ಧರ್ಮಸ್ಥಳ: ಭಜನೆಯಿಂದ ಆರೋಗ್ಯ ಮತ್ತು ಮಾನಸಿಕ ನೆಮ್ಮದಿ ಸಿಗುತ್ತದೆ

Spread the love

ಧರ್ಮಸ್ಥಳ: 17ನೇ ವರ್ಷದ ಭಜನಾ ತರಬೇತಿ ಕಮ್ಮಟವನ್ನು ಮಂಗಳವಾರ ಗುರುಪುರದ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಉದ್ಘಾಟಿಸಿದರು. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ವಿ. ಹೆಗ್ಗಡೆ, ಮಾಣಿಲದ ಮೋಹನದಾಸ ಸ್ವಾಮೀಜಿ ಡಿ. ಹರ್ಷೇಂದ್ರ ಕುಮಾರ್ ಮತ್ತು ಉಜಿರೆಯ ವಿಜಯರಾಘವ ಪಡ್ವೆಟ್ನಾಯ ಉಪಸ್ಥಿತರಿದ್ದರು.

ದೃಢ ಭಕ್ತಿಯಿಂದ ಭಗವಂತನ ಅನುಸಂಧಾನ ಮಾಡಿದರೆ ಸುಲಭದಲ್ಲಿ ಅವರ ಅನುಗ್ರಹಕ್ಕೆ ಪಾತ್ರರಾಗಬಹುದು. ಭಜನೆಯಿಂದ ಆರೋಗ್ಯ ಮತ್ತು ಮಾನಸಿಕ ನೆಮ್ಮದಿ ಸಿಗುತ್ತದೆ ಎಂದು ಗುರುಪುರದ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.

1-hegade-20151006 2-hegade-20151006-001 3-hegade-20151006-002 4-hegade-20151006-003 5-hegade-20151006-004 6-hegade-20151006-005 7-hegade-20151006-006 8-hegade-20151006-007

ಧರ್ಮಸ್ಥಳದಲ್ಲಿ 17ನೇ ವರ್ಷದ ಭಜನಾ ತರಬೇತಿ ಕಮ್ಮಟವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

ತಪಸ್ಸು, ಯಜ್ಞ, ಯಾಗಾದಿ ಮಾಡಲು ಸಾಧ್ಯವಾಗದಿದ್ದರೂ ನಿತ್ಯವೂ ಇಚ್ಛಾಶಕ್ತಿಯಿಂದ ಭಗವಂತನ ನಾಮಸ್ಮರಣೆ ಮಾಡಿದರೆ ಜೀವನ ಪಾವನವಾಗುತ್ತದೆ. ವಿಚಾರವಂತರು ಮತಿಭ್ರಷ್ಟರಾಗದಂತೆ ಭಜನೆ ತಡೆಯುತ್ತದೆ. ಭಜನೆಯಿಂದ ಮನಸ್ಸು ಪವಿತ್ರವಾಗುತ್ತದೆ. ದಾಸ ಸಾಹಿತ್ಯ ಮತ್ತು ಭಜನಾ ಸಾಹಿತ್ಯದಿಂದ ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಮಣಿಪಾಲದ ಮೋಹನದಾಸ ಸ್ವಾಮೀಜಿ ಶುಭಾಶಂಸನೆ ಮಾಡಿದರು.

ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಭಜನೆಯಿಂದ ಜಾತಿ-ಮತ, ಪಂಕ್ತಿ ಬೇಧ ಮರೆತು ಸಾಮರಸ್ಯ ಉಂಟಾಗಿ ಆರೋಗ್ಯಪೂರ್ಣ ಸಮಾಜದ ಸಂಘಟನೆಯಾಗುತ್ತದೆ. ಭಗವಂತನ ಮುಂದೆ ನಾವೆಲ್ಲರೂ ಸಮಾನರು ಎಂಬ ಭಾವನೆ ಮೂಡಿಬರುತ್ತದೆ. ಪರಂಪರಾಗತವಾಗಿ ಬಂದ ಭಜನೆಯ ಪರಿಪಾಠವನ್ನು ರಾಗ-ತಾಳ, ಲಯಬದ್ಧವಾಗಿ ಶಿಸ್ತಿನಿಂದ ಮುಂದುವರಿಸುವುದೇ ಭಜನಾ ತರಬೇತಿ ಕಮ್ಮಟದ ಉದ್ದೇಶವಾಗಿದೆ. ತಮ್ಮ ಬೀಡಿನಲ್ಲಿ (ನಿವಾಸದಲ್ಲಿ) ನಿತ್ಯವೂ ಬೆಳಿಗ್ಗೆ ಮತ್ತು ಸಂಜೆ ದೇವರ ಭಜನೆ ಹಾಡುವ ಸಂಪ್ರದಾಯ ಈಗಲೂ ಇದೆ ಎಂದು ಅವರು ತಿಳಿಸಿದರು.

ಸರಳ ಸಾಹಿತ್ಯದ ಮೂಲಕ ಭಜನೆಯು ಪದ್ಯಗಳಲ್ಲಿ ಸುಲಭ ಗ್ರಾಹ್ಯವಾಗಿ ಬದುಕಿನ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಿದೆ. ಭಗವಂತನಿಗೆ ಭಕ್ತರ ಭಕ್ತಿಯೇ ಮುಖ್ಯ ಹೊರತು ಸಾಹಿತ್ಯ, ಸಂಗೀತದ ಪ್ರಕಾರಗಳಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಶಿಬಿರಾರ್ಥಿಗಳು ದುಶ್ಚಟಗಳನ್ನು ದೂರಮಾಡಿ ಆದರ್ಶ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ಸಮಾಜ ಸುಧಾರಣೆಯ ರೂವಾರಿಗಳಾಗಬೇಕು, ದಕ್ಷ ನಾಯಕರಾಗಬೇಕು ಎಂದು ಹೆಗ್ಗಡೆಯವರು ಸಲಹೆ ನೀಡಿದರು.

ಭಜನಾ ಪರಿಷತ್ ರಚನೆ: ಎಲ್ಲಾ ಭಜನಾ ಮಂಡಳಿಗಳ ಸಮರ್ಪಕ ನಿರ್ವಹಣೆಗಾಗಿ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ರಚಿಸಲಾಗಿದೆ ಎಂದು ಹೆಗ್ಗಡೆಯವರು ಪ್ರಕಟಿಸಿದರು. ಪರಿಷತ್ ಮೂಲಕ ಈ ವರ್ಷದಿಂದ ಅನೇಕ ಕಾರ್ಯಕ್ರಮಗಳನ್ನು ರೂಪಿಸಲಾಗುವುದು.

ಹೇಮಾವತಿ ವಿ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್ ಮತ್ತು ಉಜಿರೆಯ ವಿಜಯರಾಘವ ಪಡ್ವೆಟ್ನಾಯ ಉಪಸ್ಥಿತರಿದ್ದರು.

ಒಂದು ವಾರ ನಡೆಯುವ ತರಬೇತಿ ಕಮ್ಮಟದಲ್ಲಿ 102 ಭಜನಾ ಮಂಡಳಿಗಳ 193 ಮಂದಿ ಶಿಬಿರಾರ್ಥಿಗಳು ಭಾಗವಹಿಸುತ್ತಿದ್ದಾರೆ.


Spread the love