ನಾರಾಯಣ ಗುರು ಜಯಂತಿಗೆ ಸಂಸದೆ, ಶಾಸಕರ ಗೈರು, ಸಮುದಾಯಕ್ಕೆ ಮಾಡಿದ ಅವಮಾನ – ಬಿಲ್ಲವ ಪರಿಷತ್

Spread the love

ನಾರಾಯಣ ಗುರು ಜಯಂತಿಗೆ ಸಂಸದೆ, ಶಾಸಕರ ಗೈರು ಸಮುದಾಯಕ್ಕೆ ಮಾಡಿದ ಅವಮಾನ – ಬಿಲ್ಲವ ಪರಿಷತ್

ಉಡುಪಿ: ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿಗೆ ಜಿಲ್ಲೆಯ ಯಾವೊಬ್ಬ ಶಾಸಕರು, ಸಂಸದರು, ಜಿಲ್ಲಾ ಪಂಚಾಯತ್ ಅಧ್ಯಕ್ಷರು ಭಾಗವಹಿಸದೆ ಬಿಲ್ಲವ ಸಮುದಾಯಕ್ಕೆ ಅವಮಾನಿಸಿದ್ದಾರೆ ಎಂದು ಬಿಲ್ಲವರ ಪರಿಷತ್ತು ಉಡುಪಿ ಜಿಲ್ಲೆ ಇದರ ಜಿಲ್ಲಾಧ್ಯಕ್ಷರಾದ ನವೀನ್ ಅಮೀನ್ ಶಂಕರಪುರ ಆರೋಪಿಸಿದ್ದಾರೆ.

ಅವರು ಸೋಮವಾರ ಉಡುಪಿ ಪ್ರೆಸ್ ಕ್ಲಬ್ಬಿನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಉಡುಪಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ 165ನೇ ಜನ್ಮದಿನಾಚರಣೆಯನ್ನು ಹಮ್ಮಿಕೊಂಡ ಸಂದರ್ಭದಲ್ಲಿ ಜಿಲ್ಲೆಯ ಯಾವೊಬ್ಬ ಶಾಸಕರು, ಸಂದರು, ಜಿಲ್ಲಾ ಪಂಚಾಯತ್ ಅಧ್ಯಕ್ಷರು ಪಾಲ್ಗೊಳ್ಳದೆ ಇರುವುದ ಬಿಲ್ಲವ ಸಮುದಾಯಕ್ಕೆ ಅತ್ಯಂತ ಬೇಸರದ ಸಂಗತಿ. ಚುನಾವಣೆ ಸಂದರ್ಭದಲ್ಲಿ ಬಿಲ್ಲವರ ಮತ ಬ್ಯಾಂಕ್ ಉದ್ದೇಶವಾಗಿಟ್ಟುಕೊಂಡು ಒಲೈಕೆ ಮಾಡುವ ಈ ಜನಪ್ರತಿನಿಧಿಗಳ ನೈಜ ಅಂತರಂಗ ಹೇಗೆ ಎಂಬುದು ಗೈರುಹಾಜರಿಯಿಂದ ಸಾಬೀತಾಗಿದೆ ಎಂದರು.

ಸರ್ಕಾರಿ ಕಾರ್ಯಕ್ರಮವಾಗಿ ಜರಗುವ ಉಳಿದೆಲ್ಲಾ ಸಂತ ಮಹನೀಯರುಗಳ ಜನ್ಮ ದಿನಾಚರಣೆಗಳಿಗಿಂತ ಗುರು ಜಯಂತಿಗೆ ತೋರಿದ ಅಸಡ್ಡೆಯು ಪ್ರಶ್ನಾರ್ಹವಾಗಿದೆ. ಸರಳ ಸಜ್ಜನಿಕೆಯ ರಾಜಕಾರಣಿ ಕೋಟ ಶ್ರೀನಿವಾಸ ಪೂಜಾರಿ ಸಚಿವರಾಗಿರುವುದಕ್ಕೆ ಜನ ಸಾಮಾನ್ಯರೆಲ್ಲರೂ ಸಂತಸ ಮತ್ತು ಹೆಮ್ಮೆ ಪಡುತ್ತಿದ್ದರೆ ನಮ್ಮ ಜಿಲ್ಲೆಯ ಶಾಸಕರುಗಳ ಮಾತ್ರ ಒಳಗಿಂದೊಳಗೆ ಅಸಮಾಧಾನದಲ್ಲಿರುವುದು ಗುಟ್ಟಾಗಿ ಉಳಿದಿಲ್ಲ. ಗುರು ಜಯಂತಿಯು ಕೋಟ ಶ್ರೀನಿವಾಸ ಪೂಜಾರಿಯವರ ಉದ್ಘಾಟನೆಯೊಡನೆ ನೆರವೇರಲಿರುವುದರಿಂದ ತಾವುಗಳು ತಟಸ್ಥ ಉಳಿದು ಅಸಹಕಾರ ನೀಡೋಣವೆನ್ನುವ ಧೋರಣೆಯನ್ನು ಅಲ್ಲಗಳೆಯುವಂತಿಲ್ಲ. ಇದಕ್ಕೆ ಪೂರಕವೆಂಬಂತೆ ಕೋಟ ಶ್ರೀನಿವಾಸ ಪೂಜಾರಿಯವರು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾಗುವುದು ಬೇಡವೆಂದು ಉಡುಪಿ ಜಿಲ್ಲೆಯ ಕೆಲವು ಶಾಸಕರುಗಳ ಸಹಿಯೊಂದಿಗೆ ಅಧಿಕೃತ ಪತ್ರವನ್ನು ರಾಜ್ಯದ ಮುಖ್ಯಮಂತ್ರಿಗಳಿಗೆ ನೀಡಿರುವ ಸಂಗತಿ ಖಂಡನಾರ್ಹ. ಒರ್ವ ಆದರ್ಶ ರಾಜಕಾರಣಿಯ ಸೇವಾ ಮನೋಭಾವಕ್ಕೆ ನೀಡಲಾಗಿರುವ ಸಚಿವ ಸ್ಥಾನಮಾನವನ್ನು ಕೇವಲ ಬಿಲ್ಲವ ಸಮುದಾಯದ ಸಂಘಟನಾತ್ಮಕ ನಿಲುವು ಕೋಟ ಶ್ರೀನಿವಾಸ ಪೂಜಾರಿಯವರ ಪರವಾಗಿರುತ್ತದೆ ಎಂದರು.

ಈ ತರಹದ ಬೆಳವಣಿಗೆಯು ಬಹುಸಂಖ್ಯಾತ ಬಿಲ್ಲವರ ಮತದಿಂದಲೇ ಆಯ್ಕೆಯಾದ ಶಾಸಕರುಗಳ ಘನತೆಗೆ ಶೋಭೆಯಲ್ಲ. ಸೌಹಾರ್ದ, ಸಹಬಾಳ್ವೆ ಬಯಸುವ ಬಿಲ್ಲವ ಸಮಾಜಕ್ಕೆ ಅವಮಾನವಾಗುವ ರೀತಿಯಲ್ಲಿ ನಡೆದುಕೊಳ್ಳುತ್ತಿರುವ ಜನಪ್ರತಿನಿಧಿಗಳ ಧೋರಣೆಯ ವಿರುದ್ದವಾಗಿ ಪ್ರತಿಭಟನೆ ಇಲ್ಲವೇ ಮತ ಬಹಿಷ್ಕಾರದಂತಹ ಸೂಕ್ತ ಸಂದರ್ಭಕ್ಕೂ ನಾವು ಸಿದ್ದರಿದ್ದೇವೆ. ತಮ್ಮ ತಮ್ ಅಧಿಕಾರ ಲಾಲಸೆಯಲ್ಲಿ ಸಮಸ್ತ ಬಿಲ್ಲವ ಸಮಾಜದ ಹಿತಾಸಕ್ತಿಗೆ ಯಾವತ್ತೂ ತೊಂದರೆಯಾಗದಂತೆ ಸಹಕರಿಸುವುದು ಎಲ್ಲಾ ಜನಪ್ರತಿನಿಧಿಗಳ ಆದ್ಯ ಕರ್ತವ್ಯವಾಗಲಿ ಎಂದು ಅವರು ಎಚ್ಚಿರಿಸದ್ದಾರೆ.

ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಪ್ರಭಾಕರ್ ಪಾಲನ್ , ಚಂದ್ರಹಾಸ ಕೋಟ್ಯಾನ್, ಮಹಿಳಾ ಘಟಕಾಧ್ಯಕ್ಷೆ ಆಶಾ ಕಟಪಾಡಿ, ಮಹೇಶ್ ಪೂಜಾರಿ, ಉಪಾಧ್ಯಕ್ಷರಾದ ಬದ್ರಿನಾಥ್ ಸನಿಲ್, ರಮೇಶ್ ಅಂಚನ್, ವಿನೋದ್ ಅಮೀನ್ ಉಪಸ್ಥಿರಿದ್ದರು.


Spread the love