ನಗರಸಭಾ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆ ಕಡ್ಡಾಯ ನಿಷೇಧ- ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್

Spread the love

ನಗರಸಭಾ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆ ಕಡ್ಡಾಯ ನಿಷೇಧ- ಜಿಲ್ಲಾಧಿಕಾರಿ

ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಕಡ್ಡಾಯವಾಗಿ ಪ್ಲಾಸ್ಟಿಕ್ ನಿಂದ ತಯಾರಿಸಿದ ದಿನಬಳಕೆಯ ವಸ್ತುಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದ್ದು, ಎಲ್ಲಾ ಹೊಟೇಲ್, ಬಾರ್ & ರೆಸ್ಟೋರೆಂಟ್ , ಮಾಲ್, ಪ್ರೊವಿಜನ್ ಸ್ಟೋರ್ಸ್ ಮತ್ತು ಬುಕ್ ಸೆಂಟರ್‍ಗಳಲ್ಲಿ ಗ್ರಾಹಕರಿಗೆ ಪ್ಲಾಸ್ಟಿಕ್ ಚೀಲದಲ್ಲಿ ವಸ್ತುಗಳನ್ನು ನೀಡದಂತೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಸೂಚಿಸಿದ್ದಾರೆ.

ಅವರು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಪ್ಲಾಸ್ಟಿಕ್ ನಿಷೇಧ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಎಲ್ಲಾ ವ್ಯಾಪಾರಸ್ಥರು ಪ್ಲಾಸ್ಟಿಕ್ ಗೆ ಪರ್ಯಾಯವಾದ ವಸ್ತುಗಳನ್ನು ಬಳಕೆ ಮಾಡುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು ಗ್ರಾಹಕರಿಗೆ ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ನಿಂದ ಮಾಡಿದ ಕವರ್ , ನಾನ್ ಓವನ್ ಬ್ಯಾಗ್ ಗಳು ಅಥವಾ ಬ್ಯಾಗ್ ಗಳಲ್ಲಿ ವಸ್ತುಗಳನ್ನು ನೀಡದಂತೆ ಸೂಚಿಸಿದರು, ಬಟ್ಟೆಯಿಂದ ಮತ್ತು ಪೇಪರ್ ನಿಂದ ಮಾಡಿದ ಬ್ಯಾಗ್ ಗಳಲ್ಲಿ ವಸ್ತುಗಳನ್ನು ಮಾರಾಟ ಮಾಡುವಂತೆ ಹಾಗೂ ಈ ರೀತಿಯ ಬ್ಯಾಗ್ ಗಳನ್ನು ಜಿಲ್ಲೆಯ ಹಲವು ಸ್ವ ಸ್ವಹಾಯ ಸಂಘಗಳು ತಯಾರಿಸುತ್ತಿದ್ದು, ಅಲ್ಲಿಂದ ಖರೀದಿಸುವಂತೆ ತಿಳಿಸಿದರು.

ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ ಕುರಿತಂತೆ ಸಭೆಯಲ್ಲಿ ಹಾಜರಿದ್ದ ವ್ಯಾಪಾರಿಗಳು ಸಹಮತ ವ್ಯಕ್ತಪಡಿಸಿ, ಸ್ಥಳೀಯವಾಗಿ ಯಾವುದೇ ಪ್ಲಾಸ್ಟಿಕ್ ಬ್ಯಾಗ್ ಗಳು ತಯಾರಾಗುವುದಿಲ್ಲ ಹೊರ ರಾಜ್ಯದಿಂದ ಜಿಲ್ಲೆಗೆ ಪ್ಲಾಸ್ಟಿಕ್ ಕವರ್ ಗಳು ಆಗಮಿಸುತ್ತಿದ್ದು ಇದನ್ನು ತಡೆಯುವಂತೆ ಜಿಲ್ಲಾಧಿಕಾರಿಗಳನ್ನು ಕೋರಿದರು, ಈ ಕುರಿತಂತೆ ರೈಲ್ವೆ ನಿಲ್ದಾಣ ಮತ್ತು ಬಸ್ ನಿಲ್ದಾಣದಲ್ಲಿ ಚೆಕ್ ಪೋಸ್ಟ್ ಪ್ರಾರಂಭಿಸಿ, ಪ್ಲಾಸ್ಟಿಕ್ ನ್ನು ವಶಪಡಿಸಿಕೊಂಡು ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ನಗರಸಭೆಯ ವತಿಯಿಂದ ಎಲ್ಲಾ ವ್ಯಾಪಾರಸ್ಥರು ಮತ್ತು ಬಟ್ಟೆ ಮತ್ತು ಪೇಪರ್ ಬ್ಯಾಗ್ ಗಳನ್ನು ಸ್ವ ಸ್ವಹಾಯ ಸಂಘಗಳ ಸದಸ್ಯರೊಂದಿಗೆ ಮುಖಾಮುಖಿ ಕಾರ್ಯಕ್ರಮ ಮತ್ತು ಬಟ್ಟೆ ಮತ್ತು ಪೇಪರ್ ನಿಂದ ತಯಾರಿಸಿದ ವಸ್ತುಗಳ ಪ್ರದರ್ಶನ ಕಾರ್ಯಕ್ರಮ ಏರ್ಪಡಿಸುವಂತೆ ಪೌರಾಯುಕ್ತ ಮಂಜುನಾಥಯ್ಯ ಗೆ ಡಿಸಿ ಸೂಚಿಸಿದರು.

ಪ್ಲಾಸ್ಟಿಕ್ ಬಳಕೆಯಿಂದ ಆಗುವ ಹಾನಿಯ ಕುರಿತು ವಿವರಿಸಿದ ಜಿಲ್ಲಾಧಿಕಾರಿಗಳು, ಎಲ್ಲಾ ವರ್ತಕರು ತಮ್ಮಲ್ಲಿಗೆ ಬರುವ ಗ್ರಾಹಕರಿಗೆ ಪರಿಸರ ಸ್ನೇಹಿ ಬ್ಯಾಗ್ ಮತ್ತು ವಸ್ತುಗಳ ಬಳಕೆಗೆ ಮನವೊಲಿಸುವ ಮೂಲಕ ಜಿಲ್ಲೆಯನ್ನು ಪ್ಲಾಸ್ಟಿಕ್ ಮುಕ್ತ ಜಿಲ್ಲೆಯನ್ನಾಗಿ ಹಾಗೂ ಸ್ವಚ್ಛ ಮತ್ತು ಸುಂದರ ಜಿಲ್ಲೆಯನ್ನಾಗಿಸಲು ಸಹಕರಿಸುವಂತೆ ತಿಳಿಸಿದರು.
ಸಭೆಯಲ್ಲಿ ನಗರಸಭೆಯ ಪರಿಸರ ಇಂಜಿನಿಯರ್ ರಾಘವೇಂದ್ರ, ಜಿಲ್ಲಾ ಪರಿಸರ ಅಧಿಕಾರಿ ಲಕ್ಷ್ಮಿಕಾಂತ್, ವಿವಿಧ ವರ್ತಕರು ಉಪಸ್ಥಿತರಿದ್ದರು.


Spread the love