ನವೆಂಬರ್ ಅಂತ್ಯಕ್ಕೆ ಲೇಡಿಗೊಶನ್ ಆಸ್ಪತ್ರೆ ಲೋಕಾರ್ಪಣೆ-ರಮಾನಾಥ ರೈ

Spread the love

ಮ0ಗಳೂರು :- ಸರ್ಕಾರಿ ಲೇಡಿಗೊಶನ್ ಆಸ್ಪತ್ರೆ ನೂತನ ಕಟ್ಟಡ ಕಾಮಗಾರಿ ಮುಕ್ತಾಯ ಹಂತ ತಲುಪಿದ್ದು ಮಳೆಗಾಲ ಮುಗಿದ ನಂತರ ನವೆಂಬರ್ ಅಂತ್ಯಕ್ಕೆ ಸಾರ್ವಜನಿಕರ ಬಳಕೆಗೆ ಲೋಕಾರ್ಪಣೆ ಮಾಡಲಾಗುವುದೆಂದು ಅರಣ್ಯ, ಪರಿಸರ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ರಮಾನಾಥ ರೈ ಅವರು ತಿಳಿಸಿದ್ದಾರೆ.
ಅವರು ಇಂದು ಮದ್ಯಾಹ್ನ ಲೇಡಿಗೋಶನ್ ಅಸ್ಪತ್ರೆಗೆ ಭೇಟಿ ನೀಡಿ ನೂತನ ಕಟ್ಟಡದ ಕಾಮಗಾರಿಯನ್ನು ಪರಿಶೀಲಿಸಿ ಕಾಮಗಾರಿ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿ ಅನುದಾನ ಬೇಡಿಕೆ ಸಲುವಾಗಿ ಕಾಮಗಾರಿಯನ್ನು ಸ್ಥಗಿತಗೊಳಿಸದೆ ಕಾಮಗಾರಿಯನ್ನು ಮುಂದುವರೆಸಲು ಕಟ್ಟಡ ಕಂಟ್ರಾಕ್ಟರ್ ಷರೀಫ್ ಅವರಿಗೆ ಸೂಚಿಸಿದರು.
ಎಂ.ಆರ್.ಪಿ.ಎಲ್. ವತಿಯಿಂದ ರೂ.21.70ಕೋಟಿ ಅನುದಾನ ನೀಡಲಾಗುತ್ತಿದ್ದು ಈ ಅನುದಾನದಲ್ಲಿ ರೂ. 18.4ಕೋಟಿಗಳಿಗೆ ಟೆಂಡರ್ ಆಹ್ವಾನಿಸಿದ್ದು ಉಳಿಕೆ ಮೊತ್ತವನ್ನು ಕಟ್ಟಡದ ಸಿವಿಲ್ ಕಾಮಗಾರಿಗಳಿಗೆ ಉಪಯೋಗಿಸಲಾಗುವುದೆಂದು ಸಚಿವರ ಅವಗಾಹನೆಗೆ ತಂದು ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲು ರೂ.10-00ಕೋಟಿಗಳ ಅವಶ್ಯಕತೆ ಇದೆ ಎಂದು ಲೇಡಿಗೋಶನ್ ಆಸ್ಪತ್ರೆಯ ಅಧೀಕ್ಷಕಿ ಡಾ||ಸವಿತ ಸಚಿವರ ಗಮನಕ್ಕೆ ತಂದರು. ಸರ್ಕಾರದಿಂದ ಹೆಚ್ಚುವರಿ ಅನುದಾನ ಬಿಡುಗಡೆಗೆ ಮಾನ್ಯ ಮುಖ್ಯಮಂತ್ರಿಗಳಲ್ಲಿ ಪ್ರಸ್ತಾವಿಸುವುದಾಗಿ ಸಚಿವರು ತಿಳಿಸಿದರು. ಅಲ್ಲಿಯವರೆಗೂ ವೆನ್‍ಲಾಕ್ ಸರ್ಕಾರಿ ಜಿಲ್ಲಾ ಆಸ್ಪತ್ರೆಯ ಯೂಸರ್ಸ್ ಫಂಡ್‍ನಿಂದ ರೂ. 8.93 ಕೋಟಿಯನ್ನು ಆರೋಗ್ಯ ರಕ್ಷಾ ಸಮಿತಿಯಲ್ಲಿ ಠೇವಣಿಯಾಗಿ ಕಾಯ್ದಿರಿಸಿ ದ.ಕ.ನಿರ್ಮಿತಿ ಕೇಂದ್ರ ಸುರತ್ಕಲ್ ಇವರಿಂದ ಟೆಂಡರ್ ಮೂಲಕ ನಿರ್ವಹಿಸಲು ಸಚಿವರು ಸೂಚಿಸಿದರು.
ತುರ್ತು ಕಾಮಗಾರಿಗಳಾದ ಕಟ್ಟಡದ ಹೊರಗಡೆಯ ವಿದ್ಯುತೀಕರಣಕ್ಕೆ ರೂ.2.30ಕೋಟಿ,ಕೊಠಡಿಗಳಿಗೆ ಹೈವೋಲ್ಟೆಜ್ ಹವಾನಿಯಂತ್ರಣ ಅಳವಡಿಕೆಗಾಗಿ ರೂ.1.20ಕೋಟಿ,ಮೆಡಿಕಲ್ಲ ಗ್ಯಾಸ್ ಪೈಪ್ ಲೈನ್ ಕಾಮಗಾರಿಗಾಗಿ ರೂ.1.50ಕೋಟಿ, ಒಂದು ಲಿಪ್ಟ್‍ಗಾಗಿ ರೂ.0.36ಕೋಟಿ, ಜನರೇಟರ್ 625 ಕೆ.ವಿ.ಎ. ಗಾಗಿ ರೂ.0.55ಕೋಟಿ, 2000 ಕೆ.ವಿ.ಎ. ಟ್ರಾನ್ಸಫಾರ್‍ಮರ್‍ಗಾಗಿ ರೂ.0.55ಕೋಟಿ, ಲ್ಯಾಮಿನಾಅರ ಎನ್.ಐ.ಸಿ.ಯು. ವಿಭಾಗದ ರಚನೆ ಕಾಮಗಾರಿ ರಚನೆ ಕಾಮಗಾರಿಗಾಗಿ ರೂ.2.02 ಕೋಟಿ ಮತ್ತು ಪೀಠೋಪಕರಣಗಳು ಮತ್ತು ಯಂತ್ರೋಪಕರಣಗಳ ಖರೀದಿಗಾಅಗಿ ರೂ.0.45 ಕೋಟಿ ಸೇರಿ ಒಟ್ಟು ರೂ.8.93 ಕೋಟಿ ಅನುದಾನ ಬೇಕಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಮ್, ಎಮ್.ಆರ್.ಪಿ.ಎಲ್ ನ ವ್ಯವಸ್ಥಾಪಕ ನಿರ್ದೇಶಕ ಕುಮಾರ್, ನಿರ್ಮಿತಿ ಕೇಂದ್ರ ಯೋಜನಾ ನಿರ್ದೇಶಕ ರಾಜೇಂದ್ರ ಕಲ್ಬಾವಿ, ಮಂಗಳೂರು ಮಹಾನಗರಪಾಲಿಕೆ ಸೂಪರಿಂಟೆಂಡೆಂಟ್ ಶಿವಶಂಕರ್ ಮುಂತಾದವರು ಹಾಜರಿದ್ದರು.


Spread the love