ನಿರ್ದಿಷ್ಟ ಸಮಯದಲ್ಲಿ ರೈತರಿಗೆ ಸವಲತ್ತುಗಳು ದೊರಕಲಿ – ಯು.ಟಿ ಖಾದರ್  

Spread the love

ನಿರ್ದಿಷ್ಟ ಸಮಯದಲ್ಲಿ ರೈತರಿಗೆ ಸವಲತ್ತುಗಳು ದೊರಕಲಿ – ಯು.ಟಿ ಖಾದರ್  

ಮಂಗಳೂರು : ಸರಕಾರದಿಂದ ರೈತರಿಗೆ ವಿವಿಧ ರೀತಿಯ ಸೌಲಭ್ಯ ದೊರಕುತ್ತಿದೆ. ರೈತರು ಸವಲತ್ತು ಪಡೆಯಲು ಬರುವ ಸಂಧರ್ಭದಲ್ಲಿ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಸ್ಪಂಧಿಸಿ ನಿರ್ದಿಷ್ಟ ಸಮಯದಲ್ಲಿ ರೈತರಿಗೆ ಸವಲತ್ತು ದೊರಕುವಂತೆ ಸಹಕರಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಸೂಚಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ಇವರ ವತಿಯಿಂದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಭವನ, ಮಂಗಳೂರು ಇಲ್ಲಿ ನಡೆದ ಇಲಾಖೆಗಳ ನಡಿಗೆ ರೈತರ ಬಾಗಿಲಿಗೆ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮದ ಉದ್ಘಾಟನೆ ನಡೆಸಿ ಮಾತನಾಡಿದ ಇವರು ಕೃಷಿ ವಲಯದ ಪ್ರಸ್ತುತ ಪರಿಸ್ಥಿತಿಯನ್ನು ಮನಗಂಡು, ಉತ್ಪಾದಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅವಶ್ಯವಿರುವ ತಂತ್ರಜ್ಞಾನವನ್ನು ರೈತರ ಮನೆಬಾಗಿಲಿಗೆ ತಲುಪಿಸಿ ರೈತರಿಗೆ ಪ್ರೊತ್ಸಾಹ ನೀಡುವುದು ಅಲ್ಲದೇ ಅವರನ್ನು ಬಲಿಷ್ಠಗೊಳಿಸೋದೇ ಸರಕಾರದ ಉದ್ಧೇಶವಾಗಿದೆ ಎಂದರು.

ಭವಿಷ್ಯದ ಜೀವನದಲ್ಲಿ ಪ್ರತಿಯೊಬ್ಬರೂ ಸ್ವಾವಲಂಭಿಯಾಗಿ ಜೀವನ ನಡೆಸಲು ರೈತರ ಏಳಿಗೆ ಅಗತ್ಯವಿದೆ. ರೈತರು ಇಲ್ಲದಿದ್ದರೆ, ಸಮಾಜದಲ್ಲಿ ಉತ್ತಮ ಜೀವನ ನಡೆಸಲು ಸಾಧ್ಯವಿಲ್ಲ. ‘ರೈತರು ಸಮಾಜದ ಬೆನ್ನೆಲೆಬು’ ಧವಸಧಾನ್ಯಗಳು, ಹಾಲು ಇನ್ನಿತರ ಆಹಾರ ಸೇವನೆ ವಸ್ತುಗಳು ನಮಗೆ ಕಡಿಮೆ ಬೆಲೆಗೆ ದೊರಕುವುದು ರೈತರಿಂದಲೇ ಅವರು ಪಟ್ಟ ಶ್ರಮದಿಂದ ನಮ್ಮ ಜೀವನ ಉತ್ತಮ ರೀತಿಯಲ್ಲಿ ಮುಂದುವರಿಯುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ ರೈತರಿಗೆ ಸಂಬಂಧಿಸಿದ ವಿಷಯ ಹಾಗೂ ಇನ್ನಿತರ ಸಮಸ್ಯೆಗಳ ಕುರಿತು ಮುಂದಿನ ದಿನಗಳಲ್ಲಿ ಸಂವಾದ ಕಾರ್ಯಕ್ರಮ ನಡೆಯಲಿದೆ. ಇದರಿಂದ ಸರಕಾರದಿಂದ ದೊರಕುವಂತಹ ಸೌಲಭ್ಯಗಳ ಮಾಹಿತಿ ರೈತರಿಗೆ ದೊರಕುತ್ತದೆ. ರೈತರು ಸರಕಾರದಿಂದ ದೊರಕುವಂತಹ ಸವಲತ್ತುಗಳ ಸದುಪಯೋಗ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.

ರೈತರು ದುಡಿದಾಗ ಮಾತ್ರ ಸಮಾಜ ಮುಂದುವರಿಯಲು ಸಾಧ್ಯ. ಅಧಿಕಾರಿಗಳು ಯಾವ ರೀತಿಯಲ್ಲಿ ರೈತರಿಗೆ ಅನುದಾನವನ್ನು ತಲುಪಿಸಬಹುದು ಎಂಬ ಚಿಂತನೆ ನಡೆಸಿ ಕಾರ್ಯ ನಿರ್ವಹಿಸಿ. ಅಧಿಕಾರಿಗಳು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿದಾಗ ದೇಶದ ಬೆನ್ನೆಲುಬು ಆದ ರೈತರ ಕಷ್ಟ ಪರಿಹಾರಗೊಳ್ಳಲು ಸಾಧ್ಯ ಎಂದರು. ರಾಸಾಯನಿಕ ವಸ್ತುಗಳನ್ನು ಸಿಂಪಡಿಸಿರುವ ಆಹಾರವನ್ನು ಸೇವಿಸುವುದರಿಂದ ನಮ್ಮ ಆರೋಗ್ಯದಲ್ಲಿ ಅನೇಕ ರೀತಿಯ ದುಷ್ಪರಿಣಾಮಗಳು ಉಂಟಾಗುತ್ತಿದೆ.

ಸಮಾಜದ ಏಳಿಗೆಗಾಗಿ ರೈತರು ಸರಕಾರದಿಂದ ದೊರಕುವಂತಹ ಸೌಲಭ್ಯಗಳನ್ನು ಪಡೆದು ಸಾವಯವ ಕೃಷಿಗೆ ಹೆಚ್ಚಿನ ಮಹತ್ವವನ್ನು ನೀಡಿ ಜನರ ಆರೋಗ್ಯ ರಕ್ಷಣೆಗೆ ಶುದ್ಧ ಹಾಗೂ ತಜಾ ತರಕಾರಿ, ಹಣ್ಣಗಳು ಹಾಗೂ ಇತರೆ ಆಹಾರ ಪದಾರ್ಥಗಳು ದೊರಕುವಂತೆ ಮಾಡಿ ಎಂದು ಹೇಳಿದರು.

ಜಿಲ್ಲಾ ಮಟ್ಟದಲ್ಲಿ ಹಾಗೂ ತಾಲೂಕು ಮಟ್ಟದಲ್ಲಿ ಕೃಷಿ ಪ್ರಶಸ್ತಿ ಪಡೆದಿರುವಂತಹ ಕೃಷಿಕರಾದ ಶ್ರೀನಿವಾಸ್ ಆಳ್ವಾ ಮೂಡಬಿದ್ರೆ, ಚಂದ್ರಹಾಸ್ ಬೋಳಿಯಾರ್, ಪ್ರತಿಭಾ ಹೆಗ್ಡೆ ಗುರುಪುರ, ಚಂದ್ರಶೇಖರ್ ಗಟ್ಟಿ ಕೋಟೆಕಾರ್, ನವೀನ್ ಪ್ರಭು ಮುಲ್ಕಿ, ವಿಲಿಯಂ ಡಿಸೋಜಾ ಸುರತ್ಕಲ್, ರಿಚಾರ್ಡ್ ಡಿಸೋಜಾ ಮುಲ್ಕಿ, ಸೀತಾರಾಮ್ ಶೆಟ್ಟಿ ಪಾಲಡ್ಕ ಮೂಡಬಿದ್ರೆ, ಕೆ ರಾಮ್ ಕೋಟೆಕಾರ್, ಶಂಕರ್ ರೈ ಗುರುಪುರ, ಇವರಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಕೃಷಿ ಹಾಗೂ ಕೈಗಾರಿಕಾ ಸಮಿತಿ ಅಧ್ಯಕ್ಷ ಯು.ಪಿ ಇಬ್ರಾಹಿಂ, ಜಿಲ್ಲಾ ಪಂಚಾಯತ್ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಜನಾರ್ಧನ ಗೌಡ, ಜಿಲ್ಲಾ ಪಂಚಾಯತ್ ಸದಸ್ಯ ಸುಚರಿತ ಶೆಟ್ಟಿ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ರಘು, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸೀತಾ ಸಿ., ತಾಲೂಕು ಪಂಚಾಯತ್ ಅಧ್ಯಕ್ಷ ಮಹಮ್ಮದ್ ಮೋನು, ಇನ್ನಿತರರು ಉಪಸ್ಥಿತರಿದ್ದರು.


Spread the love