ಡಿವೈಎಫ್‍ಐ ವತಿಯಿಂದ ಮುಸ್ಲಿಂ ಯುವ ಸಮಾವೇಶ

Spread the love

ಡಿವೈಎಫ್‍ಐ ವತಿಯಿಂದ ಮುಸ್ಲಿಂ ಯುವ ಸಮಾವೇಶ

ಮಂಗಳೂರು: ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ ಹದಿನೈದರಷ್ಟಿರುವ ಮುಸ್ಲಿಂ ಸಮುದಾಯ ಇಂದು ಬಹುದೊಡ್ಡ ಬಿಕ್ಕಟ್ಟಿಗೆ, ಸಂಕಟಕ್ಕೆ ಗುರಿಯಾಗಿದೆ. ಸಮುದಾಯದ ಒಳಗೆ, ಹೊರಗೆ ಎರಡೂ ಕಡೆಗಳಲ್ಲಿ ಗಂಭೀರ ಸವಾಲುಗಳನ್ನು ಎದುರಿಸುತ್ತಿದೆ. ಉದ್ಯೋಗ, ಶಿಕ್ಷಣ, ಆರೋಗ್ಯ, ಆರ್ಥಿಕ ಸ್ಥಿತಿಗತಿಗಳಲ್ಲಿ ಮುಸ್ಲಿಮರು ದಲಿತ ಸಮುದಾಯಕ್ಕಿಂತಲೂ ಹಿಂದುಳಿದಿದ್ದಾರೆ ಎಂದು ಜಸ್ಟಿಸ್ ಸಾಚಾರ್ ಸಮಿತಿ ತನ್ನ ವರದಿಯಲ್ಲಿ ಬೊಟ್ಟು ಮಾಡಿದೆ.
ಸಾಮಾಜಿಕ ತಾರತಮ್ಯದಿಂದ ನರಳುತ್ತಿರುವ ಮುಸ್ಲಿಮರು ಸರಕಾರಗಳ ಅನಾದರಕ್ಕೆ ಗುರಿಯಾಗಿದ್ದಾರೆ. ಮುಸ್ಲಿಮರು ವಾಸಿಸುವ ಬಹುತೇಕ ಪ್ರದೇಶಗಳು ಕೊಳಗೇರಿಯಂತಾಗಿದೆ. ಸ್ಥಳೀಯ ಆಡಳಿತಗಳು ಮುಸ್ಲಿಂ ಬಾಹುಳ್ಯದ ಪ್ರದೇಶಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ದಿವ್ಯ ನಿರ್ಲಕ್ಷ್ಯ ತೋರಿಸುವುದು ದೇಶದೆಲ್ಲೆಡೆ ಕಣ್ಣಿಗೆ ರಾಚುತ್ತದೆ. ಕೇಂದ್ರ ರಾಜ್ಯ ಸರಕಾರಗಳ ಬಜೆಟ್ಗಳಲ್ಲಿ ಮುಸ್ಲಿಮರನ್ನು ನಿರ್ಲಕ್ಷಿಸಲಾಗುತ್ತಿದೆ. ಒಂದೆಡೆ ವ್ಯವಸ್ಥೆಯ ನಿರ್ಲಕ್ಷ್ಯಕ್ಕೊಳಗಾಗಿ ಹಸಿವು, ಬಡತನದಿಂದ ನರಳುತ್ತಿರುವ ಮುಸ್ಲಿಮರು ಇನ್ನೊಂದೆಡೆ ಹೆಚ್ಚುತ್ತಿರುವ ಕೋಮುವಾದದ ಬಲಿಪಶುಗಳಾಗಿದ್ದಾರೆ.
ಇಂತಹ ಅಸುರಕ್ಷಿತ ಸಂದರ್ಭದ ಉಪ ಉತ್ಪನ್ನ ಎಂಬಂತೆ ಮುಸ್ಲಿಮ್ ಯುವಜನರ ಹತಾಶೆಯನ್ನು ದುರ್ಬಳಕೆ ಮಾಡುವ ತೀವ್ರವಾದಿಗಳ ಜಾಲಕ್ಕೆ ಸಿಲುಕಿದ ಬೆರಳೆಣಿಕೆಯ ಯುವಜನರನ್ನೇ ಮುಂದಿಟ್ಟು ಹಲವಾರು ಅಮಾಯಕ ಯುವಜನರನ್ನು ಭಯೋತ್ಪಾದನೆಯ ಹೆಸರಲ್ಲಿ ಬಂಧಿಸಿ ವಿಚಾರಣೆಯಿಲ್ಲದೆ ವರ್ಷಗಟ್ಟಲೆ ಜೈಲಿನಲ್ಲಿ ಕೂಡಿ ಹಾಕಲಾಗುತ್ತಿದೆ.
ಇದೆಲ್ಲದರಿಂದ ಮುಸ್ಲಿಂ ಸಮುದಾಯದ ಸ್ಥಿತಿ ಗಂಭೀರ ಬಿಕ್ಕಟ್ಟಿಗೆ ಸಿಲುಕಿದೆ. ದೇಶದ ರಾಜಕೀಯ, ಸಾಮಾಜಿಕ ಸಂದರ್ಭದ ಈ ಎಲ್ಲಾ ಬೆಳವಣಿಗೆಗಳು ಬಲಿಪಶು ಸಮುದಾಯವಾದ ಮುಸ್ಲಿಮರನ್ನು ಅವಮಾನಿತ, ಅನುಮಾನಿತ ಸಮುದಾಯವಾಗಿ ನಿರೂಪಿಸಿದೆ.
ಇಂಥ ವಿಷಮ ಸ್ಥಿತಿಯಲ್ಲಿ ಸಮುದಾಯದ ಸವಾಲುಗಳ ಮೇಲೆ ಬೆಳಕು ಚೆಲ್ಲಬೇಕು; ನೋವು ನಲಿವುಗಳ ವಾಸ್ತವಗಳನ್ನು ಸಮಾಜದ ಮುಂದಿಡಬೇಕು; ಸಮುದಾಯದ ಬಗೆಗಿನ ಪೂರ್ವಾಗ್ರಹಗಳನ್ನು ಸಂಶಯಗಳನ್ನು ದೂರೀಕರಿಸಲು ಯತ್ನಿಸಬೇಕು; ಮುಸ್ಲಿಂ ಸಮುದಾಯಕ್ಕೆ ಆತ್ಮವಿಶ್ವಾಸ ತುಂಬುವ, ರಾಜಕೀಯ, ಶೈಕ್ಷಣಿಕ, ಆರ್ಥಿಕ ಕ್ಷೇತ್ರಗಳಲ್ಲಿ ತಮ್ಮ ನ್ಯಾಯಯುತ ಪಾಲನ್ನು ಪಡೆಯುವ ನಿಟ್ಟಿನಲ್ಲಿ ಸಂಘಟಿತ ಪ್ರಯತ್ನ ನಡೆಯಬೇಕು – ಎಂಬ ಆಶಯದೊಂದಿಗೆ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (ಡಿವೈಎಫ್‍ಐ) ಎರಡು ದಿನಗಳ ‘ಮುಸ್ಲಿಂ ಯುವ ಸಮಾವೇಶ’ ಹಮ್ಮಿಕೊಂಡಿದೆ.
ಮೇ 14, 15ರಂದು ಮಂಗಳೂರಿನ ಬಲ್ಮಠದ ಶಾಂತಿನಿಲಯದಲ್ಲಿ ನಡೆಯುವ ಸಮಾವೇಶದಲ್ಲಿ ಸಮುದಾಯದ ಸಮಸ್ಯೆಗಳು ಹಾಗೂ ಪರಿಹಾರದ ಮೇಲೆ ಬೆಳಕು ಚೆಲ್ಲುವ ಗೋಷ್ಠಿಗಳು ಮತ್ತು ಸಂವಾದ ನಡೆಯಲಿವೆ. ಡಿವೈಎಫ್‍ಐ ರಾಷ್ಟ್ರೀಯ ಅಧ್ಯಕ್ಷ ಮುಹಮ್ಮದ್ ರಿಯಾಜ್ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ. ಮಜಾಫರ್ ಅಸ್ಸಾದಿ, ಸಾಹಿತಿ ಭಾನು ಮುಸ್ತಾಕ್, ರಹಮತ್ ತರೀಕೆರೆ, ರಂಜಾನ್ ದರ್ಗಾ, ಮಾಜಿ ಸಚಿವ ಬಿ.ಎ. ಮೊಯ್ದಿನ್, ದಿನೇಶ್ ಅಮೀನ್ ಮಟ್ಟು, ಜಿ.ವಿ. ಶ್ರೀರಾಮರೆಡ್ಡಿ, ಅಬ್ದುಸ್ಸಲಾಂ ಪುತ್ತಿಗೆ ಸಹಿತ ರಾಜ್ಯದ ಮುಸ್ಲಿಂ ಸಮುದಾಯದ ಹಾಗೂ ಇತರೆ ಬರಹಗಾರರು, ಚಿಂತಕರು, ಸಾಹಿತಿಗಳು ಎರಡು ದಿನಗಳ ಕಾಲ ನಡೆಯುವ ಯುವ ಸಮಾವೇಶದಲ್ಲಿ ಸಮುದಾಯದ ನಿಜ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲಿದ್ದಾರೆ, ವಿಚಾರ ಮಂಡಿಸಲಿದ್ದಾರೆ.


Spread the love