ನಗರ ಸಭಾ ವ್ಯಾಪ್ತಿಯಲ್ಲಿ ಹದಿನೆಂಟು ಸಾವಿರ ಬಿಪಿಎಲ್ ಪಡಿತರ ಚೀಟಿ ವಿತರಣೆ : ಮಧ್ವರಾಜ್

Spread the love

ನಗರ ಸಭಾ ವ್ಯಾಪ್ತಿಯಲ್ಲಿ ಹದಿನೆಂಟು ಸಾವಿರ ಬಿಪಿಎಲ್ ಪಡಿತರ ಚೀಟಿ ವಿತರಣೆ : ಮಧ್ವರಾಜ್

ಉಡುಪಿ : ಉಡುಪಿ ನಗರ ಸಭಾ ವ್ಯಾಪ್ತಿಯಲ್ಲಿ ಹದಿನೆಂಟು ಸಾವಿರ ಜನರಿಗೆ ಬಿಪಿಎಲ್ ಪಡಿತರ ಚೀಟಿ ಲಭ್ಯವಾಗಿದೆ ಎಂದು ಮೀನುಗಾರಿಕೆ, ಯುವ ಸಬಲೀಕರಣ, ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.

ಅವರು ಇಂದು ಸರಕಾರಿ ಪ್ರೌಢಶಾಲೆ ವಳಕಾಡು ಇಲ್ಲಿನ ನಳಂದ ಸಭಾಭವನದಲ್ಲಿ ನಡೆದ ಆಹಾರ ಅದಾಲತ್‍ನಲ್ಲಿ ಫಲಾನುಭವಿಗಳಿಗೆ ಬಿಪಿಎಲ್ ಕಾರ್ಡ್ ವಿತರಿಸಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಿಪಿಎಲ್ ಕಾರ್ಡ್ ಪಡೆಯಲು ಮನೆಯ ವಿದ್ಯುತ್ ಬಿಲ್ 450ಕ್ಕಿಂತ ದಾಟಬಾರದೆಂಬ ಇದ್ದ ಷರತ್ತುನ್ನು ರಾಜ್ಯ ಸರಕಾರ ಸರಳೀಕರಿಸಿ, ಈಗ ಕುಟುಂಬದ ಆದಾಯ ಒಂದು ಲಕ್ಷದ ಇಪ್ಪತ್ತು ಸಾವಿರದ ಒಳಗಿರಬೇಕು ಹಾಗೂ ಒಂದು ಸಾವಿರ ಚದರ ಸೆಂ.ಮೀ ಮನೆ ಹೊಂದಿದ್ದವರು ಬಿಪಿಎಲ್ ಕಾರ್ಡ್ ಪಡೆದುಕೊಳ್ಳಬಹುದು ಎಂದರು.

ಬಿಪಿಎಲ್ ಪಡಿತರ ಚೀಟಿ ಕೇವಲ ಅನ್ನಭಾಗ್ಯಕ್ಕೆ ಸೀಮಿತವಾಗಿರದೆ, ಸರಕಾರದ ಅನೇಕ ಯೋಜನೆಗಳಾದಂತಹ ಭಾಗ್ಯಲಕ್ಷ್ಮಿ ಯೋಜನೆ, ಗ್ರಾಮಾಂತರ ಪ್ರದೇಶದಲ್ಲಿ ಇರುವ ಮನೆಗಳಿಗೆ ವಿದ್ಯುತ್ ಇಲ್ಲದಿದ್ದರೆ ವಿದ್ಯತ್ ಕಲ್ಪಿಸಿ ಕೊಡುವ ಯೋಜನೆಗಳಿಗೆ ಸಹಕಾರಿಯಾಗಿದೆ. ಮನೆಯಲ್ಲಿ ಹೆಣ್ಣು ಮಗು ಹುಟ್ಟಿದರೆ ಭಾಗ್ಯಲಕ್ಷೀ ಬಾಂಡ್ ಮಾಡಿಸಲು ಮಗು ಹುಟ್ಟಿದ ಒಂದು ವರ್ಷದಲ್ಲಿ ಮಾಡಬೇಕು ಎಂಬ ನಿಯಮವಿತ್ತು. ಆದರೆ ಈ ನಿಯಮ ಬದಲಾವಣೆಗೊಂಡು ಹೆಣ್ಣು ಮಗು 2 ವರ್ಷ ತುಂಬುವುದರೊಳಗೆ ಭಾಗ್ಯಲಕ್ಷ್ಮೀ ಬಾಂಡ್‍ನನ್ನು ಸಮೀಪದ ಅಂಗನವಾಡಿ ಕೇಂದ್ರಗಳಲ್ಲಿ ಮಾಡಿಸಿಕೊಳ್ಳಬಹುದು ಎಂದರು.

ಸರಕಾರದ ಹೊಸ ಆದೇಶದಂತೆ ಹೃದಯ ಸಂಬಂಧೀ ಕಾಯಿಲೆ, ಕಿಡ್ನಿ ಸಂಬಂಧಿ ಹಾಗೂ ಇತರ ಯಾವುದೇ ಕಾಯಿಲೆಗಳಿಗೆ ಸರಕಾರಿ ಆಸ್ಪತ್ರಯಲ್ಲಿ ಚಿಕಿತ್ಸೆ ಅಸಾಧ್ಯವಾದಲ್ಲಿ,ಬಿಪಿಎಲ್ ಕಾರ್ಡ್ ಹೊಂದಿದವರು ಖಾಸಗಿ ಆಸ್ಪತ್ರೆಗಳಲ್ಲಿ ಸಂಪೂರ್ಣ ಉಚಿತ ಚಿಕಿತ್ಸೆ ಹಾಗೂ ಎಪಿಎಲ್ ಕಾರ್ಡ್ ಹೊಂದಿದವರು ಆಸ್ಪತ್ರೆ ಬಿಲ್‍ನಲ್ಲಿ ಶೇ.30 ರಷ್ಟು ರಿಯಾಯಿತಿಯನ್ನು ಪಡೆಯಬಹುದು ಎಂದರು.


Spread the love