ದಕ್ಷಿಣ ಕನ್ನಡ ವಿಷನ್ 2025: ಅ.3ರಂದು ಕಾರ್ಯಾಗಾರ ಸಾರ್ವಜನಿಕ ಸಲಹೆಗಳ ಆಹ್ವಾನ

Spread the love

ದಕ್ಷಿಣ ಕನ್ನಡ ವಿಷನ್ 2025: ಅ.3ರಂದು ಕಾರ್ಯಾಗಾರ ಸಾರ್ವಜನಿಕ ಸಲಹೆಗಳ ಆಹ್ವಾನ

ಮಂಗಳೂರು: ಕರ್ನಾಟಕ ಸರಕಾರವು ಮುಂದಿನ ಏಳು ವರ್ಷಗಳಲ್ಲಿ ಅನುಷ್ಠಾನಗೊಳಿಸಬಹುದಾದ ಮಹತ್ವಾಕಾಂಕ್ಷೆಯ ದೀರ್ಘಾವಧೀ ಅಭಿವೃದ್ಧಿ ಮಾರ್ಗಸೂಚಿಯನ್ನು ‘ ನವಕರ್ನಾಟಕ 2025(ವಿಷನ್ 2025)’ ಎಂಬ ಹೆಸರಿನಡಿ ಅನುಷ್ಠಾನಕ್ಕೆ ತರಲಿದೆ. ಈ ನಿಟ್ಟಿನಲ್ಲಿ ಮುಂದಿನ ಏಳು ವರ್ಷಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ‘ವಿಷನ್ 2025’ ಯೋಜನೆ ತಯಾರಿಸಲು ಚಾಲನೆ ದೊರೆತಿದ್ದು, ವಿವಿದ ಕ್ಷೇತ್ರಗಳ ಪ್ರತಿನಿಧಿಗಳೊಂದಿಗೆ ಚರ್ಚಿಸಲು ಅಕ್ಟೋಬರ್ 3ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾರ್ಯಾಗಾರ ನಡೆಯಲಿದೆ.

ಸಮಾಜದ ವಿವಿಧ ವಲಯದ ಗಣ್ಯರು, ತಜ್ಞರು, ಪರಿಣಿತರು, ಧಾರ್ಮಿಕ ಮುಖಂಡರು, ವಿದ್ಯಾರ್ಥಿಗಳು, ಜನಸಾಮಾನ್ಯರು ಒಳಗೊಂಡಂತೆ ಪ್ರತಿಯೊಬ್ಬ ಸಾರ್ವಜನಿಕ ಪಾಲುದಾರನ ಅಭಿಪ್ರಾಯ ಕ್ರೋಢೀಕರಿಸಿ ಮುಂದಿನ ಏಳು ವರ್ಷಗಳ ಅಭಿವೃದ್ಧಿಯ ಮುನ್ನೋಟಕ್ಕೆ ಈ ವಿಷನ್ 2025 ಯೋಜನೆ ತಯಾರಿಸಲಾಗುತ್ತಿದೆ. ವಿವಿಧ ಕ್ಷೇತ್ರಗಳ ಪಾಲುದಾರರಿಗೆ ಅಭಿವೃದ್ಧಿಯಲ್ಲಿ ನಮಗೇನು ಲಭ್ಯವಾಗುತ್ತಿದೆ ಎನ್ನುವುದರ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ಅವರ ಅಗತ್ಯತೆಗೆ ಅನುಗುಣವಾಗಿ ಏಳು ವರ್ಷಗಳ ಅಭಿವೃದ್ಧಿ ಮುನ್ನೋಟ ಸಿದ್ಧಪಡಿಸಲು ಕರ್ನಾಟಕ ಸರಕಾರ ಮುಂದಾಗಿದೆ. ಅದುವೇ ವಿಷನ್ 2025 ದಾಖಲೆ.

ಮುಂದಿನ ಡಿಸೆಂಬರ್ ಅಂತ್ಯದೊಳಗೆ ಸಿದ್ಧವಾಗುವ ಈ ದಾಖಲೆಯಲ್ಲಿನ ಜನಾಭಿಪ್ರಾಯ ಅಂಶಗಳೇ ಮುಂದಿನ ಏಳು ವರ್ಷದ ಅಭಿವೃದ್ಧಿಯ ಪಥವನ್ನು ಗುರುತಿಸಲಿದೆ. ಅಭಿವೃದ್ಧಿಯ ಸಂದರ್ಭದಲ್ಲಿ ವಿವಿಧ ಸಮುದಾಯಗಳ ಆಶೋತ್ತರಗಳೊಂದಿಗೆ ಸಮನ್ವಯತೆ ಸಾಧಿಸುವ ಆಶಯ ಹೊಂದಲಾಗಿದೆ. ಈ ಮುನ್ನೋಟ ತಯಾರಿಕೆ ಜಿಲ್ಲಾಮಟ್ಟದಿಂದ ರಾಜ್ಯಮಟ್ಟದ ಹಂತದಲ್ಲಿ ರೂಪುಗೊಳ್ಳಲಿದ್ದು, ಪ್ರಾದೇಶಿಕ, ಸಂಸ್ಕøತಿಕ, ಭೌಗೋಳಿಕ ಹಾಗೂ ಸ್ಥಳೀಯ ಅಭಿವೃದ್ಧಿಗೆ ಧ್ವನಿಯಾಗಲಿದೆ. ಇದಕ್ಕಾಗಿ ಅ.3ರಂದು ನಡೆಯುವ ಕಾರ್ಯಾಗಾರ ಜನಪ್ರತಿನಿಧಿಗಳು, ಸಹಕಾರಿಗಳು, ಎನ್.ಜಿ.ಓ.ಗಳು,ರೈತರು, ಮಕ್ಕಳು, ಹಿರಿಯ ನಾಗರೀಕರು, ವಿಕಲಚೇತನರು ಸೇರಿದಂತೆ ಎಲ್ಲಾ ವರ್ಗದ ಆಶೋತ್ತರಗಳ ವಿಶೇಷ ಅಭಿಪ್ರಾಯ ಸಂಗ್ರಹಣಾ ಕಾರ್ಯಕ್ರಮ ವೇದಿಕೆಯಾಗಲಿದೆ.

ಒಟ್ಟು 13 ವಿಷಯಗಳ ಆಧರಿಸಿ, ವಿಷನ್ 2025 ಮುನ್ನೋಟಕ್ಕೆ ಜನಾಭಿಪ್ರಾಯ ಸಂಗ್ರಹಣೆಗೆ ರಾಜ್ಯ ಸರಕಾರ ವೇಳಾಪಟ್ಟಿ ಸಿದ್ಧಪಡಿಸಿದೆ. ಕೃಷಿ, ಮೂಲಸೌಕರ್ಯಗಳು, ಉದ್ಯೋಗ ಮತ್ತು ಕೌಶಲ್ಯ, ಕೈಗಾರಿಕೆ, ಗ್ರಾಮೀಣಾಭಿವೃದ್ಧಿ, ಸಾಮಾಜಿಕ ನ್ಯಾಯ, ನಗರಾಭಿವೃದ್ಧಿ, ಶಿಕ್ಷಣ, ಆರೋಗ್ಯ, ಕಾನೂನು ಮತ್ತು ಸುವ್ಯವಸ್ಥೆ, ಮಾಹಿತಿ ತಂತ್ರಜ್ಞಾನ, ಸೇವೆಗಳು, ಆಡಳಿತ ಸೇರಿದಂತೆ 5 ಪ್ರಮುಖ ಕ್ಷೇತ್ರಗಳನ್ನು ಆಧರಿಸಿ 13 ವಿಷಯಗಳ ಅಭಿವೃದ್ಧಿಗೆ ಮುನ್ನೋಟ ರಚನೆಯಾಗಲಿದೆ. ಈ ನಿಟ್ಟಿನಲ್ಲಿ ಆಯಾ ವಿಷಯಗಳನ್ನು ಆಧರಿಸಿ ಸಮಿತಿಗಳನ್ನು ರಚಿಸಲಾಗಿದೆ. ಈ ಕ್ಷೇತ್ರಗಳಲ್ಲಿ ಎದುರಿಸುತ್ತಿರುವ ಸಮಸ್ಯೆಗಳು, ಪ್ರಸಕ್ತ ಕಾಲಕ್ಕೆ ತಕ್ಕಂತೆ ಆಗಬೇಕಾದ ಬದಲಾವಣೆ ಮತ್ತಿತರ ಕಾರ್ಯಗಳ ಕುರಿತು ಚರ್ಚೆ, ಸಂವಾದ, ಅಭಿಪ್ರಾಯ ಮಂಡನೆ ನಡೆಯಲಿದೆ.

ವಿಷನ್ 2025 ಜಿಲ್ಲೆಯ ಪ್ರತಿಯೊಬ್ಬ ನಾಗರೀಕರ ಆಶಯ, ಭರವಸೆಗಳನ್ನು ಮತ್ತು ನಿರೀಕ್ಷೆಗಳನ್ನು ಪ್ರತಿಬಿಂಭಿಸಲು ಉತ್ತಮ ವೇದಿಕೆಯಾಗಲಿದೆ. ಸಾರ್ವಜನಿಕರ ಸಲಹೆ ಮತ್ತು ಅಭಿಪ್ರಾಯ ಪಡೆಯುವ ಈ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ನಾಗರೀಕರು ಭಾಗವಹಿಸಿ ಅಭಿವೃದ್ಧಿ ಕುರಿತಾದ ತಮ್ಮ ಸಲಹೆಗಳನ್ನು ಲಿಖಿತವಾಗಿಯೂ ಜಿಲ್ಲಾಧಿಕಾರಿ ಕಚೇರಿಗೆ ನೀಡಬಹುದಾಗಿದೆ.

ಅ.3ರಂದು ಬೆಳಿಗ್ಗೆ 10.30 ಗಂಟೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾರ್ಯಾಗಾರ ಉದ್ಘಾಟನೆಯಾಗಲಿದ್ದು, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಮತ್ತಿತರರು ಭಾಗವಹಿಸಲಿದ್ದಾರೆ.


Spread the love