, ಗೋವು ಹಾಗೂ ದೇವರ ತ್ರಿವೇಣಿ ಸಂಗಮ. ಇದು ಗೋಸೌಖ್ಯ ಕೇಂದ್ರ. ಗೋವುಗಳು ಸುಖವಾಗಿರಬೇಕು. ಗೋಸ್ವರ್ಗದ ಪರಿಕಲ್ಪನೆಯ ಮೂಲ. ಗೋವು ಸುಖವಾಗಿದ್ದರೆ, ಭೂಮಿ ಸ್ವರ್ಗವಾಗುತ್ತದೆ ಎಂದು
ನಗರದ ಪುರಭವನದಲ್ಲಿ ನಡೆದ ಸ್ವರ್ಗಸಂವಾದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಪ್ರಕೃತಿಯ ರಮ್ಯ ತಾಣದ ನಡುವೆ ನಂದಿಶಾಲೆ, ಬಾಲವತ್ಸ ಶಾಲೆ, ಹಾಲು ಕರೆಯುವ ಹಸುಗಳಿಗೆ ಧೇನು, ಪ್ರತೀಕ್ಷಾ ಶಾಲೆ, ವತ್ಸ ಶಾಲೆ, ಗೋಸಾಕಾಣಿಕೆ ಚರಿತ್ರೆಯಲ್ಲೇ ಪ್ರಥಮ ಎನಿಸಿದ ಪ್ರಸವ ಶಾಲೆ, ಮುದಿ ಹಾಗೂ ಅಶಕ್ತ ಹಸುಗಳಿಗೆ ಕರುಣಾ ಭರಣ, ಸರ್ವಸುಸಜ್ಜಿತ ಅತ್ಯುತ್ಕøಷ್ಣ ಪಶು ಚಿಕಿತ್ಸಾಲಯ, ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಪ್ರಯೋಗಾಲಯ, ಪಂಚಗವ್ಯ ಚಿಕಿತ್ಸೆಗಾಗಿ ಸುಸಜ್ಜಿತ ನಿರಾಮಯ ಆಸ್ಪತ್ರೆ, ಗೋವಿನ ಬಗೆಗಿನ ಚಿತ್ರಗಳ ಪ್ರದರ್ಶನಕ್ಕೆ ಥಿಯೇಟರ್, ಗೋಮ್ಯೂಸಿಯಂ ಗವ್ಯ ಆಹಾರ ವ್ಯವಸ್ಥೆಯಂಥ ಸೌಲಭ್ಯವಿದೆ ಎಂದು ವಿವರಿಸಿದರು.

ಸಾವಿರ ಗೋವುಗಳ ಸೆಗಣಿಯನ್ನು ಸಂಗ್ರಹಿಸುವ ಸೆಗಣಿ ಯಂತ್ರ, ದೂರಸಂವೇದನೆ ವ್ಯವಸ್ಥೆಯಂಥ ಅತ್ಯಾಧುನಿಕ ಸೌಲಭ್ಯಗಳನ್ನೂ ಕಲ್ಪಿಸಲಾಗಿದೆ. ಗೋಪೂಜೆ, ತುಲಾಭಾರ, ತೆಪ್ಪೋತ್ಸವ, ರಥೋತ್ಸವದಂಥ ಸೇವೆಗಳ ವ್ಯವಸ್ಥೆಯೂ ಗೋಸ್ವರ್ಗದಲ್ಲಿ ಇದೆ. ಸಿಸಿ ಟಿವಿ ಕಣ್ಗಾವಲಿನ ವ್ಯವಸ್ಥೆಯೂ ಇದೆ. ಗೋಫಲ ಎನ್ನುವ ಹೆಸರಿನಲ್ಲಿ ದೇಶದಲ್ಲೇ ಅತ್ಯಂತ ಉತ್ಕøಷ್ಟ ಗವ್ಯೋತ್ಪನ್ನಗಳನ್ನು ನೀಡುವ ಗೋಫಲ ಉದ್ಯಮ ಇಲ್ಲಿರುತ್ತದೆ ಎಂದು ಹೇಳಿದರು.

3 ಲಕ್ಷ ಚದರ ಅಡಿಯ ಗೋಸ್ವರ್ಗದಲ್ಲಿ ಗೋಡೆ, ಕಿಟಕಿ ಅಥವಾ ಬಂಧನವಿಲ್ಲ. ಗೋವುಗಳು ಸದಾ ತೃಪ್ತಿಯಾಗುವಂತೆ ದಿನದ 24 ಗಂಟೆಯೂ ಗೋವಿಗೆ ಬೇಕಾದಾಗ ಆಹಾರ ಸ್ವೀಕರಿಸಲು ಅವಕಾಶವಿದೆ. ಶಿಲಾಮಯ ಮಹಾಪಾತ್ರಗಳಲ್ಲಿ ಅಮೃತಮಯ ಜಲಸೌಲಭ್ಯವಿದೆ. ನೀರು ಹಾಗೂ ದೇವರ ನಡುವೆ ಗೋವುಗಳು ಇಲ್ಲಿ ಗೋವುಗಳು ಸ್ವಚ್ಛಂದವಾಗಿ ವಿಹರಿಸುತ್ತವೆ ಎಂದು ಬಣ್ಣಿಸಿದರು.

ಕಾಮಧೇನು ಸ್ತೂಪದ ಮೂಲಕ ಇಡೀ ಗೋಸ್ವರ್ಗವನ್ನು ವೀಕ್ಷಿಸುವ ಅವಕಾಶವಿದೆ. ಗೋಸ್ವರ್ಗದ ಪರಿಕಲ್ಪನೆ ನವನವೀನ. ಗೋಸೌಖ್ಯ ಕೇಂದ್ರದ ಪರಿಕಲ್ಪನೆಯೇ ಇದರ ಮೂಲ. ಗೋವುಗಳಿಗೆ ಕಸಾಯಿಖಾನೆಯಲ್ಲಿ ಮಾತ್ರವಲ್ಲ; ಮನೆಗಳಲ್ಲೂ ಗೋವಿಗೆ, ಕರುವಿಗೆ ಸೌಖ್ಯವಿಲ್ಲ. ಹುಟ್ಟಿದ ಪುಟ್ಟ ಕರುವಿಗೇ ಅಮ್ಮನ ಸಖ್ಯ ಇಲ್ಲ. ಕರುವಿನ ಪಾಲಿನ ಹಾಲನ್ನೇ ಕಿತ್ತುಕೊಳ್ಳುತ್ತೇವೆ. ಜೀವನ ಪರ್ಯಂತ ಬಂಧನದ ಶಿಕ್ಷೆ. ಇದನ್ನು ತಪ್ಪಿಸುವುದು ಗೋಸ್ವರ್ಗ ಪರಿಕಲ್ಪನೆಗೆ ಪ್ರೇರಣೆ ಎಂದರು.

ಕಸಾಯಿಖಾನೆಯಲ್ಲಿ ಮಾತ್ರವಲ್ಲ; ಗೋವಿನ ಬದುಕು ಕೂಡಾ ದುಃಖಮಯ. ಎಂಜಲು, ಹಳಸಲು ವಸ್ತುಗಳನ್ನು ಹಸುಗಳಿಗೆ ನೀಡುತ್ತೇವೆ ಎಂದು ವಿವರಿಸಿದರು.

ಕಾರಾಗೃಹದ ಕೈದಿಗಳ ಬದುಕಿಗಿಂತಲೂ ಬವಣೆಪಡುತ್ತಿವೆ. ಪ್ರಕೃತಿ- ಪುರುಷ ಸಂಯೋಗದ ಸುಖವೂ ಇಲ್ಲ. ಬೇಕಾದ ಆಹಾರ, ಬೇಕಾದಷ್ಟು ಪ್ರಮಾಣದಲ್ಲಿ ಇಲ್ಲ. ಗೋಸಾಕಣೆ ಸಂಪೂರ್ಣ ವ್ಯಾವಹಾರಿಕ. ವಿದೇಶಗಳಲ್ಲಿ ಮಾತ್ರವಲ್ಲ; ಭಾರತದಲ್ಲೂ ಪರಿಸ್ಥಿತಿ ಭಿನ್ನವಿಲ್ಲ. ಗೋವಿಗೆ ನೀರು, ಆಹಾರದಷ್ಟೇ ಸೂರ್ಯಕಿರಣ ಕೂಡಾ ಅಗತ್ಯ. ಅದರಿಂದಲೇ ವಂಚಿತರನ್ನಾಗಿ ಮಾಡುತ್ತೇವೆ. ನಿರಂತರ ದುಡಿತ- ಬಡಿತದಿಂದ ಗೋವಿನ ಬದುಕು ಬರ್ಬರವಾಗಿದೆ ಎಂದು ವಿಷಾದಿಸಿದರು.

ಭಾರ್ಗವ ಪರಶುರಾಮ ಆದದ್ದು ಕಾಮಧೇನುವಿಗೆ ತೊಂದರೆ ಬಂದಾಗ. ತನ್ನ ಗೋಶಾಲೆಯ ಗೋವುಗಳಿಗೆ ಆಪತ್ತು ಬಂದಾಗ ಕೊಡಲಿ ಎತ್ತಿದವರು ಭಾರ್ಗವರಾಮ. ಇಂಥ ನೆಚ್ಚಿನ, ಕೆಚ್ಚಿನ ವೀರಭೂಮಿಯ ಜನತೆಗೆ ಗೋವಿನ ಮಹತ್ವದ ಬಗ್ಗೆ ಹೇಳಬೇಕಾದ್ದಿಲ್ಲ. ಗೋರಕ್ಷಣೆಯ ಎಚ್ಚರ ಕೂಡಾ ಹೆಚ್ಚಾಗಿದೆ ಎಂದು ವಿಶ್ಲೇಷಿಸಿದರು.
ನಿಟ್ಟೆ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ವಿನಯ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.

ಉತ್ತರಕಾಶಿ ಕಪಿಲಾಶ್ರಮದ ಶ್ರಿ ರಾಮಚಂದ್ರ ಗುರೂಜಿ, ಎಂಆರ್‍ಪಿಎಲ್ ಆಡಳಿತ ನಿರ್ದೇಶಕ ವೆಂಕಟೇಶ್, ಕುಂಟಾರು ರವೀಶ್ ತಂತ್ರಿ, ಸಂಸದ ನಳಿನ್ ಕುಮಾರ್, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಎಸ್‍ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ರಾಜೇಂದ್ರ ಕುಮಾರ್, ಕೆಎಂಎಫ್ ಅಧ್ಯಕ್ಷ ರವಿರಾಜ್ ಹೆಗ್ಡೆ, ಕರ್ನಾಟಕ ರಾಜ್ಯ ಗೋಶಾಲೆಗಳ ಒಕ್ಕೂಟದ ಅಧ್ಯಕ್ಷ ಎಂ.ಬಿ.ಪುರಾಣಿಕ್, ಧರ್ಮದರ್ಶಿ ಹರಿಕೃಷ್ಣ ಪುನರೂರು, ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಡಾ.ಸುರೇಶ್ ಶೆಟ್ಟಿ ಗುರ್ಮೆ, ಶರಣ್ ಪಂಪ್‍ವೆಲ್, ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸಂತೋಷ್ ಕುಮಾರ್ ಬೊಳಿಯಾರ್, ಪಾಲಿಕೆ ಸದಸ್ಯೆ ರೂಪಾ ಡಿ.ಬಂಗೇರ, ಹವ್ಯಕ ಮಹಾಮಂಡಲ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಗೋಸ್ವರ್ಗ ಸಂಸ್ಥಾನ ಸಮಿತಿ ಅಧ್ಯಕ್ಷ ಆರ್.ಎಸ್.ಹೆಗಡೆ, ದಿಗ್ದರ್ಶಕ ಡಾ.ವೈ.ವಿ.ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು. ಡಾ.ವಿಷ್ಣು ಭಟ್ ಪಾದೆಕಲ್ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಗೋ ಪರಿವಾರದ ಉಪಾಧ್ಯಕ್ಷ ಮುರಳಿ ಹಸಂತಡ್ಕ ಸಭಾಪೂಜೆ ನೆರವೇರಿಸಿದರು. ಮೇಧಾ ಪ್ರಾರ್ಥಿಸಿದರು. ಶ್ರೀಕೃಷ್ಣ ನೀರಮೂಲೆ ನಿರೂಪಿಸಿದರು.

ಕರ್ನಾಟಕ ಬ್ಯಾಂಕಿನ ಪರವಾಗಿ ಜಿಎಂ ಮಹಲಿಂಗೇಶ್ವರ ಭಟ್ ಅವರು ಗೋಸ್ವರ್ಗಕ್ಕೆ 25 ಲಕ್ಷ ರೂಪಾಯಿ, ಹಿರಣ್ಯ ಗಣಪತಿ ಭಟ್ 10 ಲಕ್ಷ ದೇಣಿಗೆ ನೀಡಿದರು.


Spread the love