ತೊಕ್ಕೊಟ್ಟು, ಪಂಪ್‌ ವೆಲ್ ಮೇಲ್ಸೇತುವೆ ವಿಳಂಬ -ಅಧಿಕಾರಿಗಳ ವಿರುದ್ದ ಕ್ರಿಮಿನಲ್ ಕೇಸು ದಾಖಲಿಸಿ ಬಂಧಿಸಿ – ಸಂಸದ ನಳಿನ್ 

Spread the love

ತೊಕ್ಕೊಟ್ಟು, ಪಂಪ್‌ ವೆಲ್ ಮೇಲ್ಸೇತುವೆ ವಿಳಂಬ -ಅಧಿಕಾರಿಗಳ ವಿರುದ್ದ ಕ್ರಿಮಿನಲ್ ಕೇಸು ದಾಖಲಿಸಿ ಬಂಧಿಸಿ – ಸಂಸದ ನಳಿನ್ 

ಮಂಗಳೂರು: ರಾಷ್ಟ್ರೀಯ ಹೆದ್ದಾರಿ-66ರ ತೊಕ್ಕೊಟ್ಟು ಹಾಗೂ ಪಂಪ್‌ವೆಲ್ ಮೇಲ್ಸೇತುವೆ ರಾಷ್ಟ್ರೀಯ ಹೆದ್ದಾರಿ-66ರ ತೊಕ್ಕೊಟ್ಟು ಹಾಗೂ ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿಯನ್ನು ನಿಗದಿತ ಸಮಯದಲ್ಲಿ ಮುಗಿಸದ ಅಧಿಕಾರಿಗಳ ವಿರುದ್ದ ಕ್ರಿಮಿನಲ್ ಕೇಸು ದಾಖಲಿಸಿ ಬಂಧಿಸುವಂತೆ ಸಂಸದ ನಳಿನ್ ಕುಮಾರ್ ಸೂಚನೆ ನೀಡಿದ್ದಾರೆ.

ಮಂಗಳೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕುರಿತು ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಮತ್ತು ಗುತ್ತಿಗೆದಾರ ಕಂಪನಿಗಳ ಪ್ರತಿನಿಧಿಗಳ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ ಸಂಸದ ನಳಿನ್, ‘ಮೇಲ್ಸೇತುವೆಗಳನ್ನು ಕಳೆದ ಆಗಸ್ಟ್‌ಗೆ, ನಂತರ ಡಿಸೆಂಬರ್, ಫೆಬ್ರವರಿಗೆ ಮುಗಿಸುವ ಗಡುವು ಕೊಟ್ಟಿದ್ದೀರಿ. ಈಗ ಮತ್ತೆ ಮಾರ್ಚ್, ಮೇ ಎನ್ನುವಾಗ, ಕಾಯುವ ತಾಳ್ಮೆ ಇಲ್ಲ. ನಿಮ್ಮ ಬಂಧನ ನಡೆದು, ಜೈಲಿನಲ್ಲಿರಿ. ಆಗ ನಿಮ್ಮ ಹಿರಿಯ ಅಧಿಕಾರಿಗಳು ಓಡಿ ಬರುತ್ತಾರೆ. ಇಲ್ಲವೇ ಟೋಲ್ ಸಂಗ್ರಹ ಬಂದ್ ಮಾಡಿ” ಎಂದು ಗುತ್ತಿಗೆದಾರ ನವಯುಗ ಕಂಪನಿ ಪ್ರತಿನಿಧಿಗಳಿಗೆ ನಳಿನ್ ಎಚ್ಚರಿಸಿದರು.

ಮೇಲ್ಸೇತುವೆ ಕಾಮಗಾರಿಗೂ ಟೋಲ್ ಸಂಗ್ರಹಕ್ಕೂ ಯಾವುದೇ ಸಂಬಂಧ ಇಲ್ಲ. ನಾವು ಟೋಲ್ ನಿಲ್ಲಿಸಲು ಸಾಧ್ಯವಿಲ್ಲ. ನಮಗೆ ಇನ್ನಷ್ಟು ಕಾಲಾವಕಾಶ ಕೊಡಿ. ಕಂಪನಿ ಮುಖ್ಯಸ್ಥರ ಗಮನಕ್ಕೆ ತರುತ್ತೇವೆ ಎಂದು ನವಯುಗ ಕಂಪನಿಯ ಮಹಾನಿರ್ದೇಶಕ ಎ.ಎಸ್.ಎನ್. ಮೂರ್ತಿ, ಮುಖ್ಯ ಯೋಜನಾ ನಿರ್ದೇಶಕ ಶಂಕರ್ ರಾವ್ ಹೇಳಿದಾಗ, ನಿಮಗೆ ಆಗದಿದ್ದರೆ ಕಾಮಗಾರಿ ಸ್ಥಗಿತಗೊಳಿಸಿ. ನಾನು ಸ್ಥಳೀಯ ಗುತ್ತಿಗೆದಾರರ ಮೂಲಕ ಕೆಲಸ ಮಾಡಿಸುತ್ತೇನೆ ಎಂದು ನಳಿನ್ ಹೇಳಿದರು.

ಮಂಗಳೂರು ಉಪವಿಭಾಗಾಧಿಕಾರಿ ರವಿಚಂದ್ರ ನಾಯಕ್ ಮಾತನಾಡಿ, ಈಗಾಗಲೇ ನಂತೂರು, ಪಂಪ್‌ವೆಲ್ ಕಾಮಗಾರಿ ಅವ್ಯವಸ್ಥೆ ವಿರುದ್ಧ ಗುತ್ತಿಗೆದಾರರ ಮೇಲೆ ಕೇಸು ದಾಖಲಿಸಿದ್ದೇವೆ. ಸಾರ್ವಜನಿಕರಿಗೆ ಕಿರಿಕಿರಿ ಹಿನ್ನೆಲೆಯಲ್ಲಿ ಇನ್ನಷ್ಟು ಕೇಸು ದಾಖಲಿಸಲು ಅವಕಾಶಗಳಿವೆ ಎಂದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಬೆಂಗಳೂರು ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ಅಧಿಕಾರಿ ಆರ್.ಕೆ.ಸೂರ್ಯವಂಶಿ ಮಾತನಾಡಿ, ಕಾಮಗಾರಿ ವಿಳಂಬ ಹಿನ್ನೆಲೆಯಲ್ಲಿ ಟೋಲ್ ಸಂಗ್ರಹ ಯಾಕೆ ಸ್ಥಗಿತಗೊಳಿಸಬಾರದು ಎಂದು ಸಚಿವಾಲಯಕ್ಕೆ ಪತ್ರ ಬರೆಯಬಹುದು ಎಂದರು.

ಸ್ಥಗಿತಗೊಂಡಿರುವ ಬಿ.ಸಿ.ರೋಡ್- ಗುಂಡ್ಯ ಕಾಮಗಾರಿ ತಕ್ಷಣ ಆರಂಭಿಸಬೇಕು. ಫೆ.3ರೊಳಗೆ ಹೆದ್ದಾರಿ ಹೊಂಡಗಳನ್ನು ಮುಚ್ಚಿ, ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು. ಇಲ್ಲದಿದ್ದರೆ ಯೋಜನಾ ನಿರ್ದೇಶಕರು ಹಾಗೂ ಗುತ್ತಿಗೆದಾರರ ಮೇಲೆ ಕೇಸು ದಾಖಲಿಸುತ್ತೇವೆ ಎಂದು ಸಂಸದ ನಳಿನ್ ಎಚ್ಚರಿಸಿದರು.

ಗುಂಡ್ಯ ಮತ್ತು ಬಿ.ಸಿ.ರೋಡ್ ಮಧ್ಯೆ ಸ್ಥಗಿತಗೊಳಿಸಿದ ನಾಲ್ಕು ಪಥದ ಕಾಂಕ್ರೀಟ್ ಕಾಮಗಾರಿಯನ್ನು ಒಂದು ವಾರದೊಳಗೆ ಪುನರಾರಂಭಿಸದಿದ್ದರೆ ಎಲ್‌ಆಂಡ್‌ಟಿ ಸಂಸ್ಥೆ ವಿರುದ್ಧವೂ ಕೇಸು ದಾಖಲಿಸಲಾಗುವುದೆಂದು ಸಂಸದ ನಳಿನ್ ಎಚ್ಚರಿಕೆ ನೀಡಿದರು.

ಭೂಸ್ವಾಧೀನ ವಿವಾದ ಇರುವ ಜಾಗವನ್ನು ಹೊರತುಪಡಿಸಿ ಬೇರೆ ಕಡೆಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲು ವಿಳಂಬಿಸುತ್ತಿರುವುದು ಏಕೆ ಎಂದು ಪ್ರಶ್ನಿಸಿದ ಸಂಸದರು, ಒಂದು ವಾರದಲ್ಲಿ ಕಾಮಗಾರಿ ಪುನರಾರಂಭಿಸದಿದ್ದರೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಇದಕ್ಕೆ ಉತ್ತರಿಸಿದ ಕಂಪನಿ ಯೋಜನಾ ನಿರ್ದೇಶಕ ಎಂ.ಎಸ್.ಕಟ್ಟಿ, ಕೆಲವು ಕಡೆ ಭೂಸ್ವಾಧೀನ ತಕರಾರಿನಲ್ಲಿದೆ. ದುರಸ್ತಿ ಕಾರ್ಯ ವಾರದೊಳಗೆ ಕೈಗೊಳ್ಳಲಾಗುವುದು. ಕಾಮಗಾರಿ ಪುನರಾರಂಭಿಸಬೇಕಾದರೆ ಯಂತ್ರೋಪಕರಣ ಸೇರಿದಂತೆ ಅಗತ್ಯ ಪರಿಕರಗಳನ್ನು ತರಿಸಬೇಕಾಗಿದೆ ಎಂದು ಸಮಜಾಯಿಸಿ ನೀಡಿದರು.

ಕಾಮಗಾರಿ ನಡೆಸಲು ಅಸಾಧ್ಯವಾದರೆ, ಟೆಂಡರ್ ವಹಿಸಿ ಕರಾವಳಿಗೆ ಯಾಕೆ ತೊಂದರೆ ಕೊಡುತ್ತಿದ್ದೀರಿ? ಎಲ್‌ಆಂಡ್‌ಟಿ ಮತ್ತು ಹಾಗೂ ನವಯುಗ ಕಂಪನಿಯಿಂದಾಗಿ ಜಿಲ್ಲೆಯ ಅಭಿವೃದ್ಧಿಗೆ ಕಪ್ಪುಚುಕ್ಕೆಯಾಗುತ್ತಿದೆ. ಎಲ್‌ಆಂಡ್‌ಟಿ ಕಂಪನಿಯಿಂದ ಜಿಲ್ಲೆಯಲ್ಲಿ ನಡೆಯುವ ಇತರೆ ಕಾಮಗಾರಿಗೂ ತಡೆ ಒಡ್ಡಲಾಗುವುದು ಎಂದು ಸಂಸದರು ಎಚ್ಚರಿಕೆ ನೀಡಿದರು.


Spread the love