ಜ. 8 ರಂದು ಅದಮಾರು ಮಠದ ಶ್ರೀ ಈಶಪ್ರೀಯ ತೀರ್ಥ ಶ್ರೀಪಾದರ ಪುರ ಪ್ರವೇಶ

Spread the love

ಜ. 8 ರಂದು ಅದಮಾರು ಮಠದ ಶ್ರೀ ಈಶಪ್ರೀಯ ತೀರ್ಥ ಶ್ರೀಪಾದರ ಪುರ ಪ್ರವೇಶ

ಉಡುಪಿ: ಸಾಂಪ್ರಾದಾಯಿಕ ಪರ್ಯಾಯ ಸಂಚಾರ ಪೊರೈಸಿರುವ ಅದಮಾರು ಮಠದ ಶ್ರೀ ಈಶಪ್ರೀಯ ತೀರ್ಥ ಶ್ರೀಪಾದರು ಜನವರಿ 8ರಂದು ಪುರಪ್ರವೇಶ ಮಾಡಲಿದ್ದು ಮಧ್ಯಾಹ್ನ 2.30 ಗಂಟೆಗೆ ಜೋಡುಕಟ್ಟೆಯಿಂದ ಪುರಪ್ರವೇಶ ಮೆರವಣಿಗೆ ಹೊರಡಲಿದೆ ಎಂದು ಶ್ರೀ ಕೃಷ್ಣ ಸೇವಾ ಬಳಗ ಇದರ ಗೌರವಾಧ್ಯಕ್ಷರಾದ ರಘುಪತಿ ಭಟ್ ಹೇಳಿದರು.

ಅವರು ಶನಿವಾರ ಅದಮಾರು ಮಠದ ವಿಶ್ರಾಂತಿ ಗೃಹದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯನ್ನು ಉದ್ಧೇಶಿಸಿ ಮಾತನಾಡಿ, ಅದಮಾರು ಸ್ವಾಮೀಜಿಯವರ ಪುರಪ್ರವೇಶದ ಮೆರವಣಿಗೆ ಜ. 8ರ ಅಪರಾಹ್ನ 2.30ಕ್ಕೆ ಜೋಡುಕಟ್ಟೆಯಿಂದ ಆರಂಭವಾಗಲಿದೆ. ಸಂಜೆ 5.45ಕ್ಕೆ ಅದಮಾರು ಮಠವನ್ನು ಪ್ರವೇಶಿಸುವರು. ಮೆರವಣಿಗೆ ತೆಂಕಪೇಟೆ ಮಾರ್ಗವಾಗಿ ಬರಲಿದೆ ಎಂದರು.

ಹೊರೆಕಾಣಿಕೆಯನ್ನು ಏಕಕಾಲದಲ್ಲಿ ಸ್ವೀಕರಿಸುವ ಬದಲು ಪ್ರತಿ 15 ದಿನಗಳಿಗೊಮ್ಮೆ ಸ್ವೀಕರಿಸಲು ನಿರ್ಧರಿಸಲಾಗಿದ್ದು ಜ. 15ರಂದು ಅದಮಾರು, ಮಲ್ಪೆ, ಕೊಡವೂರು, ಮಟ್ಟು ಗ್ರಾಮದ ಗ್ರಾಮಸ್ಥರಿಂದ ಮೊದಲ ಹೊರೆಕಾಣಿಕೆ ಸಮರ್ಪಣೆಯಾಗಲಿದೆ. ಪ್ರತಿ 15 ದಿನಗಳಿಗೊಮ್ಮೆ ಹೊರೆಕಾಣಿಕೆ ಸಮರ್ಪಣೆಯಾಗಲಿದೆ. ಅದಮಾರು ಮಠದ ಪರ್ಯಾಯೋತ್ಸವದಲ್ಲಿ ಪರಿಸರ ಜಾಗೃತಿಗೆ ಗಮನ ಹರಿಸಲಾಗುತ್ತಿದ್ದು, ಪ್ಲಾಸ್ಟಿಕ್ ನಿರ್ಮೂಲನಕ್ಕೆ ಸಾರ್ವಜನಿಕ ಜಾಗೃತಿ ಮೂಡಿಸಲಾಗುವುದು ಎಂದರು.

ಪುರಪ್ರವೇಶದಲ್ಲಿ ತಳಿರು ತೋರಣಗಳ ಅಲಂಕಾರ, ಬಾಳೆ ಗಿಡಗಳನ್ನು ಬೇರು ಸಹಿತ ಕಿತ್ತು ತಂದು ತೋರಣಗಳಿಗೆ ಬಳಸಿ ಬಳಿಕ ಆ ಗಿಡಗಳನ್ನು ಮತ್ತೆ ನೆಡುವ ಕಾರ್ಯಕ್ರಮವಿದ್ದು ಇದೊಂದು ಪರಿಸರ ಪ್ರೀತಿಯ ಚಿಂತನೆಯಾಗಲಿದೆ. ಸಾಂಪ್ರದಾಯಿಕವಾಗಿ ಪುರಪ್ರವೇಶ ಮಾಡುವ ಶ್ರೀಗಳು ತಮ್ಮ ಮಠದ ಪರಂಪರೆಯನ್ನು ಸ್ಮರಿಸಿಕೊಳ್ಳುವುದು ಸಂಪ್ರದಾಯವಾಗಿದ್ದು ಅದರಂತೆ ಆಚಾರ್ಯ ಮಧ್ವರು, ಶ್ರೀ ನರಸಿಂಹ ತೀರ್ಥರಿಂದ ಮೊದಲ್ಗೊಂಡು ಶ್ರೀ ವಿಬುಧೇಶ ತೀರ್ಥರ ವರೆಗಿನ ಪೂರ್ವ ಯತಿಗಳ ಹೆಸರುಗಳನ್ನು ಬರೆದು ಸ್ವಾಗತ ತೋರಣದ ಕಂಬಗಳಿಗೆ ಕಟ್ಟಲಾಗುವುದು.

ಜಾನಪದ ಸೊಬಗುಳ್ಳ ಪ್ರಕೃತಿಯಿಂದ ಪಡೆದು ಪ್ರಕೃತಿಯ ನಿರ್ಮಾಣದಂತಹ ಸಹಜ ಅಲಂಕಾರಗಳುಳ್ಳ ಸ್ವಾಗತ ಕಮಾನುಗಳನ್ನು ನಿರ್ಮಿಸಲು ಆಸಕ್ತ ಯುವಕ ಯುವತಿಯರಿಗೆ ಅವಕಾಶ ಕಲ್ಪಿಸಲಾಗಿದೆ. ಪರ್ಯಾಯ ಪೂರ್ವಭಾವಿ ಸಂಚಾರ ಪೊರೈಸಿ ಆಗಮಿಸುವ ಸ್ಮಾಮೀಜಿ ಜೋಡುಕಟ್ಟೆಯಿಂದ ರಥಬೀದಿ ಪ್ರವೇಶ ಮಾಡಲಿದ್ದು, ಪುರಪ್ರವೇಶ ವೈಭವದಲ್ಲಿ ಪರಂಪರೆಗೆ, ಸಂಪ್ರದಾಯಗಳಿಗೆ ತೌಳವ ಸಾಂಸ್ಕೃತಿಕ ಸೊಬಗಿಗೆ ಪ್ರಾಧಾನ್ಯತೆ ನೀಡಲಿದ್ದು ಆಧುನಿಕ ಸಂಭ್ರಮಗಳಿಗೆ ಅವಕಾಶವಿರುವುದಿಲ್ಲ ಎಂದರು.

ರಥಬೀದಿ ಪ್ರವೇಶದ ಬಳಿಕದ ಕಾರ್ಯಕ್ರಮಗಳು ಪೂರ್ವ ನಿರ್ಧರಿತ ವಿಧಾನದಂತೆ ನಡೆಯಲಿದ್ದು, ಬಳಿಕ ಸಂಜೆ ಪೂರ್ಣಪ್ರಜ್ಞಾ ಮಂಟಪ ರಥಬೀದಿ ಇಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನಗರಸಭೆ ಮತ್ತು ಕೃಷ್ಣಾಸೇವಾ ಬಳಗದ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿದ್ದು ಪೌರಾಡಳಿತ ಹಾಗೂ ಕಂದಾಯ ಸಚಿವರಾದ ಆರ್ ಅಶೋಕ್ ಅವರು ಸನ್ಮಾನಿಸಲಿದ್ದಾರೆ.

ಪ್ಲಾಸ್ಟಿಕ್ ಮುಕ್ತ ಪರ್ಯಾಯದ ಅಂಗವಾಗಿ ಪೌರಸಮ್ಮಾನ ಅಭಿನಂದನಾ ಕಾರ್ಯಕ್ರಮದಲ್ಲಿ ಗಂಧದ ಹಾರ, ಮಣಿಗಳನ್ನು ಪೊಣೀಸಿ ಮಾಡಿದ ಹಾರಗಳನ್ನು ಹಾಕಲು ಅವಕಾಶವಿಲ್ಲ. ಪುರಪ್ರವೇಶದ ಸರ್ವ ವ್ಯವಸ್ಥೆಗಳು ಸರಳ ಸುಂದರವಾಗಿರುತ್ತದೆ ಎಂದರು.

ಪರ್ಯಾಯದಲ್ಲಿ ಪ್ಲಾಸ್ಟಿಕ್ ಫ್ಲೆಕ್ಸ್ ಗಳ ಉಪಯೋಗವನ್ನು ರದ್ದುಗೊಳಿಸಲಾಗಿದ್ದು ಬಟ್ಟೆಯ ಫಲಕ, ಅಥವಾ ಬ್ಯಾನರ್ ಗಳನ್ನು ಬಳಸುವಂತೆ ವಿನಂತಿಸಿಕೊಳ್ಳಲಾಗಿದೆ. ಕಾರ್ಯಕ್ರಮವು ಸಂಪೂರ್ಣ ಪರಿಸರ ಸ್ನೇಹಿಯಾಗಿರಿಸುವುದರೊಂದಿಗೆ ಸ್ವಚ್ಚತೆಗೆ ವಿಶೇಷ ಆದ್ಯತೆ ನೀಡಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಯಶಪಾಲ್ ಸುವರ್ಣ, ಪ್ರದೀಪ್ ರಾವ್, ದಿನೇಶ್ ಪುತ್ರನ್, ಸುಬ್ರಹ್ಮಣ್ಯ ಮಾರ್ಪಳ್ಳಿ, ರಾಘವೇಂದ್ರ, ಗೋವಿಂದ ರಾವ್ ಹಾಗೂ ಇತರರು ಉಪಸ್ಥಿತರಿದ್ದರು.


Spread the love