ಡಿಸೆಂಬರ್ 18 ರಂದು ತು.ರ.ವೇಯಿಂದ ಜಿಲ್ಲಾಧಿಕಾರಿ ಕಚೇರಿ ಚಲೋ  

Spread the love

ಡಿಸೆಂಬರ್ 18 ರಂದು ತು.ರ.ವೇಯಿಂದ ಜಿಲ್ಲಾಧಿಕಾರಿ ಕಚೇರಿ ಚಲೋ  

ಮಂಗಳೂರು :ಗ್ರಾಮಾಂತರ ರಿಕ್ಷಾ ಚಾಲಕರಿಗೆ ಮಂಗಳೂರು ನಗರ ಪ್ರವೇಶ ನಿಷೇಧಿಸಿರುವ ಜಿಲ್ಲಾಡಳಿತದ ಧೋರಣೆಯನ್ನು ವಿರೋಧಿಸಿ ಹಾಗೂ ರಿಕ್ಷಾ ಚಾಲಕರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ತುಳುನಾಡ ರಕ್ಷಣಾ ವೇದಿಕೆ ಮಂಗಳೂರು ವಿಧಾನ ಸಭಾ ಕ್ಷೇತ್ರ ವತಿಯಿಂದ ಇದೇ ಸೋಮವಾರ ಡಿಸೆಂಬರ್ 18ರಂದು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಬೃಹತ್ ಪ್ರತಿಭಟನಾ ಸಭೆಯನ್ನು ಹಮ್ಮಿಕೊಂಡಿರುತ್ತದೆ.

ಈ ಪ್ರತಿಭಟನಾ ಸಭೆಯಲ್ಲಿ ಎಲ್ಲಾ ಗ್ರಾಮಾಂತರ ರಿಕ್ಷಾ ಚಾಲಕರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ದಕ್ಷಿಣ ಕನ್ನಡ ಜಿಲ್ಲೆಯ ತೊಕ್ಕೊಟ್ಟು ಉಳ್ಳಾಲ ದೇರಳಕಟ್ಟೆ ಸೋಮೇಶ್ವರ, ಕೋಟೆಕಾರ್, ಕುತ್ತಾರ್, ಕೊಣಾಜೆ, ಮುಡಿಪು, ಬೋಳ್ಯಾರ್, ಬಿ.ಸಿ ರೋಡ್, ಫರಂಗಿಪೇಟೆ, ಒಳಚ್ಚಿಲ್, ವಾಮಂಜೂರು, ಮಂಗಳಜ್ಯೋತಿ, ನೀರುಮಾರ್ಗ, ಕಲ್ಪನೆ ಮುಂತಾದ ಪ್ರದೇಶಗಳು ಮಂಗಳೂರು ನಗರಕ್ಕೆ ಅತ್ಯಂತ ಸಮೀಪದಲ್ಲಿದ್ದು, ಈ ಎಲ್ಲಾ ಪ್ರದೇಶಗಳು ನಗರ ಪಾಳಿಕೆಯಷ್ಟೇ ಜನಸಂಖ್ಯೆಯನ್ನು ಹೊಂದಿಕೊಂಡಿದೆ.

ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 15,000ಕ್ಕಿಂತ ಹೆಚ್ಚು ರಿಕ್ಷಾಗಳು ಬಾಡಿಗೆ ಮಾಡುತ್ತಿದ್ದು, ಮೇಲಿನ ಎಲ್ಲಾ ಪ್ರದೇಶದ ಜನರ ಪ್ರಮುಖ ಖರೀದಿ, ವೈದ್ಯಕೀಯ ಸೇವೆ, ಶಾಲಾ ಕಾಲೇಜುಗಳಿಗೆ ಮಂಗಳೂರು ನಗರವನ್ನೇ ಅವಲಂಬಿಸಿಕೊಂಡಿರುವುದರಿಂದ “ಅನೇಕ ಪ್ರಯಾಣಿಕರು ರಿಕ್ಷಾ ಮೂಲಕ ಮಂಗಳೂರು ನಗರಕ್ಕೆ ತುರ್ತು ಸೇವೆಗಾಗಿ ಬರುವವರಿಗೆ ನಗರ ಪ್ರದೇಶದಲ್ಲಿ ಬಿಟ್ಟು ಹೋಗಲು ಈ ಹಿಂದೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಸಮ್ಮುಖದಲ್ಲಿ ನಗರದ ಸಭೆಯಲ್ಲಿ ಗ್ರಾಮಾಂತರ ಪ್ರದೇಶದ ರಿಕ್ಷಾಗಳು ನಗರ ಪ್ರದೇಶಕ್ಕೆ ಬಾಡಿಗೆ ತರಬಹುದು. ಆದರೆ ರಿಕ್ಷಾ ನಿಲ್ದಾಣದಲ್ಲಿ ನಿಂತು ಬಾಡಿಗೆ ಮಾಡುವಂತಿಲ್ಲ” ಎಂಬ ಷರತ್ತಿನೊಂದಿಗೆ ಗ್ರಾಮಾಂತರ ಮತ್ತು ನಗರ ಎಂಬ ಎರಡು ವಲಯಗಳನ್ನಾಗಿ ಮಾಡಿ ಬಾಡಿಗೆ ಮಾಡುವ ಪ್ರದೇಶವನ್ನು ನಿಗದಿಪಡಿಸಿದೆ.

ಆದರೆ ಇತ್ತೀಚಿನ ದಿನಗಳಲ್ಲಿ ಕೆಲವೊಂದು ಸಂದರ್ಭದಲ್ಲಿ ತೊಕ್ಕೊಟ್ಟಿನಿಂದ ಆಸ್ಪತ್ರೆಗೆ ರೋಗಿಗಳನ್ನು ಕರೆದು ತರುವ ಸಂದರ್ಭದಲ್ಲಿ ಪೋಲೀಸರು ತಡೆದು ನಿಲ್ಲಿಸಿ ಕೇಸುಗಳನ್ನು ದಾಖಲು ಮಾಡುತ್ತಿದ್ದಾರೆ. ಈ ಬಗ್ಗೆ ಮೇಲಿನ ವಿವರಣೆ ನೀಡಿದರೆ ಅದನ್ನು ಆದೇಶ ರೂಪದಲ್ಲಿ ನೀಡುವಂತೆ ಕೇಳತ್ತಾರೆ. ಈ ಬಗ್ಗೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಜೊತೆ ನಮ್ಮ ರಿಕ್ಷಾ ಚಾಲಕರು ಭೇಟಿ ಮಾಡಿ ಚರ್ಚೆ ಮಾಡಿದಾಗ ಅಧಿಕಾರಿಗಳು ಸಹ ಇದು ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ನೋಟಿಫಕೇಶನ್‍ನಲ್ಲಿ ಮೇಲಿನ ಅಂಶವನ್ನು ಸೇರಿಸಬಹುದಾಗಿದೆ ಎಂದು ಅಭಿಪ್ರಾಯವನ್ನು ನೀಡಿರುತ್ತಾರೆ. ಮೇಲಿನ ನಿಯಮವನ್ನು ಆದೇಶ ರೂಪದಲ್ಲಿ ನೀಡದೆ ಇದ್ದರೆ ರಿಕ್ಷಾ ಚಾಲಕರಿಗೆ ಎಲ್ಲಾ ಸಂದರ್ಭಗಳಲ್ಲಿಯೂ ಪೋಲೀಸ್ ಮತ್ತು ಇತರ ಅಧಿಕಾರಿಗಳ ಬಲೆಗೆ ಬಿದ್ದು ದುಡಿದ ದುಡಿಮೆಯನ್ನು ದಂಡ ಪಾವತಿಸುವುದಕ್ಕೆ ಮತ್ತು ರಿಕ್ಷಾ ಚಾಲಕರಿಗೆ ಮಾನಸಿಕವಾಗಿ ಹಿಂಸೆಯನ್ನು ಅನುಭವಿಸಬೇಕಾಗುತ್ತದೆ. ನಗರಕ್ಕೆ ಆರ್.ಟಿ.ಒ ಕೆಲಸಗಳಿಗಾಗಿ ಗ್ಯಾಸ್ ತುಂಬಿಸಲಿಕ್ಕಾಗಿ ಮತ್ತು ಗ್ಯಾರೇಜಿಗಾಗಿ, ಬಿಡಿಭಾಗಗಳ ಖರೀದಿಗಾಗಿ ಗ್ರಾಮಾಂತರ ರಿಕ್ಷಾಗಳನ್ನು ನಗರ ಪ್ರದೇಶಕ್ಕೆ ತರಬೇಕಾದ ಅನಿವಾರ್ಯತೆ ಇದೆ. ಆದರೆ ತುರ್ತು ಸಂದರ್ಭದಲ್ಲಿ ಬಾಡಿಗೆಯನ್ನು ತಂದು ಬಿಡಲು ಅವಕಾಶವಿಲ್ಲ ಎಂದಾದರೆ ಸಾರ್ವಜನಿಕರಿಗೆ ಯಾವ ರೀತಿಯ ಉತ್ತರವನ್ನು ನೀಡಬೇಕೆಂದು ಪ್ರಶ್ನೆಯಾಗಿ ಉಳಿದಿದೆ. ಮಂಗಳೂರು ನಗರ ವ್ಯಾಪ್ತಿ ಬಿಟ್ಟು ಉಳಿದ ಎಲ್ಲಾ ಪ್ರದೇಶವನ್ನು ಗ್ರಾಮಾಂತರ ಪ್ರದೇಶವೆಂದು ಪರಿಗಣಿಸಲು ಈ ಮೂಲಕ ಕೇಳಿಕೊಳ್ಳುತ್ತೇವೆ. ಆದುದರಿಂದ ಈ ತೊಂದರೆಯನ್ನು ನಿವಾರಿಸಲು ಕಾನೂನಿನಲ್ಲಿ ತಿದ್ದುಪಡಿಯನ್ನು ತರಬೇಕಾಗಿ ಒತ್ತಾಯಿಸುವ ಬೃಹತ್ ಹಕ್ಕೊತ್ತಾಯ ಪ್ರತಿಭಟನಾ ಸಭೆಯನ್ನು ದಿನಾಂಕ 18-12-2017ನೇ ಸೋಮವಾರ  ಬೆಳಿಗ್ಗೆ 11.00 ಗಂಟೆಗೆ ಸರಿಯಾಗಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ನಡೆಯಲಿದೆ.

ಬೇಡಿಕೆಗಳು:1. ಗ್ರಾಮಾಂತರ ರಿಕ್ಷಾಗಳನ್ನು ನಗರ ಪ್ರವೇಶಕ್ಕೆ ನಿಷೇಧ ಹೇರಿರುವ ಜಿಲ್ಲಾಡಳಿತದ ಆದೇಶವನ್ನು ಹಿಂಪಡೆಯಬೇಕು.2. ಬಾಡಿಗೆ ಪರವಾನಿಗೆಯನ್ನು ಪುನರ್ ಪರಿಶೀಲಿಸಬೇಕು.3. ರಿಕ್ಷಾ ಚಾಲಕರಿಗೆ ನೀಡುವ ಬ್ಯಾಡ್ಜ್ ಪರ್ಮಿಟಿಗೆ ವಿಧಿಸಿದ ಕನಿಷ್ಠ ವಿಧ್ಯಾರ್ಹತೆಯ ಮಾನ ದಂಡವನ್ನು ವೈಜ್ಞಾನಿಕವಾಗಿ ರೂಪಿಸಬೇಕು.4. ರಿಕ್ಷಾ ಚಾಲಕರಿಂದ ಪಡೆಯುತ್ತಿರುವ ಅಧಿಕ ಮೊತ್ತದ ವಾರ್ಷಿಕ ಇನ್‍ಸೂರೆನ್ಸ್ ಪ್ರೀಮಿಯಂ ಹಣವನ್ನು ಕಡಿತಗೊಳಿಸಬೇಕು.5. ರಿಕ್ಷಾ ಚಾಲಕರು ರಾತ್ರಿ ಹಗಲೆನ್ನದೆ ಸಾರ್ವಜನಿಕರ ಸೇವೆಗೆ ಲಭ್ಯವಾಗುತ್ತಿದ್ದು ಇವರಿಗೆ ಸರಕಾರ ಸೂಕ್ತ ಭದ್ರತೆಯನ್ನು ಒದಗಿಸಬೇಕು.


Spread the love