ಜಿಲ್ಲಾಡಳಿತ ಆಶ್ರಯದಲ್ಲಿ ಶ್ರೀ ದೇವರ ದಾಸಿಮಯ್ಯ ಜಯಂತಿ ಆಚರಣೆ

Spread the love

ಜಿಲ್ಲಾಡಳಿತ ಆಶ್ರಯದಲ್ಲಿ ಶ್ರೀ ದೇವರ ದಾಸಿಮಯ್ಯ ಜಯಂತಿ ಆಚರಣೆ

ಉಡುಪಿ : ಮನುಷ್ಯ ತನ್ನಲ್ಲಿನ ಅಹಂಕಾರವನ್ನು ತೊರೆದು ಭಕ್ತಿ ಮಾರ್ಗದಲ್ಲಿ ನಡೆದಾಗ ಮಾತ್ರ ಭಗವಂತನ ಸಾಕ್ಷಾತ್ಕಾರ ಸಾಧ್ಯ ಎಂದು ಆದ್ಯ ವಚನಕಾರ ಶ್ರೀ ದೇವರ ದಾಸಿಮಯ್ಯ ಹೇಳಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಅನುರಾಧ ತಿಳಿಸಿದ್ದಾರೆ.

ಅವರು ಶನಿವಾg, ಉಡುಪಿಯ ಲಯನ್ಸ್ ಭವನದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಶ್ರೀ ದೇವರ ದಾಸಿಮಯ್ಯ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಮಾಜದಲ್ಲಿನ ಮೂಢನಂಬಿಕೆ, ಕಂದಾಚಾರ, ವರ್ಗ ತಾರತಮ್ಯದ ವಿರುದ್ದ ತಮ್ಮ ವಚನಗಳ ಮೂಲಕ ಸಮಾಜದ ಅಂಕುಡೊಂಡುಗಳನ್ನು ತಿದ್ದುವ ಕೆಲಸ ಮಾಡಿದ ದೇವರ ದಾಸಿಮಯ್ಯ 10 ನೇ ಶತಮಾನದಲ್ಲಿದ್ದ ಆದ್ಯ ವಚನಕಾರ, ಸ್ತ್ರೀ ಸಮಾನತೆ ಬಗ್ಗೆ ಒತ್ತಿ ಹೇಳಿದ, ಕಾಯಕದ ಮಹತ್ವ ತಿಳಿಸಿದ, ಜಾತೀಯತೆ ಮುಕ್ತ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದ, ರಾಮನಾಥ ಎಂಬ ಅಂಕಿತ ನಾಮದಿಂದ ರಚಿಸಿರುವ ಅವರ ವಚನಗಳನ್ನು ಅರ್ಥೈಸಿಕೊಂಡು, ಅವರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ತಿಳಿಸಿದರು.

ದೇವರ ದಾಸಿಮಯ್ಯ ಕುರಿತು ವಿಶೇಷ ಉಪನ್ಯಾಸ ನೀಡಿದ, ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ರೇಖಾ ವಿ.ಬನ್ನಾಡಿ ಮಾತನಾಡಿ, ಜಾತಿ, ವರ್ಗ, ಲಿಂಗತ್ವ ವರ್ಗೀಕರಣದಲ್ಲಿ ರಚನೆಯಾಗಿದ್ದ ಸಮಾಜದಲ್ಲಿನ ಕಂದಾಚಾರ, ಮೌಡ್ಯ , ಅಂಧ ಶ್ರದ್ದೆಗಳ ಬಗ್ಗೆ ದನಿ ಎತ್ತಿದ ಆದ್ಯ ವಚನಕಾರ ದೇವರ ದಾಸಿಮಯ್ಯ, ಜನ ಸಾಮಾನ್ಯರ ಬದುಕು, ಭಾವನೆಗಳನ್ನು ಕಾವ್ಯವನ್ನಾಗಿಸಿ, ತಮ್ಮ ಅನುಭವದ ಮೂಲಕ ವಚನಗಳನ್ನು ರಚಿಸಿ, ಕಾಯಕದ ಮಹತ್ವವನ್ನು ತಿಳಿಸಿದ ವಚನಕಾರ ದೇವರ ದಾಸಿಮಯ್ಯ ಎಂದು ತಿಳಿಸಿದರು.

ಉಡುಪಿ ತಾಲೂಕು ಪಂಚಾಯತ್ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದ.ಕ. ಪದ್ಮಶಾಲಿ ಮಹಾಸಭಾದ ಸಂಚಾಲಕ ಪ್ರೇಮಾನಂದ ಶೆಟ್ಟಿಗಾರ್ ಉಪಸ್ಥಿತರಿದ್ದರು.

ಉಡುಪಿ ತಹಸೀಲ್ದಾರ್ ಮಹೇಶ್ಚಂದ್ರ ಸ್ವಾಗತಿಸಿದರು, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ತಾಂತ್ರಿಕ ಸಹಾಯಕಿ ಪೂರ್ಣಿಮಾ ವಂದಿಸಿದರು, ಶಂಕರದಾಸ್ ಚಂಡ್ಕಳ ನಿರೂಪಿಸಿದರು. ನಾರಾಯಣ ಶಬರಾಯ ಮತ್ತು ತಂಡದವರಿಂದ ವಚನ ಗಾಯನ ಕಾರ್ಯಕ್ರಮ ನಡೆಯಿತು.


Spread the love