ದಕ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರಣಬ್ ಮುಖರ್ಜಿಯವರಿಗೆ ಶ್ರದ್ಧಾಂಜಲಿ

Spread the love

ದಕ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರಣಬ್ ಮುಖರ್ಜಿಯವರಿಗೆ ಶ್ರದ್ಧಾಂಜಲಿ

ಮಂಗಳೂರು: ಮಾಜಿ ರಾಷ್ಟ್ರಪತಿ, ಭಾರತರತ್ನ ಪುರಸ್ಕೃತರಾದ ದಿವಂಗತ ಪ್ರಣಬ್ ಮುಖರ್ಜಿ ಅವರಿಗೆ ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ನ ಮುಖಂಡರು ಪ್ರಣಬ್ ಮುಖರ್ಜಿ ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ನುಡಿ ನಮನ ಸಲ್ಲಿಸಿದರು.

ಬಳಿಕ ಮಾತನಾಡಿದ ಮಾಜಿ ಸಚಿವ ಬಿ.ರಮಾನಾಥ ರೈ, ಕಾಂಗ್ರೆಸ್ ನಲ್ಲಿ ಹಂತ ಹಂತವಾಗಿ ಬೆಳೆದು ಬಂದ ಪ್ರಣಬ್ ಮುಖರ್ಜಿ ಅವರು ಇಂದಿರಾ ಗಾಂಧಿ ಅವರ ಸಂಪುಟದಲ್ಲಿ ಮಂತ್ರಿಯಾಗಿ ಜನ ಸೇವೆಗೈದವರು. ಕಠಿಣ ಶ್ರಮಪಟ್ಟು ಕೆಲಸ ಮಾಡುತ್ತಿದ್ದ ಪ್ರಣಬ್ ಅವರು ಆರ್ಥಿಕ ಮಂತ್ರಿಯಾಗಿದ್ದಾಗ ದೇಶದ ಆರ್ಥಿಕ ಮಟ್ಟವನ್ನು ಉನ್ನತ್ತಕ್ಕೇರಿಸುವಲ್ಲಿ ಪ್ರಮುಖ ಪಾತ್ರವಹಿಸಿದರು ಎಂದು ಸ್ಮರಿಸಿದರು.

ಮೇರು ವ್ಯಕ್ತಿತ್ವ ಹೊಂದಿದ್ದ ಪ್ರಣಬ್ ಮುಖರ್ಜಿ ಅವರ ಅಗಲಿಕೆ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟ. ಅವರ ಕುಟುಂಬಕ್ಕೆ ನೋವನ್ನು ಸಹಿಸುವ ಶಕ್ತಿಯನ್ನು ಭಗವಂತನು ನೀಡಲಿ ಎಂದು ಸಂತಾಪ ಸೂಚಿಸಿದರು.
ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಮಾತನಾಡಿ, ಪ್ರಣಬ್ ಮುಖರ್ಜಿ ಅವರು ಕಾಂಗ್ರೆಸ್ ಸರ್ಕಾರದಲ್ಲಿ ರಕ್ಷಣೆ, ವಿದೇಶಾಂಗ, ವಾಣಿಜ್ಯ, ಹಣಕಾಸು, ಹಡಗು, ಕೈಗಾರಿಕೆ ಇಲಾಖೆಗಳ ಸಚಿವರಾಗಿ ಜವಾಬ್ದಾರಿಯುತವಾಗಿ ಕೆಲಸ ನಿಭಾಯಿಸಿ ಹೊಸತನ, ಆಡಳಿತ ಸುಧಾರಣೆಗಳನ್ನು ಜಾರಿಗೆ ತಂದಿದ್ದಾರೆ ಎಂದು ನೆನಪಿಸಿಕೊಂಡರು.

ಬಂಗಾರಪ್ಪ ಕೆಪಿಸಿಸಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಪ್ರಣಬ್ ಮುಖರ್ಜಿ, ಜನಾರ್ಧನ ಪೂಜಾರಿ ಹಾಗೂ ವೀರಪ್ಪಮೊಯ್ಲಿ ಅವರು ರಾಜ್ಯದ ಉಸ್ತುವಾರಿ ವಹಿಸಿಕೊಂಡು ಮತ್ತೆ ಕಾಂಗ್ರೆಸ್ ಅಧಿಕಾರ ಬರುವಲ್ಲಿ ಪ್ರಮುಖ ಪಾತ್ರವಹಿದರು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕ ಯು.ಟಿ.ಖಾದರ್, ಅಭಯ್ ಚಂದ್ರ ಜೈನ್, ಇಬ್ರಾಹೀಂ ಕೋಡಿಜಾಲ್, ಐವನ್ ಡಿಸೋಜಾ, ಜೆ.ಆರ್.ಲೋಬೊ, ಮಲಾರ್ ಮೋನ್, ಶಶಿಧರ್ ಹೆಗ್ಡೆ, ಕವಿತಾ ಸನಿಲ್, ಶಾಹುಲ್ ಹಮೀದ್, ಮುಹಮ್ಮದ್ ಕುಂಜತ್ ಬೈಲ್, ಸದಾಶಿವ ಶೆಟ್ಟಿ, ಅಬ್ಬಾಸ್ ಅಲಿ, ಸಂತೋಷ್ ಕುಮಾರ್ ಶೆಟ್ಟಿ, ನವೀನ್ ಡಿಸೋಜಾ, ಗಣೇಶ್ ಪೂಜಾರಿ, ಆರ್.ಕೆ.ಪೃಥ್ವಿರಾಜ್, ಸವಾದ್ ಸುಳ್ಯ, ಭಾಸ್ಕರ್.ಕೆ., ಪ್ರವೀಣ್ ಆಳ್ವ, ನೀರಜ್ ಚಂದ್ರ ಪಾಲ್, ಸಂಶುದ್ದೀನ್ ಕುದ್ರೋಳಿ, ಅನಿಲ್ ಕುಮಾರ್, ಪ್ರಕಾಶ್ ಸಾಲಿಯಾನ್, ಪದ್ಮನಾಭ ಅಮೀನ್, ವಿಶ್ವಾಸ್ ಕುಮಾರ್ ದಾಸ್, ಶುಭೋದಯ ಆಳ್ವ, ನಝೀರ್ ಮಠ, ಕುಮಾರಿ ಅಪ್ಪಿ, ಟಿ.ಕೆ.ಸುಧೀರ್, ಶಾಂತಲಾ ಗಟ್ಟಿ, ಶಶಿಕಲಾ ಮತ್ತಿತರರು ಉಪಸ್ಥಿತರಿದ್ದರು. ದ.ಕ.ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸದಾಶಿವ್ ಉಳ್ಳಾಲ್ ಅವರು ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.


Spread the love