ಪೆಟ್ರೋಲ್ ಸುರಿದು ಆತ್ಮಹತ್ಯೆಗೆ ಯತ್ನ: ಬಚಾವ್ ಮಾಡಲು‌ ಹೋದ ಈರ್ವರು ಸೇರಿ ಮೂವರು ಗಂಭೀರ

Spread the love

ಪೆಟ್ರೋಲ್ ಸುರಿದು ಆತ್ಮಹತ್ಯೆಗೆ ಯತ್ನ: ಬಚಾವ್ ಮಾಡಲು‌ ಹೋದ ಈರ್ವರು ಸೇರಿ ಮೂವರು ಗಂಭೀರ

ಕುಂದಾಪುರ: ದೇವಸ್ಥಾನದೊಳಗೆ ಪೆಟ್ರೋಲ್ ಸುರಿದುಕೊಂಡು ವ್ಯಕ್ತಿಯೋರ್ವ ಆತ್ಮಹತ್ಯೆಗೆ ಯತ್ನಿಸಿರುವ ಕಳವಳಕಾರಿ ಘಟನೆ ಇಲ್ಲಿನ‌ ಗಂಗೊಳ್ಳಿಯಲ್ಲಿ ವರದಿಯಾಗಿದೆ.

ಇಲ್ಲಿನ ಖಾರ್ವಿಕೇರಿಯ ದಾಕುಹಿತ್ಲು ನಿವಾಸಿ ರಾಘವೇಂದ್ರ ಖಾರ್ವಿ (35) ಹಾಗೂ ಅವರನ್ನು ಬಚಾವ್ ಮಾಡಲು ಹೋದ ಜನಾರ್ದನ್ ಖಾರ್ವಿ ಮತ್ತು ಲಕ್ಷ್ಮಣ್ ಖಾರ್ವಿ ಗಂಭೀರ ಗಾಯಗೊಂಡು ಉಡುಪಿಯ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇಲ್ಲಿನ‌ ಖಾರ್ವಿಕೇರಿಯ ಮಹಾಂಕಾಳಿ ದೇವಸ್ಥಾನದ ಹಿಂಬದಿಯಲ್ಲಿರುವ ಮಹಾಮ್ಮಾಯಿ ಮಹಾಸತಿ ದೇವಸ್ಥಾನದಲ್ಲಿ ಮಹಾಲಯ ಅಮವಾಸ್ಯೆ ಪ್ರಯುಕ್ತ ಪೂಜಾ ಕಾರ್ಯಗಳು ನಡೆಯಲಿದ್ದು, ಅರ್ಚಕರಿಗಾಗಿ ಭಕ್ತರೆಲ್ಲರೂ ಕಾದು ಕುಳಿತಿದ್ದರು. ಈ ವೇಳೆಯಲ್ಲಿ ಏಕಾಏಕಿ‌ ಪೆಟ್ರೋಲ್ ಕ್ಯಾನ್ ಹಿಡಿದು ದೇವಸ್ಥಾನದೊಳಗೆ ಬಂದ ರಾಘವೇಂದ್ರ ಖಾರ್ವಿ ಪೆಟ್ರೋಲ್ ಸುರಿದುಕೊ‌ಂಡಿದ್ದಾರೆ. ಈ ವೇಳೆ ಸಮೀಪದಲ್ಲಿದ್ದ ಕಾಲುದೀಪದಲ್ಲಿ ಉರಿಯುತ್ತಿದ್ದ ಬೆಂಕಿ ತಗುಲಿದೆ ಎನ್ನಲಾಗಿದೆ. ಬೆಂಕಿ ಹೊತ್ತಿ ಉರಿದ ತಕ್ಷಣವೇ ಸ್ಥಳದಲ್ಲಿದ್ದ ಜನಾರ್ದನ್ ಖಾರ್ವಿ ಹಾಗೂ ಲಕ್ಷ್ಮಣ್ ಖಾರ್ವಿ ಬೆಂಕಿ ನಂದಿಸುವ ಪ್ರಯತ್ನ ನಡೆಸಿದ್ದರು‌. ಬೆಂಕಿತ ತೀವ್ರತೆ ಹೆಚ್ಚಿದ್ದರಿಂದಾಗಿ ಅವರಿಬ್ಬರಿಗೂ ಬೆಂಕಿ ತಗುಲಿದೆ.

ಘಟನೆಯಲ್ಲಿ ರಾಘವೇಂದ್ರ ಖಾರ್ವಿ ಹಾಗೂ ಇನ್ನೋರ್ವನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಗಂಗೊಳ್ಳಿಯ ಆಪತ್ಭಾಂದವ ಆಂಬುಲೆನ್ಸ್ ನ ಇಬ್ರಾಹಿಂ ಹಾಗೂ ತಂಡ ಮೂವರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾಗಿದ್ದಾರೆ.

ಸದ್ಯ ಗಂಗೊಳ್ಳಿ ಠಾಣಾಧಿಕಾರಿ ಭೀಮಾ ಶಂಕರ್ ಹಾಗೂ ಅವರ ತಂಡ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.


Spread the love