ನಿಕಟಪೂರ್ವ ಕುಲಪತಿ ಡಾ. ಕೆ. ಭೈರಪ್ಪ ವಿರುದ್ದ ಎ.ಬಿ.ವಿಪಿ ವತಿಯಿಂದ ಪ್ರತಿಭಟನೆ ಎಚ್ಚರಿಕೆ

Spread the love

ನಿಕಟಪೂರ್ವ ಕುಲಪತಿ ಡಾ. ಕೆ. ಭೈರಪ್ಪ ವಿರುದ್ದ ಎ.ಬಿ.ವಿಪಿ ವತಿಯಿಂದ ಪ್ರತಿಭಟನೆ ಎಚ್ಚರಿಕೆ

ಮಂಗಳೂರು: ಕಳಂಕಿತ, ನಿಕಟಪೂರ್ವ ಕುಲಪತಿ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಆಗಮಿಸಿದರೆ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೀಡಿದೆ.

ಮಂಗಳೂರು ವಿಶ್ವವಿದ್ಯಾನಿಲಯದ ಸ್ಥಾಪಕರ ದಿನಾಚರಣೆಯನ್ನು ತಾ. 12.09.2019ರಂದು ನಡೆಯುತ್ತಿದ್ದು, ಆ ಕಾರ್ಯಕ್ರಮದ ಆಹ್ವಾನಪತ್ರಿಕೆಯಲ್ಲಿ ನಿಕಟಪೂರ್ವ ಕುಲಪತಿ ಡಾ. ಕೆ. ಭೈರಪ್ಪ ಹೆಸರು ಕೂಡ ಅಭ್ಯಾಗತರ ಪಟ್ಟಿಯಲ್ಲಿದೆ. ಭೈರಪ್ಪ ಅವರ ಆಡಳಿತಾವಧಿಯಲ್ಲಿ ಮಂಗಳೂರು ವಿ.ವಿ.ಯಲ್ಲಿ ಅನೇಕ ಹಗರಣಗಳಾಗಿದ್ದು ಅವೆಲ್ಲವೂ ತನಿಖೆಯ ಹಂತದಲ್ಲಿವೆ.

ಇನ್ನು ಅನಧಿಕೃತ ಹುದ್ದೆಗಳನ್ನು ರಚಿಸಿ, ಅವರ ತವರು ಜಿಲ್ಲೆಯ ಬೆಂಬಲಿಗರನ್ನು ಕರೆಸಿಕೊಂಡು ಬೇಕಾಬಿಟ್ಟಿ ಹಂಚಿದ ಆರೋಪ ಅವರ ಮೇಲಿದೆ.. ಈ ಹಗರಣಗಳ ಬಗ್ಗೆ ವಿಧಾನಪರಿಷತ್ ಸದಸ್ಯರಾದ  ರವಿಕುಮಾರ್ ವಿಧಾನಪರಿಷತ್ನಲ್ಲಿ ಈಗಾಗಲೇ ಪ್ರಸ್ತಾಪ ಮಾಡಿದ್ದಾರೆ.. ರಾಜ್ಯದ ಎಲ್ಲಾ ದೃಶ್ಯ ಮತ್ತು ಮುದ್ರಣ ಮಾಧ್ಯಮಗಳಲ್ಲಿ ಈ ಹಗರಣಗಳ ಸುದ್ದಿ ಕಾರ್ಯಕ್ರಮ ಪ್ರಕಟವಾಗಿದೆ..

ಪ್ರಕರಣಗಳು ತನಿಖೆಯ ಹಂತದಲ್ಲಿದ್ದು ಈ ಸಂದರ್ಭದಲ್ಲಿ ಅವರು ವಿ.ವಿ.ಗೆ ಕಾಲಿಟ್ಟರೆ ತನಿಖೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ.. ಹಾಗಾಗಿ ಅಭ್ಯಾಗತರ ಪಟ್ಟಿಯಲ್ಲಿ ಕಳಂಕಿತ, ಆರೋಪಿ ಸ್ಥಾನದಲ್ಲಿರುವ ವ್ಯಕ್ತಿಯ ಹೆಸರನ್ನು ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿ ನಮೂದು ಮಾಡಿರುವುದು ಮೊದಲ ತಪ್ಪು.. ಪ್ರಾಮಾಣಿಕರು, ಸಾಧಕರನ್ನು ಕರೆದು ಅವರನ್ನು ಮುಖ್ಯ ಅತಿಥಿಯಾಗಿ ಮಾಡಿಸಿದರೆ ವಿಶ್ವವಿದ್ಯಾಲಯದ ಘನತೆ ಹೆಚ್ಚುತ್ತದೆ, ಅದರ ಬದಲು ಮಾಜಿ ಕುಲಪತಿಗಳು ಎಂಬ ಒಂದೇ ಕಾರಣಕ್ಕೆ ಹಗರಣಗಳ ರೂವಾರಿಯಾಗಿರುವವರನ್ನು ಕರೆಯುವುದು ಘನತೆಗೆ ಧಕ್ಕೆ ತರುತ್ತದೆ. ಆದ್ದರಿಂದ ಕುಲಪತಿಗಳು ಈ ಮನವಿಯನ್ನು ಪರಿಗಣಿಸಬೇಕು, ಆರೋಪಿಗಳನ್ನು ಅತಿಥಿಯಾಗಿ ವೇದಿಕೆಯಲ್ಲಿ ಕೂರಲು ಅವಕಾಶ ಕೊಡಬಾರದು ಎಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಮಂಗಳೂರು ವಿಭಾಗ ಮನವಿ ಮಾಡಿದೆ.


Spread the love