ಪುರಭವನ ಕಲಾಪ್ರಿಯರ ಕೈಗೆ ಎಟುಕುತ್ತಿಲ್ಲ: ಡಾ. ಸಂಜೀವ ದಂಡೆಕೇರಿ

Spread the love

ಪುರಭವನ ಕಲಾಪ್ರಿಯರ ಕೈಗೆ ಎಟುಕುತ್ತಿಲ್ಲ: ಡಾ. ಸಂಜೀವ ದಂಡೆಕೇರಿ
ಮಂಗಳೂರು: ಸಂಗೀತ, ಕಲೆ, ಯಕ್ಷಗಾನ, ನಾಟಕ ಮುಂತಾದ ಸಾಂಸ್ಕøತಿಕ ಕ್ಷೇತ್ರಗಳಿಗೆ ಮುಖಮಾಡುವ ಯುವಜನರ ಸಂಖ್ಯೆ ಕಡಿಮೆಯಾಗುತ್ತಿದೆ. ಹೀಗಾಗಿ ಅವರನ್ನು ಸೆಳೆಯುವ ಪ್ರಯತ್ನ ಆಗಬೇಕಾಗಿದೆ. ಜತೆಗೆ ಮಂಗಳೂರಿನಲ್ಲಿರುವ ಪುರಭವನವೂ ಕಲಾಪ್ರಿಯರಿಗೆ ಕೈಗೆಟುಕದೇ ಇರುವ ಸ್ಥಿತಿ ನಿರ್ಮಾಣವಾಗಿರುವುದು ಬೇಸರದ ಸಂಗತಿ ಎಂದು ಹಿರಿಯ ನಾಟಕಕಾರ ಡಾ. ಪಿ. ಸಂಜೀವ ದಂಡೆಕೇರಿ ನುಡಿದರು.

ಅವರು ಪುರಭವನದಲ್ಲಿ ಜರಗಿದ ಕನ್ನಡ ಸಂಸ್ಕøತಿ ಇಲಾಖೆ ಮತ್ತು ರಂಗ ಸ್ಪಂದನ ವತಿಯಿಂದ ಜರಗಿದ ಮುಂಗಾರು ಸಿರಿ ಸರಣಿಯ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪ್ರೊಫೆಸರ್ ಭಾಸ್ಕರ ರೈ ಕುಕ್ಕುವಳ್ಳಿ ಮಾತನಾಡಿ, ಕರಾವಳಿಯಲ್ಲಿ ಸಾಮಾನ್ಯವಾಗಿ ಕಲಾಪ್ರದರ್ಶನಗಳು ಒಳ್ಳೆಯ ಸಂದೇಶ ಮತ್ತು ಪ್ರೌಢತೆಯನ್ನು ಹೊಂದಿಲ್ಲದೇ ಇದ್ದರೆ ಯಶಸ್ವಿಯಾಗುವುದೇ ಇಲ್ಲ ಎಂದರು. ಕಲಾ ಸಂಸ್ಕಾರ ಇರುವುದರಿಂದ ಇಲ್ಲಿನ ಪ್ರೇಕ್ಷಕರನ್ನು ತೃಪ್ತಿಪಡಿಸುವುದು ಕಷ್ಟ. ಹುರುಳಿಲ್ಲದ ಹಾಸ್ಯಕ್ಕೂ ಇಲ್ಲಿನ ಪ್ರೇಕ್ಷಕರು ತಲೆದೂಗರು. ಜೀವನಾನುಭವ ಇದ್ದಾಗ ಮಾತ್ರ ಹಾಸ್ಯಕ್ಕೂ ಮನ್ನಣೆ ದೊರೆಯುತ್ತದೆ. ಆದ್ದರಿಂದ ಯಕ್ಷಗಾನ, ನಾಟಕ ಅಥವಾ ನೃತ್ಯ ಕ್ಷೇತ್ರದ ಕಲಾವಿದರು, ಸಂಘಟಕರು ಇಲ್ಲಿನ ಪ್ರೇಕ್ಷಕರ ನಾಡಿಮಿಡಿತ ಅರಿತು ಕಾರ್ಯಕ್ರಮ ಸಂಘಟಿಸಬೇಕು ಎಂದರು.
ಮಂಗಳೂರಿನ ಪುರಭವನವು ಜನಸಾಮಾನ್ಯರ ಕಾರ್ಯಕ್ರಮಕ್ಕೆ ಕೈಗೆಟುಕದಂತೆ ಆಗಿರುವುದರಿಂದ ಕಲಾಪ್ರದರ್ಶಕರು ತೀವ್ರ ಬೇಸರಗೊಂಡಿದ್ದಾರೆ. ಬಾಡಿಗೆ, ವ್ಯವಸ್ಥೆಯ ವಿಚಾರಗಳನ್ನು ಜಿಲ್ಲಾಡಳಿತ ಗಮನಹರಿಸಿ ಸರಿಪಡಿಸಬೇಕಾಗಿದೆ ಎಂದು ಕುಕ್ಕುವಳ್ಳಿ ತಿಳಿಸಿದರು.
`ನಮ್ಮ ಕುಡ್ಲ’ ವಾಹಿನಿಯ ನಿರ್ದೇಶಕ ಲೀಲಾಕ್ಷ ಕರ್ಕೇರಾ ಶುಭ ಹಾರೈಸಿದರು. ಕಾರ್ಯಕ್ರಮದ ಸಂಘಟಕ ವಿ.ಜಿ.ಪಾಲ್ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಬಳಿಕ ಕುದ್ರೋಳಿ ಗಣೇಶ್ ತಂಡದಿಂದ ಜಾದೂ ಪ್ರದರ್ಶನ ಜರಗಿತು.


Spread the love