ದುಬೈ ಅಂತರರಾಷ್ಟ್ರೀಯ ಹೋಲಿ ಕುರ್ಆನ್ ಅವಾರ್ಡ್

Spread the love

ದುಬೈ ಅಂತರರಾಷ್ಟ್ರೀಯ ಹೋಲಿ ಕುರ್ಆನ್ ಅವಾರ್ಡ್: ಶುಕ್ರವಾರ ಶಾಫೀ ಸಅದಿಯವರಿಂದ ಪ್ರಭಾಷಣ

ದುಬೈ: ದುಬೈ ಹೋಲಿ ಕುರ್ಆನ್ ಅವಾರ್ಡ್ ಸಮಿತಿ ನಡೆಸಲ್ಪಡುತ್ತಿರುವ ಅಂತರಾಷ್ಟ್ರೀಯ ಹೋಲಿ ಕುರ್ಆನ್ ಅವಾರ್ಡ್ 2016 ಬೃಹತ್ ಕಾರ್ಯಕ್ರಮದಲ್ಲಿ ಕನ್ನಡದ ಕಣ್ಮಣಿ, ಭಾಷಣ ಲೋಕದ ಮಿನುಗುತಾರೆ, ಪ್ರಮುಖ ಮೇಧಾವಿ ಎನ್.ಕೆ.ಎಂ ಶಾಫೀ ಸಅದಿ ಬೆಂಗಳೂರು ಆಯ್ಕೆಯಾಗಿದ್ದು ಇವರು 24/06/2016 ನೇ  ಶುಕ್ರವಾರ  ಮುಹೈಸಿನ ಇಂಡಿಯನ್ ಸ್ಕೂಲ್ “ಶಾಂತಿಯುತ ಜಗತ್ತಿಗೆ ಕುರಾನಿನ ಸಂದೇಶ ” ಎಂಬ ವಿಷಯವನ್ನು ಆಧರಿಸಿ ಕನ್ನಡ, ಮಲಯಾಳಂ, ಉರ್ದು ಭಾಷೆಗಳಲ್ಲಿ ಪ್ರೌಢೊಜ್ವಲ ಭಾಷನ ಮಾಡಲಿದ್ದಾರೆ. ಈ   ಕಾರ್ಯಕ್ರಮದ ಸಂಪೂರ್ಣ ಉಸ್ತುವಾರಿಯನ್ನು ದುಬೈ ಜಾಮಿಯಾ ಸಅದಿಯಾ ಇಂಡಿಯನ್ ಸೆಂಟರ್ ವಹಿಸಿಕೊಂಡಿದೆ.

ದುಬೈ ಅಂತರಾಷ್ಟ್ರೀಯ ಹೋಲಿ ಕುರ್ಆನ್ ಅವಾರ್ಡ್ ಕಾರ್ಯಕ್ರಮದಲ್ಲಿ ಇದೇ ಮೊದಲ ಬಾರಿಗೆ ಕನ್ನಡಿಗನಿಗೆ ದುಬೈ ಸರಕಾರ ಅವಕಾಶವನ್ನು ನೀಡಿದುದರ ಪರಿಣಾಯಾಮವಾಗಿ ಈ ಕಾರ್ಯಕ್ರಮದಲ್ಲಿ 5000 ರಕ್ಕಿಂತಲೂ ಮಿಕ್ಕ ಅನಿವಾಸಿ ಪ್ರೇಕ್ಷಕರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಕಾರ್ಯಕ್ರಮದ ವೀಕ್ಷಣೆಗಾಗಿ ಪ್ರತ್ಯೇಕ ಸೌಕರ್ಯ ಏರ್ಪಡಿಸಿದ್ದು ಆಡಿಟೋರಿಯಂನ ಹೊರಾಂಗಣ ಮತ್ತು ಒಳಾಂಗಣಗಳಲ್ಲಿ ಬೃಹತ್ ಪ್ರಮಾಣದ ಆಸನದ ವ್ಯವಸ್ಥೆ ಹಾಗೂ ಬೃಹತ್ ಸ್ಕ್ರೀನ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಯು.ಎ.ಇ ಯ ವಿವಿಧ  ರಾಜ್ಯಗಳಿಂದ ಪ್ರೇಕ್ಷಕರನ್ನು ಕರೆ ತರಲು ವಿಶೇಷ ವಾಹನದ ವ್ಯವಸ್ಥೆಯನ್ನು ಏರ್ಪಡಿಸಲಾಗಿದೆ. ವಾಹನ ಸೌಲಭ್ಯಗಳ ಕುರಿತು ಹೆಚ್ಚಿನ ಮಾಹಿತಿಗಳಿಗಾಗಿ 050-5015024 ಸಂಪರ್ಕಿಸಲು ಕೋರಲಾಗಿದೆ. ಕೆ.ಸಿ.ಎಫ್, ಐ.ಸಿ.ಎಫ್, ಆರ್.ಎಸ್. ಸಿ ಘಟಕಗಳು ಪ್ರಚಾರದ ಉಸ್ತುವಾರಿಯನ್ನು ವಹಿಸಿ ಕಾರ್ಯನಿರ್ವಹಿಸುತ್ತಿದೆ.

image002holy-quran-award-press-20160623-002 image001holy-quran-award-press-20160623-001

ದುಬೈ ಅಂತರರಾಷ್ಟ್ರೀಯ ಹೋಲಿ ಕುರ್ಆನ್ ಅವಾರ್ಡ್ 2016 ಕಾರ್ಯಕ್ರಮದಲ್ಲಿ ದುಬೈ ಸರಕಾರದ ಪ್ರತ್ಯೇಕ ಅಹ್ವಾನಿತನಾಗಿ ಆಗಮಿಸುತ್ತಿರುವ ಎನ್.ಕೆ.ಎಂ ಶಾಫೀ ಸಅದಿ ಬೆಂಗಳೂರು ಪ್ರಮುಖ ಮೇಧಾವಿಯೂ, ಧಾರ್ಮಿಕ ಮತ್ತು ಲೌಕಿಕ ಶಿಕ್ಷಣವನ್ನು ಕರಗತ ಮಾಡಿದ ಉನ್ನತ ಬಿರುದುದಾರಿಯೂ, ಕರ್ನಾಟಕ ಧಾರ್ಮಿಕ ಸೇವಾ ರಂಗದಲ್ಲಿ ಹೊಸ ಹುರುಪನ್ನು ಮೂಡಿಸಿದ ವ್ಯಕ್ತಿಯೂ ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ನಿರ್ದೇಶಕರೂ ಆಗಿರುತ್ತಾರೆ.  ಕರ್ನಾಟಕ  ಎಸ್.ಎಸ್.ಎಫ್ ರಾಜ್ಯಾಧ್ಯಕ್ಷರಾದ ಇವರು ಬೆಂಗಳೂರು ಕೇಂದ್ರೀಕರಿಸಿ ಭೋಧನಾ ರಂಗದಲ್ಲಿ ಧಾರ್ಮಿಕ ಮತ್ತು ಲೌಕಿಕ ಶಿಕ್ಷಣದ ಸಮನ್ವಯ ವಿದ್ಯಾಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿರುವ ಸಅದಿಯಾ ಫೌಂಡೇಷನ್ ಇದರ ರೂವಾರಿಯೂ ಆಗಿದ್ದಾರೆ.

ಪ್ರಸ್ತುತ ಕಾರ್ಯಕ್ರಮದಲ್ಲಿ ದುಬೈ ಅಂತರಾಷ್ಟ್ರೀಯ ಹೋಲಿ ಕುರ್ಆನ್ ಅವಾರ್ಡ್ ಪ್ರತಿನಿಧಿಗಳು, ಯು.ಎ.ಇ ರಾಷ್ಟ್ರೀಯ ನಾಯಕರು, ಸಮಸ್ತ ಜಂಇಯ್ಯತುಲ್ ಉಲಮಾ ಪಂಡಿತ ಶಿರೋಮಣಿಗಳು, ದುಬೈ ಮಹಾನಗರ ಪಾಲಿಕೆ ಹಾಗೂ ವಾಣಿಜ್ಯ ವಿಭಾಗದ ಪ್ರಮುಖ ಮಂತ್ರಿ ಮಾಗಧರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಜಾಮಿಯಾ ಸಅದಿಯಾ ಇದರ ಕೇಂದ್ರ ಕಮಿಟಿ ಕಾರ್ಯದರ್ಶಿಯೂ ಧಾರ್ಮಿಕ ಸೇವಾ ರಂಗದಲ್ಲಿ ಆತ್ಮೀಯ ನೇತೃತ್ವ ನೀಡಿ ದಕ್ಷಿಣ ಕನ್ನಡ ಜಿಲ್ಲೆಯ ಹಲವಾರು ಮಹಲಿನ ಖಾಝಿಯಾಗಿ ಸೇವೆ ಸಲ್ಲಿಸುತ್ತಿರುವ ಅಸ್ಸಯ್ಯದ್ ಫಝಲ್ ಕೋಯಮ್ಮ ತಂಙಲ್ ಕೂರ ದುವಾಶಿರ್ವಚನ ನೀಡಲಿದ್ದಾರೆ ಎಂದು ಸಂಘಟಕರು ಪ್ರತ್ಯೇಕವಾಗಿತಿಳಿಸಿದ್ದಾರೆ.

ಭೂಲೊಕಕ್ಕೆ ಕುರ್ಆನ್ ಅವತೀರ್ಣಗೊಳಿಸಲ್ಪಟ್ಟ ಪವಿತ್ರ ರಂಝಾನ್ ತಿಂಗಳಿನಲ್ಲಿ ಕುರ್ಆನಿನ ಶಾಂತಿ ಹಾಗೂ ಸಮಾಧಾನದ ಸಂದೇಶಗಳು ವಿಶ್ವದ ಮೂಲೆ ಮೂಲೆಗೂ ತಲುಪಿಸುವ ಸಲುವಾಗಿ  ಮತ್ತು ಕುರ್ಆನ್ ಕಲಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಉದ್ದೇಶದಿಂದ ದುಬೈ ಸರಕಾರ  ಸುಮಾರು19 ವರ್ಷಗಳಿಂದ ನಿರಂತರವಾಗಿ ಇಂತಹ ಕಾರ್ಯಕ್ರಮಗಳನ್ನು ನಡೆಸಿ ಇಸ್ಲಾಮಿನ ಸುಂದರ ಸಂದೇಶವನ್ನು ಜಗದಗಲ ವ್ಯಾಪಿಸುತ್ತಿದೆ.

ಸಮಸ್ತ ಜಂಇಯ್ಯತುಲ್ ಉಲಮಾ ಇದರ ಗೌರವಾಧ್ಯಕ್ಷರೂ ಕೇರಳ ಮುಸ್ಲಿಂ ನವೋತ್ಥಾನ ನಾಯಕನಾಗಿ ಮೆರೆದ ಶೈಖುನಾ ಮರ್ಹೂಂ ನೂರುಲ್ ಉಲಮಾ ಅಬ್ದುಲ್ ಖಾದರ್ ಮುಸ್ಲಿಯಾರ್ ಅನುಗ್ರಹೀತ ನೇತೃತ್ವದಲ್ಲಿ ಕಾಸರಗೋಡಿನ ಹೃದಯ ಭಾಗವಾದ ದೇಲಿಯಲ್ಲಿ ತಲೆ ಎತ್ತಿ ನಿಂತಿರುವ ಧಾರ್ಮಿಕ ಮತ್ತು ಲೌಕಿಕ ಶಿಕ್ಷಣದ ಸಮನ್ವಯ ವಿದ್ಯಾಕೇಂದ್ರವಾಗಿದೆ ಜಾಮಿಯಾ ಸ-ಅದಿಯ ಅರಬಿಯ . ಇದರ ಅಂಗ ಸಂಸ್ಥೆಯಾದ ದುಬೈ ಔಕಾಫಿನ ಅಂಗೀಕಾರದೊಂದಿಗೆ ಕಳೆದ ಮೂರು ಶತಮಾನಗಳಿಂದ ಜಾಮಿಯಾ ಸಅದಿಯಾ ಇಂಡಿಯನ್ ಸೆಂಟರ್ ಮಾಯಾನಗರಿ ದುಬೈ ನಲ್ಲಿ ಕಾರ್ಯಾಚರಿಸುತ್ತಿದೆ. ಪ್ರಮುಖವಾಗಿ ಈ ಸಂಸ್ಥೆಯಲ್ಲಿ ಪ್ರೈಮರಿ ಹಾಗೂ ಸೆಕೆಂಡರಿ ಮಟ್ಟದ ಮದರಸಗಳು, ಧಾರ್ಮಿಕ ಭೊದನಾ ತರಗತಿಗಳು, ಹಾಗೂ ಕೌಟುಂಬಿಕ ತರಗತಿಗಳು, ಕುರ್ಆನ್ ಪರಿಶೀಲನಾ ವೇದಿಕೆ, ಇಸ್ಲಾಮಿಕ್ ಗ್ರಂಥಾಲಯ, ಅನಿವಾಸಿಗಳಿಗೆ ಪ್ರತ್ಯೇಕ ಉಮ್ರಾ ಸರ್ವಿಸ್ ಮೊದಲಾದ ಧಾರ್ಮಿಕ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಕಾರ್ಯಾಚರಿಸುತ್ತಿದೆ.

ಪವಿತ್ರ ರಂಝಾನ್ ತಿಂಗಳ ಎಲ್ಲಾ 30 ದಿನಗಳಲ್ಲಿ ಪ್ರತ್ಯೇಕ ಇಫ್ತಾರ್ ಸಂಗಮ ಹಾಗೂ ದುಬೈಯ ವಿವಿಧ ಮಸೀದಿಗಳನ್ನು ಕೇಂದ್ರೀಕರಿಸಿ ಪ್ರತ್ಯೇಕ ಅನುಮತಿಯ ಮೇರೆಗೆ ಖುತುಭಾ ಪ್ರಭಾಷಣಗಳಿಗೆ ಮತ್ತು ಧಾರ್ಮಿಕ ಸೇವೆಗಳಿಗೆ ನೇತೃತ್ವವನ್ನು ನೀಡುತ್ತಿದೆ.

ಐ.ಸಿ.ಎಫ್ ಮಿಡಲ್ ಈಸ್ಟ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಸಖಾಫಿ ಮಂಬಾಡ್, ದುಬೈ ಜಾಮಿಯಾ ಸಅದಿಯಾ ಇಂಡಿಯನ್ ಸೆಂಟರ್ ಮ್ಯಾನೇಜರ್ ಅಹಮದ್ ಮುಸ್ಲಿಯಾರ್, ಕಾರ್ಯದರ್ಶಿ ಅಮೀರ್ ಹಸ್ಸನ್,   ಪ್ರಸ್ತುತ ಕಾರ್ಯಕ್ರಮದ ಸ್ವಾಗತ ಸಮಿತಿ ನಿರ್ದೇಶಕರಾದ ಅಬ್ದುಲ್ ಕರೀಂ ತಲಂಗರ, ಕರ್ನಾಟಕ ಕಲ್ಚರಲ್ ಫೌಂಡೇಷನ್ ಯು.ಎ.ಇ ಶಿಕ್ಷಣ ವಿಭಾಗದ ಅಧ್ಯಕ್ಷರಾದ ಅಬ್ದುಲ್ ಜಲೀಲ್ ನಿಝಾಮಿ ಎಮ್ಮೆಮ್ಮಾಡು, ಕೆ.ಸಿ.ಎಫ್ ದುಬೈ ಝೋನ್ ಆಡಳಿತ ವಿಭಾಗದ ಅಧ್ಯಕ್ಷರಾದ ರಫೀಕ್ ಕಲ್ಲಡ್ಕ, ಪ್ರಧಾನ ಕಾರ್ಯದರ್ಶಿ ಕಲಂದರ್ ಕಬಕ, ಕರ್ನಾಟಕ ಕಲ್ಚರಲ್ ಫೌಂಡೇಷನ್ ಅಜ್ಮಾನ್ ಝೋನ್ ಆಡಳಿತ ವಿಭಾಗದ ಕಾರ್ಯದರ್ಶಿ ನಿಝಮುದ್ದೀನ್ ಮದನಿ ಉರುವಾಲು ಪದವು ಮೊದಲಾದ ಗಣ್ಯವ್ಯಕ್ತಿಗಳು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.


Spread the love