ತುಳು ಕಾವ್ಯಯಾನ ಭಾಷೆಯ ಬೆಳವಣಿಗೆಗೆ ಪೂರಕ : ಹರಿಕೃಷ್ಣ ಪುನರೂರು

Spread the love

ತುಳು ಕಾವ್ಯಯಾನ ಭಾಷೆಯ ಬೆಳವಣಿಗೆಗೆ ಪೂರಕ : ಹರಿಕೃಷ್ಣ ಪುನರೂರು

ತುಳುವರ್ಲ್ಡ್ ಸಂಸ್ಥೆಯು ತುಳು ಕಾವ್ಯಯಾನವನ್ನು ಆರಂಭಿಸಿರುವುದು ಶ್ಲಾಘನೀಯ ತುಳು ಕಾವ್ಯಗಳ ಅಧ್ಯಯನ ಮತ್ತು ವಾಚನ ಪ್ರವಚನಗಳಿಂದ ತುಳುಭಾಷೆಯ ವ್ಯಾಕರಣ ಮತ್ತು ಶಬ್ದಭಂಡಾರ ಗಳ ಪರಿಚಯ ಆಗುತ್ತದೆ ಎಂದು ಹರಿಕೃಷ್ಣ ಪುನರೂರು ಅವರು ಅಭಿಪ್ರಾಯಪಟ್ಟರು.ಅವರು ತುಳುವಿನ ಮಹಾ ಕವಿಗಳಲ್ಲಿ ಒಬ್ಬರಾದ ಕೆದಂಬಾಡಿ ಜತ್ತಪ್ಪ ರೈಗಳ ಅಸನಿ ಯಾಗ ಕಾಂತಗ ಜೋಗಿ ಕಾವ್ಯದ ವಾಚನ ಮತ್ತು ಪ್ರವಚನ ಕಾರ್ಯಕ್ರಮವನ್ನು ಮಂಗಳೂರಿನ ಪೊಲೀಸ್ ಲೇನ್ನಲ್ಲಿರುವ ಮುನೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ತುಳುವರ್ಲ್ಡ್ ಮಂಗಳೂರು ನೇತೃತ್ವದಲ್ಲಿ ನಡೆದ ತುಳು ಕಾವ್ಯಯಾನ ೨ ಮತ್ತು ಪ್ರಜ್ವಲ್ ಆಕ್ಟಿಂಗ್ ಕ್ಲಾಸಿನ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರವೀಣ್ ಕುಮಾರ್ ಕೊಡಿಯಲ್ ಬೈಲ್, ಸದಸ್ಯರು ತುಳು ಅಧ್ಯಯನ ಪೀಠ ಮಂಗಳೂರು ವಿಶ್ವವಿದ್ಯಾನಿಲಯ ಇವರು ಮಾತನಾಡಿ ತುಳು ಭಾಷೆಯ ಬಗ್ಗೆ ಮಾತನಾಡುವವರು ಜಾಸ್ತಿ ವಿನಹ ಕಾರ್ಯಪ್ರವೃತ್ತರಾಗುವ ಸಂಖ್ಯೆ ಬಹಳ ಕಡಿಮೆ, ಪ್ರತಿಯೊಬ್ಬರೂ ಒಮ್ಮತದಿಂದ ಹೋರಾಟ ಮನೋಭಾವದಿಂದ ಕಾರ್ಯಪ್ರವೃತ್ತರಾದರೆ ಮಾತ್ರ ತುಳು ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಸಾಧ್ಯವಾಗುತ್ತದೆ ಎಂದರು. ಮುಖ್ಯ ಅತಿಥಿಗಳಾಗಿ ಖ್ಯಾತ ತುಳು ವಿದ್ವಾಂಸ ಡಾ. ವೈ ಎನ್ ಶೆಟ್ಟಿ ಮಾತನಾಡಿ ತುಳುವಿನ ಲಿಪಿ ಮತ್ತು ಸಂಸ್ಕೃತಿಯನ್ನು ಎರಕಹೊಯ್ದ ಕೇರಳ ಇಂದು ಜಗತ್ತಿನಲ್ಲಿ ಶ್ರೇಷ್ಠ ನಾಗರೀಕತೆಯನ್ನು ಹೊಂದಿದೆ. ನಮ್ಮ ತಂಞನ (ತಂಗಳನ್ನ) ಮಲಯಾಳದಲ್ಲಿ ಪಯಾಂಕಂಜಿ ಅದಕ್ಕೆ ಯುನೆಸ್ಕೊ ಜಗತ್ತಿನ ಅತ್ಯಂತ ಶ್ರೇಷ್ಠ ಉಪಹಾರ ಎಂದು ಮಾನ್ಯತೆ ನೀಡಿದೆ. ಇಂದು ತುಳು ಭಾಷೆ ಯುವಜನರನ್ನು ತುಂಬಾ ಆಕರ್ಷಿಸುತ್ತಿದೆ ಇಂಗ್ಲೀಷ್‌ ಬಿಟ್ಟು ತುಳುವಲ್ಲಿ ಮಾತನಾಡಲು ಅಭಿಮಾನ ಪಡುತ್ತಿದ್ದಾರೆ ಇದು ತುಳು ಭಾಷೆಯ ಬೆಳವಣಿಗೆಯ ಲಕ್ಷಣ ಎಂದರು.

ಸಿನಿಮಾ ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ,, ಸಿನಿಮಾ ನಟ ಪ್ರಣವ್ ಹೆಗ್ದೆ, ಕಲಾವಿದ ಕುಮಾರ್ ಸಾಲ್ಮಾರ್, ಕಾಸರಗೋಡು ಗಡಿನಾಡ ಸಾಂಸ್ಕೃತಿಕ ಅಕಾಡೆಮಿಯ ಝೆಡ್. ಎ. ಕೈಯಾರ ಕಲಾವಿದ ಶರತ್ ಆಳ್ವ ರಾಷ್ಟ್ರೀಯ ಕನ್ನಡಸಿರಿ ಉತ್ಸವದ ಪ್ರಧಾನ ಕಾರ್ಯದರ್ಶಿ ಭಾಸ್ಕರ ಕಾಸರಗೋಡು, ಜಾನಪದ ಪರಿಷತ್ ಬೆಂಗಳೂರು ಇದರ ಕಾಸರಗೋಡು ಗಡಿನಾಡ ಘಟಕದ ಅಧ್ಯಕ್ಷ ಎ.ಆರ್ ಸುಬ್ಬಯ ಕಟ್ಟೆ, ಮಾಧವ ಭಂಡಾರಿ, ಮುರಳಿ ಉಪ್ಪಂಗಳ ಮೊದಲಾದವರು ಉಪಸ್ಥಿತರಿದ್ದರು.

ತುಳುವರ್ಲ್ಡ್ ಸಮ್ಮಾನ್

ಫಾರೆಸ್ಟ್ ಅಂಡ್ ಎನ್ವಿರೋ ಕ್ರಿಯೇಟರ್ಸ್ ಫೌಂಡೇಶನ್ ಗುಜರಾತ್ ಇದರ ಸ್ಥಾಪಕ. ಭಾರತದಾದ್ಯಂತ ಸುಮಾರು ನಲವತ್ತಕ್ಕೂ ಹೆಚ್ಚು ಬಂಜರು ಭೂಮಿಗಳಲ್ಲಿ ಕಾಡುಗಳನ್ನು ಬೆಳೆಸಿದ ಪರಿಸರಸ್ನೇಹಿ, ಗುಜರಾತಿನಲ್ಲಿ ಸುಮಾರು 16 ಸಾವಿರಕ್ಕಿಂತ ಹೆಚ್ಚು ಮಂದಿಗೆ ಉದ್ಯೋಗ ಅವಕಾಶ ಮಾಡಿಕೊಟ್ಟ. ತುಳುನಾಡಿನ ಮುಟ್ಟಾಳೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಪಡಿಸಿದ ಡಾ. ಆರ್. ಕೆ. ನಾಯರ್ ಹಾಗೂ ತುಳು ರಂಗಭೂಮಿಯ ಭೀಷ್ಮ. ಪ್ರಸ್ತುತ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಸನ್ಮಾನಿತ ವಿಜಯಕುಮಾರ್ ಕೊಡಿಯಾಲಬೈಲ್ ಅವರಿಗೆ ತುಳು ವರ್ಲ್ಡ್ ಸಮ್ಮಾನ್ ನೀಡಿ ಗೌರವಿಸಲಾಯಿತು.

ತುಳುವರ್ಲ್ಡ್ ಪ್ರಜ್ವಲ್ ಆಕ್ಟಿಂಗ್ ಕ್ಲಾಸ್ ತರಬೇತುದಾರರಾದ ಡಾ. ಅಶೋಕ್ ಕುಮಾರ್ ಕಾಸರಗೋಡು, ಜಿ. ಎ. ಬೋಳಾರ್, ಪ್ರಜ್ವಲ್ ಪೂಜಾರಿ, ರೂಪೇಶ್ ರೋಹಿತ್ ಶೆಟ್ಟಿ, ಅನ್ವಿತಾ ಅರವಿಂದ್ ಇವರನ್ನು ಅಭಿನಂದಿಸಲಾಯಿತು. ಕೆದಂಬಾಡಿ ಜತ್ತಪ್ಪ ರೈಗಳ ಅಸನಿಯಾಗಿ ಕಾಂತಗ ಜೋಗಿ ಕಾವ್ಯದ ವಾಚನವನ್ನು ಪ್ರಶಾಂತ್ ರೈ ಪುತ್ತೂರು ಮತ್ತು ಅಮೃತಾ ಅಡಿಗ ಪಾಣಾಜೆ ಇವರ ಸುಶ್ರಾವ್ಯ ಕಂಠದಲ್ಲಿ ವಾಚಿಸಿದರೆ, ತುಳುನಾಡಿನಲ್ಲಿ ನಡೆದ ಘಟನೆಯಂತೆ ಇರುವ ಈ ಕಾವ್ಯದ ಪ್ರವಚನವನ್ನು ಭಾಸ್ಕರ್ ರೈ ಕುಕ್ಕುವಳ್ಳಿ ಮನೋಜ್ಞವಾಗಿ ಮನವರಿಕೆ ಮಾಡಿದರು ಮತ್ತು ಮದ್ದಳೆಯಲ್ಲಿ ಕೌಶಲ್ ಮೂಡಬಿದ್ರೆ ಸಹಕರಿಸಿದರು. ಈ ಸಂದರ್ಭದಲ್ಲಿ ತುಳು ವರ್ಲ್ಡ್ ಚಾನಲ್ ನಲ್ಲಿ ಪ್ರಸಾರವಾಗುವ ಅನಾವರಣ ಕಾರ್ಯಕ್ರಮದ ಬಿಡುಗಡೆ ನಡೆಯಿತು. ಪತ್ರಕರ್ತ ರವಿ ನಾಯ್ಕಾಪು ಕಾರ್ಯಕ್ರಮ ನಿರೂಪಿಸಿದರು. ಡಾ. ರಾಜೇಶ್ ಆಳ್ವ ಸ್ವಾಗತಿಸಿದರು.


Spread the love