ತಮ್ಮವರ ಪತ್ತೆಗೆ ಪ್ರಧಾನಿ ಮೋದಿಯನ್ನು ಭೇಟಿ ಮಾಡಿದ ಮೀನುಗಾರ ನಾಯಕರು

Spread the love

ತಮ್ಮವರ ಪತ್ತೆಗೆ ಪ್ರಧಾನಿ ಮೋದಿಯನ್ನು ಭೇಟಿ ಮಾಡಿದ ಮೀನುಗಾರ ನಾಯಕರು

ಉಡುಪಿ: ಅಖಿಲ ಭಾರತ ಮೀನುಗಾರ ವೇದಿಕೆಯ ನೇತೃತ್ವದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಬೋಟ್ ಹಾಗೂ 7 ಮಂದಿ ಮೀನುಗಾರರನ್ನು ಶೀಘ್ರವಾಗಿ ಪತ್ತೆ ಹಚ್ಚಲು ವಿಶೇಷ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಲಾಯಿತು.

ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಪ್ರಧಾನಿ ಮೀನುಗಾರರ ಪತ್ತೆಗೆ ಸಕಲ ರೀತಿಯಲ್ಲಿ ಸಹಕರಿಸಿ ಮೀನುಗಾರರು ಸುರಕ್ಷಿತವಾಗಿ ಮರಳಿ ಬರಲು ಸರ್ವ ಕ್ರಮಗಳನ್ನು ಕೈಗೊಳ್ಳುವ ಭರವಸೆ ನೀಡಿದರು.

ಇದೇ ವೇಳೆ ಮೀನುಗಾರಿಕೆಗೆ ಸಂಬಂಧಿಸಿದ ವಿವಿಧ ಬೇಡಿಕೆಗಳಾದ ಮೀನುಗಾರಿಕೆ ಬಳಸುವ ಡೀಸೆಲ್ ಮೇಲಿನ ರೋಡ್ ಸೆಸ್ ವಿನಾಯಿತಿ, ಮೀನುಗಾರಿಕೆಗೆ ಸಂಬಂಧಪಟ್ಟ ಚಟುವಟಿಕೆಗಳಿಗೆ ಜಿಎಸ್ಟಿ ವಿನಾಯಿತಿ, ಮೀನುಗಾರಿಕೆಗೆ ಕೇಂದ್ರ ಸರ್ಕಾರದ ಪ್ರತ್ಯೇಕ ಸಚಿವಾಲಯ, 60 ವರ್ಷ ಮೇಲ್ಪಟ್ಟ ಮೀನುಗಾರರಿಗೆ ಪಿಂಚಣಿ ಸೌಲಭ್ಯ, ಮೀನುಗಾರಿಕೆಗೆ ಬಳಸುವ ಸೀಮೆ ಎಣ್ಣೆ ಪ್ರಮಾಣದಲ್ಲಿ ಹೆಚ್ಚಳ, ಪ್ರತ್ಯೇಕ ಮೀನುಗಾರಿಕ ಕೈಗಾರಿಕಾ ವಲಯ ಹಾಗೂ ಮೀನುಗಾರಿಕೆಯ ಅಭಿವೃದ್ಧಿಗೆ ಸಮಗ್ರ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ವಿನಂತಿಸಲಾಯಿತು.

ಈ ಸಂದರ್ಭದಲ್ಲಿ ನಿಯೋಗದ ನೇತೃತ್ವ ವಹಿಸಿದ ಅಖಿಲ ಭಾರತ ಮೀನುಗಾರ ವೇದಿಕೆಯ ಅಧ್ಯಕ್ಷರಾದ ವೆಲ್ಜಿ ಭಾಯಿ ಮಸಾನಿ, ಗುಜರಾತ್ ಸಂಸದರಾದ ರಾಜೇಶ್ ಭಾಯಿ ಚುಡಸಮ, ಮೀನು ಮಾರಾಟ ಫೆಡರೇಷನ್ ಅಧ್ಯಕ್ಷರಾದ ಯಶ್ ಪಾಲ್ ಸುವರ್ಣ, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷರಾದ ಸತೀಶ್ ಕುಂದರ್, ದಯಾನಂದ ಸುವರ್ಣ, ಕರುಣಾಕರ ಸಾಲ್ಯಾನ್, ಕಿಶೋರ್ ಸುವರ್ಣ, ಅನಿಲ್, ನಿತಿನ್ ಕುಮಾರ್, ಮನೋಹರ್ ಬೋಳೂರು ಮೊದಲಾದವರು ಉಪಸ್ಥಿತರಿದ್ದರು.


Spread the love