ನಂಜನಗೂಡು-ಗುಂಡ್ಲುಪೇಟೆ ಮುಂದಿನ ಬಾರಿ ಗೆಲುವು ನಮ್ಮದೇ : ಶೋಭಾ ಕರಂದ್ಲಾಜೆ

Spread the love

ನಂಜನಗೂಡು-ಗುಂಡ್ಲುಪೇಟೆ ಮುಂದಿನ ಬಾರಿ ಗೆಲುವು ನಮ್ಮದೇ : ಶೋಭಾ ಕರಂದ್ಲಾಜೆ

ಪಡುಬಿದ್ರಿ: ನಂಜನಗೂಡು ಹಾಗೂ ಗುಂಡ್ಲು ಪೇಟೆ ನಮ್ಮದಲ್ಲದ ಕ್ಷೇತ್ರ. ಕಳೆದ 70 ವರ್ಷಗಳ ಸ್ವಾತಂತ್ರದ ಅವಧಿಯಲ್ಲಿ ನಾವೆಲ್ಲೂ ಗೆದ್ದಿಲ್ಲ. ಕಳೆದ ಬಾರಿಗಿಂತ ನಾವು ಅತೀ ಹೆಚ್ಚು ಮತವನ್ನು ಪಡೆದುಕೊಂಡಿದ್ದೇವೆ ಎಂಬ ಸಂತಸ ನಮ್ಮಲ್ಲಿದೆ ಎಂದು ಉಡುಪಿ- ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಅವರು ಭಾನುವಾರ ಬೆಳಿಗ್ಗೆ ಎರ್ಮಾಳಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಔಪಚಾರಿಕವಾಗಿ ಮಾತನಾಡಿದರು.
ಆಡಳಿತ ಕಾಂಗ್ರೆಸ್ ಪಕ್ಷವು ಪೂರ್ಣ ಪ್ರಮಾಣದಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದೆ. 25ಕ್ಕಿಂತಲೂ ಅಧಿಕ ಮಂತ್ರಿಗಳು ಎರಡೂ ಕ್ಷೇತ್ರಗಳಿಗೆ ಆಗಮಿಸಿ ಮತ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರಲ್ಲಿ ನಂಜನಗೂಡು ಹಾಗೂ ಗುಂಡ್ಲು ಪೇಟೆಯನ್ನು ಮೊದಲ ಬಾರಿಗೆ ನೋಡುವವರೂ ಬಂದಿದ್ದಾರೆ. ಅಲ್ಲಿ ದೊಡ್ಡ ಪ್ರಮಾಣದ ಅವ್ಯವಹಾರ ನಡೆದಿದೆ. ನಾವು ದಿನಕ್ಕೆ ಮೂರ್ನಾಲ್ಕು ಕೇಸುಗಳನ್ನು ನೀಡಿದರೂ, ಅಧಿಕಾರಿಗಳು ಹಾಗೂ ಪೋಲಿಸ್ ಇಲಾಖೆ ಸ್ಪಂಧಿಸಿಲ್ಲ. ಆದ್ದರಿಂದ ನಮ್ಮ ಪಕ್ಷಕ್ಕೆ ಸೋಲಾಗಿದೆ. ಆ ಸೋಲನ್ನೇ ನಾವು ಸವಾಲಾಗಿ ಸ್ವೀಕರಿಸಿ ಮುಂದೆ ಗೆದ್ದೇ ಗೆಲ್ತೇವೆ ಎಂದರು.

ನಂಜನಗೂಡು ಹಾಗೂ ಗುಂಡ್ಲು ಪೇಟೆ ಸೋಲಿನ ಮೇಲೆ ಮಾಜಿ ಮುಖ್ಯಮಂತ್ರಿ ಹಾಗೂ ಮುಂದಿನ ಬಾರಿ ಬಿಜೆಪಿ ಮುಖ್ಯಮಂತ್ರಿ ಎಂದು ಬಿಂಬಿಸಲಾದ ಯಡಿಯೂರಪ್ಪನವರ ಮೇಲೆ ಪರಿಣಾಮ ಬಿದ್ದಿದೆಯಾ ಎಂಬ ಪ್ರಶ್ನೆಗೆ, ರಾಜ್ಯದಲ್ಲಿ ಯಡಿಯೂರಪ್ಪ ಪರವಾದ ವಾತಾವರಣ ಇದೆ. ಎರಡೂ ಕ್ಷೇತ್ರಗಳಲ್ಲಿ ನಾವು ಅತೀ ಹೆಚ್ಚಿನ ಮತ ಗಳಿಸಿದ್ದು, ಅತೀವ ಸಂತಸ ತಂದಿದೆ. ಮುಂದಿನ 2018ರ ಚುನಾವಣೆಯಲ್ಲಿ ನಾವು ಆ ಎರಡೂ ಕ್ಷೇತ್ರಗಳನ್ನು ಗೆದ್ದೇ ಗೆಲ್ತೀವಿ ಎಂದರು.

ಯಡಿಯೂರಪ್ಪರವರನ್ನು ಬದಲಿಸಲಾಗುತ್ತದೆ ಎಂಬ ಸುದ್ದಿ ಇದೆ ಏನನ್ತೀರಾ ಎಂಬ ಪ್ರಶ್ನೆಗೆ, ಅದು ಕೇವಲಾ ಗುಲ್ಲು. ಅವರು ರಾಜ್ಯಾಧ್ಯಕ್ಷರ ಜೊತೆಗೆ ನಮ್ಮ ಮುಂದಿನ ಮುಖ್ಯ ಮಂತ್ರಿ ಎಂದು ಪಕ್ಷ ಹೇಳಿದೆ. ಬದಲಾವಣೆ ವಿಷಯವನ್ನು ಕಾಂಗ್ರೆಸ್ಸಿಗರು ಮಾತ್ರಾ ಮಾತನಾಡಬಲ್ಲರು ಎಂದಿದ್ದಾರೆ.

ಹೆದ್ದಾರಿ ಇಲಾಖೆಯು ತಮ್ಮ ಕಾಮಗಾರಿ ಮುಗಿಸದೆ ಟೋಲ್ ಸಂಗ್ರಹಿಸುತ್ತಿದ್ದಾರಲ್ಲಾ ಎಂಬ ಪ್ರಶ್ನೆಗೆ, ಆದಷ್ಟು ಶೀಘ್ರವಾಗಿ ಕಾಮಗಾರಿ ಮುಗಿಸುವಂತೆ ನವಯುಗ ಕಂಪನಿ ಅಧಿಕಾರಿ ಲಕ್ಷ್ಮಿ ನಾರಾಯಣ ಅವರಿಗೆ ಆದೇಶ ನೀಡಿದ್ದೇವೆ. ಈ ಬಗ್ಗೆ ಏನೆಲ್ಲಾ ಮಡಬೇಕೋ ಅದನ್ನು ಮಾಡುತ್ತೇವೆ ಎಂದರು.

ಕಾಪು ತಾಲೂಕು ರಚನೆ ಹೋರಾಟದ ಬಗ್ಗೆ ವಿನಯ್ ಕುಮಾರ್ ಸೊರಕೆ ಹೇಳಿಕೆ ಕುರಿತು ಪತ್ರಕರ್ತರರು ಕೇಳಿದ ಪ್ರಶ್ನೆಗೆ ನೋ ಕಮೆಂಟ್ ಎಂದು ಹೇಳಿದ ಸಂಸದೆ ಮುಂದಡಿ ಇಟ್ಟಿದ್ದಾರೆ.


Spread the love