ನದಿ ಉತ್ಸವಕ್ಕೆ ಸಜ್ಜಾಗಿದೆ ಕೂಳೂರು  

Spread the love

ನದಿ ಉತ್ಸವಕ್ಕೆ ಸಜ್ಜಾಗಿದೆ ಕೂಳೂರು  

ಮಂಗಳೂರು: ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ಕರಾವಳಿ ಉತ್ಸವದ ಅಂಗವಾಗಿ ಆಚರಿಸುತ್ತಿರುವ ಮಂಗಳೂರು ನದಿ ಉತ್ಸವಕ್ಕಾಗಿ ಕೂಳೂರು ಸೇತುವೆ ಬಳಿ ಇರುವ ಪಲ್ಗುಣಿ ನದಿಯ ತೀರ, ಬಂಗ್ರ ಕೂಳೂರು ಮತ್ತು ಸುಲ್ತಾನ್ ಬತ್ತೇರಿ ಸಜ್ಜಾಗಿದ್ದು ಜೆಟ್ಟಿ ನಿರ್ಮಾಣ ಕಾರ್ಯ ಬಹುತೇಕ ಸಂಪೂರ್ಣಗೊಂಡಿದೆ.

ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಹಾಗೂ ಲೋಕೋಪಯೋಗಿ ಇಲಾಖಾ ಅಧಿಕಾರಿಗಳು ಜೆಟ್ಟಿ ನಿರ್ಮಾಣ ಕಾರ್ಯವನ್ನು ಖುದ್ದು ಪರಿಶೀಲನೆ ನಡೆಸಿದರು. ಸಮಿತಿಯ ಅಧಿಕಾರೇತರ ಸದಸ್ಯರು ಈ ಸಂದರ್ಭದಲ್ಲಿದ್ದರು.

ಪ್ರವಾಸಿಗರನ್ನು ಬಂಗ್ರ ಕೂಳೂರು ಹಾಗೂ ಕೂಳೂರು ಸೇತುವೆಯವರೆಗೆ ಬೋಟ್‍ಗಳಲ್ಲಿ ಕರೆದೊಯ್ಯಲು, ಫ್ಲೀ ಮಾರ್ಕೆಟ್‍ಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಆವರಣದಲ್ಲಿ ಸಿದ್ಧತೆಗಳಾಗುತ್ತಿವೆ. ನಿಟ್ಟೆ ಸಂಸ್ಥೆಯ ವಿದ್ಯಾರ್ಥಿಗಳು ಆವರಣವನ್ನು ಆಕರ್ಷಣೀಯವಾಗಿಸುವ ನಿಟ್ಟಿನಲ್ಲಿ ವರ್ಣಚಿತ್ರಗಳಿಂದ ಸಿಂಗರಿಸುತ್ತಿದ್ದಾರೆ.

ನಗರದೊಳಗೆ ಸುಲ್ತಾನಬತ್ತೇರಿಯಿಂದ ಕೂಳೂರು ಅಥವಾ ಬಂಗ್ರಕೂಳೂರು ತಲುಪಲು ಬೋಟಿಂಗ್ ವ್ಯವಸ್ಥೆಯೂ ಇದೆ. ಬಂಗ್ರ ಕೂಳೂರಿನಲ್ಲಿರುವ 23 ಎಕರೆ ಸರಕಾರಿ ಭೂಮಿಯಲ್ಲಿ ಆಹಾರ ಮಳಿಗೆಗಳು, ತೆಂಗಿನ ತೋಟದೊಳಗೆ ನದಿ ಬಗ್ಗೆ ಚಲನಚಿತ್ರೋತ್ಸವವನ್ನು ಆಯೋಜಿಸಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ಉದಯಶೆಟ್ಟಿ ವಿವರಿಸಿದರು.

ಈಗಾಗಲೇ ಈ ಪ್ರದೇಶದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಬಂಧಿಸಿದಂತೆ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಶೀಘ್ರದಲ್ಲೇ ಹೌಸ್‍ಬೋಟ್, ಕಯಾಕಿಂಗ್‍ನಂತಹ ಚಟುವಟಿಕೆಗಳು ಶಾಶ್ವತವಾಗಿ ಆರಂಭಗೊಳ್ಳಲಿವೆ.


Spread the love