ಪರ್ಕಳ ಬಳಿ  ಕೆಸರುಮಯವಾದ ರಾ.ಹೆ.-169ಎ – ಸಮಸ್ಯೆ ಪರಿಹಾರಕ್ಕೆ ಸಾರ್ವಜನಿಕರ ಒತ್ತಾಯ

Spread the love

ಪರ್ಕಳ ಬಳಿ  ಕೆಸರುಮಯವಾದ ರಾ.ಹೆ.-169ಎ – ಸಮಸ್ಯೆ ಪರಿಹಾರಕ್ಕೆ ಸಾರ್ವಜನಿಕರ ಒತ್ತಾಯ

ಉಡುಪಿ: ಮಲ್ಪೆ- ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ 169 ಎ ಇದರ ಕಾಮಗಾರಿ ಮಣಿಪಾಲ – ಪರ್ಕಳ ಭಾಗದಲ್ಲಿ ನಿಧಾನಗತಿಯಲ್ಲಿ ನಡೆಯುತ್ತಿದ್ದು ಮಳೆಯಿಂದಾಗಿ ರಸ್ತೆ ಸಂಪೂರ್ಣ ಕೆಸರುಮಯವಾಗಿದ್ದು ವಾಹನ ಸವಾರರು ಜೀವಪಣಕ್ಕಿಟ್ಟು ಸಂಚರಿಸುವಂತಾಗಿದೆ.

ಮಣಿಪಾಲದ ತನಕ ರಸ್ತೆಕಾಮಗಾರಿ ಸ್ವಲ್ಪ ಮಟ್ಟಿಗೆ ಪೂರ್ಣಗೊಂಡರೂ ಎಮ್ ಐ ಟಿ ಬಳಿಕ ಪರ್ಕಳ ಹಾಗೂ ಇತರ ಭಾಗದಲ್ಲಿ ರಸ್ತೆಯ ಅಗಲೀಕರಣ ಸಂಬಂಧ ರಸ್ತೆಯನ್ನು ಅಗೆದು ಹಾಕಿದ್ದು ಇದರಿಂದ ರಸ್ತೆ ಸಂಪೂರ್ಣ ಕೆಸರುಮಯವಾಗಿದ್ದು ವಾಹನ ಸವಾರರು ರಸ್ತೆಯಲ್ಲಿ ಸಂಚರಿಸದ ಪರಿಸ್ಥಿತಿ ಉಂಟಾಗಿದೆ. ಮಳೆಯಿಂದಾಗಿ ರಸ್ತೆಗೆ ಹಾಕಿದ ಮಣ್ಣು ಸಂಪೂರ್ಣ ಕೊಚ್ಚಿಹೊಗಿದೆ.

ರಸ್ತೆಯು ಸಂಪೂರ್ಣ ಕೆಸರುಮಯವಾಗಿ ಜಾರುವುದರಿಂದಾಗಿ ಹಲವಾರು ದ್ವಿಚಕ್ರ ವಾಹನ ಸವಾರರು ಸೇರಿದಂತೆ ಇತರ ವಾಹನ ಸವಾರರು ಸಹ ಬಿದ್ದು ಗಾಯಮಾಡಿಕೊಂಡಿದ್ದಾರೆ. ಕೇವಲ ವಾಹನ ಸವಾರರು ಮಾತ್ರವಲ್ಲದೆ ಸಾರ್ವಜನಿಕರು ಸಹ ರಸ್ತೆಯಲ್ಲಿ ಕೆಂಪು ಮಣ್ಣಿನ ಕೆಸರಿನಲ್ಲಿ ನಡೆದುಕೊಂಡು ಹೋಗಲು ಸಹ ಹರಸಾಹಸ ಪಡುತ್ತಿದ್ದಾರೆ. ಇಲ್ಲಿ ಅವಘಡ ಆಗಿ ಪ್ರಾಣ ಹಾನಿ ಸಂಭವಿಸುವ ಮೊದಲು ಸಂಬಂಧಿಸಿದ ಜನಪ್ರತಿನಿಧಿಗಳು ಅಧಿಕಾರಿಗಳು, ಗುತ್ತಿಗೆದಾರರು ಗಮನಹರಿಸಿ ಸಮಸ್ಯೆ ನಿವಾರಣೆಗೆ ಕ್ರಮ ವಹಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.


Spread the love