ಚುನಾವಣೆಗೆ ಸಿದ್ಧತೆ ಈಗಲೇ ಆರಂಭವಾಗಲಿ : ಉದಯಕುಮಾರ್ ಶೆಟ್ಟಿ

Spread the love

ಚುನಾವಣೆಗೆ ಸಿದ್ಧತೆ ಈಗಲೇ ಆರಂಭವಾಗಲಿ : ಉದಯಕುಮಾರ್ ಶೆಟ್ಟಿ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವಮೋರ್ಚಾ ವತಿಯಿಂದ ಎರಡನೇ ಕಾರ್ಯಕಾರಿಣಿ ಬುಧವಾರ ಮಂಗಳೂರಿನ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆಯಿತು.
ಕಾರ್ಯಕಾರಿಣಿ ಉದ್ಘಾಟಿಸಿ ಮಾತನಾಡಿದ ಬಿಜೆಪಿ ವಿಭಾಗ ಪ್ರಭಾರಿ ಉದಯಕುಮಾರ್ ಶೆಟ್ಟಿ, ದೇಶದಲ್ಲಿ ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಒಳ್ಳೆಯ ಆಡಳಿತ ದೇಶಕ್ಕೆ ದೊರೆತಿದೆ. ಕೇಂದ್ರದ ಯೋಜನೆಗಳನ್ನು ಜನತೆಗೆ ತಲುಪಿಸುವ ಕೆಲಸ ಕಾರ್ಯಕರ್ತರಿಂದ ಆಗಬೇಕು. ಅದರೊಂದಿಗೆ ಮುಂದಿನ ಚುನಾವಣೆಯ ದೃಷ್ಟಿಯಿಂದ ಈಗಲೇ ಸಿದ್ಧತೆ ಆರಂಭಿಸಬೇಕು ಎಂದರು.
dk-bjp-meeting-uday-kumar-shetty
ಯುವಮೋರ್ಚಾ ಕಾರ್ಯಕರ್ತರು ಮನಸ್ಸು ಮಾಡಿದರೆ ಯಾವುದೇ ಬದಲಾವಣೆ ಸಾಧ್ಯ. ಪ್ರಸ್ತುತ ದೇಶದಲ್ಲಿ ತಮ್ಮ ಪಕ್ಷದಲ್ಲಿ ಉನ್ನತ ಸ್ಥಾನ ಅಲಂಕರಿಸಿದ ಶೇ.೯೦ ಮಂದಿ ಯುವಮೋರ್ಚಾದಿಂದಲೇ ಬಂದವರು. ಕಾರ್ಯಕರ್ತರು ಸಂಘಟನಾತ್ಮಕವಾಗಿ ತೊಡಗಿಸಿಕೊಂಡು ಪಕ್ಷಕ್ಕಾಗಿ ಶಕ್ತಿಮೀರಿ ದುಡಿಯಬೇಕು ಎಂದು ಅವರು ಹೇಳಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಮಾನಾಥ ಕೋಟ್ಯಾನ್ ಮಾತನಾಡಿ, ಯುವಮೋರ್ಚಾ ಕಾರ್ಯಕರ್ತರು ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವ ಮೂಲಕ ಪಕ್ಷಕ್ಕೆ ಇನ್ನಷ್ಟು ಶಕ್ತಿ ತುಂಬಬೇಕು. ಯುವಮೋರ್ಚಾ ಕಾರ್ಯಕರ್ತರಲ್ಲಿ ಆ ಚೈತನ್ಯವಿದೆ. ಬಿಜೆಪಿಯಲ್ಲಿ ಯಾವುದೇ ಪೋಸ್ಟ್ ಅಥವಾ ಹುದ್ದೆ ಎಂಬುದಿಲ್ಲ. ನೀಡುವ ಸ್ಥಾನವನ್ನು ಜವಾಬ್ದಾರಿ ಎಂದರಿತು ಕೆಲಸ ನಿರ್ವಹಿಸಲಾಗುತ್ತದೆ. ಕಾರ್ಯಕರ್ತರು ಇದನ್ನು ಅರಿತುಕೊಂಡು ಪಕ್ಷ ಬಲಪಡಿಸುವತ್ತ ಒತ್ತು ನೀಡಬೇಕು ಎಂದರು.
ಯುವಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಪೂಂಜ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ರಾಜ್ಯ ಉಪಾಧ್ಯಕ್ಷ ಶಿವರಂಜನ್ ಪುತ್ತೂರು, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಮಹೇಶ್ ಶಕ್ತಿನಗರ, ಪೃಥ್ವಿರಾಜ್, ಭವ್ಯರಾಣಿ ಬಂಟ್ವಾಳ, ಜಿಲ್ಲಾ ಸಹ ಪ್ರಭಾರಿ ಪಿಜಿಎಸ್‌ಎನ್ ಪ್ರಸಾದ್, ಬಿಜೆಪಿ ಜಿಲ್ಲಾ ಪ್ರಧಾನಕಾರ್ಯದರ್ಶಿ ಬ್ರಿಜೇಶ್ ಚೌಟ, ಜಿಲ್ಲಾ ಸಹ ಉಸ್ತುವಾರಿ ದರ್ಶನ್ ದೇಸಾಯಿ ಉಪಸ್ಥಿತರಿದ್ದರು.
ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಹರೀಶ್ ಮೂಡುಶೆಡ್ಡೆ ಸ್ವಾಗತಿಸಿ, ಕಾರ್ಯಕಾರಿಣಿ ಸದಸ್ಯ ದಯಾನಂದ ತೊಕ್ಕೊಟ್ಟು ಕಾರ್ಯಕ್ರಮ ನಿರೂಪಿಸಿದರು.

Spread the love