ದಕ ಜಿಲ್ಲಾ ಕಾಂಗ್ರೆಸ್ ವತಿಯಿಂದ ಭಾರತ ಬಿಟ್ಟು ತೊಲಗಿ ಚಳವಳಿಯ 78ನೇ ವರ್ಷಾಚರಣೆ

Spread the love

ದಕ ಜಿಲ್ಲಾ ಕಾಂಗ್ರೆಸ್ ವತಿಯಿಂದ ಭಾರತ ಬಿಟ್ಟು ತೊಲಗಿ ಚಳವಳಿಯ 78ನೇ ವರ್ಷಾಚರಣೆ

ಮಂಗಳೂರು: ಭಾರತ ಬಿಟ್ಟು ತೊಲಗಿ ಚಳವಳಿಯ 78ನೇ ವರ್ಷಾಚರಣೆಯ ಕಾರ್ಯಕ್ರಮ ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ವಿಧಾನ ಪರಿಷತ್ ಶಾಸಕ ಕೆ.ಹರೀಶ್ ಕುಮಾರ್ ಅಧ್ಯಕ್ಷತೆಯಲ್ಲಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ರವಿವಾರ ನಡೆಯಿತು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಬಿ.ರಮಾನಾಥ ರೈ, ಶತಮಾನದಿಂದ ನಡೆಯುತ್ತಾ ಬಂದ ಸ್ವಾತಂತ್ರ್ಯ ಸಮರ ತೀವ್ರಗೊಂಡಿದ್ದ ಕಾಲವದು. ತ್ರಿವರ್ಣ ಧ್ವಜದಡಿ ಎಲ್ಲರೂ ಒಗ್ಗೂಡಿ, ದೇಶದಿಂದ ಪರಕೀಯರನ್ನು ಮೂಲೋತ್ಪಾಟಿಸಲು ಸಿದ್ಧರಾದ ಸಮಯವದು. ಇಂದಿಗೆ ಸರಿಯಾಗಿ 75 ವರ್ಷಗಳ ಹಿಂದೆ. ಅದೇ 1942ರ ಕ್ವಿಟ್ ಇಂಡಿಯಾ ಚಳವಳಿ. ನಾಯಕರೇ ಇಲ್ಲದೆ ಉಗ್ರ ಸ್ವರೂಪ ಪಡೆದದ್ದು ಈ ಚಳವಳಿಯ ಹೆಗ್ಗಳಿಕೆ. ಆಂದೋಲನ ಆರಂಭವಾದ ಐದೇ ವರ್ಷದಲ್ಲಿ ಭಾರತ ಸ್ವತಂತ್ರವಾಯಿತು ಎಂದು ವಿವರಿಸಿದರು.

ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಕಾಂಗ್ರೆಸ್ ಪಕ್ಷ ದೊಡ್ಡ ಪಾತ್ರ ವಹಿಸಿದೆ. ಜಾತ್ಯತೀತ ಸಿದ್ಧಾಂತದ ಬಗ್ಗೆ ಇನ್ನೊಬ್ಬರು ಮಾತನಾಡಬೇಕಿಲ್ಲ. ಭಾರತ ಬಿಟ್ಟು ತೊಲಗಿ ಚಳವಳಿಯೂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಖ್ಯವಾಗಿತ್ತು ಎಂದರು.

ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ವಿಧಾನ ಪರಿಷತ್ ಶಾಸಕ ಕೆ.ಹರೀಶ್ ಕುಮಾರ್ ಮಾತನಾಡಿ, 1942ರಲ್ಲಿ ಗಾಂಧೀಜಿಯವರು ಪ್ರಾರಂಭಿಸಿದ ಕ್ವಿಟ್ ಇಂಡಿಯಾ ಚಳವಳಿಯೂ ಸ್ವಾತಂತ್ರ್ಯ ಲಭಿಸಿಸುವುದಕ್ಕೆ ಮಾಡಿದ ಕೊನೆ ಅಸ್ತ್ರವಾಗಿತ್ತು. ದೇಶದ ಜನರಿಗೆ ಸ್ವಾತಂತ್ರ್ಯ ಸಿಗಲೇಬೇಕು ಹಾಗೂ ಬ್ರಿಟೀಷರನ್ನು ತೊಲಗಿಸಬೇಕೆಂಬುದು ಗಾಂಧೀಜಿಯವರ ಉದ್ದೇಶವಾಗಿತ್ತು. ಈ ಚಳವಳಿಯಲ್ಲಿ ಅನೇಕ ನಾಯಕರು, ಪ್ರಜೆಗಳು ಭಾಗವಹಿಸುವ ಮೂಲಕ ಯಶಸ್ವಿಯಾಯಿತು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಶಿಧರ್ ಹೆಗ್ಡೆ, ವಿಶ್ವಾಸ್ ಕುಮಾರ್ ದಾಸ್, ಶುಭೋಧಯ ಆಳ್ವ, ಮೋಹನ್ ಗೌಡ, ಕುಮಾರಿ ಅಪ್ಪಿ, ಕೇಶವ ಮರೋಳಿ, ಪ್ರಕಾಶ್ ಸಾಲಿಯಾನ್, ಟಿ.ಕೆ.ಶೈಲಜಾ, ಬಿ.ಎಂ. ಅಬ್ಬಾಸ್ ಅಲಿ, ವಿವೇಕ್ ರಾಜ್ ಪನಾಮ, ನೀರಜ್ ಚಂದ್ರ ಪಾಲ್, ಟಿ.ಕೆ.ಸುಧೀರ್, ಚಂದ್ರಶೇಖರ ಪೂಜಾರಿ, ಪ್ರೇಮ್ ಬಳ್ಳಾಲ್ ಭಾಗ್, ಭಾಸ್ಕರ್ ರಾವ್, ಮಂಜುಳಾ ನಾಯ್ಕ್, ಸುರೇಶ್ ಶೆಟ್ಟಿ, ರಘುರಾಜ್ ಕದ್ರಿ, ಮುದಸ್ಸಿರ್ ಕುದ್ರೋಳಿ, ಗರೀಶ್ ಶೆಟ್ಟಿ, ಸಮರ್ಥ್ ಭಟ್, ಸ್ಟೀಪನ್ ಮರೋಳಿ, ಕಚೇರಿ ಕಾರ್ಯದರ್ಶಿ ನಝೀರ್ ಬಜಾಲ್ ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಸದಾಶಿವ್ ಉಳ್ಳಾಲ್ ಸ್ವಾಗತಿಸಿ, ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುರೇಂದ್ರ ಬಿ. ಕಂಬಳಿ ಧನ್ಯವಾದ ಸಲ್ಲಿಸಿದರು.


Spread the love