ಡೆಂಗ್ಯು : ಶಾಲಾ-ಕಾಲೇಜು ಆವರಣ ಸ್ವಚ್ಛತೆ –ಅಭಿಯಾನ ನಡೆಸಲು ಸೂಚನೆ 

Spread the love

ಡೆಂಗ್ಯು : ಶಾಲಾ-ಕಾಲೇಜು ಆವರಣ ಸ್ವಚ್ಛತೆ –ಅಭಿಯಾನ ನಡೆಸಲು ಸೂಚನೆ 

ಮಂಗಳೂರು : ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳ ಆವರಣದಲ್ಲಿ ಹಾಗೂ ಕಟ್ಟಡ ಆವರಣದಲ್ಲಿ ಸಾಂಕ್ರಾಮಿಕ ರೋಗಗಳಿಗೆ ಕಾರಣ ಆಗುವ ಯಾವುದೇ ರೀತಿಯ ಚಟುವಟಿಕೆಗಳಿಗೆ ಆಸ್ಪದ ನೀಡದಂತೆ, ಸಂಪೂರ್ಣ ಸ್ವಚ್ಛತಗೊಳಿಸಲು ಅಭಿಯಾನ ನಡೆಸಲು ನಗರಪಾಲಿಕೆ ಜಂಟಿ ಆಯುಕ್ತರಾದ ಗಾಯತ್ರಿ ನಾಯಕ್ ಸೂಚಿಸಿದ್ದಾರೆ.

ಅವರು ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಾಂಕ್ರಮಿಕ ರೋಗಗಳ ನಿಯಂತ್ರಣ ಕುರಿತು ಜನಜಾಗೃತಿ ಉಪ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶಾಲಾ-ಕಾಲೇಜುಗಳ ಕಟ್ಟಡಗಳ ತಾರಸಿ, ಮೇಲ್ಚಾವಣಿಯಲ್ಲಿ ಹಾಗೂ ಶಾಲಾ ಕಟ್ಟಡದ ಸುತ್ತಮುತ್ತ ನೀರು ನಿಲ್ಲದಂತೆ ಗಮನ ಹರಿಸಬೇಕು. ಈ ಹಿನ್ನಲೆಯಲ್ಲಿ ಶಾಲಾ ಕಟ್ಟಡಗಳ ಮೂಲೆ ಮೂಲೆಗಳನ್ನು ಪರಿಶೀಲನೆ ನಡೆಸಬೇಕು. ಆಯಾ ಶಾಲಾ ಮುಖ್ಯೋಪಾಧ್ಯಾಯರ ನೇತೃತ್ವದಲ್ಲಿ ಶಾಲಾಶಿಕ್ಷಕರು ಹಾಗೂ ಹಿರಿಯ ವಿದ್ಯಾರ್ಥಿಗಳನ್ನು ಈ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಶಾಲಾ ಆಟದ ಮೈದಾನ, ನೀರಿನ ಟ್ಯಾಂಕ್, ಶೌಚಾಲಯ ಮತ್ತಿತರ ಸ್ಥಳಗಳಲ್ಲಿ ತಪಾಸಣೆ ನಡೆಸಿ ಮಲೇರಿಯಾ, ಡೆಂಗ್ಯೂ ರೋಗಗಳಿಗೆ ಕಾರಣವಾಗುವ ಯಾವುದೇ ರೀತಿಯ ಅಂಶಗಳು ಸೃಷ್ಠಿಯಾಗದಂತೆ ಹಾಗೂ ನೀರು ನಿಲ್ಲದಂತೆ ಗಮನ ಹರಿಸಬೇಕು ಎಂದು ಅವರು ಸೂಚಿಸಿದರು. ಈ ಬಗ್ಗೆ ಪ್ರತೀ ನಿತ್ಯ ಜಿಲ್ಲಾಡಳಿತಕ್ಕೆ ವರದಿ ನೀಡಲು ತಿಳಿಸಿದರು.

ಪ್ರತಿನಿತ್ಯ ಶಿಕ್ಷಕರು ವಿದ್ಯಾರ್ಥಿಗಳಿಗೆ ಸಾಂಕ್ರಮಿಕ ರೋಗಗಳ ನಿಯಂತ್ರಣ ಬಗ್ಗೆ ತಿಳುವಳಿಕೆ ಹೇಳಬೇಕು. ಇದರ ಬಗ್ಗೆ ಜಾಗೃತಿ ಮೂಡಿಸುವ ಪೂರಕವಾದ ಸಾಕ್ಷ್ಯ ಚಿತ್ರಗಳನ್ನು ಪ್ರದರ್ಶಿಸಬೇಕು. ಶಾಲಾ ಕಾಲೇಜುಗಳಲ್ಲಿರುವ ಎನ್,ಎಸ್.ಎಸ್, ಎನ್.ಸಿ.ಸಿ ತಂಡಗಳನ್ನು ಬಳಸಿಕೊಳ್ಳಬೇಕು ಎಂದು ಅವರು ಹೇಳಿದರು. ಈ ಚಟುವಟಿಕೆಗಳನ್ನು ಮುಂದಿನ ಒಂದು ತಿಂಗಳಲ್ಲಿ ನಿರಂತರವಾಗಿ ನಡೆಸಲು ಅವರು ಸೂಚಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಿವರಾಮಯ್ಯ ಮಾತನಾಡಿ, ಈಗಾಗಲೇ ಶಾಲೆಗಳಿಗೂ ತಮ್ಮ ಆವರಣವನ್ನು ಸ್ವಚ್ಛವಾಗಿಟ್ಟು, ನೀರು ನಿಲ್ಲದಂತೆ ಎಚ್ಚರಿಕೆ ವಹಿಸಲು ತಿಳಿಸಲಾಗಿದೆ. ಇದನನು ನಿರಂತರವಾಗಿ ಗಮನಿಸಲಾಗುತ್ತಿದೆ ಎಂದು ಹೇಳಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ವಾಸುದೇವ ಕಾಮತ್, ಕಾಲೇಜು ಶಿಕ್ಷಣ ಇಲಾಖೆ ವಿಶೇಷಾಧಿಕಾರಿ ಶ್ರೀಧರ ಮಣಿಯಾನಿ, ಆರೋಗ್ಯ ಇಲಾಖೆ ಅಧಿಕಾರಿಗಳಾದ ಡಾ. ರಾಜೇಶ್, ಡಾ. ದುರ್ಗಾಕುಮಾರ್, ಜಿಲ್ಲಾ ವಾರ್ತಾಧಿಕಾರಿ ಖಾದರ್ ಷಾ ಉಪಸ್ಥಿತರಿದ್ದರು.


Spread the love