ತುಳು ನಾಟಕ ಕಲಾವಿದರ ಒಕ್ಕೂಟ – ಹಿರಿಯ ಕಲಾವಿದರಿಗೆ ಸನ್ಮಾನ, ಅಶಕ್ತ ಕಲಾವಿದರಿಗೆ ನೆರವು

Spread the love

ತುಳು ನಾಟಕ ಕಲಾವಿದರ ಒಕ್ಕೂಟ – ಹಿರಿಯ ಕಲಾವಿದರಿಗೆ ಸನ್ಮಾನ, ಅಶಕ್ತ ಕಲಾವಿದರಿಗೆ ನೆರವು

ಮಂಗಳೂರು: ತುಳು ನಾಟಕ ಕಲಾವಿದರ ಒಕ್ಕೂಟ ಇದರ ವಾರ್ಷಿಕ ಸಂಭ್ರಮವು 2018-19ನೇ ಸಾಲಿನ ತೌಳವ ಪ್ರಶಸ್ತಿ ಪ್ರದಾನ, ಹಿರಿಯ ಕಲಾವಿದರಿಗೆ ಸನ್ಮಾನ, ಕೀರ್ತಿಶೇಷ ಕಲಾವಿದರ ನೆಂಪು, ಅಶಕ್ತ ಕಲಾವಿದರಿಗೆ ಆರ್ಥಿಕ ನೆರವು ವಿತರಣೆ ಪುರಭವನದಲ್ಲಿ ಇತ್ತೀಚೆಗೆ ಜರುಗಿತು.

ಸಮಾರಂಭವನ್ನು ಮೂಲ್ಕಿ- ಮೂಡಬಿದ್ರೆ ಕ್ಷೇತ್ರದ ಶಾಸಕ ಉಮಾನಾಥ ಎ. ಕೋಟ್ಯಾನ್ ಉದ್ಘಾಟಿಸಿದರು. ಚಲನಚಿತ್ರ ನಿರ್ಮಾಪಕರಾದ ಮುಖೇಶ್ ಹೆಗ್ಡೆಯವರು ಅಧ್ಯಕ್ಷತೆ ವಹಿಸಿದ್ದರು. ಹಿರಿಯ ನಾಟಕಕಾರ ಡಾ. ಸಂಜೀವ ದಂಡೆಕೇರಿ ಹಾಗೂ ನಟ ಪ್ರಣವ್ ಹೆಗ್ಡೆ ಅತಿಥಿಗಳಾಗಿ ಭಾಗವಹಿಸಿದ್ದರು.

ನಾಟಕ ಹಾಗೂ ಚಲನಚಿತ್ರ ಸಂಗೀತ ನಿರ್ದೇಶಕ ಚರಣ್ ಕುಮಾರ್ ರವರಿಗೆ 2018-19ನೇ ಸಾಲಿನ “ತೌಳವ ಪ್ರಶಸ್ತಿ “ ನೀಡಿ ಗೌರವಿಸಲಾಯಿತು. ತುಳುನಾಟಕ ರಂಗದ ಹಿರಿಯ ಕಲಾವಿದರಾದ ಮನು ಇಡ್ಯಾರಿಗೆ ‘ರಂಗ ಕಲಾ ವಿಭೂಷಣ’, ನೆಕ್ಕಿದಪುಣಿ ಗೋಪಾಲಕೃಷ್ಣರಿಗೆ ‘ರಂಗ ಕಲಾ ಸವ್ಯಸಾಚಿ’, ಭಾಸ್ಕರ್ ಎನ್‍ರಿಗೆ ‘ ರಂಗ ಕಲಾ ಭೂಷಣ’ ಪಿ. ಗೋಪಾಲಕೃಷ್ಣರಿಗೆ ‘ರಂಗ ಕಲಾ ಕೇಸರಿ’ ಶಿವರಾಮ ಪಣಂಬೂರುರಿಗೆ ‘ರಂಗ ಕಲಾ ಸಾರಥಿ’ ಹಾಗೂ ಸುಮನಾ ಮಂಗಳೂರು ರಿಗೆ ‘ರಂಗ ಕಲಾ ಸರಸ್ವತಿ’ ಬಿರುದು ಪ್ರದಾನ ಮಾಡಿ ಗೌರವಿಸಲಾಯಿತು.

ನೆಂಪು ಕಾರ್ಯಕ್ರಮದಲ್ಲಿ ಕೀರ್ತಿಶೇಷರಾದ ಮುರಳೀಧರ ಕದ್ರಿ, ಪುರುಷೋತ್ತಮ ಉಳ್ಳಾಲ, ಶ್ರೀನಿವಾಸ ಕದ್ರಿ, ಎಂ. ಸೀತಾರಾಮ, ರಾಜೇಶ್ ಬಂಟ್ವಾಳ ಇವರ ಕುಟುಂಬಿಕರೊಂದಿಗೆ ಭಾವಚಿತ್ರಕ್ಕೆ ದೀಪ ಬೆಳಗಿಸಿ, ಪುಷ್ಪಾರ್ಚನೆ ಮಾಡಿ ಸ್ಮರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಅಶಕ್ತ ಕಲಾವಿದರಿಗೆ ಆರ್ಥಿಕ ನೆರವು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ದಯಾನಂದ ಕತ್ತಲ್ಸಾರ್ , ಸದಸ್ಯರಾಗಿ ಆಯ್ಕೆಯಾದ ನಾಗೇಶ್ ಕುಲಾಲ್, ನಿಟ್ಟೆ ಶಶಿಧರ ಶೆಟ್ಟಿ, ಲೀಲಾಕ್ಷ ಕರ್ಕೇರಾ, ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿ ಆಯ್ಕೆಯಾದ ಕದ್ರಿ ನವನೀತ ಶೆಟ್ಟಿ , ಕ್ಯಾಟ್ಕದ ಅಧ್ಯಕ್ಷರಾಗಿ ಆಯ್ಕೆಯಾದ ಮೋಹನ್ ಕೊಪ್ಪಳ ಕದ್ರಿ ಇವರುಗಳನ್ನು ಗೌರವಿಸಲಾಯಿತು. ಉದ್ಘಾಟಕರಾದ ಉಮಾನಾಥ ಕೋಟ್ಯಾನ್ ಮಾತನಾಡಿ, ತಾನು ಇಂದು ಈ ಮಟ್ಟಕ್ಕೆ ಬೆಳೆಯಲು ನಾನೊಬ್ಬ ಕಲಾವಿದನಾಗಿರುವುದೇ ಕಾರಣ. ಕಲಾವಿದರಿಗೆ ಸರ್ಕಾರದಿಂದ ಸಿಗಬೇಕಾದ ಯಾವುದೇ ಸವಲತ್ತುಗಳಿಗೆ ತನ್ನಿಂದ ಆಗಬೇಕಾದ ಕೆಲಸಗಳನ್ನು ಶಕ್ತಿ ಮೀರಿ ಪ್ರಯತ್ನಿಸಿ ದೊರಕಿಸಿಕೊಡುವ ಭರವಸೆ £ೀಡಿದರು. ಸನ್ಮಾ£ತರ ಪರವಾಗಿ ಚರಣ್ ಕುಮಾರ್ ಹಾಗೂ ನೆಕ್ಕಿದಪುಣಿ ಗೋಪಾಲಕೃಷ್ಣ ಮಾತನಾಡಿ ಒಕ್ಕೂಟದ ಕಾರ್ಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಕೃತಜ್ಞತೆ ಸಲ್ಲಿಸಿದರು.

ಮುಖ್ಯ ಅತಿಥಿ ಡಾ ಸಂಜೀವ ದಂಡಕೇರಿ ಯವರು ಒಕ್ಕೂಟಕ್ಕೆ ಶುಭಹಾರೈಸಿದರು.ಒಕ್ಕೂಟದ ಅಧ್ಯಕ್ಷ ಲ.ಕಿಶೋರ್ ಡಿ ಶೆಟ್ಟಿ ಅವರು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಕುಮಾರ್ ಮಲ್ಲೂರು ಪ್ರಸ್ತಾವನೆಯಲ್ಲಿ ಒಕ್ಕೂಟದ ಉದ್ದೇಶ ಹಾಗೂ ಸಾಧನೆಗಳ ಬಗ್ಗೆ ವರದಿ ಮಂಡಿಸಿದರು. ಸಮಾರಂಭದಲ್ಲಿ ಉಪಾಧ್ಯಕ್ಷರಾದ ಗೋಕುಲ್ ಕದ್ರಿ, ಶಿವಾನಂದ ಕರ್ಕೇರಾ, ವಸಂತಿ ಜೆ. ಪೂಜಾರಿ,ಕ್ಷೇಮ ನಿಧಿ ಪ್ರಧಾನ ಸಂಚಾಲಕ ಪ್ರದೀಪ್ ಆಳ್ವ ಕದ್ರಿ, ಸಲಹೆಗಾರರಾದ ತಾರಾನಾಥ ಶೆಟ್ಟಿ ಬೋಳಾರ, £ಟ್ಟೆ ಶಶಿಧರ ಶೆಟ್ಟಿ, ಜೊತೆ ಕಾರ್ಯದರ್ಶಿ ದಿನೇಶ್ ಕುಂಪಲ ಮುಂತಾದವರು ಉಪಸ್ಥಿತರಿದ್ದರು.ಕೋಶಾಧಿಕಾರಿ ಮೋಹನ್ ಕೊಪ್ಪಳ ಕದ್ರಿ ವಂದಿಸಿದರು. ಸದಸ್ಯರಾದ ಜೀವನ್ ಉಳ್ಳಾಲ, ಶೋಭಾ ಶೆಟ್ಟಿ, ತಾರಾನಾಥ ಉರ್ವಾ ಕಾರ್ಯಕ್ರಮ ನಿರೂಪಿಸಿದರು.


Spread the love