ದೀಪಕ್ ಕೊಲೆ ಪ್ರಕರಣ ಪಾಪ್ಯುಲರ್ ಫ್ರಂಟ್ ಮೇಲಿನ ಆರೋಪ ಖಂಡನೀಯ: ನವಾಝ್ ಉಳ್ಳಾಲ್

Spread the love

ದೀಪಕ್ ಕೊಲೆ ಪ್ರಕರಣ ಪಾಪ್ಯುಲರ್ ಫ್ರಂಟ್ ಮೇಲಿನ ಆರೋಪ ಖಂಡನೀಯ: ನವಾಝ್ ಉಳ್ಳಾಲ್

ಮಂಗಳೂರು: ದೀಪಕ್ ಕೊಲೆ ಪ್ರಕರಣವು ಕ್ರಿಮಿನಲ್ ಹಿನ್ನೆಲೆಯಿರುವ ವ್ಯಕ್ತಿಗಳ ಕೃತ್ಯವೆಂದು ದಟ್ಟವಾಗಿ ಕಾಣುತ್ತದೆ, ಆದರೆ ಇಂದು ಬಿಜೆಪಿ ಹಾಗು ಕಾಂಗ್ರೆಸ್ ಇದರ ದುರ್ಲಾಭವನ್ನು ಪಡೆಯುವ ಸಲುವಾಗಿ ಎಸ್ ಡಿ ಪಿ ಐ ಹಾಗು ಪಿ ಎಫ್ ಐ ಮೇಲೆ ಗೂಬೆ ಕೂರಿಸುವಂತ ಕೆಲಸ ಮಾಡುತ್ತಿದ್ದು, ಈ ಒಂದು ಘಟನೆಗೂ ಪಾಪ್ಯುಲರ್ ಫ್ರಂಟಿಗೂ ಯಾವುದೇ ಸಂಭಂದವಿರುವುದಿಲ್ಲ ಎಂದು ಪಿಎಫ್ಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ನವಾಜ್ ಉಳ್ಳಾಲ್ ಸ್ಪಷ್ಟಪಡಿಸಿದ್ದಾರೆ.

ಕಳೆದ ಹಲವು ವರುಷಗಳಿಂದ ಕ್ರಿಮಿನಲ್ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ಜಿಲ್ಲೆಯ ನಟೋರಿಯಸ್ ಗುಂಪೊಂದರ ಸಕ್ರಿಯ ಸದಸ್ಯರು ಕೊಲೆ ಪ್ರಕರಣದಲ್ಲಿ ಈಗಾಗಲೇ ಬಂದಿತರಾಗಿದ್ದರೂ, ಬಿಜೆಪಿ ಮತ್ತು ಸಂಘಪರಿವಾರ ಎಂದಿನಂತೆ ತನ್ನ ಶವರಾಜಕೀಯದ ಮೂಲಕ ಜಿಲ್ಲೆಯಲ್ಲಿ ಮತ್ತೊಮ್ಮೆ ಅಶಾಂತಿ ಉಂಟುಮಾಡಲು ಪ್ರಯತ್ನಿಸುತ್ತಿದೆ.

ಈ ಕೊಲೆ ಪ್ರಕರಣವನ್ನು ಪೋಲಿಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಇದರ ಹಿನ್ನೆಲೆಯಲ್ಲಿರುವ ಕಾಣದ ಕೈಗಳನ್ನು ಆದಷ್ಟು ಬೇಗ ಬಂಧಿಸಿ ನಿರ್ದಾಕ್ಷಿಣ್ಯ ಕ್ರಮವನ್ನು ಕೈಗೊಳ್ಳುವಂತೆ ಪಾಪ್ಯುಲರ್ ಫ್ರಂಟ್ ಆಗ್ರಹಿಸುತ್ತದೆ.

ಅದೇ ರೀತಿ ದೀಪಕ್ ಕೊಲೆ ಪ್ರಕರಣವನ್ನು ಕೋಮು ಬಣ್ಣಕ್ಕೆ ತಿರುಗಿಸಿ ಅಮಾಯಕ ಮುಸ್ಲಿಂ ಯುವಕರಾದ ಕೊಟ್ಟಾರ ಚೌಕಿಯಲ್ಲಿ ಬಷೀರ್ ಹಾಗು ಸುರತ್ಕಲ್ ನಲ್ಲಿ ಮುಬಷ್ಷಿರ್ ಅವರನ್ನು ಕೊಲೆಯತ್ನ ನಡೆಸಲು ಪ್ರಯತ್ನಿಸಿದ್ದು, ಈ ಒಂದು ಕೃತ್ಯದಲ್ಲಿ ಸಂಘಪರಿವಾರ ಪ್ರೇರಿತ ವ್ಯಕ್ತಿಗಳು ದೀಪಕ್ ರಾವ್ ಕೊಲೆಯ ಪ್ರತೀಕಾರವಾಗಿ ಅಮಾಯಕರನ್ನು ಗುರಿಪಡಿಸಿರುವುದು ಮೇಲ್ನೋಟದಲ್ಲಿ ಕಂಡು ಬರುತ್ತಿದೆ.

ಬಿಜೆಪಿ ದೀಪಕ್ ಕೊಲೆ ಪ್ರಕರಣವನ್ನು ಮುಂದಿಟ್ಟು ಜಿಲ್ಲೆಯಲ್ಲಿ ಗಲಭೆ ಸೃಷ್ಟಿ ಮಾಡಲು ಪ್ರಯತ್ನಿಸುತಿದ್ದು,ಪೋಲಿಸ್ ಇಲಾಖೆ ಈ ಎಲ್ಲಾ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ದೀಪಕ್ ರಾವ್ ಕೊಲೆ ಪ್ರಕರಣದಲ್ಲಿ ಶಾಮೀಲಾಗಿರುವ ಇತರ ಆರೋಪಿಗಳನ್ನು ಮತ್ತು ಅಮಾಯಕ ಮುಸ್ಲಿಂ ಯುವಕರ ಮೇಲೆ ದಾಳಿ ಮಾಡಿದ ದುಷ್ಕರ್ಮಿಗಳನ್ನು ಅತೀ ಶೀಘ್ರದಲ್ಲಿ ಬಂಧಿಸುವಂತೆ ಪಿಎಫ್ಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ನವಾಜ್ ಉಳ್ಳಾಲ್ ಆಗ್ರಹಿಸಿದ್ದಾರೆ.


Spread the love