ಪಕ್ಷಕ್ಕೆ ನೀಡಿದ ಸೇವೆಯನ್ನು ಪರಿಗಣಿಸಿ ಮಂತ್ರಿ ಸ್ಥಾನ ನೀಡಿ ಹೊರತು ಜಾತಿ ಆಧಾರದಲ್ಲಿ ಬೇಡ – ಹಾಲಾಡಿ ಶ್ರೀನಿವಾಸ ಶೆಟ್ಟಿ

Spread the love

ಪಕ್ಷಕ್ಕೆ ನೀಡಿದ ಸೇವೆಯನ್ನು ಪರಿಗಣಿಸಿ ಮಂತ್ರಿ ಸ್ಥಾನ ನೀಡಿ ಹೊರತು ಜಾತಿ ಆಧಾರದಲ್ಲಿ ಬೇಡ – ಹಾಲಾಡಿ ಶ್ರೀನಿವಾಸ ಶೆಟ್ಟಿ

ಮಂಗಳೂರು ; ನಾನು ಪಕ್ಷಕ್ಕೆ ದುಡಿದಿರುವುದನ್ನು ಪರಿಗಣಿಸಿ ನನಗೆ ಮಂತ್ರಿ ಸ್ಥಾನಮಾನ ನೀಡಿ ಅದರ ಬದಲು ಜಾತಿಯ ಲೆಕ್ಕಾಚಾರದಲ್ಲಿ, ಜಾತಿಯನ್ನೇ ಅರ್ಹತೆಯ ಮಾನದಂಡವಾಗಿಸಿ ನನಗೆ ಮಂತ್ರಿ ಸ್ಥಾನ ನೀಡುವುದಾದರೆ ದಯವಿಟ್ಟು ನೀಡಬೇಡಿ ಎಂದು ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಹೇಳಿದ್ದಾರೆ.

ಅವರು ಇಂದು ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಕೇವಲ ಜಾತಿಯನ್ನಷ್ಟೇ ಮಾನದಂಡವಾಗಿಟ್ಟುಕೊಂಡು ನನಗೆ ಮಂತ್ರಿ ಪದವಿ ಕೊಡಬೇಡಿ, ನಾನು ಪಕ್ಷಕ್ಕಾಗಿ ದುಡಿದಿರುವುದನ್ನು ಪರಿಗಣಿಸಿ, ನನಗೆ ಜಾತಿ ಹೊರತು ಪಡಿಸಿ ಇರುವ ಅರ್ಹತೆಯನ್ನು ಪರಿಗಣಿಸಿ, ಸಾಮಾಜಿಕ ನ್ಯಾಯಕ್ಕಾಗಿ ದುಡಿದವನು ನಾನು, ನನ್ನ ಈ ಅರ್ಹತೆಯನ್ನಷ್ಟೇ ಪರಿಗಣಿಸಿ ಎಂದು ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಮನವಿ ಮಾಡಿದರು.

ನನ್ನ ಪರವಾಗಿ ಬಂಟರ ಸಂಘದವರು ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡಿರುವುದಕ್ಕೆ ನನ್ನ ಸಹಮತವಿಲ್ಲ, ನಾನು ಎಲ್ಲಾ ಜಾತಿಯವರ, ಎಲ್ಲಾ ಧರ್ಮದವರ ಪ್ರತಿನಿಧಿ. ನಾನು ಯಾವತ್ತೂ ಜಾತಿ ಸಂಘಟನೆಯಲ್ಲಿ ತೊಡಗಿಸಿಕೊಂಡವನಲ್ಲ, ಯಾವ ಸಂಘಟನೆಯವರು ನನ್ನ ಪರವಾಗಿ ಲಾಭಿ ಮಾಡಬೇಕೆಂದು ನಾನು ಬಯಸುವುದಿಲ್ಲ ಎಂದು ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಹೇಳಿದರು.

ಪಕ್ಷಕ್ಕಾಗಿ ದುಡಿದಿದ್ದೇನೆ, ಪಕ್ಷವನ್ನು ಸಂಘಟಿಸಿದ್ದೇನೆ, ಪ್ರತಿ ಚುನಾವಣೆಯಲ್ಲಿಯೂ ನನ್ನ ಕ್ಷೇತ್ರದಲ್ಲಿ ಪಕ್ಷಕ್ಕೆ ಹೆಚ್ಚು ಮತಗಳು ದೊರೆಯುವಂತೆ ಶ್ರಮಿಸಿದ್ದೇನೆ. ಒಂದು ಅವಧಿಯಲ್ಲಿ ಪಕ್ಷೇತರನಾಗಿ ಶಾಸಕನಾಗಿದ್ದಾಗಲೂ ಬಿಜೆಪಿ ಸಂಘಟನೆಗಾಗಿ ದುಡಿದ್ದೇನೆ. ಪಕ್ಷೇತರನಾಗಿದ್ದ ಅವಧಿಯಲ್ಲೂ ವಿಧಾನ ಪರಿಷತ್ ಸದಸ್ಯರ ಆಯ್ಕೆ, ರಾಜ್ಯಸಭಾ ಸದಸ್ಯರ ಆಯ್ಕೆಯ ಸಂದರ್ಭದಲ್ಲಿ ಯಾವುದೇ ದುಡ್ಡು ಪಡೆಯದೆ ಬಿಜೆಪಿ ಅಭ್ಯರ್ಥಿಗಳಿಗೆ ಮತ ಹಾಕಿದ್ದೇನೆ . ಬೇರೆ ಪಕ್ಷಗಳಿಂದ ಆಫರ್ ಬಂದಾಗ ಪಕ್ಷಾಂತರ ಮಾಡಿಲ್ಲ, ಆಮಿಷ ಬಂದಾಗ ದುಡ್ಡು ತೆಗೊಂಡಿಲ್ಲ. ನನ್ನ ಈ ಅರ್ಹತೆಗಳು ಮಂತ್ರಿ ಮಾಡಲು ಸಾಕಾಗುವುದಿಲ್ಲವೇ, ನನಗೆ ಮಂತ್ರಿಯಾಗುವ ಯೋಗ, ಭಾಗ್ಯ ಇಲ್ಲವೆ ಎಂದು ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಪ್ರಶ್ನಿಸಿದ್ದಾರೆ.


Spread the love