ಧರ್ಮ ಸಂಸದ್ ಪ್ರಚಾರ ರಥ ಉಡುಪಿ ಪ್ರವೇಶ; ಕಡಿಯಾಳಿಯಲ್ಲಿ ಭವ್ಯ ಸ್ವಾಗತ

Spread the love

ಧರ್ಮ ಸಂಸದ್ ಪ್ರಚಾರ ರಥ ಉಡುಪಿ ಪ್ರವೇಶ; ಕಡಿಯಾಳಿಯಲ್ಲಿ ಭವ್ಯ ಸ್ವಾಗತ

ಉಡುಪಿ: ನ.24ರಿಂದ 26ರವರೆಗೆ ಉಡುಪಿಯಲ್ಲಿ ವಿಶ್ವ ಹಿಂದು ಪರಿಷತ್ ವತಿಯಿಂದ ನಡೆಯುವ ಅಖಿಲ ಭಾರತ ಸಂತರ ಸಮ್ಮೇಳನ – ಧರ್ಮ ಸಂಸದ್ ಗೆ ಪ್ರಚಾರಾರ್ಥವಾಗಿ ಜಿಲ್ಲೆಯಾದ್ಯಂತ ತಿರುಗಾಡುತ್ತಿರುವ ಸುಧರ್ಮ ರಥವು ಬುಧವಾರ ಉಡುಪಿ ನಗರವನ್ನು ಪ್ರವೇಶಿಸಿತು. ಅದನ್ನು ಕಡಿಯಾಳಿಯಲ್ಲಿ ಭವ್ಯವಾಗಿ ಸ್ವಾಗತಿಸಲಾಯಿತು. ನಂತರ ಉಡುಪಿ ರಥಬೀದಿಯವರೆಗೆ ಅದನ್ನು ಮೆರವಣಿಗೆಯಲ್ಲಿ ಕರೆ ತರಲಾಯಿತು.

  ರಥಬೀದಿಯಲ್ಲಿ ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ ಅವರು ರಥಕ್ಕೆ ಆರತಿ ಬೆಳಗಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಹಿಂದೆ ಮಹಾಭಾರತದಲ್ಲಿ ಕೃಷ್ಣ ಮತ್ತು ಅರ್ಜುನರು ಜೊತೆಯಾಗಿ ರಥಾರೂಢರಾಗಿ ವಿಜಯ ಸಾಧಿಸಿದ್ದರು. ಅದೇ ರೀತಿ ವಿಶ್ವ ಹಿಂದು ಪರಿಷತ್ ಒಂದು ರಥ ಇದ್ದ ಹಾಗೆ, ಅದರಲ್ಲಿ ಎಲ್ಲಾ ಹಿಂದುಗಳು ರಥಿಕ ಅರ್ಜುನ ಮತ್ತು ಎಲ್ಲಾ ಸಾಧುಸಂತರು ಸಾರಥಿ ಕೃಷ್ಣನಂತೆ ಜೊತೆಯಾಗಿ ಸಾಗಿದರೇ ಹಿಂದೂ ಸಮಾಜಕ್ಕೆ ಎಲ್ಲಾ ಸಮಸ್ಯೆಗಳಲ್ಲಿ ವಿಜಯ ಸಾಧಿಸಲು ಸಾಧ್ಯ. ಆದ್ದರಿಂದ ಧರ್ಮ ಸಂಸದ್ ನಲ್ಲಿ ಎಲ್ಲಾ ಹಿಂದೂಗಳು ಭಾಗವಹಿಸಬೇಕು ಎಂದು ಆಶೀರ್ವದಿಸಿದರು.

  ಈ ಸಂದರ್ಭದಲ್ಲಿ ಬಜರಂಗದಳ ಪ್ರಾಂತ ಸಂಚಾಲಕ ಶರಣ್ ಪಂಪ್ ವೆಲ್, ಸುನೀಲ್ ಕೆ.ಆರ್, ವಿ.ಹಿಂ.ಪರಿಷತ್ತಿನ ಜಿಲ್ಲಾಧ್ಯಕ್ಷ ಪಿ. ವಿಲಾಸ್ ನಾಯಕ್, ಉಪಾಧ್ಯಕ್ಷೆ ಸುಪ್ರಭಾ ಆಚಾರ್ಯ, ದುರ್ಗಾವಾಹಿನಿಯ ಜಿಲ್ಲಾಧ್ಯಕ್ಷೆ ರಮಾ ಜೆ.ರಾವ್, ಮಾತೃಮಂಡಳಿಯ ಜಿಲ್ಲಾ ಪ್ರಮುಖ ಪದ್ಮಾ ರತ್ನಾಕರ್, ಜನರಂಗದಳದ ಸಹಸಂಚಾಲಕರಾದ ಅಚ್ಯುತ್ ಕಲ್ಮಾಡಿ ಮತ್ತು ದಿನೇಶ ಮೆಂಡನ್, ವಿ.ಹಿಂ.ಪ.ನ ನಗರಾಧ್ಯಕ್ಷ ಸಂತೋಷ್ ಸುವರ್ಣ, ಸುರಕ್ಷ ಪ್ರಮುಖ್ ಅನಿಲ್ ಮತ್ತು ಮಾಜಿ ಶಾಸಕ ಕೆ. ರಘುಪತಿ ಭಟ್, ಬಿಜೆಪಿ ನಾಯಕರಾದ ಸಂಧ್ಯಾ ರಮೇಶ್, ನಯನಾ ಗಣೇಶ, ಉದಯಕುಮಾರ್ ಶೆಟ್ಟಿ, ಸುಪ್ರಸಾದ್ ಶೆಟ್ಟಿ ಮುಂತಾದವರು ಭಾಗವಹಿಸಿದ್ದರು.

 


Spread the love