ಚಿನ್ನಾಭರಣ ಕಳವು ಕುಖ್ಯಾತ ಆರೋಪಿ ಸೆರೆ

Spread the love

ಚಿನ್ನಾಭರಣ ಕಳವು ಕುಖ್ಯಾತ ಆರೋಪಿ ಸೆರೆ
 

ಮಂಗಳೂರು: ನಗರದ ಹೊರ ವಲಯದ ಸುರತ್ಕಲ್ನ ಎನ್‌ಎಂಪಿಟಿ ಕಾಲನಿ ನಿವಾಸಿ ರಮೇಶ್ ಪೂಜಾರಿ ಮನೆಯಿಂದ ಚಿನ್ನಾಭರಣ ಕಳವು ಮಾಡಿದ ಕುಖ್ಯಾತ ಆರೋಪಿಯನ್ನು ಉತ್ತರ ಉಪವಿಭಾಗ ರೌಡಿ ನಿಗ್ರಹ ದಳ ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಮಗಳೂರು ನಿವಾಸಿ ಅಬೂಬಕ್ಕರ್ ಯಾನೆ ಇತ್ತೆ ಬರ್ಪೆ ಅಬೂಬಕ್ಕರ್(63) ಬಂಧಿತ ಆರೋಪಿ. ಆರೋಪಿಯಿಂದ ಕಳ್ಳತನ ಮಾಡಿದ ಚಿನ್ನಾಭರಣಗಳ ಪೈಕಿ 121 ಗ್ರಾಂ ತೂಕದ ಸುಮಾರು 3.50 ಲಕ್ಷ ರೂ. ಮೌಲ್ಯದ ಒಡವೆಗಳನ್ನು ಮತ್ತು ಕೃತ್ಯಕ್ಕೆ ಉಪಯೋಗಿಸಿದ 2 ದ್ವಿಚಕ್ರ ವಾಹನ ವಶಪಡಿಸಲಾಗಿದೆ.

ವಿವಿಧೆಡೆ ಕಳವು ಪ್ರಕರಣ ಆರೋಪಿ: ಆರೋಪಿ 2017ರಿಂದ ಮೂಡುಬಿದಿರೆ, ಬಜ್ಪೆ, ವೇಣೂರು, ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿವಿಧ ರೀತಿಯ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಕುರಿತು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

15 ದಿನಗಳ ಹಿಂದೆ ಕೋಡಿಕೆರೆಯ ಮನೆಯೊಂದರಿಂದ ಚಿನ್ನಾಭರಣ ಕಳವಾಗಿತ್ತು. ಈತನೇ ಕಳವು ಮಾಡಿರುವ ಬಗ್ಗೆ ಶಂಕೆ ಇದ್ದು, ಹೆಚ್ಚಿನ ವಿಚಾರಣೆಗೆ ಪೊಲೀಸರು ಕಸ್ಟಡಿಗೆ ಪಡೆದುಕೊಳ್ಳುವ ಸಾಧ್ಯತೆ ಇದೆ.
ಪಣಂಬೂರು ಉಪ ವಿಭಾಗ ಪ್ರಭಾರ ಸಹಾಯಕ ಪೊಲೀಸ್ ಆಯುಕ್ತರಾಗಿದ್ದ ಮಂಜುನಾಥ್ ಶೆಟ್ಟಿ, ಸಹಾಯಕ ಪೊಲೀಸ್ ಆಯುಕ್ತ ಶೀನಿವಾಸ್ ಗೌಡ ಮಾರ್ಗದರ್ಶನದಲ್ಲಿ ಸುರತ್ಕಲ್ ಪೊಲೀಸ್ ನಿರೀಕ್ಷಕ ರಾಮಕೃಷ್ಣ ಕೆ.ಜಿ., ಪಣಂಬೂರು ರೌಡಿ ನಿಗ್ರಹ ದಳ ಮತ್ತು ಸುರತ್ಕಲ್ ಪೊಲೀಸ್ ಠಾಣೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಅಂತಾರಾಜ್ಯ ಕಳವು ಆರೋಪಿ: ಇತ್ತೆ ಬರ್ಪೆ ಅಬೂಬಕ್ಕರ್ ವಿರುದ್ಧ ಕೇರಳದಲ್ಲೂ ಪ್ರಕರಣ ದಾಖಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈತನ ವಿರುದ್ಧ ಸುಮಾರು 70ಕ್ಕೂ ಅಧಿಕ ಪ್ರಕರಣ ದಾಖಲಾಗಿವೆ. ಹಗಲಿನಲ್ಲಿ ಮನೆ ಬಳಿಗೆ ತೆರಳಿ ಕಳವು ಸಂಚು ರೂಪಿಸುವ ಈತ ರಾತ್ರಿ ವೇಳೆ ಕೃತ್ಯ ಎಸಗುತ್ತಾನೆ. ಮನೆಯವರು ಮಲಗಿರುವಾಗ ಕಿಟಕಿ ಮೂಲಕ ಬಾಗಿಲಿನ ಚಿಲಕ ತೆಗೆದು ಒಳನುಗ್ಗುತ್ತಾನೆ. ಇದಕ್ಕೂ ಮುನ್ನ ಗ್ಲಾಸ್ ನೆಲಕ್ಕೆ ಹಾಕಿ ಶಬ್ದ ಮಾಡುತ್ತಾನೆ. ಮನೆಯವರು ಏಳದೇ ಇದ್ದರೆ ಕಳವು ಕೃತ್ಯ ನಡೆಸುತ್ತಾನೆ. ರಮೇಶ್ ಪೂಜಾರಿ ಅವರ ಮನೆಯಲ್ಲಿ 45 ನಿಮಿಷ ಕಾಲ ಇದ್ದು ಕಳವು ಮಾಡಿರುವುದು ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ.


Spread the love