ಟಿಪ್ಪು ಜಯಂತಿ ನೆಪದಲ್ಲಿ ಅತಿರೇಕ ಸಲ್ಲದು: ಶಾಫಿ ಸಅದಿ

Spread the love

ಟಿಪ್ಪು ಜಯಂತಿ ನೆಪದಲ್ಲಿ ಅತಿರೇಕ ಸಲ್ಲದು: ಶಾಫಿ ಸಅದಿ

ಬೆಂಗಳೂರು: ಮೈಸೂರು ಹುಲಿ ಟಿಪ್ಪು ಜಯಂತಿ ವಿಷಯದಲ್ಲಿ ಅತಿರೇಕದ ವರ್ತನೆ ಉಂಟಾದರೆ ಕೋಮುವಾದಿ ಶಕ್ತಿಗಳು ಅದರ ದುರ್ಲಾಭ ಪಡೆಯುವ ಅಪಾಯವಿದೆ. ಟಿಪ್ಪು ಜಯಂತಿಯನ್ನು ನಾಡಿನ ಜನತೆ ಯಾವುದೇ ಅತಿರೇಕಕ್ಕೆ ಆಸ್ಪದೆ ಕೊಡದೆ ಶಾಂತಿಯುತವಾಗಿ ಆಚರಿಸುವಂತೆ ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯಾಧ್ಯಕ್ಷ ಎನ್. ಕೆ. ಮುಹಮ್ಮದ್ ಶಾಫಿ ಸಅದಿ ಕರೆ ನೀಡಿದ್ದಾರೆ.

ಟಿಪ್ಪು ಜಯಂತಿಯು ಕೇವಲ ಮುಸ್ಲಿಮರ ಅಗತ್ಯ ಎಂಬಂತಹ ಹೇಳಿಕೆಗಳನ್ನು ಕೆಲವರು ನೀಡುತ್ತಿರುವುದು ಖೇದಕರ. ಟಿಪ್ಪು ಎಲ್ಲರ ದೊರೆಯಾಗಿದ್ದರು. ಆದುದರಿಂದ ಟಿಪ್ಪು ಜಯಂತಿಯು ಇಡೀ ನಾಡಿಗೆ ಸಂಬಂಧಿಸಿದ್ದು. ತನ್ನ ಆಡಳಿತ ಅವಧಿಯಲ್ಲಿ ರೈತಾಪಿ ವರ್ಗದ, ಶೋಷಿತರ ಬಾಳು ಬೆಳಗಿದ ಹಾಗು ಕನ್ನಡ ನಾಡಿನ ಹಲವು ಆರ್ಥಿಕ ಅಭಿವೃದ್ಧಿಗೆ ಅಡಿಪಾಯ ಹಾಕಿಕೊಟ್ಟಿರುವ ಆದರ್ಶ ದೊರೆಯ ವಿಷಯದಲ್ಲಿ ವಿವಾದ ಎಳೆದು ತರುವುದು ಇತಿಹಾಸಕ್ಕೆ ಮಾಡುವ ಅಪಚಾರವಾಗಿದೆ. ಟಿಪ್ಪು ಜಯಂತಿಯ ನೆಪದಲ್ಲಿ ಕೆಲವು ರಾಜಕೀಯ ಶಕ್ತಿಗಳು ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಹುನ್ನಾರವನ್ನು ಮಾಡಿದಂತೆ ತೋಚುತ್ತಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ, ಎಲ್ಲರು ಸಂಯಮ ಪಾಲಿಸಿ ಟಿಪ್ಪು ಜಯಂತಿಯನ್ನು ಆಚರಿಸಬೇಕಾಗಿದೆ. ಆ ಮೂಲಕ ಸಮಾಜಘಾತುಕ ಶಕ್ತಿಗಳ ಷಡ್ಯಂತ್ರವನ್ನು ಸೋಲಿಸೋಣ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಕರೆ ನೀಡಿದ್ದಾರೆ.


Spread the love