ಚೂರಿಯಿಂದ ಇರಿದು ಗುತ್ತಿಗೆದಾರನ ದರೋಡೆ: ಆರೋಪಿ ರೌಡಿಶೀಟರ್ ಬಂಧನ 

Spread the love

ಚೂರಿಯಿಂದ ಇರಿದು ಗುತ್ತಿಗೆದಾರನ ದರೋಡೆ: ಆರೋಪಿ ರೌಡಿಶೀಟರ್ ಬಂಧನ 

ಉಳ್ಳಾಲ: ಚೂರಿಯಿಂದ ಇರಿದು ಗುತ್ತಿಗೆದಾರನ ದರೋಡೆ ನಡೆಸಿದ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಅಬ್ಬಕ್ಕ ವೃತ್ತದ ಬಳಿ ಶುಕ್ರವಾರ ಮಧ್ಯಾಹ್ನ ನಡೆದಿದ್ದು, ಘಟನೆ ಸಂಬಂಧ ಆರೋಪಿ ರೌಡಿಶೀಟರ್ ನನ್ನು ಬಂಧಿಸಿರುವ ಉಳ್ಳಾಲ ಪೊಲೀಸರು ತಲೆಮರೆಸಿಕೊಂಡ ಇನ್ನಿಬ್ಬರು ಆರೋಪಿಗಳಿಗೆ ಶೋಧ ಮುಂದುವರಿಸಿದ್ದಾರೆ‌.

ಶುಕ್ರವಾರ ಮದ್ಯಾಹ್ನ ಉಳ್ಳಾಲ ದರ್ಗಾದಲ್ಲಿ ನಮಾಝ್ ಮುಗಿಸಿ ಸ್ವಿಫ್ಟ್ ಕಾರಲ್ಲಿ ತೆರಳುತ್ತಿದ್ದ ಉಳ್ಳಾಲ ಮುಕ್ಕಚ್ಚೇರಿ ನಿವಾಸಿ ಶಮೀರ್(33) ಎಂಬ ಗುತ್ತಿಗೆದಾರನನ್ನು ಉಳ್ಳಾಲದ ಸುಂದರಿ ಭಾಗ್ ನಿವಾಸಿ ಹಸೈನಾರ್ ತಡೆದು ಪರಿಚಯಿಸಿದ್ದಾನೆ.ಕಟ್ಟಡವೊಂದರ ಕಾಮಗಾರಿ ಇದೆ ಮಾಡುವಿರಾ ಎಂದು ಶಮೀರ್ ಅವರನ್ನು ಪ್ರಶ್ನಿಸಿ ಹಸೈನಾರ್ ಗುತ್ತಿಗೆದಾರನ ಕಾರನ್ನೇರಿ ಅಬ್ಬಕ್ಕ ಸರ್ಕಲ್ ಕಡೆ ತೆರಳಿದ್ದಾನೆ.ಅಬ್ಬಕ್ಕ ಸರ್ಕಲ್ ಬಳಿ ಹಸೈನಾರನ ಮತ್ತಿಬ್ಬರು ಸಹಚರರಾದ ಉಮರ್ ನವಾಬ್ ಮತ್ತು ಅಕ್ಬರ್ ಉಳ್ಳಾಲ್ ಎಂಬಿಬ್ಬರು ಕಾರು ಹತ್ತಿದ್ದಾರೆ.ಉಳ್ಳಾಲದ ಬಸ್ತಿ ಪಡ್ಪು ಎಂಬಲ್ಲಿ ಕಾರು ತಲುಪುತ್ತಿದ್ದಂತೆ ಶಮೀರ್ ಕಾಲಿಗೆ ಆರೋಪಿಗಳು ಚಾಕುವಿನಿಂದ ಇರಿದು ಹಲ್ಲೆಗೈದು ಹಣ ಸಿಗದಾಗ ಕಾರು,ಲ್ಯಾಪ್ ಟಾಪನ್ನು ದರೋಡೆಗೈದಿದ್ದಾರೆ.ರೌಡಿಗಳಿಂದ ತಪ್ಪಿಸಿದ ಶಮೀರ್ ಉಳ್ಳಾಲ ಠಾಣೆಗೆ ಬಂದು ದೂರು ನೀಡಿದ್ದಾರೆ.

ಎಸಿಪಿ ಧನ್ಯಾ ನಾಯಕ್ ನಿರ್ದೇಶನದಂತೆ ಉಳ್ಳಾಲ ಪೊಲೀಸ್ ಇನ್ಸ್ ಪೆಕ್ಟರ್ ಬಾಲಕೃಷ್ಣ ನೇತೃತ್ವದ ತಂಡ ಕ್ಷಿಪ್ರ ಕಾರ್ಯಾಚರಣೆ ನಡೆಸಿ ರೌಡಿ ಹಸೈನಾರ್ ನನ್ನು ಮಧ್ಯರಾತ್ರಿಯೇ ಬಂಧಿಸಿದೆ.ದರೋಡೆ ಮಾಡಿದ ಕಾರು,ಲ್ಯಾಪ್ ಟಾಪ್,ಕೃತ್ಯಕ್ಕೆ ಬಳಸಲಾದ ಚೂರಿಯನ್ನು ದಸ್ತಗಿರಿ ಮಾಡಲಾಗಿದೆ.ತಲೆಮರೆಸಿ ಕೊಂಡಿರುವ ರೌಡಿ ಶೀಟರ್ ಉಮರ್ ನವಾಬ್ ಮತ್ತು ಅಕ್ಬರ್ ಉಳ್ಳಾಲ್ ಬಂಧನಕ್ಕೆ ಕಾರ್ಯಾಚರಣೆ ಮುಂದುವರಿದಿದೆ‌.


Spread the love